ನಾವಿಕದ ವಿಶೇಷ ಸಾಹಿತ್ಯ ಕಾರ್ಯಕ್ರಮಗಳು
* ವಿಡಿಯೋ ಕಾನ್ಫರೆನ್ಸ್ : ಕಾವ್ಯಧಾರೆ
ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ "ಕಾವ್ಯಧಾರೆ" ಎಂಬ ವಿನೂತನ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಖ್ಯಾತ ಸಾಹಿತಿಗಳಾದ ಡಾ|| ಚಂದ್ರಶೇಖರ ಕಂಬಾರ, ಡಾ|| ಯು.ಆರ್. ಅನಂತ ಮೂರ್ತಿ, ಪ್ರೊ|| ಸಿದ್ದಲಿಂಗಯ್ಯ ಅವರು ಬೆಂಗಳೂರಿನಿಂದಲೂ, ಸುಕುಮಾರ್, ಶ್ರೀಮತಿ ಜ್ಯೋತಿ ಮಹಾದೇವ, ಶ್ರೀಮತಿ ಅಲಮೇಲು ಐಯಂಗಾರ್, ಶ್ರೀಮತಿ ಸವಿತಾ ರವಿಶಂಕರ್ ಮತ್ತು ಡಾ|| ಕುಂಭಾಸಿ ಶ್ರೀನಿವಾಸ ಭಟ್ ಅವರು ಲಾಸ್ ಏಂಜಲೀಸ್ ನಗರದಿಂದ ಭಾಗವಹಿಸಲಿದ್ದಾರೆ.
* ಕಾರ್ಯಾಗಾರ : ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು ಹೇಗೆ?
ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಮತ್ತು ದಟ್ಸ್ ಕನ್ನಡ ಇ-ಪತ್ರಿಕೆಯ ಸಂಪಾದಕರಾದ ಎಸ್ಕೆ. ಶಾಮ ಸುಂದರ ಅವರಿಂದ ನಡೆಸಲ್ಪಡುವ ಈ ಕಾರ್ಯಾಗಾರವು ಅಮೆರಿಕನ್ನಡಗರಿಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ವಿಧಾನಗಳ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಲಿದೆ. ಶ್ರೀವತ್ಸ ಜೋಶಿಯವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
* ಸಾಹಿತ್ಯ ಮತ್ತು ಸುಗಮ ಸಂಗೀತ
ಕನ್ನಡದ ಖ್ಯಾತ ರೇಡಿಯೊ ಕಲಾವಿದೆ ಶ್ರೀಮತಿ ಎಚ್.ಆರ್. ಲೀಲಾವತಿ ಯವರಿಂದ ಸಾಹಿತ್ಯ ಮತ್ತು ಸುಗಮ ಸಂಗೀತದ ಬಗ್ಗೆ ವಿಚಾರಧಾರೆ.
* ರಾಮಾಯಣ ಬೊಂಬೆ ಪ್ರದರ್ಶನ
ಭಾರತೀಯ ಮೌಲ್ಯಗಳ ಪ್ರತೀಕವಾದ ಮೇರು ಕೃತಿ ಶ್ರೀ ರಾಮಾಯಣದ ರಸವತ್ತಾದ ಸನ್ನಿವೇಶಗಳನ್ನು ಬೊಂಬೆಗಳ ಮಾಧ್ಯಮದ ಮೂಲಕ ಸಾಹಿತ್ಯ ಸಮಿತಿಯ ಆಶ್ರಯದಿಂದ ಪ್ರದರ್ಶಿಸಲಾಗುವುದು. ರಾಮಾಯಣವನ್ನು ಕುರಿತು ಮಕ್ಕಳಿಗಾಗಿ ವಿಶೇಷವಾದ "ರಸಪ್ರಶ್ನೆ" ಸ್ಪರ್ಧೆಯನ್ನು ನಡೆಸಲಾಗುವುದು.
ಇಷ್ಟೇ ಅಲ್ಲದೆ, ಹೊಸ ಪುಸ್ತಕಗಳ ಬಿಡುಗಡೆ, ಅಮೇರಿಕಾದ ಕವಿಗಳ ಸನ್ಮಾನ, ಚರ್ಚೆ, ಸಂವಾದಗಳನ್ನು ಸಾಹಿತ್ಯ ಸಮಿತಿಯಿಂದ ನಡೆಸಲಾಗುವುದು. ಈ ಅವಕಾಶಗಳನ್ನು ಸಮ್ಮೇಳನ ಪ್ರತಿನಿಧಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಆನಂದಿಸಬೇಕೆಂದು ನಾವಿಕ ಸಾಹಿತ್ಯ ಸಮಿತಿ ವಿನಂತಿಸಿದೆ.