ಕನ್ನಡ ಸಿನಿಮಾ ಪತ್ರಕರ್ತರಿಗೆ ಕೆಲವೊಂದು ಪ್ರಶ್ನೆಗಳು
ಆಪ್ತಮಿತ್ರ, ಮುಂಗಾರು ಮಳೆ ಚಿತ್ರಗಳಿಗೆ ದೊರೆಯದ ಪ್ರಚಾರ ಶಿವಾಜಿಗೆ ಯಾಕೆ?
- ಸಂಪಿಗೆ ಶ್ರೀನಿವಾಸ, ಹೊನೊಲುಲು
ನಾನು ಮೂರುತಿಂಗಳಿಂದ ಪರದೇಸಿಯಾಗಿದ್ದೇನೆ. ಅಂತರ್ಜಾಲದಲ್ಲಿನ ಕನ್ನಡ ಪತ್ರಿಕೆಗಳ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ತಪ್ಪದೆ ಓದುತ್ತಿದ್ದೇನೆ. ಆದರೆ ಮೊನ್ನೆ ಕನ್ನಡದ ಒಂದು ಜನಪ್ರಿಯ ಪತ್ರಿಕೆಯ ಮುಖಪುಟದಲ್ಲಿ ಬಂದ ವರದಿ ನೋಡಿ ಬಹಳ ದು:ಖವಾಯಿತು. ಕನ್ನಡಿಗರೇ ಕಟ್ಟಿ ಬೆಳೆಸಿದ ಕನ್ನಡ ಪತ್ರಿಕೆಯ ಮುಖಪುಟದ ತಲೆಬರಹದಲ್ಲಿ ತಮಿಳಿನ ಶಿವಾಜಿ ಚಿತ್ರದ ಬಿಡುಗಡೆ ಬಗ್ಗೆ ವಿಸ್ತಾರವಾದ ವರದಿ ಹಾಗೂ ಪ್ರಚಾರ ನೋಡಿ ಅಳಬೇಕೋ ನಗಬೇಕೋ ತಿಳಿಯಲಿಲ್ಲ.
ಕನ್ನಡನಾಡಿನಲ್ಲೇ ಈ ರೀತಿ ಯಾಕೆ? ಎಂದು ತಲೆಚಚ್ಚಿಕೊಂಡೆ. ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ, ಕರ್ನಾಟಕದ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಬೇಕಾದ ನೈತಿಕ ಹೊಣೆ, ಕನ್ನಡ ಪತ್ರಿಕೆಗಳಿಗೆ, ಪತ್ರಕರ್ತರಿಗೆ ಇರಬೇಕಾದುದು ಸಹಜ ಎಂದು ನನ್ನ ಭಾವನೆ. ಆದರೆ ಕನ್ನಡ ಪತ್ರಿಕೆಗಳು, ಕನ್ನಡಿಗರಲ್ಲಿ ಮೊದಲಿನಿಂದ ಸ್ವಲ್ಪ ಹೆಚ್ಚೇ ಇರುವ ಪರಭಾಷಾ ವ್ಯಾಮೋಹವನ್ನು ಕಡಿಮೆ ಮಾಡುವ ಬದಲು, ಈ ರೀತಿಯ ವರದಿಗಳಿಂದ ಕನ್ನಡಿಗರ ಪರಭಾಷಾ ವ್ಯಾಮೋಹವನ್ನು ಇನ್ನೂ ಹೆಚ್ಚಿಸುವುದು ಯಾಕೆ?
