ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲಾಸ್ ರೂಮ್‌ನಲ್ಲಿ ಡಾಕ್ಟರ್ ಇದ್ದಾರೆಯೆ?

By Staff
|
Google Oneindia Kannada News

Uday Itagi
ಹೊರದೇಶಗಳಲ್ಲಿ ಪಾಠ ಮಾಡುವ ಭಾರತೀಯ ಅಧ್ಯಾಪಕರುಗಳಿಗೆ ಪ್ರವಚನ ಕೌಶಲ್ಯ ಕಡಿಮೆಯಂತೆ, ಭಾರತದ ಕಾಲೇಜುಗಳಲ್ಲಿ ಪಾಠ ಒದರುವ ಉಪನ್ಯಾಸಕರಿಗೆ ಎಂಫಿಲ್, ಪಿಎಚ್ ಡಿ ಪದವಿಯ ಮೋಹವಂತೆ, ಕೇವಲ ಎಂಎ, ಎಂಎಸ್ಸಿ , ಎಂಕಾಂ ಮಾಡಿರುವ ಓರ್ವ ಉಪನ್ಯಾಸಕ ಕೂಡ ನಿಸ್ಸೀಮ ಉಪಾಧ್ಯಾಯನಾಗಬಲ್ಲನಂತೆ.. ಹೀಗೆ ನಮ್ಮ ಮುಂದೆ ನಾಲ್ಕಾರು ಪ್ರಶ್ನೆಗಳಿವೆ, ಹಲವು ಜಿಜ್ಞಾಸೆಗಳಿವೆ. ವಿದೇಶದಲ್ಲಿ ಇಂಗ್ಲಿಷ್ ಕಲಿಸುವ ಕನ್ನಡಿಗ ಉಪಾಧ್ಯಾಯರೊಬ್ಬರ ಸ್ವಾನುಭವ ವೃತ್ತಾಂತದ ಬೆಳಕಿನಲ್ಲಿ ಈ ಲೇಖನ ಅರಳಿದ್ದು, ಗುರು-ಶಿಷ್ಯಕೋಟಿಯ ಅನಿಸಿಕೆಗಳಿಗೆ ದಟ್ಸ್ ಕನ್ನಡ ವಾಚಕ ಬಳಗ ಎದುರು ನೋಡುತ್ತಿದೆ- ಸಂಪಾದಕ

* ಉದಯ ಇಟಗಿ, ಘಾಟ್, ಲಿಬಿಯಾ, ಉತ್ತರ ಆಫ್ರಿಕಾ

ಇತ್ತೀಚಿಗೆ ನಾನು ಕೆಲಸ ಮಾಡುವ ಯೂನಿವರ್ಷಿಟಿಯಲ್ಲಿ ಒಂದು ಘಟನೆ ಜರುಗಿತು. ಲಂಡನ್‌ನಲ್ಲಿ ಓದಿ ಬಂದ ನನ್ನ ಲಿಬಿಯನ್ ಅಧ್ಯಾಪಕ ಮಿತ್ರರೊಬ್ಬರು “Indian teachers are overqualified, but they are under skilled" ಅಂತ ನೇರವಾಗಿ ಆಪಾದಿಸಿದರು. ಅಂದರೆ ಅವರ ಆಪಾದನೆಯ ತಿರುಳು ಇಷ್ಟೇ ಆಗಿತ್ತು; ಭಾರತೀಯ ಅಧ್ಯಾಪಕರು ಏನೇ ಎಮ್.ಫಿಲ್. ಪಿ.ಹೆಚ್.ಡಿ ಮಾಡಿದರೂ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡುವದರಲ್ಲಿ ಸೋತು ಹೋಗುತ್ತಾರೆ ಹಾಗೂ ಅವರಿಗೆ ಭಾಷೆಯನ್ನು ಸಮರ್ಥವಾಗಿ ಬಳಸಿ ಪ್ರಸ್ತುತ ಪಡಿಸುವ ಕಲೆಯಾಗಲಿ, ಪರಿಣಾಮಕಾರಿಯಾಗಿ ಸಂವಹಿಸುವ ಕಲೆಯಾಗಲಿ ಗೊತ್ತಿಲ್ಲ ಎಂಬುದು. ಅವರ ಈ ಹೇಳಿಕೆಯಿಂದ ಮೊದಲಿಗೆ ನನಗೆ ಸ್ವಲ್ಪ ಕಸಿವಿಸಿಯಾಯಿತಾದರೂ ಅವರು ಮಾತನಾಡುತ್ತಿದ್ದುದು ಬರಿ ಎಮ್.ಫಿಲ್. ಪಿ.ಹೆಚ್.ಡಿ ಮಾಡಿದವರ ಬಗ್ಗೆ ಮಾತ್ರ ಎಂದೂ ಹಾಗೂ ನಾನು ಯಾವುದೇ ಎಮ್.ಫಿಲ್. ಪಿ.ಹೆಚ್.ಡಿ ಮಾಡದೇ ಇರುವದರಿಂದ ಆ ಗುಂಪಿಗೆ ಸೇರಲಾರೆ ಎಂದು ತಿಳಿದು ಕೊಂಚ ಸಮಾಧಾನವಾಯಿತು.

