'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಸಿಕೆ ಗುಂಡಣ್ಣ ಆಯ್ಕೆ
ದುಬೈ, ಫೆಬ್ರವರಿ 04 : ನಾಲ್ಕು ದಶಕಗಳಿಂದಲೂ ಹೆಚ್ಚು ಕಾಲ ರಂಗ ನಟನಾಗಿ, ರಂಗಕರ್ಮಿಯಾಗಿ, ಸಂಘಟಕನಾಗಿ ಸೇವೆ ಸಲ್ಲಿಸಿದ ಸಿಕೆ ಗುಂಡಣ್ಣ ಅವರಿಗೆ ಪ್ರತಿಷ್ಠಿತ 'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದುಬೈನ ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ಸೇವೆಗೈಯುವವರನ್ನು ಗುರುತಿಸಿ ಕಳೆದ ಒಂದು ದಶಕಗಳಿಂದ 'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಯನ್ನು ನೀಡುತ್ತ ಬಂದಿದೆ.
ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಕೊಡಮಾಡುವ ರಂಗ ಪ್ರಶಸ್ತಿಗೆ ಈ ತನಕ ಬಿ. ಜಯಶ್ರೀ, ಟಿ.ಎಸ್. ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ. ಎಚ್.ಎಸ್. ಶಿವಪ್ರಕಾಶ್, ಉಮಾಶ್ರೀ, ಡಾ. ನಾ.ದಾ. ಶೆಟ್ಟಿ, ಗಿರಿಜಾ ಲೋಕೇಶ್ ಮುಂತಾದವರು ಭಾಜಕರಾಗಿರುವರು. ಪ್ರಶಸ್ತಿಯನ್ನು ದುಬಾಯಿಯ ಎಮಿರೇಟ್ಸ್ ಥಿಯೇಟರ್ ನಲ್ಲಿ ಫೆಬ್ರವರಿ 8ರಂದು ಶುಕ್ರವಾರ ಸಂಜೆ ಪ್ರದಾನಿಸಲಾಗುವುದು.

ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ. ಶೇಷಾದ್ರಿ ಹಾಗು ದುಬೈಯ ಭಾರತೀಯ ಧೂತಾವಾಸದ ಕಾನ್ಸುಲೇಟ್ ಜನರಲ್ ವಿಪುಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಪ್ರಸ್ತುತ ವರ್ಷದ "ಧ್ವನಿ ಪುರಸ್ಕಾರ" ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ರಂಗ ನಟಿ ಹಾಗು ಸಾಮಾಜಿಕ ಕಾರ್ಯಕರ್ತೆ ಗೋಪಿಕಾ ಮಯ್ಯ ಅವರಿಗೆ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಡಾ.ಎನ್. ಎಸ್. ಲಕ್ಷ್ಮೀ ನಾರಯಣ ಭಟ್ ಅವರ ಅನುವಾದದ "ಮೃಚ್ಛಕಟಿಕ "ನಾಟಕವನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ರಂಗವೇರಿಸಲಾಗುವುದು. ಆರತಿ ಅಡಿಗ, ಪ್ರಭಾಕರ ಕಾಮತ್, ವಾಸು ಬಾಯರ್ ಮುಖ್ಯ ಭೂಮಿಕೆಯಲ್ಲಿರುವ ಈ ನಾಟಕದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಕಾರ್ಯಕ್ರಮಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.












Click it and Unblock the Notifications