Get Updates
Get notified of breaking news, exclusive insights, and must-see stories!

ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ?

ಬಹಳ ಚಟುವಟಿಕೆಯ ಹುಡುಗ ಅಮನ್. ಜಾಹೀರಾತಿನ ಕಂಪನಿಯೊಂದರಲ್ಲಿ ಕೆಲಸ. ಉತ್ತಮ ಕೆಲಸಗಾರ. ಸಮಾಧಾನಸ್ಥ. ಯಾವುದೇ ಪ್ರಾಜೆಕ್ಟ್ ಬಂದರೂ ಸಹ ಬಹಳ ನಾವಿನ್ಯತೆಯಲ್ಲಿ ಮಾಡುತ್ತಾನೆ. ಯಾವುದೇ ಸಮಸ್ಯೆಗಳಿಗೆ ಪರಿಹಾರ ಹೇಳುವ ಅಮನ್ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಇತ್ತೀಚೆಗೆ ಏಕೋ ಮೊದಲಿನ ಚಟುವಟಿಕೆ ಇಲ್ಲ. ದಿನಚರಿಯಲ್ಲಿ ಶಿಸ್ತು ಕಡಿಮೆಯಾಗಿದೆ. ಇತರರ ಮೇಲೆ ರೇಗುತ್ತಾನೆ. ಕೆಲಸದಲ್ಲೂ ಏಕಾಗ್ರತೆ ಕಡಿಮೆಯಾಗಿದೆ. ಹಾಗು ಕೆಲಸ ಮುಂದೂಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಮಾಡುತ್ತಿರುವ ಪ್ರಾಜೆಕ್ಟ್‌ಗಳಲ್ಲಿ ನವೀನತೆ ಏನಿಲ್ಲ. ಪದೇ ಪದೇ ತಿರಸೃತನಾಗುತ್ತಿದ್ದೇನೆ ಎಂಬ ಅನಿಸಿಕೆ. ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡ ಸಹೋದ್ಯೋಗಿಗಳ ಬಗ್ಗೆ ಬಹಳ ಅಸಹನೆ. ಸಮಾಧಾನ ಕಳೆದುಕೊಳ್ಳಬಾರದು, ಎಂದು ಎಷ್ಟು ಪ್ರಯತ್ನಿಸಿದರೂ ಆಗುತ್ತಿಲ್ಲ.

ಅಮನ್‌ಗೆ ಪದೇ ಪದೇ ತಾನು ಗಾಢವಾದ ಕೆಸರು ಗದ್ದೆಯೊಳಗೆ ಸಿಲುಕಿಕೊಂಡಂತೆ, ಕೈಕಾಲುಗಳು ಚಲಿಸಲೂ ಆಗದ, ಏನೂ ಮಾಡಲಾಗದ ಉಸಿರುಗಟ್ಟಿಸುವ ಪರಿಸ್ಥಿತಿಯಲ್ಲಿದ್ದೇನೆ ಎಂಬ ಭಾವನೆ. ಪರಿಸ್ಥಿತಿ ಇಂದ ಹೊರ ಬರಲು ಪ್ರಯತ್ನಿಸಿದಷ್ಟೂ ಸಹ, ಮತ್ತೂ ಕೆಸರಿನೊಳಗೆ ಸಿಲುಕಿ ಹಾಕಿಕೊಳ್ಳುತ್ತಿದ್ದೇನೆ ಎಂಬ ಭಾವನೆ.

