ಬ್ರಾಹ್ಮಣರನ್ನು ಪೌರೋಹಿತ್ಯಕ್ಕೆ ಕರೆಯಬೇಡಿ
ಶಿಥಿಲಾವಸ್ಥೆಯಲ್ಲಿದ್ದ ಉಡುಪಿ ಕನಕಗೋಪುರವನ್ನು ಜೀರ್ಣೋದ್ಧಾರ ಮಾಡಲು ಹೋದ ಫಲಿಮಾರು ಶ್ರೀಗಳ ವಿರುದ್ದ ಕನಕಗೋಪುರ ಕೆಡವುತ್ತಿದ್ದಾರೆಂದು ಅಪಪ್ರಚಾರ ಮಾಡಿದವರು ನೀವಲ್ಲವೇ. ಆದರೆ ನಿಜ ಅರಿತ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆದ ವಿಚಾರ ಎಲ್ಲರಿಗೂ ಗೊತ್ತಿರುವ ಸಮಾಚಾರ. ಭಕ್ತ ಕನಕದಾಸರ ಚರಣಗಳನ್ನು ಲಿಖಿತ ರೂಪದಲ್ಲಿ ತಂದವರು ಶ್ರೀ ವಾದಿರಾಜರು ಮತ್ತು ಶ್ರೀ ಮಧ್ವಾಚಾರ್ಯರು. ಕುರುಬ ಕನಕನ ವಿಚಾರಗಳನ್ನು ಒಪ್ಪಿನಡೆದವರು ಕುರುಬರೋ ಅಥವಾ ಬ್ರಾಹ್ಮಣರೋ?
ರಿಸರ್ವೇಶನ್ ಅಥವಾ ಸರಕಾರದ ಸೌಲಭ್ಯದಿಂದಾಗಿ ನಿಜವಾಗಿ ಹಿಂದುಳಿದವರು ಬ್ರಾಹ್ಮಣ ಸಮುದಾಯದವರು. ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರು ತಮ್ಮ ತಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ, ನಾಮಕರಣದಿಂದ ಹಿಡಿದು ವೈಕುಂಠ ಸಮಾರಾಧನೆಯವರೆಗೆ ಪೌರೋಹಿತ್ಯಕ್ಕೆ ಯಾರ ಮೇಲೆ ಅವಲಂಬಿತರಾಗಿದ್ದಾರೆ? ಬ್ರಾಹ್ಮಣದ್ವೇಷಿ ವಿಚಾರವಾದಿಗಳು ಪೌರೋಹಿತ್ಯಕ್ಕೆ ಇನ್ನುಮುಂದೆ ಅಬ್ರಾಹ್ಮಣರನ್ನು ಕರೆಯುವುದು ಕಡ್ಡಾಯವಾಗಲಿ.
ವ್ಯಾಲನ್ಟೆನ್ಸ್ ಡೇಗೂ ಮಡೆಸ್ನಾನಕ್ಕೂ ಹೋಲಿಕೆ ಮಾಡುವುದು ಒಂದು ರೀತಿಯಲ್ಲಿ ಇಮಾಂಸಾಬಿ ಮತ್ತು ಗೋಕುಲಾಷ್ಟಮಿಗೂ ಹೋಲಿಕೆ ಮಾಡಿದಂತೆ. ದೇವರ ಇರುವಿಕೆ ಅವರವರ ನಂಬಿಕೆಗೆ ಬಿಟ್ಟಿದ್ದು, ಇನ್ನು ಮಡೆಸ್ನಾನ ಅವರವರ ನಂಬಿಕೆಗೆ ಬಿಟ್ಟಿದ್ದು.
ಅಷ್ಟಕ್ಕೂ ಮಡೆಸ್ನಾನ ಮಾಡಿ ಚರ್ಮರೋಗ ನಿವಾರಿಸಿಕೊಂಡು ದೇವರ ಕೃಪೆಗೆ ಪಾತ್ರನಾದರೆ ಅಥವಾ ಆಗದಿದ್ದರೆ ಅದು ಅವರ ನಂಬಿಕೆಗೆ ಬಿಟ್ಟ ವಿಷಯ. ಹಣಗಳಿಕೆಗೆ ಕಾಟಾಚಾರಕ್ಕೆ ರೋಗಿಗಳನ್ನು ನೋಡಿ ಅವರಿಂದ ಹಣ ಪೀಕಿಸುವ ವೈದ್ಯರಿಗಿಂತ ಮಡೆಸ್ನಾನ ಎಷ್ಟೋ ಬೆಟರ್.
ಮಧ್ಯೆ ನನ್ನದೆಲ್ಲಿಡಲಿ ಎಂದು ಎದ್ದೆದ್ದು ಕುಣಿಯುವ ವಿಚಿತ್ರವೀರ್ಯರ ಬಗ್ಗೆ ನನ್ನ ಅನುಕಂಪ, ಸಂತಾಪಗಳು ಇದ್ದೇ ಇರುತ್ತವೆ. ಇಷ್ಟವಿದ್ದರೆ ಮಡೆಸ್ನಾನ ಮಾಡುತ್ತಾರೆ, ಇಲ್ಲದಿದ್ದರೆ ಜಿಂದಾಲ್ ಆಸ್ಪತ್ರೆಗೆ ಸೇರಿಕೊಂಡು ಮಣ್ಣುಸ್ನಾನ ಮಾಡಿ ಮೈ, ಮನ ಶುದ್ಧ ಮಾಡಿಕೊಳ್ಳುತ್ತಾರೆ. ಇದು ಕೂಡ ಅವರವರ ನಂಬಿಕೆಗೆ ಬಿಟ್ಟ ವಿಚಾರ.
ಕೊನೆಗೆ.. ಧಾರ್ಮಿಕ ವಿಧಿವಿಧಾನ, ಪೂಜಾ ಕೈಂಕರ್ಯ, ಸೇವೆಗಳ ವಿಚಾರದಲ್ಲಿ ಯಾವುದೇ ಜಾತಿ, ವರ್ಗ ಭೇದಭಾವ ಬೇಡ. ಇದನ್ನು ಪ್ರತಿಭಟಿಸುತ್ತಿರುವವರಿಗೆ ಕುಕ್ಕೇ ಸುಬ್ರಮಣ್ಯ ಮತ್ತು ಉಡುಪಿ ಶ್ರೀಕೃಷ್ಣ ಸನ್ಮಂಗಳವನ್ನು ಉಂಟು ಮಾಡಲಿ. ತಥಾಸ್ತು.