Get Updates
Get notified of breaking news, exclusive insights, and must-see stories!

ಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ

Srivathsa Joshi
ಈ ಬಾರಿಯ ವಸಂತ ಸಾಹಿತ್ಯೋತ್ಸವದಲ್ಲಿ ಪ್ರಸ್ತುತಗೊಂಡ ಒಂದು ವಿಶಿಷ್ಟ ಕಾರ್ಯಕ್ರಮವೆಂದರೆ ಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ' ಎಂಬ ಒಂದು ಪ್ರಾತ್ಯಕ್ಷಿಕೆ. ಗಣಕಯಂತ್ರದಲ್ಲಿ ಮತ್ತು ಅಂತರಜಾಲದಲ್ಲಿ ಕನ್ನಡ ಲಿಪಿಯನ್ನು ಉಪಯೋಗಿಸಿ ಇಮೇಲ್ ಬರೆಯುವುದು ಹೇಗೆ, ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್‌ಗಳಲ್ಲೂ ಕನ್ನಡದಲ್ಲೇ ಕಡತಗಳನ್ನು ತಯಾರಿಸುವುದು ಹೇಗೆ, ಯುನಿಕೋಡ್ ಕನ್ನಡ ಲಿಪಿ ಎಂದರೇನು, ಅದರ ಪ್ರಯೋಜನಗಳೇನು, ಹರಟೆಕಿಟಕಿ(ಚಾಟಿಂಗ್)ನಲ್ಲೂ ಹೇಗೆ ಕನ್ನಡ ಬಳಸಬಹುದು ಮುಂತಾದುವನ್ನು ಸೋದಾಹರಣವಾಗಿ ವಿವರಿಸಿದ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಶ್ರೀವತ್ಸ ಜೋಶಿ ಮತ್ತು ಅವರೊಂದಿಗೆ ನಿರೂಪಕನಾಗಿ ಸಹಕರಿಸಿದ ಶಿವು ಭಟ್.

ಬಹಳವಾಗಿ ಪ್ರಶ್ನೋತ್ತರ ಮಾದರಿಯಲ್ಲೇ ಸಾಗಿದ ಕಾರ್ಯಕ್ರಮದಲ್ಲಿ ಸಭಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಬರಹ' ತಂತ್ರಾಂಶದ ಬಳಕೆ, ಚಿತ್ರ(ಇಮೇಜ್)ಗಳಲ್ಲಿ ಕನ್ನಡ ಅಕ್ಷರಗಳ ಉಪಯೋಗ, ಫಾಂಟುಗಳಿಗೆ ಸಂಬಂಧಿಸಿದಂತೆ ತಮಗಿದ್ದ ಸಂದೇಹಗಳಿಗೆ ಶ್ರೀವತ್ಸ ಜೋಶಿಯವರಿಂದ ಉತ್ತರ ಮತ್ತು ಸಲಹೆಗಳನ್ನು ಪಡೆದರು. ಕಾರ್ಯಕ್ರಮದಲ್ಲಿ ವಿವರಿಸಿದ ಅಂಶಗಳೆಲ್ಲವನ್ನೂ ಒಂದು ಸರಳ ಕೈಪಿಡಿಯ ರೂಪದಲ್ಲಿ ಪ್ರಕಟಿಸಿ ವಿತರಿಸಿದರೆ ಬಹಳ ಉಪಯೋಗವಾಗುತ್ತದೆ ಎಂಬ ಅಭಿಪ್ರಾಯ ಮೂಡಿ ಬಂತು. ಕನ್ನಡ ಸಾಹಿತ್ಯರಂಗವು ಈ ಯೋಜನೆಯಲ್ಲಿ ಸಹಕರಿಸುವುದೆಂಬ ಭರವಸೆಯೂ ಬಂತು. ಒಟ್ಟಿನಲ್ಲಿ ಒಂದು ಜನೋಪಯೋಗಿ ಕಾರ್ಯಕ್ರಮವಾಗಿ ಮೂಡಿಬಂತು ಈ ಪ್ರಾತ್ಯಕ್ಷಿಕೆ.

ವೈದೇಹಿಯವರು ತಮ್ಮ ಅಮ್ಮಚ್ಚಿಯೆಂಬ ನೆನಪು ಕತೆಯನ್ನು ಸುಮಾರು ನಲವತ್ತೈದು ನಿಮಿಷದಲ್ಲಿ ತಮ್ಮ ಮೆಲುದನಿಯಲ್ಲಿ ಓದಿದಾಗ ಇಡೀ ಸಭೆಯಲ್ಲಿ ಉಸಿರೂ ಕೇಳಿಸದ ಮೌನ. ಕಥೆಗಿರುವ ಶ್ರವ್ಯಗುಣ, ನಾಟಕೀಯತೆ ಮತ್ತು ತಮ್ಮದೇ ಆದ ಕುಂದಾಪುರ ಶೈಲಿಯ ಕನ್ನಡದಲ್ಲಿ ಓದಿದ ವೈದೇಹಿಯವರು ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.

