ಪೋಸ್ಟ್ ಮ್ಯಾನ್, ಪತ್ರ ಯಾವ್ದಾದ್ರೂ ಬಂದಿದೆಯಾ?
ಶಂಕ್ರಣ್ಣ ಯಾವದಾದ್ರು ಕಾಗದ ಬಂದೈತಾ? ಅಂತಾ ಪೋಸ್ಟ್ ಮ್ಯಾನ್ ಶಂಕ್ರಣ್ಣನನ್ನು ಕೇಳಿದಾಗ, ಮೇಲಿಂದ ಕೆಳಗಿನ ತನಕ ಅವ ನನ್ನ ನೋಡಿ... "ಎನಲೇ ನಾಗೇಶ? ಚೋಟುದ್ದ ಇದ್ದೀಯ. ಯಾರಲೇ ನಿಂಗೆ ಪತ್ರ ಬರಿತಾರೆ? ಮಾವನ ಮಗಳು ಯಾರಾರ ಇದಾರೇನು ಅಂತಾ?" ಹಾಸ್ಯ ಮಾಡಿದಾಗ, ಏನು ಹೇಳಬೇಕೆಂದು ತೋಚದೆ ಪೆಚ್ಚಾಗಿದ್ದೆ.
"ಉಸ್ಸಪ್ಪ ಈ ಸೈಕಲ್ ತುಳಿದು ತುಳಿದು ಸಾಕಾಯ್ತು. ಅಬ್ಬಬ್ಬ ಏನು ಸುಡು ಬಿಸಿಲು" ಎಂದು ಗೊಣಗಿಕೊಳ್ಳುತ್ತ, ಕರ್ಚಿಪಿನಿಂದ ಮುಖ ಒರೆಸಿಕೊಳ್ಳುತ್ತಾ ಪೋಸ್ಟ್ ಮ್ಯಾನ್ ಶಂಕ್ರಣ್ಣ ಪಕ್ಕದ ಮನೆಯ ಬಸಣ್ಣನಿಗೆ ಬಂದ ಪತ್ರವನ್ನು ಕೊಟ್ಟಾಗ, "ಹಂಗೆ ಸ್ವಲ್ಪ ಓದಿ ಹೇಳಪ್ಪ ಏನು ಬರದಾರೆ" ಅಂತ ಬಸಣ್ಣ ಪೋಸ್ಟ್ ಮ್ಯಾನ್ಗೇ ಹೇಳಿದ. ಇದು ಬೇರೆ ಅಂತ ಗೊಣಗುತ್ತ ಅವ ಓದಿ ಹೇಳಿದ್ದ. ಅವ ಓದಿ ಮುಗಿಸೋದರಲ್ಲಿ ತಂದಿಟ್ಟಿದ್ದ ಮಂದವಾದ ಮಜ್ಜಿಗೆಯನ್ನು ಚಂದವಾಗಿ ಹೀರಿ ಮುಂದಕ್ಕೆ ಹೋದ ಪೋಸ್ಟ್ ಮ್ಯಾನ್ ಸೈಕಲ್ ಅನ್ನೇ ನೋಡುತ್ತಾ ನಿಂತಿದ್ದ ನಂಗೆ, ಮಗ್ಗಿ ಹೇಳೋದು ಆಯಿತೇನೋ? ಅಂತಾ ಅಮ್ಮನ ಧ್ವನಿ ಕೇಳಿ ಮತ್ತೆ ಒಳಗಡೆ ಹೋಗಿ ಕೂತಿದ್ದೆ.
ಸ್ಕೂಲ್ ನಲ್ಲಿ ಟೀಚರ್ ಲೆಟರ್ ರೈಟಿಂಗ್ ಹೇಳಿಕೊಟ್ಟಾಗ ಮನೆಗೆ ಬಂದು ಚೆನ್ನಾಗಿ ಬರೆಯುವುದ ಅಭ್ಯಾಸ ಮಾಡಿದ್ದು ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಬಂದಾಗ ಅನುಕೂಲವಾಗಿತ್ತು.