ಜೀವನ ಮುಂದೆ ಸಾಗದೆ ಎಲ್ಲೋ ನಿಂತುಬಿಟ್ಟಿದೆ

ಜೀವನ ಮುಂದೆ ಸಾಗದೆ ಎಲ್ಲೋ ನಿಂತುಬಿಟ್ಟಿದೆ

ಅಂಜು ಗೃಹಿಣಿ, ಎಲ್ಲಾ ಕೆಲಸದಲ್ಲೂ ಬಹಳ ನಾಜೂಕು ಹಾಗು ಅಚ್ಚುಕಟ್ಟು. ಉತ್ತಮ ಹಾಡುಗಾರ್ತಿ ಕೂಡ. ಮನೆ, ಮನೆಯವರು, ಸಂಗೀತ ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳುತ್ತಾಳೆ. ಮನೆಯಲ್ಲೇ ಸಂಜೆಯ ಸಮಯ online ಸಂಗೀತ ಪಾಠ ಮಾಡುತ್ತಾಳೆ. ದಿನವಿಡೀ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ ಸಹ ಬರಬರುತ್ತಾ ಒಂದು ರೀತಿಯ ಏಕತಾನತೆ, ಅಸಹನೆ‌. ಕುಟುಂಬದ ಸಹಕಾರ ಇಲ್ಲ. ಯಾರಿಗೂ ತನ್ನ ಬಗ್ಗೆ ಕಾಳಜಿ ಇಲ್ಲ. ಜೀವನ ಮುಂದೆ ಸಾಗದೆ ಎಲ್ಲೋ ನಿಂತುಬಿಟ್ಟಿದೆ. ಮುಂದೇನು? ಎಂಬ ಪ್ರಶ್ನೆ ಕಾಡುತ್ತಿದೆ.

ಯಾವುದೋ ಕಾಡಿನ ಮಧ್ಯೆ ದಾರಿತಪ್ಪಿ ಸಿಕ್ಕು ಹಾಕಿಕೊಂಡ ಭಾವನೆ. ಮುಂದೆ ಹೋಗಲೂ... ಹಿಂದೆ ಬರಲೂ ಆಗದ ಕಳವಳ. ಎತ್ತ ಹೋದರೂ ದಟ್ಟ ಕಾಡೊಳಗೆ ಇನ್ನಷ್ಟೂ ಸಿಕ್ಕಿ ಹಾಕಿಕೊಳ್ಳುವೆ ಎಂಬ ಭಯ. ಚಲಿಸ ಬಯಸಿದರೂ ಆಗದ ಪರಿಸ್ಥಿತಿ. ಏನು ತನ್ನನ್ನು ಕಟ್ಟಿ ಹಾಕಿದೆ? ಏಕೆ ತನಗೆ ಹೀಗೆ ಆಗುತ್ತಿದೆ? ಎಂಬ ಯೋಚನೆ ಕಾಡುತ್ತಿದೆ.

ಜೀವನ ನಿಂತ ನೀರಿನಂತಾಗಿಬಿಟ್ಟಿದೆ‌

ಜೀವನ ನಿಂತ ನೀರಿನಂತಾಗಿಬಿಟ್ಟಿದೆ‌

ಒಮ್ಮೊಮ್ಮೆ ನಮಗೂ ಹೀಗಾಗುವುದುಂಟು. ಬದುಕಿನ ಯಾವುದಾದರೊಂದು ಘಟ್ಟದಲ್ಲಿ ಮಕ್ಕಳು, ಹದಿಹರೆಯದವರು ವಯಸ್ಕರು, ಹಿರಿಯರು ಯಾರಿಗಾದರೂ ಸಹ ಕೆಲವು ಹಂತದಲ್ಲಿ ಜೀವನದಲ್ಲಿ "ಸಿಲುಕಿಹಾಕಿಕೊಂಡಿದ್ದೇವೆ" ಎಂದು ಎನಿಸಬಹುದು. ಜೀವನ ನಿಂತ ನೀರಿನಂತಾಗಿಬಿಟ್ಟಿದೆ‌ ಎತ್ತಲೂ ಸಾಗುತ್ತಿಲ್ಲ ಎಂಬ ಭಯ ಆವರಿಸುತ್ತದೆ.

