ಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ

ದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತು
ಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆ
ಕೇಳದೆಯೆ ಗರ್ಭದಾಳದ ಗೀತೆ ಮೈಮರೆತು
ಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕು
ಸಪ್ತಸಾಗರದಾಚೆ ದ್ವೀಪವನು ಹುಡುಕಿ
ಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿ
ಹೃದಯಕಮಲವನೊಮ್ಮೆ ಹಿಡಿಯಬೇಕು
ಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿ
ಎಚ್ಚರದ ರೇಖೆಗಳನೊತ್ತರಿಸಿ
ಹೂವಿನಲಿ ಕೆಂಪು ಚೆಲ್ಲುವಮೊದಲೇ
ತೋರುವೆಯ ಸಾಲಿಗಳನ್ನಿರಿಸಬೇಕು
ನಕ್ಷತ್ರಗಳ ಘಟ್ಟಣಿಗೆ ಇಳಿಸಿ
ಹಾಲಾಹಲದ ಹಬ್ಬವಾಗುವ ಮೊದಲು
ಗುಂಡಿಗೆಯ ಮೆದುಹಾಸು ಕೆಡದವೊಲು
ಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.
ಎಂದು ಸುಂದರವಾದ ಕವಿತೆಯನೊಂದು ರಚಿಸಿ ಓದಿ, "ಸ್ವರ್ಣಸೇತು"ವನ್ನು ಕೊಂಡಾಡಿ, ಮೆಚ್ಚುಗೆ ಸೂಸಿದರು, ಸ್ವರ್ಣಸೇತು ಬಿಡುಗಡೆಯ ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ಪ್ರಣತಾರ್ಥಿ ಹರನ್ ಅವರು. ಹೆಸರಾಂತ ಸಾಹಿತಿ, ಕನ್ನಡ ಪ್ರಾಧ್ಯಾಪಕರು, ಭಾಷಣಕಾರರೂ ಆದ ಡಾ. ಹರನ್ ಅವರು ಹಲವಾರು ಕೃತಿಗಳಿಗೆ ಲೇಖಕರಷ್ಟೇ ಅಲ್ಲ, ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಗಳಿಸಿದ ಹೆಗ್ಗಳಿಕೆಯೂ ಇವರದಾಗಿದೆ. ಡಾ. ಹರನ್ ಅವರು ಬಿಡುಗಡೆಯ ಸಮಾರಂಭದ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸುವುದಕ್ಕೆ ಒಂದು ಅವಕಾಶ ದೊರೆತಿದ್ದು ಕನ್ನಡಕೂಟದ "ಸ್ವರ್ಣಸೇತು" ವಿಗೆ ಒಂದು ಸುಯೋಗವೇ ಆಗಿತ್ತು.
