ಕುವೈತ್ ಕನ್ನಡ ರಾಜ್ಯೋತ್ಸವಕ್ಕೆ ಜಯಂತ್ ಕಾಯ್ಕಿಣಿ
ಈ ಸಲದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ, ಕಥೆಗಾರ, ಟೀವಿ ಸಂದರ್ಶಕ ಹಾಗು ಕನ್ನಡ ಚಿತ್ರಗೀತ ಲೇಖಕರಾದ ಜಯಂತ ಕಾಯ್ಕಿಣಿ ಅವರು ಆಗಮಸಲಿದ್ದಾರೆ. 19ನೇ ವಯಸ್ಸಿನಲ್ಲೇ ತಮ್ಮ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಇವರು, ತಮ್ಮ ಸಣ್ಣ ಕಥೆಗಳ ಸಂಕಲನಗಳಿಗೆ ಮತ್ತೆ ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾದರು.
ಹಲವಾರು ಕವನ ಸಂಕಲನಗಳ, ಸಣ್ಣ ಕಥೆಗಳ ಸಂಗ್ರಹಗಳ ಹಾಗು ಲಘು ಬರಹಗಳ ಮೂಲಕ ಕಾಯ್ಕಿಣಿಯವರು ಕನ್ನಡಿಗರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಟಿವಿ ಕಾರ್ಯಕ್ರಮಗಳಲ್ಲಿ ಕನ್ನಡದ ದಿಗ್ಗಜರುಗಳಾದ ಕುವೆಂಪು, ಶಿವರಾಮ್ ಕಾರಂತ ಹಾಗು ರಾಜಕುಮಾರರ ಜೀವನ ಸಾಧನೆಗಳನ್ನು ನವೀನ ರೀತಿಯಲ್ಲಿ ನಿರೂಪಿಸಿ ಕನ್ನಡಿಗರ ಮನ ಸೂರೆಗೊಂಡಿದ್ದಾರೆ. ಈ ಪ್ರತಿಭಾವಂತ ಸಾಹಿತಿಯ ಆಗಮನ ಕುವೈತಿನ ಕನ್ನಡಿಗರಿಗೆ ಅತ್ಯಂತ ಸಂತಸದ ಸುದ್ದಿಯಾಗಿದೆ.
ನಮ್ಮ ಕನ್ನಡ ನಾಡಿನ ಉದಯೋನ್ಮುಖ ಬಾಲಪ್ರತಿಭೆ ಕು||ಪೂರ್ವಿ ತನ್ನ ಕಲಾ ಪ್ರತಿಭೆಯನ್ನು ತೋರಿಸಲಿದ್ದಾಳೆ. ಕು||ಪೂರ್ವಿ ಕನ್ನಡ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ "ಡೀ ಜೂನಿಯರ್" ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದಳು. ಕುವೈತ್ ಕನ್ನಡ ಕೂಟವು ಈ ಬಾಲ ಪ್ರತಿಭೆಗೆ ಮೊದಲ ಅಂತಾರಾಷ್ಟ್ರೀಯ ವೇದಿಕೆ ಕೊಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ಈ ಸಲದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕೂಟದ ಸದಸ್ಯರುಗಳು, ಪ್ರತಿ ವರುಷದಂತೆ, ಮನರಂಜನೆಯ ಕಾರ್ಯಕ್ರಮವನ್ನು ನೀಡಲಿದ್ದಾರೆ. ಕರ್ನಾಟಕದ ಆಚರಣೆಗಳು ಹಾಗು ಸಂಸ್ಕೃತಿಗಳ ಆಧಾರಿತ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಲು ಕೂಟದ ಸಾಂಸ್ಕೃತಿಕ ಸಮಿತಿ ಭರದಿಂದ ತಯಾರಿ ನಡೆಸುತ್ತಿದೆ.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ದಿನೇಶ್, ವಿಜಯ ಕೈರಂಗಳ, ರಮೇಶ್ ಸಿ ಹಾಗು ರಮೇಶ್ ಪಿ ಕೂಟದ ಎಲ್ಲ ಚಟುವಟಿಕೆಗಳ ನಿರ್ವಹಣೆ ಹೊತ್ತು ಕುವೈತಿನ ಕನ್ನಡಿಗರಿಗೆ ಅವಿಸ್ಮರಣೀಯ ಅನುಭವ ನೀಡಲು ಸಿದ್ಧರಾಗಿದ್ದಾರೆ.