ಕೆಲವು ವೇಳೆ ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದರೂ, ನಿಭಾಯಿಸಬಹುದಾದ ಅಡೆತಡೆ ಇದ್ದರೂ ಸಹ ಜೀವನದಲ್ಲಿ "ಸಿಕ್ಕುಹಾಕಿಕೊಂಡಿದ್ದೇನೆ" (feeling stuck) ಚಲಿಸಲು ಪ್ರಯತ್ನಿಸಿದಷ್ಟೂ ಕೂಡ ಪರಿಸ್ಥಿತಿ ಹದಗೆಡುತ್ತಿದೆಯೇನೋ ಎಂಬ ಭಾವನೆ. ಏನು ಮಾಡಲೂ ತೋಚುವುದಿಲ್ಲ. ಎಲ್ಲಿ ತಪ್ಪಾಗುತ್ತಿದೆ, ಏನನ್ನು ಸರಿಪಡಿಸಬಹುದು ಎಂದೂ ಸಹ ಗೊತ್ತಾಗುವುದಿಲ್ಲ. ಮನಸ್ಸಿಗೆ ಕಸಿವಿಸಿ.

ಮೊದಲನೆಯದಾಗಿ ನಮ್ಮ ಈ ಭಾವನೆಗೆ ಕಾರಣವಾದ ಅಂಶಗಳನ್ನು ಗುರುತಿಸಿಕೊಳ್ಳುವುದು ಮುಖ್ಯ. ನಂತರ ಅವಶ್ಯಕವಾದ ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಹಕಾರಿ.

ಸಂಭವನೀಯ ಕಾರಣಗಳು

ಸಂಭವನೀಯ ಕಾರಣಗಳು

* ಅನಾಸಕ್ತ ಕೆಲಸ ಹಾಗು ಸಂಬಂಧಗಳು,
* ಸೌಕರ್ಯ ವಲಯ (comfort zone)
* ಉದಾಸೀನತೆ
* ವಿಶ್ರಾಂತಿಯ ರಹಿತ ಕೆಲಸ
* ವೈಯುಕ್ತಿಕ ಬದುಕು ಹಾಗು ವೃತ್ತಿ ಬದುಕಿನಲ್ಲಿ ಆಸಕ್ತಿದಾಯಕ ಸವಾಲುಗಳಿಲ್ಲದಿರುವುದು
* ವೈಯುಕ್ತಿಕ ಹಾಗು ವೃತ್ತಿ ಜೀವನದಲ್ಲಿ ಏಕತಾನತೆ
* ನಮಗೆ ನಾವೇ ಹಾಕಿಕೊಳ್ಳುವ ಸ್ವಯಂ ಮಿತಿ
* ಇಂಪೋಸ್ಟರ್ ಸಿಂಡ್ರೋಮ್ - ನಮ್ಮ ಸ್ವಾಭಿಮಾನ ಹಾಗು ಸಾಮರ್ಥ್ಯದ ಮೇಲೆ ನಮಗೆ ಇರುವ ಅಪನಂಬಿಕೆ
* ಆತಂಕ ಹಾಗು ಖಿನ್ನತೆ, ನಮ್ಮ ಈಗಿನ ಭಾವನೆಯನ್ನು ಹೆಚ್ಚಿಸಬಹುದು.
* ಸೀಮಿತ ದೃಷ್ಟಿ- ವೈಯುಕ್ತಿಕ ಹಾಗು ವೃತ್ತಿಪರ ಬದುಕಿನ ವ್ಯಾಪ್ತಿಯನ್ನು ಸೀಮಿತವಾಗಿ ಅರ್ಥೈಸಿಕೊಳ್ಳುವುದು.
* ಭಾವನಾತ್ಮಕ ಸಹಕಾರ/ಬೆಂಬಲದ ಕೊರತೆ.
* ಪ್ರೋತ್ಸಾಹದ ಕೊರತೆ.
* ಒಂದು ಹಂತದ ನಂತರ ಜೀವನ ಉದ್ದೇಶ ರಹಿತ ಎಂಬ ಭಾವನೆ‌.
* ಜೀವನದ ಯಾವುದೇ ರೀತಿಯ ಬದಲಾವಣೆಗಳಿಗೆ ಪ್ರತಿರೋಧ
* ಪರಿಪೂರ್ಣತೆ (Perfection) ಹಾಗು ಅನಿಶ್ಚತತೆಯ ಭಯ (fear of uncertainty)

ಪ್ರಸ್ತುತ ಸಂದರ್ಭ ಉದಾಹರಣೆಗಳೊಂದಿಗೆ:

