ಕೆರೊಲಿನ ನಾವಿಕ ಕನ್ನಡ ಸಮ್ಮೇಳನಕ್ಕೆ ದಾರಿ ಯಾವುದಯ್ಯ?
"ನಾವಿಕ" ಮೂರನೆಯ ವಿಶ್ವಕನ್ನಡ ಸಮಾವೇಶವು ಈ ಭಾರಿ ಅಮೆರಿಕದ ಉತ್ತರ ಕೆರೊಲಿನ, ರಾಲೆ ನಗರದಲ್ಲಿ ಸೆಪ್ಟೆಂಬರ್ 4ರಿಂದ 6ರ ವರೆಗೆ ನಡೆಯಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಕಲೆಗಳಿಂದ ರಂಜಿಸಲು ವಿಶ್ವದೆಲ್ಲೆಡೆಯಿಂದ ಕಲಾವಿದರು, ಸಾಹಿತಿಗಳು, ಗಣ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗೌರವಾನ್ವಿತ ವ್ಯಕ್ತಿಗಳು ಬರುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಗಣ್ಯರು, ಕನ್ನಡ ಕಲೆ ಮತ್ತು ಸಂಸ್ಕೃತಿ ಸಂಸ್ಥೆ, ಕನ್ನಡ ಪ್ರಾಧಿಕಾರ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್, ಕೆರೊಲಿನದ ರಾಜಧಾನಿ ರಾಲೆ (Raleigh) ನಗರದ ಮೇಯರ್ ಮತ್ತಿತರ ಅನೇಕ ಗಣ್ಯ ವ್ಯಕ್ತಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ.
"ನಾವಿಕ" ಕಾರ್ಯಕಾರಿ ಸಮಿತಿ, "ಕೆರೊಲಿನ ಕನ್ನಡ ಬಳಗ" ಶಾರ್ರ್ಲೆಟ್, "ಸಂಪಿಗೆ" ಟ್ರಯಾಂಗಲ್ ಕನ್ನಡ ಅಸೋಸಿಯೇಷನ್, "ಟ್ರಯಾಡ್" ಕನ್ನಡ ಅಸೊಸಿಯೇಷನ್ ಗ್ರೀನ್ಸ್ ಬರೊ ಕಾರ್ಯಕಾರಿ ಸದಸ್ಯರುಗಳು ಹಾಗೂ ನೂರಾರು ಸ್ವಯಂಸೇವಕರು ಕನ್ನಡದ ತೇರನ್ನು ಎಳೆಯಲು ಸಿದ್ದರಾಗುತ್ತಿದ್ದಾರೆ.
ನ್ಯೂಯಾರ್ಕ್, ನ್ಯೂ ಜೆರ್ಸಿ, ಅಲ್ಬನಿ, ರಾಚೆಸ್ಟರ್, ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್, ಡೆಲವೇರ್, ವೆಸ್ಟ್ ವರ್ಜೀನಿಯ, ಪಿಟ್ಟ್ಸ್ ಬರ್ಗ್, ಫ್ಲೋರಿಡಾ, ಅರಿಜ಼ೋನ, ಟೆಕ್ಸಾಸ್, ಒಹಾಯೊ, ಕ್ಯಾಲಿಫೋರ್ನಿಯ ಮುಂತಾದ ಪ್ರಾಂತ್ಯಗಳ ಕನ್ನಡಿಗರೂ ಸಮ್ಮೇಳನದ ನಿರ್ವಹಣೆಗೆ ಹೆಗಲು ಕೊಟ್ಟಿದ್ದಾರೆ. [ಉತ್ತರ ಕೆರೊಲಿನದಲ್ಲಿ ಈ ಬಾರಿಯ ನಾವಿಕ ಸಮ್ಮೇಳನ]
ಸಮಾವೇಶದಲ್ಲಿ ಗಾಯನ, ನೃತ್ಯ, ನಾಟಕ, ಆಧ್ಯಾತ್ಮ, ಸಾಹಿತ್ಯ, ಸ್ಪರ್ಧೆ, ಕ್ರೀಡೆ, ಮೆರವಣಿಗೆ, ಕನ್ನಡ ಕಲಿ, ಫ್ಯಾಷನ್ ಶೋ ಮುಂತಾದ ವಿವಿಧ ವಿಚಾರಗಳನ್ನು ಹಮ್ಮಿಕೊಂಡಿದ್ದು, ಭಾರತ, ಅಮೆರಿಕ, ಕೆನಡಾ, ಶಾರ್ಜಾ ಹೀಗೆ ವಿಶ್ವದ ನಾನಾ ಕಡೆಯಿಂದ ಪ್ರತಿಭಾನ್ವಿತ ಕನ್ನಡಿಗರು ಮನರಂಜನೆ ನೀಡಲಿದ್ದಾರೆ.
