'ಸಾಹುಕಾರ್' ಅಂದರ್ ಬುಲಾಯ; ದರವಾಜ ಲಗಾಯ: ಪ್ರಕರಣ ಏನಾಯ್ತು?
ಬೆಂಗಳೂರು, ಆ. 27: ಮೈತ್ರಿ ಸರ್ಕಾರವನ್ನೇ ಬೀಳಿಸಿ ಬಿಜೆಪಿ ಸರ್ಕಾರವನ್ನು ರಚಿಸಿ 'ರೆಬಲ್ ಲೀಡರ್' ಎನಿಸಿಕೊಂಡಿದ್ದ ಬೆಳಗಾವಿ ಸಾಹುಕಾರ್ 'ಅಶ್ಲೀಲ ಸಿಡಿ' ಪ್ರಕರಣದಲ್ಲಿ ಹಠಕ್ಕೆ ಬಿದ್ದು ಪಡೆದಿದ್ದ ಸಚಿವ ಸಂಪುಟ ಸ್ಥಾನವನ್ನೇ ಕಳೆದುಕೊಂಡರು. ಸಚಿವ ಸ್ಥಾನಕ್ಕಾಗಿ ದೆಹಲಿ ನಾಯಕರ ಕದ ತಟ್ಟಿ ಪ್ರಭಾವ ಬೀರಿದರೂ ಬೊಮ್ಮಾಯಿ ಸರ್ಕಾರದಲ್ಲಿ ಸಣ್ಣ ಖಾತೆಯು ದಕ್ಕಲಿಲ್ಲ. ಸದ್ಯ ಬೆಳಗಾವಿ ಸಾಹುಕಾರ್ ಪರಿಸ್ಥಿತಿ 'ಸಾಹುಕಾರ್ ಅಂದರ್ ಬುಲಾಯ; ದರವಾಜ ಲಗಾಯ' ಎಂಬಂತಾಗಿದೆ! ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಮುಕ್ತಿ ಸಿಗುವ ವರೆಗೂ ಸದ್ಯಕ್ಕೆ ಅವರಿಗೆ ಯಾವ ಸ್ಥಾನವೂ ಲಭ್ಯವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಪ್ರಕರಣದಲ್ಲಿ ಏನೆಲ್ಲಾ ಬೆಳವಣಿಗೆ ಆಗಿದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಸಿಎಂ ಆಸೆ ಚಿಗುರಿತ್ತು
ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ಹೀಗಾಗಿ ರೆಬೆಲ್ ಆಗಿದ್ದ ಜಾರಕಿಹೊಳಿ ಪಕ್ಷದ ನಡೆ ಬಗ್ಗೆ ಮುನಿಸಿಕೊಂಡಿದ್ದರು. ಇದೇ ವೇಳೆಗೆ ಸಾಹುಕಾರ್ ಬೆಳಗಾವಿ ಕೋಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂಟ್ರಿ ಕೊಟ್ಟಿದ್ದರು. ಈ ಬೆಳವಣಿಗೆಯಿಂದ ಕೈ ಪಕ್ಷದ ವಿರುದ್ಧವೇ ತೊಡೆ ತಟ್ಟಿದ್ದ ರಮೇಶ್ ಜಾರಕಿಹೊಳಿ ಅವಕಾಶಕ್ಕೆ ಹೊಂಚು ಹಾಕಿ ಕೂತಿದ್ದರು. ಅಷ್ಟರಲ್ಲಿ ಗರಿಗೆದರಿದ ಬಿಜೆಪಿ ಸರ್ಕಾರ ರಚನೆ ಮಾಡುವ ಆಪರೇಷನ್ ಕಮಲಕ್ಕೆ ಹೆಗಲು ಕೊಟ್ಟು ನಿಂತವರೇ ರಮೇಶ್ ಜಾರಕಿಹೊಳಿ. ಬೆಳಗಾವಿ ಭಾಗದಲ್ಲಿ ಜಾರಕಿಹೊಳಿ ಬದ್ರರ್ಸ್ ಪವರ್ ನೋಡಿ ಬಿಜೆಪಿ ಕೂಡ ರಮೇಶ್ ಜಾರಕಿಹೊಳಿಗೆ ದೊಡ್ಡ ಅವಕಾಶ ನೀಡಿತ್ತು. ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರವನ್ನೇ ಬೀಳಿಸಿದೆ ಎಂದೇ ಬಿಂಬಿಸಿಕೊಂಡಿದ್ದರು. ಎದುರಾಳಿ ಎಂದೇ ಪರಿಗಣಿಸಿದ್ದ ರಮೇಶ್ ಜಾರಕಿಹೊಳಿ ಹಠಕ್ಕೆ ಬಿದ್ದು ಡಿ.ಕೆ. ಶಿವಕುಮಾರ್ ಅಲಂಕರಿಸಿದ್ದ 'ಜಲ ಸಂಪನ್ಮೂಲ ಖಾತೆ ಸಚಿವ ಸ್ಥಾನವನ್ನು ಪಡೆದಿದ್ದರು. ಒಂದು ವರ್ಷ ಸಚಿವರಾಗಿ ಅಧಿಕಾರ ನಡೆಸಿದ ಜಾರಕಿಹೊಳಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಯಿತು.