ಪ್ರಸ್ತುತ ಸಂದರ್ಭ ಉದಾಹರಣೆಗಳೊಂದಿಗೆ:

ಮೇಲಿನ ಕಾರಣಗಳಲ್ಲದೆ ಪ್ರಸ್ತುತ ಪ್ಯಾಂಡಮಿಕ್ ಸಂದರ್ಭದಲ್ಲಿ ದೈಹಿಕ, ಸಾಮಾಜಿಕ ಒಳಿತಿಗಾಗಿ ಆದ ಲಾಕ್ಡೌನ್ ಪರಿಣಾಮ ಹಾಗು ಲಾಕ್ಡೌನ್ ನಂತರವೂ ಮುಂದುವರೆದ ಮತ್ತಿತರ ನಿಯಮಗಳು ನಿರ್ಬಂಧಗಳ ಕಾರಣ ಅನೇಕರು ತಮ್ಮ ಬದುಕಿನ ಕೆಲವು ಪ್ರಮುಖ ಮಜಲುಗಳು ಹಾಗು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ /ಅನುಭವ ಪಡೆಯುವಲ್ಲಿ ಸಿಲುಕಿಹಾಕಿಕೊಂಡಿದ್ದೇನೆ ಎಂಬ
ಭಾವನೆ ಉದಾಹರಣೆಗೆ: -
* ಇಷ್ಟ ಪಟ್ಟ ಕಾಲೇಜಿಗೆ ಹೋಗಲಾಗದ ವಿದ್ಯಾರ್ಥಿ ಜೀವನಾನುಭವ (online learning and lack of holistic environment and experience)
* ಹೊಸ ಕೆಲಸ ಹಾಗು ಸಹೋದ್ಯೋಗಿಗಳೊಂದಿಗಿನ ಹುರುಪು ಒಡನಾಟ ಅನುಭವ (lack of new experience, learning and joy)
* ಸುಂದರ ಬೆಸುಗೆಯಾದ ಮದುವೆಗೆ ಸಂಗಾತಿ ಹುಡುಕುವಲ್ಲಿ ತಡವಾಗುತ್ತಿರುವುದು (various needs and support),
* ಮುಂದೂಡಲ್ಪಡುತ್ತಿರುವ ಕುಟುಂಬ- ಮಕ್ಕಳ ಯೋಜನೆ ಮತ್ತು ಭಯ (postponing the plan of starting a family due to present prevailing health conditions)
* ತಮ್ಮದೇ ಮನೆ ಮಾಡಬೇಕು ಎಂಬ ಆಶಯ (dilemma weather to buy or not)
* ಮುಂದೂಡಲಾಗುತ್ತಿರುವ ಪವಿತ್ರ ಸ್ಥಳಗಳ/ಪ್ರವಾಸ ಇಚ್ಛೆಗಳು (fear of health and hygiene)

ಹಾಗೂ ಇನ್ನೂ ಬೇರೆ ಬೇರೆ ವಿಚಾರ, ಸಂದರ್ಭದಲ್ಲಿ ಅನೇಕರು ಈ "ಸಿಕ್ಕು ಹಾಕಿಕೊಂಡಿರುವ" ಜೀವನ ಮುಂದೆ ಸಾಗುತ್ತಿಲ್ಲ ಎಂಬ ಭಾವನೆಗಳನ್ನು ತೀವ್ರವಾಗಿ ಅನುಭವಿಸುತ್ತಿರಬಹುದು. ಪ್ರಸ್ತುತ ಅನಿಶ್ಚಿತತೆ ಈ ಭಾವನೆಗಳನ್ನು ದಟ್ಟವಾಗಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಹಾಗಿದ್ದರೆ ಕೆಲವು ವಿಧಾನಗಳನ್ನು ಅನುಸರಿಸಿ

