ವಿಷ್ಣು, ಅಶ್ವತ್ಥ್ಗೆ ಶಾರ್ಜಾ ಕನ್ನಡಿಗರ ಅಶ್ರುತರ್ಪಣ
ಪ್ರಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಅಗಲಿದ ಕನ್ನಡದ ಕಣ್ಮಣಿಗಳ ಸಾಧನೆಗಳ ಬಗ್ಗೆ ಮಾತಾಡುತ್ತ, ಇಂತಹ ಮಹಾನ್ ಕಲಾವಿದರು ಹುಟ್ಟಿ ಬರಲು ಸಹಸ್ರ ವರ್ಷ ಕಾಯಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು, ವಿಷ್ಣುವರ್ಧನ್ ಅವರು ದುಬೈಗೆ ಆಗಮಿಸಿದ ಸಂದರ್ಭವನ್ನು ನೆನಿಸಿಕೊಂಡು, ವೃತ್ತಿ ಜೀವನದಲ್ಲಿ ಎಷ್ಟು ಶಿಸ್ತು ಬದ್ಧರಾಗಿದ್ದರೋ ಗೃಹಸ್ಥನಾಗಿಯೂ ಅಷ್ಟೆ ಶಿಸ್ತು ಬದ್ಧರಾಗಿದರು ಎಂದು ಹೇಳಿದರು. ಸಿ. ಅಶ್ವಥ್ ಅವರ "ಕನ್ನಡವೇ ಸತ್ಯ" ಕಾರ್ಯಕ್ರಮವನ್ನು ಯು.ಎ.ಇ.ಯಲ್ಲಿ ಆಯೋಜಿಸಲಾಗದಕ್ಕೆ ಸಂತಾಪ ವ್ಯಕ್ತಪಡಿಸಿದರು. ಜಯರಾಮ ಸೋಮಯಾಜಿ, ಉದ್ಯಮಿ ಆಶೋಕ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯು.ಎ.ಇ.ಯ ರೇಡಿಯೊ ಸ್ಪಯ್ಸ್ ನ ಮಾಲೀಕ ಹರ್ಮನ್ ಲೂಯಿಸ್ ಅವರು ವಿಷ್ಣುವರ್ಧನರೊಂದಿಗೆ ಇದ್ದ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡರು. ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ನೋವೆಲ್ ಅಲ್ಮೆಡಾ, ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬಿ.ಜಿ. ಮೋಹನದಾಸ್, ಸತೀಶ್ ವೆಂಕಟರಮಣ, ನಮ್ಮ ಟಿವಿಯ ವಿನಯ, ಹವ್ಯಾಸಿ ಪತ್ರಕರ್ತರಾದ ಅರ್ಶದ್ ಹುಸೆನ್ ಕೊಪ್ಪ, ಗೋಪಿನಾಥ್ ರಾವ್, ಶೋಧನ್ ಪ್ರಸಾದ್, ಸುಜಯ್ ಬೆಂದೂರ್, ಅಶೋಕ್ ಬೆಳ್ಮಣ್, ಗಣೇಶ್ ರೈ, ಮುಂತಾದವರು ಉಪಸ್ಥಿತರಿದ್ದರು.
ಸೊನಿಯಾ ಗೌತಮ ಹಾಗೂ ವಿರೇಂದ್ರ ಕುಮಾರ್ ಅವರು ಅಶ್ವಥ್ ಅವರ ಸ್ವರ ಸಂಯೋಜನೆಯ ಹಾಡುಗಳನ್ನು ಹಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಮಧುಸೂದನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ಸದನ್ ದಾಸ್ ಅವರು ವಂದಿಸಿದರು.