ಹಲೋ ಅಡ್ವಾಣಿ, ಯಡ್ಡಿ ಭ್ರಷ್ಟಾಚಾರಕ್ಕೆ ನಿಮ್ಮ ಉತ್ತರವೇನು?
ಗುಜರಾತಿನ ಸರಕಾರದ ವಿರುದ್ಧ ಲೆಕ್ಕಪರಿಶೋಧನಾ ಇಲಾಖೆ 26,000 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಧ್ವನಿ ಎತ್ತಿರುವಾಗ ಅದರ ವಿರುದ್ಧ ಗುಜರಾತಿನಲ್ಲಿ ಅಡ್ವಾಣಿ ಮಾತನಾಡಬೇಕಾಗುತ್ತದೆ. ಇನ್ನು ಉತ್ತರಾಂಚಲ, ಛತ್ತೀಸ್ಗಡದ ಮುಖ್ಯಮಂತ್ರಿ ಗಳು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಲುಕಿರುವಾಗ ಅಲ್ಲಿನ ರಾಜಧಾನಿಗಳಲ್ಲಿ ಅಡ್ವಾಣಿಯವರು ಕನಿಷ್ಠ ಆ ಸರಕಾರಗಳ ವಿರುದ್ಧ ಪತ್ರಿಕಾಗೋಷ್ಠಿಯನ್ನಾದರೂ ಮಾಡಬೇಕು.
ಮಧ್ಯಪ್ರದೇಶದ ಮುಖ್ಯಮಂತ್ರಿಯ ಕುಟುಂಬದ ವಿರುದ್ಧ ಭೂ ಹಗರಣದ ಆರೋಪವಿದೆ. ಬಿಜೆಪಿ ಮತ್ತು ಅಕಾಲಿ ದಳ ಸಹಯೋಗದ ಪಂಜಾಬಿನ ಸರಕಾರದ ಭ್ರಷ್ಟಾಚಾರದ ವಿರುದ್ಧ ಕಠಿಣವಾದಂತಹ ಮಾತುಗಳನ್ನು ಆಡಬೇಕು. ಇವೆಲ್ಲವನ್ನು ಮಾಡಿದ ನಂತರ 2ಜಿ ಹಗರಣ, ಕಾಮನ್ವೆಲ್ತ್ ಹಗರಣ ಇವುಗಳ ನಡುವೆ ಮಾತನಾಡಲು ಭಾರತೀಯ ಪ್ರತಿಯೊಬ್ಬ ಪ್ರಜೆಯು ನಿಮ್ಮ ಯಾತ್ರೆಯಲ್ಲಿಸಹವರ್ತಿಗಳಾಗಿರಲು ಅಭ್ಯಂತರವೇನಿಲ್ಲ.
ನಿಮ್ಮ ಯಾತ್ರೆ ಕೇವಲ ಮನಮೋಹನ್ ಸಿಂಗ್ರವರ ಬದಲಾವಣೆಗೆ ಮಾತ್ರ ಸೀಮಿತವಾದರೆ ನಿಮ್ಮ ಪಕ್ಷದ ಸಂಘಟನೆಯ ಯಾತ್ರೆ ಎಂದು ಜನತೆ ಗಂಭೀರವಾಗಿ ಪರಿಗಣಿಸದೆ ಜಾತ್ರೆಗೆ ಜನ ಬಂದಂತೆ ಬಂದು ಮಾತುಗಳನ್ನು ಕೇಳಿ ಮತ್ತೊಂದು ಜಾತ್ರೆಯತ್ತ ಹೊರಟ ಹಾಗೆ ಜನರೂ ಮಾಯವಾಗುತ್ತಾರೆ. ನಿಮ್ಮ ಈ ಯಾತ್ರೆಯೂ ರಾಜಕೀಯ ಉದ್ದೇಶವಾದರೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಮಾತುಗಳೆಲ್ಲವನ್ನು ಜನರು ಒಪ್ಪಿಕೊಳ್ಳಲಾರರು.