ಲಾಸ್ ಆಲ್ಟೋಸ್ ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ವರ್ಣಸೇತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಕುಮಾರ ಸಂಜೀವ್ ಪ್ರಭುನಂದನನ ಹಾಡಿದ "ಮುದಾಕರಾತ್ತ ಮೋದಕಂ" ಗಣೇಶ ಸ್ತುತಿಯಿಂದ ಪ್ರಾರಂಭವಾಯಿತು. ನಂತರ ಸಂಗೀತ ಸುಧೆಯಲ್ಲಿ ಕನ್ನಡ ಕಾವ್ಯಗಳ ಗಾಯನ ಎಲ್ಲರ ಮನತಣಿಸಿತು. ಮೊದಲು ಹಾಡಿದವರು ಹನ್ನೊಂದು ಪುಟ್ಟ ಕಂಠ ಸಿರಿಗಳು - ಸಂಧ್ಯಾ ರವೀಂದ್ರನಾಥ್ ರಚಿಸಿದ "ಶಿರಬಾಗಿ ನಮಿಸುವೆವು ಗಣಪತಿಯೆ ನಿನಗೆ" ಭಕ್ತಿ-ಭಾವದಿಂದ ಇನ್ನೊಮ್ಮೆ ಗಣೇಶನ ಸ್ತುತಿ ಗೈದರು. ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ರಚಿಸಿರುವ "ಕನ್ನಡ ಎನುವುದು ಜೀವನದಿ" ಗೀತೆಯನ್ನು ಸುಂದರವಾಗಿ ಹಾಡಿದವರು ಯುವ ತಂಡದ-ಅಪೂರ್ವ, ಚೈತ್ರ ಮತ್ತು ದೀಪ್ತಿ ಸಂಧ್ಯಾ ಗಾಯತ್ರಿಯವರ ನಿರ್ದೇಶನದಲ್ಲಿ. ಮುಂದಿನ ಎರಡು ಗೀತೆಗಳು ಕನ್ನಡ-ಕಾವ್ಯ-ಸಿರಿಯನ್ನು ಪ್ರತಿನಿಧಿಸುವ ದ. ರಾ. ಬೇಂದ್ರೆಯವರ ಕವನಗಳಿದ ಆರಿಸಲಾಗಿದ್ದು-ಘಮ ಘಮ-ಘಮಾಡುಸ್ತಾವ ಮಲ್ಲಿಗೆ ಹಾಗು ಅಂತರಂಗದಾಮೃದಂಗ - ಮಧುರವಾಗಿ ಹಾಡಿದವರು, ಸಂಧ್ಯಾ ಗಾಯತ್ರಿ, ಸಂಧ್ಯಾ ಸುಬ್ಬರಾಮು, ಶೊಭಲತಾ ಮತ್ತು ಸ್ಮಿತಾ. ಸಂಗೀತ ಸುಧೆ ಪು.ತಿ.ನ. ಅವರ ದೇಶಭಕ್ತಿ ಗೀತೆ "ಉರಿವ ಬಿಸಿಲಿರಲಿ ಕೊರೆವ ಚಳಿಯಿರಲಿ...."ಯಿಂದ ಕೊನೆಗೊಂಡಿತು.
ಸಾಹಿತ್ಯ ರಸಧಾರೆ - ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟವರು ಮಧುಕಾಂತ್ ಕೃಷ್ಣಮೂರ್ತಿಯವರು. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನೊಳಗೊಂಡ ರಸಪ್ರಶ್ನೆಗಳಿಂದ ಕೂಡಿದ ಈ ಕಾರ್ಯಕ್ರಮವು ಸಭಿಕರಲ್ಲಿ ಕುತೂಹಲ ಕೆರಳಿಸಿ, ಕನ್ನಡ ನಾಡಿನ ಹಿರಿಮೆಯನ್ನು ಕಣ್ಣ ಮುಂದೆ ನಿಲ್ಲಿಸಲು ಯಶಸ್ವಿಯಾಯಿತು. ಕನ್ನಡ ಸಾಹಿತ್ಯದ ಮೊದಲ ಕಾವ್ಯ ಯಾವುದು? ಈ ನಾಟಕದ ಕಥೆಯನ್ನು ಯಾರು ಯಾರಿಗೆ ಹೇಳಿ, ಅದರಿಂದ ಎಷ್ಟು ಕೃತಿಗಳು ರಚಿತವಾದವು? ಇಂತಹ ರಸಪ್ರಶ್ನೆಗಳು ಕನ್ನಡ ಸಾಹಿತ್ಯ ಬೆಳವಣಿಗೆಯ ಪುಸ್ತಕವನ್ನೇ ತೆರೆದಿಟ್ಟಿತ್ತು ಎಂದರೆ ಅತಿಶಯೋಕ್ತಿಯಾಗುವುದಿಲ್ಲ.