ಆದರೂ ನಾನೂ ಒಬ್ಬ ಭಾರತೀಯನಾಗಿದ್ದರಿಂದ ಏಕೋ ಅವಮಾನವಾದಂತೆನಿಸಿ ಥಟ್ಟನೆ "ಬರಿ ಭಾರತೀಯರನ್ನೇಕೆ ದೂರುತ್ತೀರಿ? ಬ್ರೀಟಿಷರು, ಅಮೆರಿಕನ್ನರು, ಲಿಬಿಯನ್ನರು ಯಾರಾದರೂ ಪಿ.ಹೆಚ್.ಡಿ ಮಾಡಿರುವ ಬಹಳಷ್ಟು ಜನರದು ಇದೇ ಕತೆ ಆಗಿರಬಹುದಲ್ಲವೆ?" ಎಂದು ಮರು ಸವಾಲೆಸೆದೆ. ಬಹುಶಃ ಅವರ ಪ್ರಶ್ನೆಗೆ ಅದು ಸರಿಯಾದ ಉತ್ತರ ಆಗಿರದೆ ಇದ್ದುದರಿಂದಲೊ ಅಥವಾ ಮಾತಿನ ಜಟಾಪಟಿಯಲ್ಲಿ ಅವರ ಮಾತಿನ ಧಾಟಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾರದೆ ಹಾಗೆ ಹೇಳಿದ್ದರಿಂದಲೊ ಏನೋ ಅವರೂ ಕೋಪಿಸಿಕೊಂಡು ಚರ್ಚೆ ಆರಂಭವಾಗುವದಕ್ಕೆ ಮುನ್ನ ಎದ್ದು ಹೋದರು. ಮೇಲಾಗಿ ಆ ಚರ್ಚೆ ಯಾವುದೇ ಮುನ್ಸೂಚನೆಯಿಲ್ಲದೆ ಮಾತಿನಭರದಲ್ಲಿ ಇದ್ದಕ್ಕಿದ್ದಂತೆ ಆರಂಭವಾಗಿದ್ದರಿಂದ ಹಾಗೂ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ನನ್ನಲ್ಲಿ ಇರಲಿಲ್ಲವಾದ್ದರಿಂದ ಅವರೊಂದಿಗೆ ಹೆಚ್ಚು ವಾದಕ್ಕೆ ಇಳಿಯಲು ಹೋಗಲಿಲ್ಲ. ಏಕೋ ಅವರ ಮಾತುಗಳು ನನ್ನ ತಲೆಯಲ್ಲಿ ಹುಳುಗಳನ್ನು ಬಿಟ್ಟಿದ್ದವು. ಅವರು ಎದ್ದುಹೋದ ಮೇಲೆ ಈ ಭಾರತಿಯರನ್ನು, ಬ್ರಿಟೀಷರನ್ನು, ಅಮೆರಿಕನ್ನರನ್ನು, ಲಿಬಿಯನ್ನರನ್ನು ಒತ್ತಟ್ಟಿಗಿಟ್ಟು ಸುಮ್ಮನೆ ಈ ಎಮ್.ಫಿಲ್. ಪಿ.ಹೆಚ್.ಡಿ ಡಿಗ್ರಿಗಳ ಕುರಿತು ಗಂಭೀರವಾಗಿ ಯೋಚಿಸತೊಡಗಿದೆ. ಹಾಗೆ ಯೋಚಿಸುತ್ತಾ ಹೋದಂತೆ ನನಗೆ ನನ್ನ ವಿದ್ಯಾರ್ಥಿ ದಿನಗಳು ಮತ್ತು ಅಕ್ಯಾಡೆಮಿಕ್ ದಿನಗಳು ನೆನಪಾದವು.

ನಾನು ಧಾರವಾಡದ ಕಿಟೆಲ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿ.ಯು.ಸಿ. ಓದುತ್ತಿದ್ದಾಗ ನಮಗೊಬ್ಬ ಕನ್ನಡ ಅಧ್ಯಾಪಕರಿದ್ದರು. ಅವರು ಮಾಡಿದ್ದು ಬರಿ ಎಮ್.ಎ. ಆದರೆ ಅವರು ಪಾಠ ಮಾಡುತ್ತಿದ್ದ ರೀತಿಗೆ ತರಗತಿ ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು. ಸಾಮಾನ್ಯವಾಗಿ ಭಾಷಾ ತರಗತಿಗಳನ್ನು ಅಲಕ್ಷಿಸುವ, ಅದರಲ್ಲೂ ಕನ್ನಡ ತರಗತಿಯನ್ನು ಅಲಕ್ಷಿಸುವ ವಿಜ್ಞಾನದ ವಿದ್ಯಾರ್ಥಿಗಳು ಸಹ ಅವರ ತರಗತಿಗೆ ತಪ್ಪದೇ ಹಾಜರಾಗುತ್ತಿದ್ದರು. ಆದರೆ ನಾವು ದ್ವಿತಿಯ ಪಿ.ಯು.ಸಿ.ಗೆ ಬರುವಷ್ಟರಲ್ಲಿ ಆ ಅಧ್ಯಾಪಕರು ಮೂರು ತಿಂಗಳು ಮೆಟರ್ನಿಟಿ ಲೀವ್ ಮೇಲೆ ಹೋಗಬೇಕಾಗಿ ಬಂದಿದ್ದರಿಂದ ಅವರ ಜಾಗಕ್ಕೆ ನಮ್ಮದೇ ಕಾಲೇಜಿನ ಆರ್ಟ್ಸ್ ವಿಭಾಗದಿಂದ ಬೇರೊಬ್ಬ ಕನ್ನಡ ಅಧ್ಯಾಪಕರನ್ನು ಡೆಪ್ಯೂಟ್ ಮಾಡಲಾಯಿತು. ಆಕೆ ಅದಾಗಲೆ ಪಿ.ಹೆಚ್.ಡಿ ಮಾಡಿ ಪತ್ರಿಕೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆದು ಲೇಖಕಿ ಎನಿಸಿಕೊಂಡಾಗಿತ್ತು.