ಹಾಗಿದ್ದರೆ ಕೆಲವು ವಿಧಾನಗಳನ್ನು ಅನುಸರಿಸಿ

1) ನಿಮ್ಮ ಬಗೆಗಿನ ಅರಿವನ್ನು ಜಾಗೃತಗೊಳಿಸಿ

* ನಮ್ಮ ದೈಹಿಕ, ಮಾನಸಿಕ ಹಾಗು ಸಾಮಾಜಿಕ ಜೀವನದ ಮೇಲೆ ಗಮನಹರಿಸಿ. ಒಮ್ಮೊಮ್ಮೆ ಬಹಳ ಸಣ್ಣದೆಂದು ನಿರ್ಲಕ್ಷಿಸಿದ ಅಂಶಗಳನ್ನು ಪರಿಶೀಲಿಸಿ ಅದನ್ನು ಸರಿಪಡಿಸಿ.
* ಸತ್ವಯುತ ಆಹಾರ ಪದ್ದತಿ, ದಿನಚರಿಯಲ್ಲಿ ವ್ಯಾಯಾಮ ಹಾಗು ಧ್ಯಾನಕ್ಕೆ ಒತ್ತುಕೊಡುವುದು ಒಳಿತು. ದೈಹಿಕ ಆರೋಗ್ಯದ ಕಾಳಜಿ ವಹಿಸಿ.
* ನಮ್ಮ ರಕ್ಷಣಾ ಕಾರ್ಯ ವಿಧಾನಗಳು (defense mechanism) ಮತ್ತು ಅರಿವಿನ ವಿರೂಪಗಳು ಅಥವಾ ಅರಿವಿನ ಅಸ್ಪಷ್ಟತೆ (cognitive distortions) ಬಗ್ಗೆ ತಿಳಿದುಕೊಳ್ಳಿ. ಈ ವಿಚಾರದಲ್ಲಿ ವೃತ್ತಿಪರ ಚಿಕಿತ್ಸಕರ (therapist) ಸಹಾಯ ಪಡೆಯುವುದು ಉತ್ತಮ.
* ಇದು ನಮ್ಮ ಯೋಚನಾ ವಿಧಾನ ಹಾಗು ದೃಷ್ಟಿಕೋನವನ್ನು ಉತ್ತಮಗೊಳಿಸುವಲ್ಲಿ ಸಹಕಾರಿ.

2 )ನಮ್ಮ ಬದುಕು ಹಾಗು ಭಾವನೆಗಳ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳೋಣ
* ನಮ್ಮ ಬದುಕಿನ ಆಗು ಹೋಗುಗಳಿಗೆ ಬೇರೆಯವರನ್ನು ದೂಷಿಸುವುದನ್ನು ಬಿಡೋಣ.
* ಕುಟುಂಬ ಹಾಗು ಸ್ನೇಹಿತರರೊಂದಿಗೆ ಮುಕ್ತವಾಗಿ ಸಂವಹಿಸಿ. ಬೆಂಬಲ ಅಗತ್ಯ.
* ಆದರೆ ನಮ್ಮ ಜೀವನದ "ಆಯ್ಕೆ"ಯ ಮೇಲಿನ ನಿಯಂತ್ರಣ ಹಾಗು ಜವಾಬ್ದಾರಿ ನಮ್ಮ ಕೈಯಲ್ಲಿ ಇದ್ದ ಷ್ಟೂ ಸಹ ಹೆಚ್ಚು ಚೈತನ್ಯಕಾರಿಯಾಗಿ ಮುಂದಿನ ಹೆಜ್ಜೆ ಇಡಲು ಸಹಕಾರಿ.
* ಇದು ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಪೂರಕ.

ನಿಮ್ಮನ್ನು ನೀವು ಪ್ರೀತಿಸಿ

ನಿಮ್ಮನ್ನು ನೀವು ಪ್ರೀತಿಸಿ

3) ವರ್ತಮಾನದಲ್ಲಿ ಬದುಕುವ ಮನಸ್ಥಿತಿ ಬೆಳೆಸಿಕೊಳ್ಳೋಣ

* ಆಗಿಹೋದ ಭೂತಕಾಲದ ಬಗ್ಗೆ ಹೆಚ್ಚಿನ ಯೋಚನೆಯಾಗಲೀ, ಭವಿಷ್ಯ ತ್ ಕಾಲದ ಬಗ್ಗೆ ಅತಿಯಾದ ಆತಂಕ ಪಡದೆ, ವರ್ತಮಾನವನ್ನು ಅರಿತು ಬದುಕುವ ಪ್ರಯತ್ನ ಮಾಡುವುದು ಒಳಿತು.