ಭಾನುವಾರ ಬೆಳಗಿನ ಚಹ ವಿರಾಮದ ನಂತರ ಅಮೆರಿಕನ್ನಡಿಗರು ಈಚೆಗೆ ಪ್ರಕಟಿಸಿರುವ ಪುಸ್ತಕಗಳನ್ನು ಪರಿಚಯಿಸುವ "ಹೆಮ್ಮೆ ಬರಿಸುವರಿವರು ನಮ್ಮ ಬರಹಗಾರರು" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಲೇಖಕಿ ತ್ರಿವೇಣಿ ಶ್ರೀನಿವಾಸರಾವ್ ಅವರು ನಡೆಸಿಕೊಟ್ಟರು. ಇದರಲ್ಲಿ 12 ಪುಸ್ತಕಗಳನ್ನು ಪರಿಚಯಿಸಲಾಯಿತು. ಟಿ. ಎನ್. ಕೃಷ್ಣರಾಜು ಅವರು ಇಂಗ್ಲೀಷಿಗೆ ಅನುವಾದಿಸಿರುವ, ಎ.ಕೆ. ರಾಮಾನುಜನ್ ಅವರ ಮತ್ತೊಬ್ಬನ ಆತ್ಮಚರಿತ್ರೆ' (ವಿಮರ್ಶೆ : ಗುಂಡು ಶಂಕರ್), ಸರೋಜಾ ನಾರಾಯಣರಾವ್ ಅವರ ಮಕ್ಕಳಿಗಾಗಿ ಮಹಾಭಾರತದ ಕಥೆಗಳು' (ವಿಮರ್ಶೆ: ಎಚ್. ವೈ. ರಾಜಗೋಪಾಲ್), ತ್ರಿವೇಣಿ ಶ್ರೀನಿವಾಸರಾವ್ ಅವರ ತುಳಸಿವನ' ಅಂಕಣ ಬರಹ ಸಂಗ್ರಹ (ವಿಮರ್ಶೆ : ಮಧುಕಾಂತ್ ಕೃಷ್ಣಮೂರ್ತಿ), ಶ್ರೀವತ್ಸಜೋಶಿಯವರ ಅವಳಿ ಪುಸ್ತಕಗಳಾದ ಇನ್ನೊಂದಿಷ್ಟು ವಿಚಿತ್ರಾನ್ನ', ಮತ್ತೊಂದಿಷ್ಟು ವಿಚಿತ್ರಾನ್ನ' ಅಂಕಣ ಬರಹ ಸಂಗ್ರಹ (ವಿಮರ್ಶೆ : ಶ್ರೀನಾಥ್ ಭಲ್ಲೆ), ಜ್ಯೋತಿ ಮಹಾದೇವ ಅವರ ಭಾವಬಿಂಬ' ಕವನ ಸಂಕಲನ (ವಿಮರ್ಶೆ : ಎಂ. ಆರ್. ದತ್ತಾತ್ರಿ), ಗುರುಪ್ರಸಾದ್ ಕಾಗಿನೆಲೆಯವರ ಚೊಚ್ಚಲು ಕಾದಂಬರಿ ಬಿಳಿಯ ಚಾದರ' (ವಿಮರ್ಶೆ : ಪಿ. ಆರ್. ಮೀರಾ), ಅಮೆರಿಕ ಮತ್ತು ಭಾರತದ ವಿವಿಧ ಲೇಖಕರ ಲೇಖನಗಳಿರುವ ನಗೆಗನ್ನಡಂ ಗೆಲ್ಗೆ' (ವಿಮರ್ಶೆ : ಕಮಲಾ ಎಂ. ಎಸ್. ಬಾಲು), ನಾಗ ಐತಾಳರ ಎರಡು ಕೃತಿಗಳು ಕಾದೇ ಇರುವಳು ರಾಧೆ' ಕಾದಂಬರಿ ಮತ್ತು ಒಂದಾನೊಂದು ಕಾಲದಲ್ಲಿ' ಕಟ್ಟುಕಥೆಗಳ ಸಂಗ್ರಹ (ವಿಮರ್ಶೆ : ಜ್ಯೋತಿ ಮಹಾದೇವ) ವಿಮರ್ಶೆಗೊಳಪಟ್ಟ ಪುಸ್ತಕಗಳು. ವಿಶ್ವನಾಥ್ ಹುಲಿಕಲ್ ಅವರು ತಾವು ಅನುವಾದಿಸಿದ ಆತ ಮಂಗಳ ಲೋಕದಿಂದ, ಈಕೆ ಶುಕ್ರಲೋಕದಿಂದ' ಮತ್ತು ವಿಲ್ ಡ್ಯೂರಾಂಟ್ ಅವರ ಕೃತಿ ನಾಗರೀಕತೆಯ ಕಥೆ' ಪುಸ್ತಕಗಳನ್ನು ಪರಿಚಯಿಸಿದರು.

ಅಮೆರಿಕನ್ನಡ ಬರಹಗಾರರ ಕೃತಿಗಳ ಪರಿಚಯ, ವಿಮರ್ಶೆಗಳಿಗೆ ಈ ಕಾರ್ಯಕ್ರಮವು ಮೀಸಲಾಗಿದ್ದು ಸಮ್ಮೇಳನದ ಉದ್ದೇಶವನ್ನು ಸಾರ್ಥಕಪಡಿಸುವ ಕಾರ್ಯಕ್ರಮಗಳಲ್ಲೊಂದಾಗಿತ್ತು. ಇದನ್ನು ಕಂಡು ಕೇಳಿದ ನಂತರ ಹಲವಾರು ಸಾಹಿತ್ಯಾಸಕ್ತರು ಪುಸ್ತಕಗಳನ್ನು ಕೊಳ್ಳಲು ಪುಸ್ತಕ ಮಳಿಗೆಯತ್ತ ಸಾಗುತ್ತಿರುವುದು ಕಂಡುಬಂದಿತು.

ಮುಂದೆ ಓದಿ : ವೇದಿಕೆಯಲ್ಲಿ ಅಷ್ಟಲಕ್ಷ್ಮಿಯರು »

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+