ಆದರೆ ಅವರು ಪಾಠ ಮಾಡುತ್ತಿದ್ದುದು ಎಷ್ಟು ನೀರಸವಾಗಿರುತ್ತಿತ್ತೆಂದರೆ ವಿದ್ಯಾರ್ಥಿಗಳೆಲ್ಲಾ ಅವರನ್ನು ಛೇಡಿಸುತ್ತಾ, ಗೇಲಿಮಾಡುತ್ತಾ ಕಾಲಕಳೆಯುತ್ತಿದ್ದರು. ಇದರರ್ಥ ಅವರಲ್ಲಿ ವಿಷಯ ಜ್ಞಾನ ಏನೇನು ಇರಲಿಲ್ಲವೆಂತಲ್ಲ. ಮೊದಲಿದ್ದ ಅಧ್ಯಾಪಕರಿಗಿಂತ ಹೆಚ್ಚು ವಿಷಯ ಜ್ಞಾನ, ಆಕರ ಸಂಗ್ರಹಣೆ ಅವರಲ್ಲಿತ್ತು. ಆದರೆ ಅದನ್ನು ಸಮರ್ಥವಾಗಿ ಪ್ರಸ್ತುತ ಪಡಿಸುವ ಕಲೆ ಅವರಿಗೆ ಗೊತ್ತಿರಲಿಲ್ಲ. ಏನೋ ಹೇಳಲು ಹೋಗಿ ಏನನ್ನೋ ಹೇಳುತ್ತಿದ್ದರು. ವಿದ್ಯಾರ್ಥಿಗಳೆಲ್ಲಾ ಗೊಳ್ಳೆಂದು ನಕ್ಕು, "ಇವರಿಗೆ ಅದ್ಯಾರು ಪಿ.ಹೆಚ್.ಡಿ ಕೊಟ್ಟರೋ" ಎಂದು ಅಪಹಾಸ್ಯ ಮಾಡುತ್ತಿದ್ದರು. ಇನ್ನು ಇಂಗ್ಲೀಷ ವಿಭಾಗದಲ್ಲಿ ಒಬ್ಬರು ಪಿ.ಹೆಚ್.ಡಿ ಮಾಡಿದವರು, ಇನ್ನೊಬ್ಬರು ಬರಿ ಎಮ್.ಎ ಮಾಡಿದವರಿದ್ದರು. ಬರಿ ಎಮ್.ಎ ಮಾಡಿದ ಅಧ್ಯಾಪಕರು ಆಕರ್ಷಕವಾಗಿ ಪಾಠ ಮಾಡಿದಷ್ಟು ಈ ಪಿ.ಹೆಚ್.ಡಿ ಅಧ್ಯಾಪಕರು ಮಾಡುತ್ತಿರಲಿಲ್ಲ. ಇವರು ವಿದ್ಯಾರ್ಥಿಗಳ ಗ್ರಹಿಕೆಗೆ ಯಾವತ್ತೂ ನಿಲುಕುತ್ತಿರಲಿಲ್ಲ. ಅಲ್ಲದೇ ಗಣಿತ ವಿಭಾಗದಲ್ಲಿ ಇದ್ದ ಮೂವರು ಅಧ್ಯಾಪಕರಲ್ಲಿ ಇಬ್ಬರು ಬರಿ ಎಮ್.ಎಸ್ಸಿ. ಪದವಿಯಲ್ಲೇ ತೃಪ್ತಿಪಟ್ಟುಕೊಂಡು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಇನ್ನೊಬ್ಬರು ಪಿ.ಹೆಚ್.ಡಿ. ಹುಚ್ಚು ಹಿಡಿಸಿಕೊಂಡು ಸರಿಯಾಗಿ ತರಗತಿಗಳನ್ನು ತೆಗೆದುಕೊಳ್ಳದೆ ಕೊನೆಗೂ ಪಟ್ಟು ಹಿಡಿದು ಪಿ.ಹೆಚ್.ಡಿ ಮುಗಿಸಿ ಕ್ಲಾಸ್ ರೂಮ್‌ಗೆ ಬಂದಾಗ ನಮಗೆ ಅಂಥ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ.