4) ವಾಸ್ತವವಾದ (realistic expectations) ನಿರೀಕ್ಷೆಗಳನ್ನು ಇಟ್ಟುಕೊಳ್ಳೋಣ.
* ನಮ್ಮ ಸಾಮರ್ಥ್ಯದ ಅರಿವು ಹಾಗು ಬೇಕಾದ ಕೌಶಲ್ಯಗಳನ್ನು ಉತ್ತಮಗೊಳಿಸುವ ಮೂಲಕ, ನಮ್ಮ ಸಾಮರ್ಥ್ಯದ ವಾಸ್ತವಿಕ ಚಿತ್ರಣ ಹಾಗು ಸಣ್ಣ ಸಣ್ಣ ಗುರಿಗಳು ಜೀವನದ ಸಾಫಲ್ಯತೆ ಭಾವನೆಯನ್ನು ಹೆಚ್ಚಿಸುತ್ತದೆ.
* ಪ್ರತೀ ಸಣ್ಣ ಪುಟ್ಟ ಗುರಿಗಳು ಸಂತೋಷ ತರುವುದಲ್ಲದೆ ಮುಂದಿನ ಗುರಿ ಸಾಧಿಸಲು ಉತ್ಸಾಹ ಹೆಚ್ಚಿಸುತ್ತದೆ.

5) ನಿಮ್ಮನ್ನು ನೀವು ಪ್ರೀತಿಸಿ
* ಸ್ವಯಂ ಪ್ರೀತಿ ಹಾಗು ಸ್ವಯಂ ಪ್ರೇರಣೆಯನ್ನು ಅಭ್ಯಾಸ ಮಾಡಿಕೊಳ್ಳಬಹುದು.

ಇತರರೊಂದಿಗೆ ಹೋಲಿಸುವುದನ್ನು ಬಿಡೋಣ

ಇತರರೊಂದಿಗೆ ಹೋಲಿಸುವುದನ್ನು ಬಿಡೋಣ

6) ನಿಮ್ಮ ಮುಂದಿನ ಯೋಜನೆಗಳನ್ನು ಪಟ್ಟಿಮಾಡಿ
* ನಿಮ್ಮ ವೃತ್ತಿಪರ ಹಾಗು ವೈಯುಕ್ತಿಕ ಪ್ರಣಾಳಿಕೆ ಬರೆಯಲು ಪ್ರಯತ್ನಿಸಿ.
ಉದಾಹರಣೆಗೆ:
- ಪರಿಸ್ಥಿತಿ ಸುಧಾರಿಸಿದ ನಂತರ ಹೋಗ ಬಯಸುವ ಪ್ರವಾಸ ಸ್ಥಳಗಳು ಹಾಗು ಅದಕ್ಕೆ ಬೇಕಾಗುವ ಸಿದ್ಧತೆ.
- ಯೂಟ್ಯೂಬ್ ಮೂಲಕ ಮಾಡ ಬಯಸುವ ಪುಸ್ತಕ ವಿಮರ್ಶೆ ಹಾಗು ಅದಕ್ಕೆ ಬೇಕಾದ ಸಿದ್ಧತೆ.
- ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ವರುಷಗಳಲ್ಲಿ ವೃತ್ತಿ/ ಕೆಲಸದ ಏಕತಾನತೆ ಮುರಿದು, ಕೆಲಸದ ಗುಣಮಟ್ಟ ಹೆಚ್ಚಿಸಲು ಯೋಜಿಸಬಹುದಾದ ಸೃಜನಶೀಲ ಕ್ರಮಗಳು

7) ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸುವುದನ್ನು ಬಿಡೋಣ
* ಇತ್ತೀಚೆಗೆ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳ ಬಳಕೆ ಇಂದಾಗಿ ಅನೇಕರು ತಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಹೆಚ್ಚಾಗಿದೆ.
* ಇದೂ ಸಹ "ಸಿಕ್ಕಿಕೊಂಡಿರುವ" ಪರಿಸ್ಥಿತಿ ಯನ್ನು ಪ್ರಬಲಗೊಳಿಸುತ್ತದೆ.
* ಪ್ರತಿಯೊಬ್ಬರ ಜೀವನ ಬಹಳ ಭಿನ್ನವಾಗಿದೆ. ಬೆಳೆದ ಪರಿಸರ, ಓದು, ಆಸಕ್ತಿಗಳು, ಸ್ನೇಹಿತರು, ಕೆಲಸ ಮಾಡುವ ವಿಧಾನ, ಯೋಚನಾ ವಿಧಾನ, ಸಾಮರ್ಥ್ಯ, ಸಂದರ್ಭಗಳು, ಸಂಪನ್ಮೂಲಗಳು ಭಿನ್ನವಾಗಿದೆ.
* ಹೋಲಿಸಿಕೊಳ್ಳುವ ಬದಲು ನಮ್ಮ ನಮ್ಮ ಸಮಯ ಸಂದರ್ಭಗಳು ಸಾಮರ್ಥ್ಯಗಳನ್ನು ಸಂಪನ್ಮೂಲಗಳನ್ನು ಅರ್ಥ ಮಾಡಿಕೊಂದು ಅದರ ಸದುಪಯೋಗ ಮಾಡಿಕೊಳ್ಳುವುದರ ಮೇಲೆ ಗಮನಹರಿಸುವುದು ಒಳಿತು.

ಸ್ನೇಹ ಸಂಬಂಧಗಳು ಸದಾ ಸಹಕಾರಿ

ಸ್ನೇಹ ಸಂಬಂಧಗಳು ಸದಾ ಸಹಕಾರಿ

8) ಸಹಕಾರ ಅಥವಾ ಬೆಂಬಲ ಬೇಕು ಎನಿಸಿದಾಗ ಕೇಳಿ ಪಡೆಯಿರಿ.
* ತಾಯಿ / ತಂದೆ ಅಥವಾ ಮನೆಯ ಹಿರಿಯರಾದ ಮಾತ್ರಕ್ಕೆ ಅಥವಾ ಕೆಲವು ಪ್ರಮುಖ ಸ್ಥಾನಗಳಲ್ಲಿ ಇದ್ದ ಮಾತ್ರಕ್ಕೆ ಎಲ್ಲಾ ಕೆಲಸ ಜವಾಬ್ದಾರಿಗಳನ್ನು ಹೇಗಾದರೂ ಆಗಲೀ ನಿಭಾಯಿಸಲೇಬೇಕು.
* ಯಾರ ಸಹಾಯವಾಗಲೀ ಬೇಕಾಗಿಲ್ಲ ಅಥವಾ ಹೇಗೆ ಕೇಳುವುದು ಎಂಬ ಮನಸ್ಥಿತಿ ಇಂದ ಹೊರಬರೋಣ.
* ದೈಹಿಕವಾಗಿ, ಮಾನಸಿಕವಾಗಿ ಹಾಗು ಭಾವನಾತ್ಮಕ ಬಳಲಿಕೆ ಸಹಜ. ಇದನ್ನು ಆರ್ಥ ಮಾಡಿಕೊಂಡು ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಒಳಿತು.
* ಇದರಿಂದ ಆಗಾಗ ದೇಹ, ಮನಸ್ಸಿಗೆ ವಿಶ್ರಾಂತಿ ಸಿಗುವುದಲ್ಲದೇ ಕುಟುಂಬ ಹಾಗು ಸ್ನೇಹಿತರೊಂದಿಗೆ ಸಂಬಂಧ ಗಟ್ಟಿಯಾಗುತ್ತದೆ. ಭಾವನಾತ್ಮಕ ಬೆಂಬಲ ನಮ್ಮ ಆತ್ಮವಿಶ್ವಾಸವನ್ನು ಬಲಗೊಳಿಸುತ್ತದೆ.
* ಈ ಕೆಸರಿನಲ್ಲಿ, ಕಾಡಿನಲ್ಲಿ ಸಿಕ್ಕಿಹಾಕಿಕೊಂಡಿರುವೆ ಎಂನಿಸಿದಾಗ, ಜೀವನ ಮುಂದುವರೆಸಲು ನಮ್ಮ ಕೈ ಹಿಡಿದು ಎತ್ತುವ, ಕೈಹಿಡಿದು ಮುಂದಕ್ಕೆ ನಡೆಸಿಕೊಂಡು ಮುಂದಿನ ಗುರಿ ತಲುಪಲು ಜೊತೆ ಇರುವ ಉತ್ತಮ ಕುಟುಂಬ -ಸ್ನೇಹ ಸಂಬಂಧಗಳು ಸದಾ ಸಹಕಾರಿ.

