ಫಿಲಡೆಲ್ಫಿಯಾ ಕನ್ನಡಿಗರ ಹರುಷದ ಯುಗಾದಿ

ಬಹಳ ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅಭ್ಯಸಿಸಿದ್ದ ಮಕ್ಕಳಿಗೂ, ಹಿರಿಯರಿಗೂ ಈ ದಿನ ತಮ್ಮ ಕಲೆಗಳನ್ನು, ಕರ್ನಾಟಕದ ಸಂಸ್ಕೃತಿಯ ವಿವಿಧ ರೂಪಗಳನ್ನು ಪ್ರದರ್ಶಿಸುವ ಸದವಕಾಶ. ಮೊದಲಿಗೆ ಸತ್ಯಪ್ರಸಾದ್ ಹಾಗು ಪ್ರತಿಭಾ ಅವರಿಂದ ಯುಗಾದಿ ಹಬ್ಬದ ಆಚರಣೆಯ ಕಿರು ಪರಿಚಯ. ನಂತರ ಲಕ್ಶ್ಮಿ ಮತ್ತು ಸಂಯುಕ್ತ ಅವರಿಂದ ಪುಷ್ಪಾಂಜಲಿ ನೃತ್ಯದ ಮೂಲಕ ದೇವರಿಗೆ ನಮನ. ಆಮೇಲೆ ವೇದಿಕೆ ಮೇಲೆ ಬಂದ ಪುಟ್ಟ ಅನನ್ಯ, ರಾಮಾಯಣ ಹಾಗು ಮಹಾಭಾರತ ಮಹಾಕಾವ್ಯಗಳನ್ನು ಎರಡು ಶ್ಲೋಕಗಳ ರೂಪದಲ್ಲಿ ಸ್ಪಷ್ಟವಾಗಿ ಉಚ್ಚರಿಸಿ ಎಲ್ಲರ ಮೆಚ್ಚುಗೆ ಗಳಿಸಿದಳು. ಈಗ ಮೂರು/ನಾಲ್ಕು ವಯಸ್ಸಿನ ಶ್ರೇಯ, ಸುನಿಧಿ ಮತ್ತು ಸಾಧ್ಯ ಮಂಗನ ವೇಷದಲ್ಲಿದ್ದ ಆಯುಷ್ ಜೊತೆಯಲ್ಲಿ ಆಟವಾಡಲು ಬಂದರು. ಅವರು "ಗೇರ್ ಗೇರ್ ಮಂಗಣ್ಣ" ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಪ್ರತೀ ಸಲದ ಕಾರ್ಯಕ್ರಮಗಳಂತೆ, ಈ ಸಲವೂ ಮಕ್ಕಳ ಕಾರ್ಯಕ್ರಮಗಳದ್ದೇ ಮೇಲುಗೈ. ಜಿ.ಪಿ.ರಾಜರತ್ನಂ ಅವರು ಮಕ್ಕಳ ಪದ್ಯಗಳನ್ನು ಬರೆಯುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ವಿವರಿಸಿ ಅವರ ಮೊದಲ ಪದ್ಯ "ಬಣ್ಣದ ತಗಡಿನ ತುತ್ತೂರಿ"ಯನ್ನು ಪ್ರಸ್ತುತ ಪಡಿಸಿದ್ದು ನಿಖಿಲ್. ಕಣ್ತುಂಬ ಪ್ರೀತಿ ತರುವುದು ಯುಗಾದಿ, ಸಂಬಂಧಗಳನ್ನು ಬೆಸೆಯುವುದು ಯುಗಾದಿ ಎಂದು ರಿಶಿ ಚಿತ್ರದ "ಎಲ್ಲೆಲ್ಲೂ ಹಬ್ಬ ಹಬ್ಬ" ಹಾಡಿಗೆ ನರ್ತನ ಮಾಡಿದ ಮಕ್ಕಳು ಅಂಕುಶ್, ಅಕ್ಷಯ್, ತರಣ್, ಅಕ್ಷತಾ, ನಿಶಾ, ಅನನ್ಯ ಮತ್ತು ಶ್ರೇಯ. ಈ ಸೊಗಸಾದ ನೃತ್ಯ ನಿರ್ದೇಶನ ಮಾಡಿದ್ದು ಆರತಿ. ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ "ಕೆರೆಯ ನೀರನು" ಗೀತೆ ಹಾಡಿದ್ದು ಶ್ರೇಯಾ ಹಾಗು ಅಂಕುಶ್.