ನಾನು ಮುಂದೆ ವಿಜ್ಞಾನವನ್ನು ಬಿಟ್ಟು ಆರ್ಟ್ಸ್ ತೆಗೆದುಕೊಂಡು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಇಂಗ್ಲೀಷ ವಿಭಾಗಕ್ಕೆ ಸೇರಿಕೊಂಡಾಗಲೂ ಈ ಪಿ.ಹೆಚ್.ಡಿ ಮಾಡಿರುವ ಅಧ್ಯಾಪಕರಿಂದ ಅಂಥ ವಿಶೇಷವಾದದ್ದೇನೂ ಲಭಿಸಲಿಲ್ಲ. ನಮ್ಮ ವಿಭಾಗದಲ್ಲಿ ಇದ್ದ ಎಂಟು ಜನ ಅಧ್ಯಾಪಕರಲ್ಲಿ ಆರು ಜನ ಬರಿ ಎಮ್.ಎ ಮಾಡಿದವರು. ಒಬ್ಬರು ಅದಾಗಲೆ ಪಿ.ಹೆಚ್.ಡಿ ಮಾಡಿ ಮುಗಿಸಿ ಬಹಳ ವರ್ಷಗಳಾಗಿದ್ದವು. ಆದರೆ ಇನ್ನೊಬ್ಬರು ಅರ್ಧ ಮಾಡಿ ಮುಗಿಸಿದ್ದರು. ಈ ಪಿ.ಹೆಚ್.ಡಿ ಅಧ್ಯಾಪಕರು ಚನ್ನ್ನಾಗಿ ಪಾಠವನ್ನೇನೋ ಮಾಡುತ್ತಿದ್ದರು. ಆದರೆ ಉಳಿದ ಅಧ್ಯಾಪಕರಂತೆ ಎಲ್ಲ ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿರಲಿಲ್ಲ. ಇನ್ನೊಬ್ಬ ಪಿ.ಹೆಚ್.ಡಿ. ಮಾಡುತ್ತಿರುವ ಮಹಾಶಯರು ಪಠ್ಯದಲ್ಲಿ ಅಳವಡಿಸಿರುವ ಪದ್ಯದ ಬಗ್ಗೆ ಉಪನ್ಯಾಸವನ್ನು ಆರಂಭಿಸಿ ಇದ್ದಕಿದ್ದಂತೆ ಇನ್ಯಾವುದೆ ವಿಷಯಕ್ಕೆ ಜಿಗಿದು ಕೊನೆಗೆ ಆ ಪದ್ಯಕ್ಕೆ ಏನೇನೂ ಸಂಬಂಧವಿಲ್ಲದ ತಮ್ಮ ಪಿ.ಹೆಚ್.ಡಿ ವಿಷಯದ ಬಗ್ಗೆ ಮಾತನಾಡಿ ಕ್ಲಾಸನ್ನು ಮುಗಿಸುತ್ತಿದ್ದರು. ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರು ಪಿ.ಹೆಚ್.ಡಿ ಹೇಗೆ ಮಾಡಬೇಕೆಂದು ತಲೆಕೆಡಿಸಿಕೊಳ್ಳದೆ ಸದಾ ಪಾಠ ಹೇಗೆ ಮಾಡಬೇಕೆಂದು ಯೋಚಿಸುತ್ತಾ ಗಂಟೆಗಟ್ಟಲೆ ತಯಾರಾಗಿ ಬಂದು ಶೇಕ್ಷಪೀಯರ್‌ನ "ಮ್ಯಾಕ್‌ಬೆತ್" ನಾಟಕ ಮಾಡುತ್ತಿದ್ದರೆ ನಮಗೆ ನಾಟಕ ನೋಡಿದಷ್ಟೆ ಖುಶಿಯಾಗುತ್ತಿತ್ತು. ಬರ್ನಾಡ್ ಶಾನ "ಪಿಗ್ಮ್ಯಾಲಿನ್" ನಾಟಕದ ವಸ್ತುವನ್ನು ಅವರಷ್ಟು ಚನ್ನಾಗಿ ವಿಶ್ಲೇಷಿದಷ್ಟು ಬಹುಶಃ ಬರ್ನಾಡ್ ಶಾನ ನಾಟಕಗಳ ಮೇಲೆ ಪಿ.ಹೆಚ್.ಡಿ. ಮಾಡಿದವರು ಸಹ ಅಷ್ಟು ಚನ್ನಾಗಿ ವಿಶ್ಲೇಷಿಕ್ಕಿಲ್ಲ. ಇನ್ನೊಬ್ಬ ಇಂಗ್ಲೀಷ ಅಧ್ಯಾಪಕರು ತಮ್ಮ ಎಮ್.ಎ. ಡಿಗ್ರಿ ಜೊತೆಗೆ ದೆಹಲಿಯ ನಾಟಕ ಶಾಲೆಯಲ್ಲಿ ತರಬೇತಿ ಮುಗಿಸಿ ಬಂದಿದ್ದರಷ್ಟೆ.

