ಪ್ರಜಾರಾಜ್ಯಂ ನಾಯಕ ಚಿರಂಜೀವಿಗೆ ಟಿವಿ9 ಭೋಪರಾಕ್!
ಕನ್ನಡದಲ್ಲಿ ಅತ್ಯಂತ ನಿಖರವಾಗಿ ಮತ್ತು ವಿಸ್ತೃತವಾಗಿ ಸುದ್ದಿ ನೀಡುವಲ್ಲಿ ಟಿವಿ9 (TV9) ಸುದ್ದಿ ವಾಹಿಸಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವೊಂದು ಕಾರ್ಯಕ್ರಮಗಳನ್ನು ಮೆಗಾ ಧಾರಾವಾಹಿಗಳಂತೆ ಎಳೆದಾಡಿ, ಇಷ್ಟೊಂದು ವಿವರಗಳು ಬೇಕಾ ಎನ್ನುವಷ್ಟರ ಮಟ್ಟಿಗೆ ಬೋರು ಹೊಡೆಸಿದರೂ, ಟಿವಿ9 ಪ್ರಸಾರ ಮಾಡುವ ಯಾವುದೇ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳಬಹುದು.
ಆದರೆ, ಆಗಸ್ಟ್ 26, ಮದರ್ ತೆರೆಸಾ ಹುಟ್ಟುಹಬ್ಬದಂದು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಹೊಸ ಪಕ್ಷ 'ಪ್ರಜಾ ರಾಜ್ಯಂ' ಉದಯಿಸಿದ ದಿನ ಟಿವಿ9 ನಡೆದುಕೊಂಡ ರೀತಿ ಸ್ವಲ್ಪ ಬೇಸರ ತಂದಿತು. ಬೆಳಗಿನ ಜಾವ ತಿರುಪತಿಯಲ್ಲಿ ಜನಜಾತ್ರೆ ಸೇರಿಕೊಳ್ಳಲು ಪ್ರಾರಂಭವಾದಾಗಿನಿಂದ ಹಿಡಿದು ಚಿರಂಜೀವಿ ಭಾಷಣ ಬಿಗಿದು, ಮನೆಗೆ ಹೋಗಿ ಮಲಗಿಕೊಳ್ಳುವವರೆಗೆ ಟಿವಿ9 'ಲೈವ್' ಟೆಲಿಕಾಸ್ಟ್ ಜಾರಿಯಲ್ಲಿತ್ತು! ತಿರುಪತಿಯಲ್ಲೇ ಒಬ್ಬರು ಪತ್ರಕರ್ತರನ್ನು ನೇರವರದಿ ನೀಡಲು ಪ್ರತಿಷ್ಠಾಪಿಸಲಾಗಿತ್ತು. ಮಧ್ಯೆ ಮಧ್ಯೆ ಅಪರೂಪಕ್ಕೂ ಕನ್ನಡ, ಕರ್ನಾಟಕದ ಸುದ್ದಿಗಳು ಬಿತ್ತರವಾಗಲಿಲ್ಲ. ಅಥವಾ ನಾನು ಮಿಸ್ ಮಾಡಿಕೊಂಡಿದ್ದರೂ ಮಾಡಿಕೊಂಡಿರಬಹುದು.
ಟಿವಿ9 ಮಾತ್ರವಲ್ಲ ಉಳಿದ ಪತ್ರಿಕೆಗಳೂ ಈ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಚಾರ ನೀಡಿವೆ, ಆದರೆ ಟಿವಿ9 ಅಷ್ಟಲ್ಲ. ಅಷ್ಟೊಂದು ಪ್ರಚಾರ ನೀಡುವ ಅಗತ್ಯ ಟಿವಿ9ಕ್ಕೆ ಇತ್ತೆ? ಇದೆಲ್ಲ ನೋಡಿದರೆ, ಕನ್ನಡದ ಇಪ್ಪತ್ತನಾಲ್ಕು ಗಂಟೆಯ ಸುದ್ದಿ ವಾಹಿನಿ ಆ ದಿನ ಕನ್ನಡಿಗರನ್ನು ಮರೆತೇ ಬಿಟ್ಟಿತಾ ಎಂಬ ಸಂದೇಹ ಉಂಟಾಯಿತು. ಅಥವಾ ಚಿರಂಜೀವಿ ಪ್ರಾಯೋಜಿತ ಕಾರ್ಯಕ್ರಮವಿರಬಹುದೆ ಎಂಬ ಬಗ್ಗೆಯೂ ಸಂದೇಹ ಮೂಡುವುದು ಯಾರಿಗಾದರೂ ಸಹಜ.
ತೆಲುಗು ನಟ ಚಿರಂಜೀವಿ ರಾಜಕೀಯ ಪ್ರವೇಶ ಆಂಧ್ರದಲ್ಲಿ ಸಂಚಲವನ್ನೇ ಉಂಟು ಮಾಡಿರಬಹುದು, ಆದರೆ ಅದು ಕರ್ನಾಟಕಕ್ಕೆ ಒಂದು ಸುದ್ದಿ ಮಾತ್ರ. ಅದನ್ನು ಮುಖ್ಯಾಂಶಗಳಲ್ಲಿ ತೋರಿಸಿ ಕೈತೊಳೆದುಕೊಳ್ಳಬೇಕಿದ್ದ ಟಿವಿ9 ಅದೊಂದು ಪ್ರಮುಖ ವಿಚಾರವೆಂಬಂತೆ ಆ.26ರಂದು ಬೆಳಗಿನಿಂದ ಸಂಜೆಯ ತನಕ ತಿರುಪತಿಯಿಂದ ನೇರ ಪ್ರಸಾರ ಮಾಡಿತು. ಕನ್ನಡ ಸುದ್ದಿಗಳನ್ನು ನಿರಂತರ ವೀಕ್ಷಿಸಿ ಕರ್ನಾಟಕದ ಹಾಗುಹೋಗುಗಳ ಬಗ್ಗೆ ತಿಳಿಯುವ ಕುತೂಹಲ ಇರುವ ನನ್ನಂಥವರಿಗೆ ಟಿವಿ9 ತೀವ್ರ ನಿರಾಶೆ ಉಂಟು ಮಾಡಿತು. ಈ ರೀತಿ ತಾಳ್ಮೆ,ಸಮಯವನ್ನು ಹಾಳುಗೆಡಹುವ ಮತ್ತು ಕನ್ನಡಿಗರ ಸಹನೆಯನ್ನು ಪರೀಕ್ಷಿಸುವ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಟಿವಿ9 ಇನ್ನಾದರೂ ನಿಲ್ಲಿಸಲಿ.
ರವೀಂದ್ರ
ಕುಮಾರ್,
ಬೆಂಗಳೂರು