ಮೇಘಾ ತನ್ನ ಪಿಯಾನೊದಲ್ಲಿ ನುಡಿಸಿದ ಸದಾ ಮಧುರ ಗೀತೆಗಳಾದ "ಹಿಂದೂಸ್ಥಾನವು ಎಂದೂ ಮರೆಯದ" ಮತ್ತು "ಹೂವೊಂದು ಬಳಿಬಂದು" ಹಾಡುಗಳು ಬಹಳ ಇಂಪಾಗಿದ್ದವು. ನಂತರ ಕೋಲು ಕೋಲಣ್ಣ ಕೋಲೆ ಎಂದು ಕೋಲಾಟ ಆಡಲು ಬಂದ ಮಕ್ಕಳು ಅಂಕಿತ, ಆಕಾಂಕ್ಷಾ, ಜಾಹ್ನವಿ, ಸೀಮಾ, ಹಿಮವತ್, ನೀಲ್, ನಿಹಾರ್, ಪ್ರಣವ್, ಸುನಿಲ್ ಮತ್ತು ಶ್ರೀರಾಮ್. ಮಕ್ಕಳ ಕರಾರುವಕ್ಕಾದ ನೃತ್ಯವನ್ನು ನೋಡಿ ನೃತ್ಯ ನಿರ್ದೇಶಿಸಿದ ಪ್ರತಿಭಾ ಹಾಗು ತಂದೆ ತಾಯಿಯರು ಸಂತೋಷದ ಕಡಲಲ್ಲಿ ತೇಲಾಡುತ್ತಿದ್ದರು. "ಅಡವಿ ದೇವಿಯ" ಹಾಡಿಗೆ ಕಾಡು ಜನರಂತೆ ಹೆಜ್ಜೆ ಹಾಕಿದ ಸಂಜನಾ ಹಾಗು ಸುಶಾ, ಪ್ರೇಕ್ಷಕರೂ ಕುಳಿತಲ್ಲೆ ಹೆಜ್ಜೆ ಹಾಕುವಂತೆ ಮಾಡಿದರು. ತಮ್ಮದೇ ಒಂದು ಪುಟ್ಟ ವಾದ್ಯ ತಂಡ ಮಾಡಿಕೊಂಡು "ಬೆಳ್ಳಿಯ ರಾಜ ಬಾರೊ" ಹಾಡನ್ನು ಪ್ರಸ್ತುತ ಪಡಿಸಿದ್ದು ಹಿಮವತ್, ಜಾಹ್ನವಿ, ಆಕಾಂಕ್ಷಾ, ಸೀಮಾ ಹಾಗು ಅಂಕಿತ.
ಮಕ್ಕಳಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ತೋರಿಸುವುದು ಈಗ ಹಿರಿಯರ ಸರದಿ. ಯುಗಾದಿ ಬರುವುದು ಚೈತ್ರ ಮಾಸದ ಪ್ರಾರಂಭದಲ್ಲಿ, ವಸಂತ ಋತುವಿನ ಆಗಮನ, ಎಲ್ಲೆಲ್ಲೂ ಮಲ್ಲಿಗೆಯ ಘಮ ಘಮ. ಮಲ್ಲಿಗೆಯನು ಚೆಲ್ಲುತ್ತಾ ನೃತ್ಯ ಮಾಡಿದ್ದು ಲಕ್ಷ್ಮಿ, ಸಂಯುಕ್ತ, ಪ್ರತಿಭಾ, ಸೌಮಿನಿ, ಮೇಖಲಾ, ಸುಜಾತ, ಪ್ರಿಯಾ ಹಾಗು ಕಲಾ. ಕೆಲವು ಹೊಸ ಚಿತ್ರದ ಹಾಡುಗಳನ್ನು ಸೇರಿಸಿ ಹಾಡಿದವರು ಆರತಿ, ಸಪ್ನ, ರಶ್ಮಿ, ಕವಿತಾ, ಶ್ಯಾಮಲ ಮತ್ತು ವಾಣಿ. ಇವರಿಗೆ ಪಕ್ಕವಾದ್ಯ ನೀಡಿದ್ದು, ಮೃದಂಗದಲ್ಲಿ ಪ್ರಮೋದ್ ಮತ್ತು ಗಿಟಾರಿನಲ್ಲಿ ಚಂದನ್. "ಗ್ಲೋ ಶಾರ್ಟ್ಸ್" ವಸ್ತುವಿನ ವಿವಿಧ ರೀತಿಯ ಜಾಹೀರಾತುಗಳನ್ನು ಪ್ರಸ್ತುತ ಪಡಿಸಿದವರು ಸತ್ಯಪ್ರಸಾದ್, ಪ್ರಮೋದ್, ಜಯರಾಮ್, ಮಂಜುನಾಥ್ ಮತ್ತು ಹರೀಶ್. ಅನೇಕ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದವರು ಸತ್ಯಪ್ರಸಾದ್, ಶೃತಿ, ಶರ್ಮಿಳಾ ಹಾಗು ಪ್ರವೀಣ್.