ಆದರೆ ಹೆನ್ರಿಕ್ ಇಬ್ಸನ್‌ನ "ಎ ಡಾಲ್ಸ್ ಹೌಸ್" ನಾಟಕದ ನೋರಾಳ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿ ಪಾಠ ಮಾಡುತ್ತಿದ್ದರೆ ನಾವೆಲ್ಲಾ ರೋಮಾಂಚಿತರಾಗುತ್ತಿದ್ದೆವು. ಇನ್ನು ಇತಿಹಾಸ ವಿಭಾಗದಲ್ಲಿದ್ದ ಒಬ್ಬ ಪ್ರಾಧ್ಯಾಪಕರಿಗೆ ಯಾವುದೇ ಪಿ.ಹೆಚ್.ಡಿ.ಗಳಿರಲಿಲ್ಲ. ಅದನ್ನು ಮಾಡಬೇಕೆಂಬ ಮೂಡು ಸಹ ಅವರಿಗೆ ಇರಲಿಲ್ಲ. ಆದರೆ ಅವರು ಇತಿಹಾಸವನ್ನು ಪ್ರಸ್ತುತ ಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಹಿನ್ನೆಲೆಯಲ್ಲಿ ಚರ್ಚಿಸುತ್ತಿದ್ದರೆ, ಇತಿಹಾಸಕಾರರಿಗೂ ಗೊತ್ತಿರದ ಕೆಲವು ಸತ್ಯಗಳನ್ನು ಹೇಳುತ್ತಿದ್ದರೆ ನಾವೆಲ್ಲಾ ಬೆಕ್ಕಸ ಬೆರಗಾಗಿ ಕೇಳುತ್ತಿದ್ದೆವು. ಅಷ್ಟೇ ಅಲ್ಲದೆ ಅವರಿಗೆ ಇತಿಹಾಸವನ್ನಲ್ಲದೆ ಬೇರೆಲ್ಲ ವಿಷಯಗಳ ಬಗ್ಗೆ ಅಪಾರವಾದ ಜ್ಞಾನವಿತ್ತು. ಹೀಗಾಗಿ ನಾವು ಅವರನ್ನು 'ವಾಕಿಂಗ್ ಎನ್‌ಸೈಕ್ಲೋಪೀಡಿಯಾ' ಎಂದು ಕರೆಯುತ್ತಿದ್ದೆವು.

ಮುಂದೆ ನಾನು ಎಮ್.ಎ. ಮಾಡಿ ಅಧ್ಯಾಪಕನಾಗಿ ವೃತ್ತಿ ಬದುಕು ಆರಂಭಿಸಿದಾಗ ಶೈಕ್ಷಣಿಕ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಪಿ.ಹೆಚ್.ಡಿ ಮಾಡುವದು ಸಾಮಾನ್ಯವಾಗಿ ಕಾಲೇಜೊಂದರಲ್ಲಿಯೇ ಪಿ.ಹೆಚ್.ಡಿ ಮಾಡಿದವರು ಕನಿಷ್ಟಕ್ಷ ಎರಡು ಅಥವಾ ಮೂರು ಜನ ಇರುತ್ತಿದ್ದರು. ಆಗೆಲ್ಲಾ ನನಗೆ ಈ ಪಿ.ಹೆಚ್.ಡಿ ಮಾಡಿದವರೊಂದಿಗೆ ಭಿನ್ನ ರೀತಿಯ ಅನುಭವಗಳಾಗಿವೆ. ನಾನು ಕೆಲಸ ಮಾಡುತ್ತಿದ್ದ ಕಾಲೇಜೊಂದರಲ್ಲಿ ಪಿ.ಹೆಚ್.ಡಿ ಮಾಡಿದ ಎಷ್ಟೋ ಜನಕ್ಕೆ ಸರಿಯಾಗಿ ಇಂಗ್ಲೀಷನಲ್ಲಿ ಮಾತನಾಡುವದಕ್ಕೆ ಬರುವದಿರಲಿ ಒಂದು ವಾಕ್ಯವನ್ನೂ ಸಹ ತಪ್ಪಿಲ್ಲದೆ ಬರೆಯಲು ಬರುತ್ತಿರಲಿಲ್ಲ. ಆದರೂ ಅವರು ಎರಡು ಕೊಂಬುಗಳು ಬಂದವರಂತೆ ವರ್ತಿಸುತ್ತಾ ನಮ್ಮನ್ನೆಲ್ಲಾ ತಮ್ಮ ಗುಂಪಿನಿಂದ ಹೊರಗೆ ಇಟ್ಟಿದ್ದರು. ನಾನು ಬೆಂಗಳೂರಿನ ಪ್ರತಿಷ್ಟಿತ ಇಂಜನೀಯರಿಂಗ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುವಾಗ ಸಮಮೊತ್ತದ ಅನುಭವವಿದ್ದಾಗ್ಯೂ ನನಗೆ ಪಿ.ಹೆಚ್.ಡಿ ಇಲ್ಲ ಎನ್ನುವ ಕಾರಣಕ್ಕೆ ಸಂಬಳದಲ್ಲಿ ಹಿಂದೇಟು ಬಿದ್ದಿದೆ. ಆಗೆಲ್ಲಾ ನಾನು 'ಈ ಪಿ.ಹೆಚ್.ಡಿ ಮಾದಿದವರು ಅಂಥಾ ವಿಶೇಷವಾದದ್ದೇನೂ ಕಲಿಸುವದಿಲ್ಲವಲ್ಲ? ಆದರೂ ಏಕೆ ಈ ತಾರತಮ್ಯ?' ಎಂದು ಬೇಸರಪಟ್ಟುಕೊಂಡಿದ್ದಿದೆ. ಬರುಬರುತ್ತಾ ಪಿ.ಹೆಚ್.ಡಿ ಮಾಡುವದು ಸರ್ವೇಸಾಮಾನ್ಯವಾಗಿ ಪ್ರತಿಷ್ಟಿತ ಕಾಲೇಜುಗಳಲ್ಲಿ ಪಿ.ಹೆಚ್.ಡಿ ಮಾಡಿದವರನ್ನೇ ತೆಗೆದುಕೊಳ್ಳುವಂತಾಯಿತು. ಒಂದು ಸಾರಿ ನಾನು ಬೆಂಗಳೂರಿನ ಪ್ರತಿಷ್ಟಿತ ಖಾಸಗಿ ಕಾಲೇಜೊಂದರ ಸಂದರ್ಶನಕ್ಕೆ ಹಾಜರಾದಾಗ "ಅಯ್ಯೋ, ನೀವಿನ್ನೂ ಪಿ.ಹೆಚ್.ಡಿ ಮಾಡಿಲ್ಲವೆ? ಈ ಫೀಲ್ಡ್‌ಗೆ ಬಂದು ಏಳು ವರ್ಷ ಆಯ್ತು. ಹೋಗಲಿ ಎಮ್.ಫಿಲ್. ಆದ್ರೂ ಮಾಡಿಕೊಳ್ಳಿ" ಎಂದು ನನ್ನನ್ನು ಅಸ್ಪೃಶ್ಯರನ್ನು ಕಾಣುವಂತೆ ಕಂಡು ಪುಕ್ಕಟ್ಟೆ ಉಪದೇಶವನ್ನು ಕೊಟ್ಟು ಕಳಿಸಿದರೆ ಹೊರತು ಅವರಿಗೆ ನನ್ನ ಬೇರೆಲ್ಲ ಕೌಶಲ್ಯಗಳು ಕಾಣಿಸದೆ ನನ್ನನ್ನು ಆಯ್ಕೆ ಮಾಡಲಿಲ್ಲ.