ಭಾಷಣ ಸರತಿಯಲ್ಲಿ ಮೊದಲು ಮಾತನಾಡುತ್ತಾ ಕನ್ನಡಕೂಟದ ಅಧ್ಯಕ್ಷರಾದ (2008) ಭವಾನಿಕುಮಾರ್ ಅವರು, ಸ್ವರ್ಣಸೇತು ಬಿಡುಗಡೆಯು ಅವರಲ್ಲಿ ತಂದ ಹರ್ಷವನ್ನೂ, ಮತ್ತು ಅದಕ್ಕೆ ಕಾರಣರಾದವರನ್ನು ಅಭಿನಂದಿಸಿದರು. ನಂತರ ಸ್ವರ್ಣಸೇತು ಸಂಚಿಕೆಯ ಪ್ರಧಾನ ಸಂಪಾದಕರಾದ ವಿಶ್ವಾನಂದ ಪಟ್ಟಣಶೆಟ್ಟಿಯವರು ಮಾತನಾಡಿ, ವರ್ಷದ ಪ್ರಾರಂಭದಿಂದ ಬಂದ ಅಡೆತಡೆಗಳು, ಹೊಸದಾಗಿ ಕಲಿತ ಕೆಲವು ಕಲೆಗಳು, ಛಲ ತೆಗೆದುಕೊಂಡು ದಿನ-ರಾತ್ರಿಯೆನ್ನದೇ ಕೆಲಸಮಾಡಿದುದರ ವಿವರಣೆ ಜೊತೆಗೆ, ಈ ಕಾರ್ಯದಲ್ಲಿ ಸೇರಿದ ಪ್ರತಿಯೊಂದು ಕೈಯನ್ನೂ ಅಭಿನಂದಿಸಿದರು. ಮುಖ್ಯ ಅತಿಥಿಗಳಾದ ಡಾ. ಬಿ.ಎಸ್. ಪ್ರಣತಾರ್ಥಿ ಹರನ್ ಅವರು, ಈ ಸಭೆ ತಂದ ಆನಂದೋಲ್ಲಾಸಗಳನ್ನು ಸವಿಯುತ್ತಾ, ಹೊರನಾಡಿನಲ್ಲಿದ್ದರೂ ಕನ್ನಡದ ಒಲವನ್ನು ಈ ಮಟ್ಟಿಗೆ ಹೊಂದಿರುವುದಲ್ಲದೇ, ಅದನ್ನು ಈ ರೀತಿಯಲ್ಲಿ ಕಾಪಾಡಿಕೊಂಡು ಬರುತ್ತಿರುವ ಕನ್ನಡಕೂಟದ ಸದಸ್ಯರೆಲ್ಲರಿಗೂ ಹಾಗು "ಸ್ವರ್ಣಸೇತು" ಸಂಪಾದಕೀಯ ವರ್ಗದವರೆಲ್ಲರಿಗೂ ಅಭಿನಂದಿಸಿ, "ಇದೇ ರೀತಿ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡಾಭಿಮಾನವನ್ನು ನಡೆಸಿಕೊಂಡು ಬರಲಿ" ಎಂದು ಆಶೀರ್ವದಿಸಿದರು. ಸುಂದರವಾಗಿ ಅಲಂಕರಿಸಿದ ಯಕ್ಷಗಾನ-ಮುಖಚಿತ್ರದಿಂದ ಕಂಗೊಳಿಸುತ್ತಿದ್ದ (ಶ್ರೀವತ್ಸ ಅವರ ವಿನ್ಯಾಸದ) "ಸ್ವರ್ಣಸೇತು" ವನ್ನು ಆದರದಿಂದ ಅನಾವರಣಗೊಳಿಸಿದರು. ಶಶಿಕಲಾ ನಿಂಬಾಲ್ ಅವರು, ಸ್ವರ್ಣಸೇತುವಿನ ಸಂಪಾದಕೀಯದಲ್ಲಿ ತಮ್ಮ ಅನುಭವವನ್ನು ರಸವತ್ತಾಗಿ ಹೇಳಿ ಈ ನಿಟ್ಟಿನಲ್ಲಿ ಅವರಿಗೆ ಸಹಾಯ ಒದಗಿಸಿದವರೆಲ್ಲರನ್ನೂ ನೆನೆದು ಅಭಿನಂದಿಸಿದರು.












Click it and Unblock the Notifications