ಕನ್ನಡದ ಮತ್ತೊಂದು ಜನಪ್ರಿಯ ಪತ್ರಿಕೆ ಕೂಡ ಇದಕ್ಕೆ ಹೊರತಾಗಲಿಲ್ಲ. ಮರುದಿವಸದ ತನ್ನ ಮುಖಪುಟದಲ್ಲಿ ದೇಶಾದ್ಯಂತ ಶಿವಾಜಿ ಚಿತ್ರದ ಅದ್ಧೂರಿ ಬಿಡುಗಡೆ ಬಗ್ಗೆ ಅತಿಯಾದ ಪ್ರಚಾರದೊಂದಿಗೆ ವರದಿ ಪ್ರಕಟಿಸಿತು. ಕೆಲತಿಂಗಳ ಹಿಂದೆ ಬಿಡುಗಡೆಯಾಗಿ ಕರ್ನಾಟಕ ಮಾತ್ರವಲ್ಲದೆ, ಇತರ ರಾಜ್ಯಗಳಲ್ಲೂ, ಅಮೇರಿಕ ಮತ್ತಿತರ ದೇಶಗಳಲ್ಲೂ ಹಿಂದೆಂದೂ ಕಂಡರಿಯದ ಜನಪ್ರಿಯತೆಯೊಂದಿಗೆ ಯಶಸ್ವಿಯಾಗಿ ಬೆಳ್ಳಿಹಬ್ಬ ಆಚರಿಸಿ, ಇನ್ನೂ ಬರ್ಜರಿಯಾಗಿ ಮುನ್ನಡೆಯುತ್ತಿರುವ ಕನಡದ "ಮುಂಗಾರು ಮಳೆ" ಚಿತ್ರದ ಬಗ್ಗೆ ಕನ್ನಡ ಪತ್ರಿಕೆಗಳು ಈ ರೀತಿ ಪ್ರಚಾರ ನಡೆಸಲಿಲ್ಲ ಎನ್ನುವ ಕಟು ವಾಸ್ತವ ನಮ್ಮ ಮುಂದಿದೆ. ಕನ್ನಡ ಚಿತ್ರಗಳ ಪ್ರಚಾರ ಹಣತೆತ್ತ ಜಾಹೀರಾತು ಮುಖಾಂತರ ಆಗಬೇಕು, ಪರಭಾಷಾ ಚಿತ್ರಗಳು ಸುದ್ದಿ ಜಾಗವನ್ನು ಅನಂಕರಿಸಬೇಕು ಅಂತ ಏನಾದರೂ ಪಾಲಿಸಿ ಇದೆಯಾ?
ಇದೇ ರೀತಿ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಕನ್ನಡ ಚಲನಚಿತ್ರ ಇತಿಹಾಸದಲ್ಲೇ ದಾಖಲೆ ಮಾಡಿದ "ಆಪ್ತಮಿತ್ರ" ಚಿತ್ರದ ಬಗ್ಗೆಯೂ ಈ ರೀತಿಯ ಪ್ರಚಾರವನ್ನು ಕನ್ನಡ ಪತ್ರಿಕೆಗಳು ಮಾಡಿರಲಿಲ್ಲ. ಆದೆಲ್ಲ ಸರಿ ಈ ರೀತಿ ವಿಶಾಲಮನೋಭಾವದಿಂದ ಪರಭಾಷಾ ಚಿತ್ರಗಳ ಬಗ್ಗೆ ಹಾಗೂ ನಟರ ಬಗ್ಗೆ ವರದಿ ಮಾಡುವ ಕನ್ನಡ ಪತ್ರಿಕೆಗಳು ಹಾಗೂ ಪತ್ರಕರ್ತರು, ಒಮ್ಮೆಯಾದರೂ ಪರಭಾಷಾ ಪತ್ರಿಕೆಗಳು, ಯಶಸ್ವಿ ಕನ್ನಡ ಚಿತ್ರಗಳ ಬಗ್ಗೆಯಾಗಲಿ, ಜನಪ್ರಿಯ ಕನ್ನಡ ನಟರ ಬಗೆಯಾಗಲಿ ಈ ರೀತಿ ಉದಾರವಾದ ವರದಿಯನ್ನು ಪ್ರಕಟಿಸಿವೆಯೇ? ಅಥವಾ ಪ್ರಚಾರ ಮಾಡಿವೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗಿದೆ.
