ಅಮ್ಮಾ! ಅಬ್ಬಾ!!


ಅಮ್ಮಾ! ಅಬ್ಬಾ!!
H.K. Ramapriyan
ಶಿಷ್ಯನಿಂತೆಂದನು:

ಣಾ-ಡಾಗ್‌ ನಾ-ದಾಗ್‌ ವ್ಯತ್ಯಾಸ್ವನ್ನ ತೋರಿಸ್‌ ಚೆನ್ನಾಗ್‌ ಹೇಳ್ಕೊಟ್ರಿ ।
ಬೇರೇದ್‌ ಕೇಳೊಕ್ಕಿನೊಂದ್‌ ದಿವ್ಸ ಬಾರೋಂತಂದ್ಬಿಟ್‌ ಕಳ್ಸ್ಕೊಟ್ರಿ ।।

ಹಾಗೇ ಮತ್ತೆರಡಕ್ಷರ್ಗಳ್ಗೂ ವ್ಯತ್ಯಾಸಾನ್‌ ನೀವ್‌ ಹೇಳ್ಕೊಟ್ರೆ ।
ಮತ್ತಷ್ಟ್‌ ಕಲ್ತ್ಕೊಂಡ್‌ ಹೋಗ್ಬಿಡ್ತೀನಿ ದಯವಿಟ್‌ ಹೇಳ್ತೀರಾ ಮೇಷ್ಟ್ರೇ ।।

ಗುರುವಿಂತೆಂದನು:

ನೀ ಕೇಳಿ ಕಲಿಯುತಿರಲೆನಗೆ ಸಂತಸವಯ್ಯ
ಮತ್ತಷ್ಟು ಪದಗಳನು ಕೇಳ ಬಾರಯ್ಯ ।
ಣಡಗಳಿಗು ನದಗಳಿಗು ಭೇದವನು ಕಲಿತೆ
ಮಬಗಳೊಳು ಭೇದವನು ನೀನಿಂದು ಕಲಿವೆ ।।

ಆಡುತಲೋಡುತ ಬೀಳುತ ಕೂಗುತ ರೋದಿಸೆ ಮಗ ‘’ಹಾ! ಅಮ್ಮಮ್ಮಾ!!’’।
ನೋಡುತಲಮ್ಮನು ಹೇಳಿದಳೈ ‘ಮರಿ! ಏಕಿಷ್ಟಬ್ಬರ? ಅಬ್ಬಬ್ಬಾ!!’ ।।

ಮಾವಿನ ತೋಟದೊಳೇರುತಲಿದೆ ಘಮ ಕಾಯ್ಗಳು ಹಣ್ಣಾಗಿರೆ ಮಾಗಿ ।
ಸಾವಿರ ಹಣ್ಗಳ ಭಾರದಿ ಕೊಂಬೆಗಳ್‌ ಆಹ್ವಾನಿಸುತಿವೆ ತಲೆಬಾಗಿ* ।।

ಮಾಡಲು ಜಳಕವ ನದಿಗೆ ಹೋಗುವೆಯ? ಹೇಳುವೆ ಕೇಳೆನ್ನೀ ಮಾತ ।
‘‘ನೋಡುವೆ ಬಾನಲಿ ಹಾರುತ ನೀರಲಿ ಧುಮುಕಿ ಮೀನ ಹಿಡಿಯುವ ಬಾತ’’ ।।

ನಂದತನಯ ಗೋವಿಂದಮುಕುಂದನ ನೆನೆಯಲಿ ನಿತ್ಯವು ನಿನ್ನ ಮನ ।
ಬೃಂದಾವನವೇ ಗೋಪಿವೃಂದದೊಡನಾಡಲು ಕೃಷ್ಣನಿಗಿರುವ ಬನ ।।

ಮಳೆಯು ಸಕಾಲದಿ ಸುರಿಯುತ ಬಂದರೆ ಬೆಳೆಯುತ ಹಿರಿದಾಗುವುದು ಮರ ।
ಕಳೆಯೂ ಬೆಳೆಯದು ಮಳೆಯೇ ಬರದಿರಲಂತಹ ಕಾಲದೊಳಿಹುದು ಬರ ।।

ತಾತನ ತಾತನ ಕಾಲದಾಸ್ತಿಯಿಹುದದನವನೆಂದೆಂದಿಗು ಮಾರ ।
‘‘ಮಾತನಾಡುವುದಕಾದರು ಬೆಲೆಯನು ಪೇಳಲು ಬಾ’’ ಎಂದರು ಬಾರ ।।

ಹಣವಂತರು ಬೆಲೆ ಕೇಳುವುದಿಲ್ಲವು ಕೊಳ್ವುದಕಂಗಡಿಯಾಳು ಮಾಲ ।
ಹನುಮಂತಗೆ ಸರಿ ಸಾಧನವಾಯಿತು ಲಂಕಾದಹನಕೆ ಹಿರಿಬಾಲ ।।