ಒಂದು ಸಾರಿ ನಮ್ಮ ಕಾಲೇಜಿನಲ್ಲಿ ಬಿ.ಎ. ತರಗತಿಗೆ ಬಸವಣ್ಣ ಮತ್ತು ಅಲ್ಲಮಪ್ರಭುವಿನ (ಇಂಗ್ಲೀಷ ಅನುವಾದ) ವಚನಗಳ ಹಿನ್ನೆಲೆಯಲ್ಲಿ 'ಕಲ್ಚರ್ ಯಾಂಡ್ ಸೊಸಾಯಿಟಿ'ಯ ಮೇಲೆ ಉಪನ್ಯಾಸವನ್ನೇರ್ಪಡಿಸಿದ್ದೆವು. ಅಲ್ಲಿ ಮಾತನಾಡಲು ಪಿ.ಹೆಚ್.ಡಿ ಪ್ರಾಧ್ಯಾಪಕರೊಬ್ಬರನ್ನು ಆಹ್ವಾನಿಸಿದ್ದೆವು. ಅವರು ಅದಾಗಲೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸೆಮಿನಾರುಗಳಲ್ಲಿ ಪ್ರಬಂಧ ಮಂಡಿಸಿ ಬಂದಿದ್ದರು. ವಿದ್ಯಾರ್ಥಿಗಳು ಮತ್ತು ನಾವೆಲ್ಲಾ ಅವರು ಏನು ಮಾತನಾಡಬಹುದೆಂದು ಭಾರಿ ಕುತೂಹಲದಿಂದ ಕಾಯುತ್ತಾ ಕುಳಿತಿದ್ದೆವು. ಕೊನೆಗೂ ಅವರ ಭಾಷಣ ಶುರುವಾಯಿತು. ಶುರುವಾದ ಮೊದಲ ಅರ್ಧಗಂಟೆ ಅವರು ವಿಷಯದ ಮೇಲೆ ಕೇಂದ್ರಿಕೃತರಾಗಿದ್ದರು. ಆನಂತರ ಎಲ್ಲೆಲ್ಲೋ ಜಿಗಿದು ಏನೇನೋ ಹೇಳಿ ಒಂದು ಗಂಟೆಯಲ್ಲಿ ಮುಗಿಸಬೇಕಿದ್ದ ಭಾಷಣವನ್ನು ಮೂರು ಗಂಟೆಗಳವರೆಗೆ ಕೊರೆದು ಕೊನೆಗೂ ಮುಗಿಸುವಷ್ಟರಲ್ಲಿ ವಿದ್ಯಾರ್ಥಿಗಳಲ್ಲದೆ ನಾವೂ ಸುಸ್ತಾಗಿದ್ದೆವು. ಇನ್ನೊಂದು ಸಾರಿ ನಮ್ಮ ಕಾಲೇಜಿನ ಇಂಗ್ಲೀಷ ವಿಭಾಗದಿಂದ "ದಿ ಇಂಪ್ಯಾಕ್ಟ ಆಫ್ ವೆರ್ನ್ಯಾಕುಲರ್ ಆನ್ ಲರ್ನಿಂಗ್ ಆಫ್ ಇಂಗ್ಲೀಷ ಲಾಂಗ್ವೇಜ್" ಎನ್ನುವ ವಿಷಯದ ಮೇಲೆ ರಾಜ್ಯಮಟ್ಟದ ಸೆಮಿನಾರೊಂದನ್ನು ಏರ್ಪಡಿಸಿದ್ದೆವು. ಅಲ್ಲಿ ಮಾತನಾಡಲು ಒಟ್ಟು ಆರು ಜನ ಪಿ.ಹೆಚ್.ಡಿ. ಪ್ರಾಧ್ಯಾಪಕರನ್ನು ಆಹ್ವಾನಿಸಿದ್ದೆವು. ಅವರಲ್ಲಿ ಇಬ್ಬರು ಮಾತ್ರ ಎಷ್ಟನ್ನು ಹೇಳಬೇಕೋ, ಏನನ್ನು ಹೇಳಬೇಕೋ ಅಷ್ಟನ್ನು ಮಾತ್ರ ಹೇಳಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಉಳಿದ ನಾಲ್ಕು ಜನರಲ್ಲಿ ಮೂರು ಜನರ ಮಾತುಗಳು ತಲೆಯ ಮೇಲೆ ಹಾರಿಹೋದರೆ ಒಬ್ಬರ ಮಾತುಗಳಂತೂ ನಮ್ಮ ಮೊಣಕಾಲಿನಿಂದ ಮೇಲೇರುವ ಸ್ಥಿತಿಯಲ್ಲೂ ಇರಲಿಲ್ಲ.