ಕರ್ನಾಟಕದಿಂದ ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ, ಹಾಸ್ಯ ಕಲಾವಿದ ಮೈಸೂರು ಆನಂದ್, ಹಾಸ್ಯ ನಟ ಸಿಹಿಕಹಿ ಚಂದ್ರು, ಹಾಡುಗಾರರಾದ ಅನುರಾಧಾ ಭಟ್, ಹೇಮಂತ್ ಕುಮಾರ್, ಜಾನಪದ ಸಂಗೀತಗಾರ ಕಿಕ್ಕೇರಿ ಕೃಷ್ಣಮೂರ್ತಿ, ಜನಪ್ರಿಯ ನಟರಾದ ಯಶ್, ಶ್ರೀನಾಥ್, ರಾಧಿಕಾ ಪಂಡಿತ್, ಶತಾವಧಾನಿ ಗಣೇಶ್, ಕವಿ ಡಾ. ಸಿದ್ದಲಿಂಗಯ್ಯ ಮುಂತಾದವರು ಭಾಗವಹಿಸುತ್ತಿರುವುದು ಉತ್ಸವದ ಆಕರ್ಷಣೆಯನ್ನು ಹೆಚ್ಚಿಸಿದೆ. [ಬಾಸ್ಟನ್ ನಲ್ಲಿ ನಾವಿಕ ಕನ್ನಡ ಸಮ್ಮೇಳನ ಸಂಪನ್ನ]
ಕನ್ನಡವನ್ನು ಕಾಪಾಡುವುದು ಕನ್ನಡಿಗರ ಧರ್ಮ. ಎದೆಯಲ್ಲಿ ಕನ್ನಡದ ಕೆಚ್ಚಿರಬೇಕು. ಕನ್ನಡದ ಬಗ್ಗೆ ಸ್ವಾಭಿಮಾನವಿರಬೇಕು. ಈ ತರಹ ಸಮ್ಮೇಳನಗಳನ್ನು ಏರ್ಪಡಿಸಿ ಯುವ ಜನತೆಯಲ್ಲಿ ಕನ್ನಡದ ಬಗ್ಗೆ ಉತ್ಸಾಹ, ಅಭಿಮಾನ ಹೆಚ್ಚಿಸಬೇಕು. ವಿಶ್ವಪ್ರಜೆಯಾಗಿ ಪರಸ್ಪರ ಹತ್ತಿರಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ನಾಡಿನ ಹಿರಿಮೆ, ಪರಂಪರೆಯ ಜೊತೆಗೆ, ಕರ್ನಾಟಕದಲ್ಲಿನ ವಿದ್ಯಾಭ್ಯಾಸ, ಉದ್ಯೋಗ ಅವಕಾಶಗಳು, ವಿಚಾರ ಸಂಕಿರಣಗಳು, ಬಂಡವಾಳ ಹೂಡಿಕೆ, ವೈದ್ಯಕೀಯ ಸವಲತ್ತು, ವಸ್ತ್ರ ವಿನ್ಯಾಸ, ವಿಶಿಷ್ಟ ಅಡುಗೆ ಇತ್ಯಾದಿ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವುದೂ ನಮ್ಮ ಪ್ರಯತ್ನ.
ಸಮ್ಮೇಳನಕ್ಕೆ ನೋಂದಾವಣಿ ಕೂಡ ಭರದಿಂದ ಸಾಗಿದೆ. ಮೊದಲು ಬಂದವರಿಗೆ ಆದ್ಯತೆ ಮತ್ತು ರಿಯಾಯಿತಿ. ಬನ್ನಿ ನಾವೆಲ್ಲ ಒಟ್ಟಾಗಿ ಸೇರಿ "ನಾವಿಕ" ವಿಶ್ವಕನ್ನಡ ಸಮಾವೇಶದಲ್ಲಿ ಪಾಲ್ಗೊಳ್ಳೋಣ. ಕಸ್ತೂರಿ ಕಂಪನ್ನು ಹರಡೋಣ. ಜೈ ಕರ್ನಾಟಕ ಮಾತೆ. ವಂದನೆಗಳು.
- ರಾಜುರ್ ಶರಣಬಸವ, "ನಾವಿಕ" ಅಧ್ಯಕ್ಷ
- ಹರ್ಷ ಗೋಪಾಲ್, "ನಾವಿಕ" ಉಪಾಧ್ಯಕ್ಷ ಹಾಗೂ ಸಂಚಾಲಕ













Click it and Unblock the Notifications