ಸಾತ್ವಿಕ ರಾಜಸ ತಾಮಸ ಗುಣಗಳು; ಸಾತ್ವಿಕಗುಣವೇ ನಿರ್ಮಲವು ।
ರಾಜಸಗುಣದಲಿ ಕೋಪದ ಹೆಚ್ಚಳ, ತಾಮಸದಲಿ ಮನ ನಿರ್ಬಲವು ।।

ತಂದೆತಾಯಿಗಳ ಗುರುಗಳ ಭಕ್ತನು ಹಿರಿಯರ ಮಾತನ್ನವ ಮೀರ ।
ವಂದಿಸಿ ನಿತ್ಯವು ದೇವರಿಗರ್ಪಣೆ ಮಾಡಿಯೆ ತಿನ್ನುವನೈ ಬೀರ** ।।

ಬೆಂಗಳೂರ ಬಳಿ ಯಾತ್ರಿಕರೇರುತ ತಂಪನು ಪಡೆಯಲು ನಂದಿ ಮಲೆ
ಮಂಗಳೂರ ಬಳಿ ಸಾಗರದಲ್ಲಿದೆ ಬೆಸ್ತರು ಮೀನ್ಗಳು ಹಿಡಿಯೆ ಬಲೆ ।।

ಓದು ಬರಹಗಳ ಕಲಿವುದು ಕಷ್ಟವು ಬುದ್ಧಿಯಾತನದು ಬಲು ಮಂದ ।
ಆದರು ಸರಸತಿಸೇವೆಯ ಸಲಿಸುತಲೇಳಿಗೆ ಪಡೆಯುತಲವ ಬಂದ ।।

ಸಾರ್ವಜನಿಕರಿರುವೆಡೆಯಲಿ ತೆಗಳಿರಲಾತನಿಗಾಗಿತ್ತವಮಾನ ।
ಹಾರುವ ವಾಹನವೇರುತ ಸೇರಿದನಾತನು ದೇಶವ ಬಿಡೆ ಬಾನ ।।

ಗಾನವಿಶಾರದ ಪಕ್ಕವಾದ್ಯಗಳ ಕೂಡಿಸಿ ವೇದಿಕೆಯ ಮೇಗಡೆ ।
ವರ್ಣವ ಹಾಡೆ ಕಚೇರಿಯ ಮೊದಲಲಿ ಬಳಸಿದ ರಾಗವು ಬೇಗಡೆ ।।

ದೂರದಿ ವಾಸವ ಮಾಡಲು ಹೊರಟಿಹ ಮಗನಿಗೆ ಪೇಳ್ದಳು ‘‘ಎಲವೊ! ಮರಿ!’’ ।
‘‘ವಾರವಾರವೂ ಯೋಗಕ್ಷೇಮವ ತಿಳಿಸಲು ಕಾಗದಗಳನು ಬರಿ’’ ।।

ಎಲ್ಲ ದೇಶಗಳೊಳಿರುವರು ಭೂಮಿಗೆ ಭಾರವ ತರುತಿಹ ಬಲು ಮಂದಿ ।
ಕೊಲ್ಲುವ ಕಾಡುವ ಕದಿಯುವ ಕೆಲವರನಾಗಿಸಬೇಕಲ್ಲವೆ ಬಂದಿ ।।

ಇಂತು ತೋರಿಹೆ ನಾನೀಗ ಮಬಗಳ್ಗಿರ್ಪ ಭೇದವಂ ।
ಅನುನಾಸಿಕಗಳ್ಬಗ್ಗೆ ಇಷ್ಟು ಪಾಠವೆ ಸಾಕೆಲೋ ।।

* ‘‘ಭವಂತಿ ನಮ್ರಾಃ ತರವಃ ಫಲೋದ್ಗಮೈಃ’’ ಎಂದು ಸಂಸೃತ ಸುಭಾಷಿತದಲ್ಲಿರುವಂತ

**ಬೀರ ಎನ್ನುವ ಪದ ಇಲ್ಲಿ ಪ್ರಥಮಾವಿಭಕ್ತಿಯ ನಾಮಪದ. ಕುಡಿಯುವ ಪದಾರ್ಥದ (beerಇನ) ದ್ವಿತೀಯಾವಿಭಕ್ತಿಯಲ್ಲ. ಅದರ ಸರಿಯಾದ ಉಚ್ಚಾರಣೆ ಬಿಯರ್‌ ಅಥವಾ ಬಿಅರ್‌, ಎಂದು. ಅನೇಕರು ಅದನ್ನು ಬೀರ್‌ ಎಂದೇ ಉಚ್ಚರಿಸುವುದರಿಂದ ಈ ಪದ್ಯವನ್ನು ‘ಕುಡಿಯುವನೈ ಬೀರ’ ಎಂದೂ ಮಾಡಿಕೊಳ್ಳಬಹುದು.)


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+