"ತೀರ್ಥರೂಪ ತಂದೆ - ತಾಯಿಯವರಿಗೆ, ನಿಮ್ಮ ಪ್ರೀತಿಯ ಮಗ ನಾಗೇಶಿ ಮಾಡುವ ಶಿರ ಸಾಷ್ಟಾಂಗ ನಮಸ್ಕಾರಗಳು"... ಮೊದಲ ಬಾರಿಗೆ ಬರೆದ ಈ ಪತ್ರವನ್ನು ಆ ಕೆಂಪು ಡಬ್ಬದಲ್ಲಿ ಹಾಕುವಾಗ ಅಮ್ಮ- ಅಪ್ಪನ ನೆನಪಾಗಿ ಹಾಗೇ ಪತ್ರಕ್ಕೆ ಹಣೆಯೊತ್ತಿದ್ದೆ. ನನ್ನ ಪತ್ರವನ್ನು ಓದಿ ಅವರಿಗಾದ ಆನಂದ ಅಷ್ಟಿಷ್ಟಲ್ಲ. ಮರು ವಾರವೇ ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದಿದ್ದರು ನನ್ನ ನೋಡಲು. ಅವರು ತಂದಿದ್ದ ಆ ಬುತ್ತಿ, ಚಪಾತಿ, ರವೆ ಉಂಡೆ ಹೂಂ :) ಭರ್ಜರಿಯಾಗಿ ತಿಂದು ರೂಂನಲ್ಲಿ ಜೊತೆಗಿದ್ದ ಹುಡುಗರಿಗೂ ಕೊಟ್ಟು ನಲಿದಿದ್ದೆ. ಒಂದೇ ಒಂದು ಪತ್ರದಿಂದ ಹೆತ್ತವರಿಗಾದ ಆ ಸಂತೋಷ, ಅವರ ಪ್ರೀತಿ ನೋಡಿ ನನ್ನ ಕಣ್ಣುಗಳು ತೇವವಾಗಿದ್ದವು. ಹಾಗೇ ಮುಂದುವರಿಸಿದ್ದೆ ನನ್ನ ಪತ್ರ ವ್ಯವಹಾರ ಹೆತ್ತವರೊಂದಿಗೆ.
ಹಾಗೂ ಹೀಗೂ ಹೈಸ್ಕೂಲ್, ಪಿಯುಸಿ ಮುಗಿಸಿ ಬೆಂಗಳೂರಿನಲ್ಲಿನ ಇಂಜಿನಿಯರಿಂಗ್ ಕಾಲೇಜ್ಗೆ ಸೇರಿದ್ದೆ. ಇದುವರೆಗೂ ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲೇ ಹುಟ್ಟಿ ಬೆಳೆದಿದ್ದ ನನಗೆ, ಈ ಕಾಲೇಜ್ನಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದಿದ್ದ ಹುಡುಗ ಹುಡುಗಿಯರು... ಬಣ್ಣ ಬಣ್ಣದ ಜೀನ್ಸ್ ಬಟ್ಟೆ ತೊಟ್ಟು ಹಂಸ ನಡಿಗೆಯಲ್ಲಿ ನಡೆದು ಬರುತ್ತಿದ್ದ ಆ ನಾರ್ತ್ ಇಂಡಿಯನ್ ಹುಡುಗಿಯರು, ಬುರ್ರ್ ಬುರ್ರ್ ಅಂತ ಧೂಳೆಬ್ಬೆಸಿ ಬೈಕಲ್ಲಿ ಹಿಂದುಗಡೆ ಹುಡುಗಿಯನ್ನು ಕೂರಿಸಿಕೊಂಡು ಹೀರೋಗಳ ತರಹ ಬರುತ್ತಿದ್ದ ಬೆಂಗಳೂರಿನ ಹುಡುಗರು... ಇವೆರನ್ನೆಲ್ಲ ನೋಡಿ ನನಗೂ ಜೀವನ ಕಲರ್ ಫುಲ್ ಆಗಿ ಕಾಣಿಸತೊಡಗಿತ್ತು.