ನಿರರ್ಗಳವಾಗಿ ಕನ್ನಡ ಮಾತನಾಡುವ ಸವಾಲನ್ನು ಪ್ರತಿಭಾ ಪ್ರೇಕ್ಷಕರ ಮುಂದೆ ಇಟ್ಟಾಗ ನಗುಮೊಗದಿಂದ ಸ್ವೀಕರಿಸಿ ವೇದಿಕೆ ಮೇಲೆ ಬಂದವರು ಕೇಶವ್, ಶ್ರೀನಿವಾಸ್, ಸುಧಾಕರ್, ಬಸವರಾಜ್ ಮತ್ತು ನಾಗಭೂಷಣ್. ಯಾರಿಗೂ ಶುದ್ದ ಕನ್ನಡದಲ್ಲಿ ಒಂದು ನಿಮಿಷ ಸಹ ಮಾತಾಡಲು ಸಾಧ್ಯವಿಲ್ಲ ಎಂದು ನಿರೀಕ್ಷಿಸಿದ್ದ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಎಲ್ಲರೂ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಪ್ರಯತ್ನ ಮಾಡಿ ಮೆಚ್ಚುಗೆ ಗಳಿಸಿದರು. ಒಳ್ಳೆಯ ಪೈಪೋಟಿ ನಡುವೆ ಬಸವರಾಜ್ ಅವರು ಒಂದೂವರೆ ನಿಮಿಷ ಮಾತನಾಡಿ ಸ್ಪರ್ಧೆಯನ್ನು ಗೆದ್ದರು. ಕಾರ್ಯಕ್ರಮವನ್ನು ನಿರೂಪಿಸಿದ ಸತ್ಯಪ್ರಸಾದ್ ಅವರು ತಮ್ಮ ಹಾಸ್ಯ, ಪುರೋಹಿತರ ಕ್ರಿಕೆಟ್ ಆಟದ ವರದಿ ಹಾಗೂ ಮಂಗಳೂರು ಕನ್ನಡ ಮಾತುಗಳೊಂದಿಗೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಭಾರತದ ಹಾಗೂ ಅಮೇರಿಕದ ರಾಷ್ಟ್ರಗೀತೆಗಳನ್ನು ಪಿಯನೋದಲ್ಲಿ ನುಡಿಸಿದ ಸಂಜನಾ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದಳು.
ಇಂಥ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಲು ಬಹಳ ಶ್ರಮ ಪಟ್ಟ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಸಲ್ಲಿಸಿ ಎಲ್ಲ ಊಟಕ್ಕೆ ಹೊರಟರು. ರುಚಿಯಾದ ಬಿಸಿಬೇಳೆಬಾತ್, ಕೇಸರಿಬಾತ್, ಮೊಸರನ್ನ, ಪಕೋಡ ಊಟ ಸೊಗಸಾಗಿತ್ತು. ನಾಲ್ಕು ಸ್ನೇಹಿತೆಯರು ಕೂಡಿ ಪ್ರಾರಂಭಿಸಿದ ಈ ಕೂಟ ಎರಡು ವರ್ಷಗಳಲ್ಲಿ ಇಷ್ಟು ಮಟ್ಟಿಗೆ ಬೆಳೆದಿರುವುದು ಬಹಳ ಸಂತೋಷದ ವಿಷಯ. ಎಲ್ಲರೂ ಹೀಗೆ ಸೇರಿ ಹಬ್ಬಗಳನ್ನು ಆಚರಿಸುತ್ತಿರುವುದು, ನಾವೆಲ್ಲಾ ಒಂದೇ ಕುಟುಂಬದವರು ಅನ್ನುವ ಭಾವನೆ ಮೂಡಿಸಿದೆ. ಬಹಳ ಜನರಲ್ಲಿ ಹುದುಗಿದ್ದ ಕಲೆ ಬೆಳಕಿಗೆ ಬಂದಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯವಾಗುತ್ತಿದೆ. ಈ ಎಲ್ಲಾ ಭಾವನೆಗಳೊಂದಿಗೆ ಜೂನ್ ತಿಂಗಳಲ್ಲಿ ಆಯೋಜಿಸಿರುವ ವಿಹಾರಕ್ಕಾಗಿ ಎದುರುನೋಡುತ್ತಾ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.











Click it and Unblock the Notifications