ನಮ್ಮ ಸಾಮರ್ಥ್ಯದ ಅರಿವು ಸಹ ಹೆಚ್ಚುತ್ತದೆ

ನಮ್ಮ ಸಾಮರ್ಥ್ಯದ ಅರಿವು ಸಹ ಹೆಚ್ಚುತ್ತದೆ

9) ನಿರಂತರ ಕಲಿಕೆ ಹಾಗು ಹವ್ಯಾಸ
* ಪ್ರತಿ ದಿನ ಹೊಸದಾಗಿ ಏನಾದರೂ ಕಲಿಯೋಣ.
* ವೈಯುಕ್ತಿಕ ಹಾಗು ವೃತ್ತಿ ಜೀವನದಲ್ಲಿ ಸೃಜನಶೀಲತೆ ಬೆಳೆಸಿಕೊಳ್ಳಬಹುದು.
* ಹೊಸ ಹೊಸ ಹವ್ಯಾಸಗಳು ಮನಸಿಗೆ ಮುದ ನೀಡುವುದಲ್ಲದೆ ನಮ್ಮನ್ನು ಸದಾ ಆಸಕ್ತಿ ಬೆಳೆಸಿ ಚೈತನ್ಯ ಕಾರಕವಾಗುತ್ತವೆ.

10) ಮನಸ್ಸಿನ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
* ಕೆಲವು ಹಿನ್ನಡೆಗಳು, ಅಡೆತಡೆಗಳು, ಸವಾಲುಗಳು ಜೀವನದಲ್ಲಿ ಸಹಜ.
* ಪರಿಹಾರದ ಬಗ್ಗೆ ಹೆಚ್ಚಾಗಿ ಗಮನ ಹರಿಸೋಣ. ಇದರಿಂದ ಧನಾತ್ಮಕ ಭಾವನೆ ಹೆಚ್ಚುತ್ತದೆ.
* ಹಾಗಾಗಿ ಇದರಿಂದ ನಮ್ಮ ಸಾಮರ್ಥ್ಯದ ಅರಿವು ಸಹ ಹೆಚ್ಚುತ್ತದೆ.
* ಆಗ ಹಿನ್ನೆಡೆಗಳು (setbacks) ಮತ್ತೊಂದು ಅವಕಾಶವಾಗುತ್ತದೆ.

"ಸಿಕ್ಕಿಹಾಕಿಕೊಂಡಿರುವ" ಪರಿಸ್ಥಿತಿ ಇಂದ ಹೊರ ಬರಲು ಸಾಧ್ಯ. ಧನಾತ್ಮಕವಾಗಿ ಯೋಚಿಸಿ. ಅಗತ್ಯವಿದ್ದಲ್ಲಿ ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಕುಟುಂಬ ಹಾಗು ಸ್ನೇಹಿತರೊಂದಿಗೆ ಮುಕ್ತ ಮಾತುಕತೆ ನಡೆಸಿ‌. ನಿಮ್ಮಲ್ಲಿನ "ವಿದ್ಯಾರ್ಥಿ" ಯನ್ನು ಸದಾ ಜೀವಂತವಾನ್ನಾಗಿರಿಸಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+