'ಸಿಡಿ' ಕೇಸಿಗೆ ತಲೆಬಾಗಿದ್ರು
2021 ಮಾರ್ಚ್ 02 ರಂದು ದಿನೇಶ್ ಕಲ್ಲಹಳ್ಳಿ ಎಂಬುವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವ ಮೊದಲೇ ಸಾಹುಕಾರ್ ಸಿಡಿ ಸ್ಫೋಟಗೊಂಡಿತ್ತು. ಅದಾಗಲೇ ಚಾಮುಂಡೇಶ್ವರಿ ತಾಯಿ ಮಡಿಲಲ್ಲಿ ಮಂಡಿಯೂರಿ ಕಣ್ಣೀರು ಹಾಕಿ ಹೊರ ಬಂದಿದ್ದ ರಮೇಶ್ ಜಾರಕಿಹೊಳಿ ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾಗಿ ಎರಡು- ಮೂರು ದಿನ ನಾನಾ ಬೆಳವಣಿಗೆ ನಡೆಯಿತು. ಸಿಡಿಯಲ್ಲಿದ್ದ ಸಂತ್ರಸ್ತ ಯುವತಿ ಕಣ್ಮರೆಯಾದಳು. ಸಿಡಿ ಯುವತಿ ಜತೆ ಗುರುತಿಸಿಕೊಂಡಿದ್ದ ಮಾಜಿ ಪತ್ರಕರ್ತ ಶ್ರವಣ್, ನರೇಶ್ ಗೌಡ ಕೂಡ ತಲೆ ಮರೆಸಿಕೊಂಡರು. ಆನಂತರ ಸಿಡಿ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆ ಆಯಿತು. ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತು. ಆರೋಪ- ಪ್ರತ್ಯಾರೋಪಗಳಿಗೆ ಸಾಕ್ಷಿ ಆಯಿತು. " ಆ ಸಿಡಿಯಲ್ಲಿರುವುದು ನಾನಲ್ಲ, ಯಾರೋ ನಕಲಿ ಸಿಡಿ ತಯಾರಿಸಿದ್ದಾರೆ" ಎಂಬ ಹೇಳಿಕೆ ಮೂಲಕ ಸತ್ಯವಂತನಾಗಲು ಹೊರಟ ರಮೇಶ್ ಜಾರಕಿಹೊಳಿ ಅಂತಿಮವಾಗಿ ಸತ್ಯ ಒಪ್ಪಿಕೊಳ್ಳಬೇಕಾಯಿತು. ಅಂತಿಮವಾಗಿ ರಮೇಶ್ ಜಾರಕಿಹೊಳಿ 'ಇದೊಂದು ಬ್ಲಾಕ್ ಮೇಲ್. ನನ್ನನ್ನು ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ' ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ನನಗೆ ಕೆಲಸದ ಅಮಿಷ ತೋರಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದಳು. ಎರಡೂ ಪ್ರಕರಣಗಳ ತನಿಖೆಯನ್ನು ಎಸ್ಐಟಿಗೆ ವಹಿಸಲಾಯಿತು.