ಒಮ್ಮೆ ನಮ್ಮ ಕಾಲೇಜಿಗೆ ನ್ಯಾಕ್ (Naac) ಕಮೀಟಿ ಬಂದಾಗ ನಮ್ಮ ಇಂಗ್ಲೀಷ ವಿಭಾಗದ ಮುಖ್ಯಸ್ಥರನ್ನು "ನೀವು ವಿಭಾಗದ ಮುಖ್ಯಸ್ಥರಾಗಿಯೂ ಇನ್ನೂ ಪಿ.ಹೆಚ್.ಡಿ ಮಾಡಿಲ್ಲವೆ?" ಎಂದು ಕಮೀಟಿ ಅವರನ್ನು ನೇರವಾಗಿ ಕೇಳಿತ್ತು. ಅದಕ್ಕವರು ತಾಳ್ಮೆಯಿಂದ "ಪಿ.ಹೆಚ್.ಡಿ. ಮಾಡಿದರೆ ನನಗೊಂದು ಇನ್ಕ್ರೀಮೆಂಟ್ ಸಿಗುವದು ಬಿಟ್ಟರೆ ಅದರಿಂದ ವಿದ್ಯಾರ್ಥಿಗಳಿಗಾಗಲಿ, ನನಗಾಗಲಿ ಬೇರೆ ಇನ್ಯಾವುದೇ ಪ್ರಯೋಜನವಾಗುವದಿಲ್ಲ" ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದರು.

ಅವರ ಮಾತಿನಲ್ಲಿ ಎಷ್ಟೊಂದು ಸತ್ಯ ಅಡಗಿದಲ್ಲವೆ? ಎಮ್.ಫಿಲ್. ಅಥವಾ ಪಿ.ಹೆಚ್.ಡಿಗಳನ್ನು ಹೊಂದಿರುವ ಅಧ್ಯಾಪಕನ ಪಾಠಗಳು ನಿಜಕ್ಕೂ ವಿದ್ಯಾರ್ಥಿಗಳ ಮೇಲೆ ವಿಶೇಷವಾದ ಪರಿಣಾಮ ಬೀರುತ್ತವೆಯೆ? ಅವರ ಪಿ.ಹೆಚ್.ಡಿಗಳಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆಯೆ? ಆ ಡಿಗ್ರಿಗಳು ಬೇಕೆ? ಅವುಗಳ ಅವಶ್ಯಕತೆಯಿದೆಯೆ? ಅವನ್ನೇ ಮಾನದಂಡವಾಗಿಟ್ಟುಕೊಂಡು ಸಂಬಳದ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವದು ಸರಿಯೆ? ಕಲಿಸುವಿಕೆಗೂ ಸಂಶೋಧನೆ ಮಾಡುವದಕ್ಕೂ ಏನಾದರು ಸಂಬಂಧವಿದೆಯೆ? ಅಸಲಿಗೆ ಪಿ.ಹೆಚ್.ಡಿ ಎಂದರೆ ಯಾವುದೇ ಒಂದು ನಿರ್ದಿಷ್ಟ ವಿಷಯದ ಮೇಲೆ ಸಂಶೋಧನೆ ಮಾಡುವ ರಿಸರ್ಚ್ ಡಿಗ್ರಿಯೇ ಹೊರತು ಟೀಚಿಂಗ್ ಡಿಗ್ರಿ ಅಲ್ಲವೇ ಅಲ್ಲ. ಇದರರ್ಥ ಇವತ್ತು ಕಾಲೇಜುಗಳಲ್ಲಿ, ಯೂನಿವರ್ಸಿಟಿಗಳಲ್ಲಿ ಅಧ್ಯಾಪಕರನ್ನು ಹೇಗೆ ರಿಸರ್ಚ್ ಮಾಡಬೇಕೆಂದು ತರಬೇತಿಗೊಳಿಸಲಾಗುತ್ತಿದೆಯೇ ಹೊರತು ಹೇಗೆ ಕಲಿಸಬೇಕೆಂದು ತರಬೇತಿಗೊಳಿಸಲಾಗುತ್ತಿಲ್ಲ. ದುರಂತವೆಂದರೆ ಇವತ್ತು ಅಕ್ಯಾಡೆಮಿಕ್ ವಿಭಾಗದಲ್ಲಿ ಪಿ.ಹೆಚ್.ಡಿ ಮಾಡುವದು ಒಂದು ದೊಡ್ಡ ಸಾಧನೆಯೆಂಬಂತೆ, ದೊಡ್ಡ ಕ್ವಾಲಿಫಿಕೇಶನ್ ಎಂಬಂತೆ ಬಿಂಬಿಸಲಾಗುತ್ತಿದೆ. ನೇಮಕಾತಿ ಸಂದರ್ಭದಲ್ಲಿ ಈ ಡಿಗ್ರಿಗಳನ್ನೇ ಮಾನದಂಡವಾಗಿಟ್ಟುಕೊಂಡು ಅಂಥವರಿಗೆ ಆದ್ಯತೆ ಕೊಡಲಾಗುತ್ತಿದೆ.

ಪಿ.ಹೆಚ್.ಡಿ ಮಾಡದಿದ್ದರೆ ಅಧ್ಯಾಪಕನ ಕೆಲಸಕ್ಕೆ ಅರ್ಜಿ ಹಾಕಲೂ ಯೋಗ್ಯನಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಇಂಥ ವಾತಾವರಣ ಅವಶ್ಯವಾಗಿ ಹೋಗಬೇಕಾಗಿದೆ. ಈಗೀಗ ಮುಂದುವರೆದ ರಾಷ್ಟ್ರಗಳು ಒಬ್ಬ ಅಧ್ಯಾಪಕನ ಪಿ.ಹೆಚ್.ಡಿಗೂ ಹಾಗೂ ಆತ ಪಾಠ ಮಾಡುವದಕ್ಕೂ ಏನೂ ಸಂಬಂಧವಿಲ್ಲವೆಂದು ತಿಳಿದು ಅವುಗಳನ್ನು ಕೈಬಿಡಲಾಗುತ್ತಿದೆ. ಬರಿ ಕೌಶಲ್ಯ, ಸಾಮಾರ್ಥ್ಯಗಳ ಆಧಾರದ ಮೇಲೆ ಮಾತ್ರ ಶಿಕ್ಷಕರನ್ನು ನೇಮಿಸಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಿವೆ. ಇದರರ್ಥ ಪಿ.ಹೆಚ್.ಡಿ ಮಾಡುವದನ್ನು ಆಯಾ ಅಧ್ಯಾಪಕನ ಆಸಕ್ತಿಗೆ ಬಿಡಲಾಗುತ್ತಿದೆಯೇ ಹೊರತು ಖಡ್ಡಾಯಗೊಳಿಸುವದಾಗಲಿ ಹಾಗೂ ಅದನ್ನೇ ಮಾನದಂಡವಾಗಿಸಿ ಕೆಲಸಕ್ಕೆ ತೆಗೆದುಕೊಳ್ಳುವದನ್ನಾಗಲಿ ಮಾಡುತ್ತಿಲ್ಲ. ಭಾರತದಲ್ಲೂ ಇದೆ ಪರಿಪಾಠವನ್ನು ಅನುಸರಿಸಲು ಆಗುವದಿಲ್ಲವೆ? ಕಾಲೇಜುಗಳು, ಯೂನಿವರ್ಷಿಟಿಗಳು ಇದರ ಬಗ್ಗೆ ಗಂಭೀರವಾಗಿ ಯೋಚಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡಲಾರವೆ? ಈ ಬಗ್ಗೆ ಶಿಕ್ಷಣ ತಜ್ಞರು, ಬುದ್ಧಿ ಜೀವಿಗಳು ಏನು ಹೇಳುತ್ತಾರೆ?

******
ಲೇಖಕರ ಪರಿಚಯ : ಮೂಲತಃ ಕೊಪ್ಪಳ ಜಿಲ್ಲೆಯ ಮುಧೋಳದವರಾದ ಉದಯ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೆಲವು ಕವಿತೆ, ಲೇಖನಗಳು ಆನ್‌ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ದಟ್ಸ್ ಕನ್ನಡ ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

ಪೂರಕ ಓದಿಗೆ
ಯಡಿಯೂರಪ್ಪ ಇದೀಗ ಡಾ.ಯಡಿಯೂರಪ್ಪಪ್ರಣಯರಾಜ ಶ್ರೀನಾಥ್ ಗೆ ಗೌರವ ಡಾಕ್ಟರೇಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X