ಕಾವೇರಿ ವಿವಾದ, ಗಡಿವಿವಾದ, ಡಾ.ರಾಜ್ ಅವರನ್ನು ವೀರಪ್ಪನ್ ಅಪಹರಿಸಿದ ಘಟನೆ ಮುಂತಾದ ಕನ್ನಡ ವಿರೋಧಿ ವರದಿಗಳನ್ನು ವೈಭವೀಕರಿಸಿ ಪರಭಾಷಿಗರಲ್ಲಿ ಕನ್ನಡಿಗರ ಬಗ್ಗೆ ಕೀಳು ಭಾವನೆ ಬೆಳೆಸುವಲ್ಲಿ ಪರಭಾಷಾ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ನಿರತವಾಗಿರುವಾಗ, ಕನ್ನಡ ಪತ್ರಿಕೆಗಳು ಅದಕ್ಕೆ ತದ್ವಿರುದ್ಧವಾಗಿ ಕನ್ನಡಿಗರಲ್ಲಿ ಪರಭಾಷಾ ವ್ಯಾಮೋಹ ಬೆಳೆಸುತ್ತಿವೆ. ಇನ್ನು ಕೆಲಪತ್ರಿಕೆಗಳು ಒಬ್ಬ ತಮಿಳು ನಟನನ್ನು ಕನ್ನಡಿಗನೆಂದು ಬಿಂಬಿಸುತ್ತ ಕನ್ನಡಿಗರಿಗೆ ಮೋಸಮಾಡುತ್ತಿವೆ. ಕಾವೇರಿ ವಿವಾದದಲ್ಲಾಗಲಿ, ಕನ್ನಡಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಾಗಲಿ ಕನ್ನಡ ಪರವಾದ ನಿಲುವಿಲ್ಲದ ಮನುಷ್ಯನನ್ನು ಕನ್ನಡಿಗ ಎಂದು ಪ್ರಚಾರ ಕೊಡುವುದು ಸರಿಯೇ? ನೀವೇ ಹೇಳಿ?
ಕನ್ನಡದ "ಮುಂಗಾರು ಮಳೆ" ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ತಮಿಳು ಪತ್ರಿಕೆಗಳು ಮುಖಪುಟ ವರದಿ ಇರಲಿ ಒಳಪುಟದಲ್ಲಿ ಒಂದು ಸಣ್ಣ ಸುದ್ದಿಯಾಗಿ ಸಹ ತನ್ನ ಓದುಗರಿಗೆ ತಿಳಿಸಿದೆಯೇ? ಆಪ್ತಮಿತ್ರ ಚಿತ್ರ ಮಲಯಾಳಂ ಚಿತ್ರದ ರೀಮೇಕ್ ಆಗಿದ್ದರೂ ಅದು ಕನ್ನಡದಲ್ಲಿ ಮೊದಲು ಜನಪ್ರಿಯವಾಗಿ ಅತ್ಯಂತ ಯಶಸ್ವಿಯಾಗಿ ನಡೆದು, ತಮಿಳು ಚಿತ್ರರಂಗದವರ ಕಣ್ಣು ಅದರ ಮೇಲೆ ಬಿದ್ದು, ಅದನ್ನು ತಮಿಳಿನಲ್ಲಿ ಚಂದ್ರಮುಖಿ ಎಂದು ರೀಮೇಕ್ ಮಾಡಿದರು. ಅದರಲ್ಲಿ ಕನ್ನಡದ ಸಂಗೀತ ನಿರ್ದೇಶಕ ಗುರುಕಿರಣ್ ನೀಡಿದ ಸಂಗೀತವನ್ನೂ ಹಾಗೂ ಮೂಲ ಮಲಯಾಳಂ ಚಿತ್ರದಲ್ಲಿ ಇಲ್ಲದ ಕನ್ನಡ ಚಿತ್ರದ ದೃಶ್ಯಗಳನ್ನೂ ತಮಿಳಿನಲ್ಲೂ ನಕಲು ಮಾಡಿದರು. ಕನ್ನಡದ ಆಪ್ತಮಿತ್ರ ಚಿತ್ರದ ಯಶಸ್ಸಿನ ಬಗ್ಗೆ, ತಮಿಳಿನ ಚಂದ್ರಮುಖಿ ಚಿತ್ರ ಅದರ ನಕಲು ಎನ್ನುವ ಬಗ್ಗೆ ಉತ್ತರ ಭಾರತದ ಜನತೆಗಾಗಲಿ, ತಮಿಳರಿಗಾಗಲಿ ಇಲ್ಲೀವರೆಗೂ ತಿಳಿದಿಲ್ಲ! ಅಷ್ಟು ಹೀನಾಯವಾಗಿ ಪರಭಾಷಾ ಮಾಧ್ಯಮಗಳು ಕನ್ನಡ ಚಿತ್ರರಂಗವನ್ನು ಕಡೆಗಣಿಸಿವೆ! ಇದರ ಬಗ್ಗೆ ನಮ್ಮ ಕನ್ನಡ ಪತ್ರಕರ್ತರು ಏನು ಹೇಳುತ್ತಾರೆ?











Click it and Unblock the Notifications