ಸಂತ್ರಸ್ತ ಯುವತಿಗೆ ಕಾದಿದೆಯಾ ಕಂಟಕ ?
ರಮೇಶ್ ಜಾರಕಿಹೊಳಿ ತನ್ನ ಪ್ರಭಾವ ಬಳಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. ಕೆಲಸದ ಅಮಿಷ ಒಡ್ಡ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಆರೋಪಿಸಿ ಸಂತ್ರಸ್ತ ಯುವತಿ ನೀಡಿದ ದೂರು ಎಸ್ಐಟಿ ತನಿಖೆಯಲ್ಲಿ ಮುಗುಚಿ ಬಿದ್ದಿದೆ. ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎನ್ನಲಾಗಿದೆ. ಆಕೆ ಯಾವುದೇ ಬಿಇ ಪದವಿ ಮಾಡಿಲ್ಲ. ಕೆಲಸ ಕೇಳಿದ್ದಾಗಲೀ, ಕೆಲಸಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ್ದಕ್ಕೆ ಯಾವ ಪುರಾವೆಗಳು ಎಸ್ಐಟಿ ತನಿಖೆಯಲ್ಲಿ ಸಿಕ್ಕಿಲ್ಲ. ಇನ್ನು ಡ್ರೋನ್ ಬಗ್ಗೆ ಸಣ್ಣ ಜ್ಞಾನವೂ ಇಲ್ಲದ ಸಂತ್ರಸ್ತ ಯುವತಿ ಬೆಳಗಾವಿ ಡ್ಯಾಮ್ ಬಗ್ಗೆ ಡಾಕ್ಯುಮೆಂಟರಿ ಮಾಡಲು ಜಲ ಸಂಪನ್ಮೂಲ ಸಚಿವರನ್ನು ಎಡತಾಕಿ ಬಂದಿದ್ದಾಳೆ. ಇನ್ನು ಆಕೆಯೇ ರಹಸ್ಯ ಕ್ಯಾಮರಾ ತೆಗೆದುಕೊಂಡು ಹೋಗಿದ್ದಾಳೆ. ಅದನ್ನು ನಿರ್ವಹಣೆ ಮಾಡಲಾಗದೇ ಷಡ್ಯಂತ್ರಿಯೊಬ್ಬನಿಗೆ ಕರೆ ಮಾಡಿ"ಕೆಲಸ ಆಗಿದೆ' ಎಂದು ಹೇಳಿರುವುದು ರೆಕಾರ್ಡ್ ಅಗಿದೆ. ಈ ಎಲ್ಲಾ ಸಾಕ್ಷಾಧಾರಗಳನ್ನು ಪರಿಪೂರ್ಣವಾಗಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿರುವ ಎಸ್ಐಟಿ ಅಧಿಕಾರಿಗಳು 'ಸಂತ್ರಸ್ತ ಯುವತಿ ಮಾಡಿರುವುದು ಸುಳ್ಳು ಆರೋಪ' ಎಂದು ಅಂತಿಮ ವರದಿ ಸಿದ್ಧಪಡಿಸಿದ್ದಾರೆ. ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದು, ಹೈಕೋರ್ಟ್ ಅನುಮತಿ ನೀಡಿದ ಕೂಡಲೇ ಸಂಬಂಧಪಟ್ಟ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದಲ್ಲಿ ಅಂತಿಮ ವರದಿ
ಇನ್ನು ರಮೇಶ್ ಜಾರಕಿಹೊಳಿಯನ್ನು ಹನಿಟ್ರ್ಯಾಪ್ ಮಾಡಲಾಗಿದೆ. ಅದರ ಭಾಗವಾಗಿಯೇ ಆವರನ್ನು ಮಂತ್ರಿಮಾಲ್ ಬಳಿಯಿರುವ ಅಪಾರ್ಟ್ ಮೆಂಟ್ನಲ್ಲಿ ಭೇಟಿ ಮಾಡಲಾಗಿದೆ. ಡ್ರೋನ್ ಹೆಸರಿನಲ್ಲಿ ಮಾತುಕತೆ ಆರಂಭಿಸಲಾಗಿದೆ. ಉದ್ದೇಶ ಪೂರ್ವಕವಾಗಿ ರಹಸ್ಯ ಕ್ಯಾಮರಾ ಇಟ್ಟು ರೆಕಾರ್ಡ್ ಮಾಡಲಾಗಿದೆ. ಅದಾಗಿ ಸಂತ್ರಸ್ತ ಯುವತಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಿಕ್ಕಿದೆ. ರಹಸ್ಯ ಕ್ಯಾಮರಾ ಖರೀದಿಗೆ ಪುರಾವೆಗಳು ಸಿಕ್ಕಿವೆ. ರಮೇಶ್ ಜಾರಕಿಹೊಳಿಯನ್ನು ಖೆಡ್ಡಾಗೆ ಬೀಳಿಸಲು ರೂಪಿಸಿದ ಸಂಚು, ಸಂತ್ರಸ್ತ ಯುವತಿ ಜತೆ ಮಾತುಕತೆ, ಕಾರ್ಯಗತ ಮಾಡಿದ್ದು, ಸಿಡಿ ಬಿಡುಗಡೆ, ಆ ಬಳಿಕ ತಲೆ ಮರೆಸಿಕೊಂಡಿದ್ದ ಸಿಡಿ ಸೂತ್ರಧಾರರ ಬಗ್ಗೆ ಸಮರ್ಥ ದಾಖಲೆಗಳನ್ನು ಎಸ್ಐಟಿ ಸಂಗ್ರಹಿಸಿದೆ. "ಇದು ಹನಿಟ್ರ್ಯಾಪ್. ಪೂರ್ವ ನಿಯೋಜಿತ ಸಂಚು ರೂಪಿಸಿ, ಖೆಡ್ಡಾಗೆ ಬೀಳಿಸಿ ರೆಕಾರ್ಡ್ ಮಾಡಿ ಲಾಭ ಮಾಡಿಕೊಂಡಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದು ಸಿಡಿ ಸೂತ್ರಧಾರರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ 120 ಪುಟಗಳ ತನಿಖಾ ವರದಿಯನ್ನು ಎಸ್ಐಟಿ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಹೈಕೋರ್ಟ್ ಅನುಮತಿಗಾಗಿ ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅಂತೂ ಅತಿ ಶೀಘ್ರದಲ್ಲಿಯೇ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ.
ಸಾಹುಕಾರ್ ಅಂದರ್ ಬುಲಾಯಾ
ರಮೇಶ್ ಜಾರಕಿಹೊಳಿಯದ್ದು ಹನಿಟ್ರ್ಯಾಪ್ ಆಗಿರಬಹುದು. ಆದರೆ, ಸಿಡಿ ಸ್ಫೋಟಗೊಂಡ ಬಳಿಕ ಕುಟುಂಬದಲ್ಲಿ ಯಾರ ಮುಖವನ್ನು ನೋಡುವ ಸ್ಥಿತಿಯಲ್ಲಿಲ್ಲ. ಜನರ ಮುಂದೆ ತಲೆಯೆತ್ತಿ ಓಡಾಡಲು ಹಿಂಜರಿಕೆ. ಸಚಿವ ಸ್ಥಾನ ಹೋಯಿತು. ಮತ್ತೆ ಸಚಿವ ಸ್ಥಾನ ಸಿಗಬೇಕಾದರೆ, ಅಂತಿಮ ವರದಿ ಸಲ್ಲಿಕೆಯಾಗಬೇಕು. ಅದು ನ್ಯಾಯಾಲಯ ಅಂಗೀಕರಿಸಬೇಕು. ರಮೇಶ್ ಜಾರಕಿಹೊಳಿ ನಿರಪರಧಿಯಾದರೂ, ಒಬ್ಬ ಹಿರಿಯ ಜನ ಪ್ರತಿನಿಧಿಯಾಗಿ ಮಗಳು ವಯಸ್ಸಿನ ಯುವತಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದು ನೈತಿಕವಾಗಿ ಯಾರೂ ಇದನ್ನು ಒಪ್ಪುವುದಿಲ್ಲ. ಹೀಗಾಗಿ ಮತ್ತೆ ಸಚಿವರು ಆಗುತ್ತಾರೋ ಅಥವಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಮಗನ ಭವಿಷ್ಯ ಕಟ್ಟಿಕೊಡಲು ಮುಂದಾಗುತ್ತಾರೋ ಕಾದು ನೋಡಬೇಕು. ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಅಧಿಕೃತವಾಗಿ ಹೇಳಿಕೊಳ್ಳಲು ಆಗದೇ, ಸಚಿವ ಸ್ಥಾನ ಅಲಂಕರಿಸಲು ಜಾರಕಿಹೊಳಿ ಪರದಾಡುತ್ತಿದ್ದಾರೆ. ಎಲ್ಲಿ ನನ್ನ ಸರ್ಕಾರಕ್ಕೆ ಮರ್ಯಾದೆ ಹೋಗುತ್ತೋ ಎನ್ನುವ ಕಾರಣಕ್ಕೆ ಸಿಎಂ ಬೊಮ್ಮಾಯಿ ಅವರೇ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದೇ ಕಾಲ ತಳ್ಳುವ ತಂತ್ರ ಅನುಸರಿಸಿದರೂ ಅಚ್ಚರಿ ಪಡಬೇಕಿಲ್ಲ.
ರಾಜಕಾರಣಿಗಳಿಗೆ ಪಾಠವಾಗಲಿ
ಪಕ್ಷದ ವಿರುದ್ಧ ತಿರುಗಿ ಬಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದ ಬೆಳಗಾವಿ ಸಾಹುಕಾರ್ ಹಠಕ್ಕೆ ಬಿದ್ದು ಜಲಸಂಪನ್ಮೂಲ ಖಾತೆಯನ್ನು ಅಲಂಕರಿಸಿದ್ರು. ಆದರೆ, ಜಾಸ್ತಿ ದಿನ ಆ ಪಟ್ಟ ಉಳಿಯಲಿಲ್ಲ. ಮನದಾಳದ "ಲೈಂಗಿಕ" ಚಟ ತೀರಿಸಿಕೊಳ್ಳಲು ಹೋದ ಸಾಹುಕಾರ್ ಖೆಡ್ಡಾ ತೋಡಿದ್ದ ಯುವತಿಯನ್ನೇ ಮನೆಯೊಳಗೆ ಕರೆಸಿಕೊಳ್ಳುವಂತೆ ( ಅಂದರ್ ಬುಲಾಯ) ಮಾಡಿತ್ತು. (ದರವಾಜ ಲಗಾಯ) ಬಾಗಿಲು ಹಾಕುವಂತೆ ಮಾಡಿತ್ತು. ಸದ್ದಿಲ್ಲದೇ ಸ್ಫೋಟಗೊಂಡ 'ಅಶ್ಲೀಲ ಸಿಡಿ' ಈವರೆಗೂ ಗಳಿಸಿದ್ದ ರಾಜಕೀಯ ಭವಿಷ್ಯ, ಮರ್ಯಾದೆಯನ್ನು ಕಳಚಿತು. ಸಾಹುಕಾರ್ ಕರೆದ ಅಂದರೆ ನೂರು ಜನ ಬರುವರು ಇರುತ್ತಾರೆ. ಹಾಗಂತ ದರವಾಜ ಲಗಾಯ ಅಂತ ಬಾಗಿಲು ಹಾಕಿಕೊಂಡು ಕಣ್ಣು ಮಚ್ಚಿ ಹಾಲು ಕುಡಿದರೇ ಆಗುವುದು ಇದೇ ಗತಿ. ಸಾರ್ವಜನಿಕ ಜೀವನದಲ್ಲಿರುವರು ಎಚ್ಚರಿಕೆಯಿಂದ ಇರಬೇಕು. ಅದಕ್ಕೆ ಇದಕ್ಕಿಂತಲೂ ದೊಡ್ಡ ಉದಾಹರಣೆ ಬೇಕಿಲ್ಲ.