ಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!

ಅಮೆರಿಕಾದ ನಾನಾ ಭಾಗಗಳಲ್ಲಿ ನೆಲೆಸಿರುವ ಹಲವಾರು ಸಮಾನಮನಸ್ಕ ಕನ್ನಡಿಗರು ಅಕ್ಕದಿಂದ ದೂರ ನಿಂತು ಪ್ರತ್ಯೇಕ ಅಸ್ತಿತ್ವ ಹೊಂದಲು ನಿರ್ಧರಿಸಿದ್ದಾರೆ. ಅಕ್ಕಗೆ ಪರ್ಯಾಯವಾಗಿ ಹೊಸ ಸಂಸ್ಥೆ ಹುಟ್ಟುಹಾಕಲೂ ತೀರ್ಮಾನ ಕೈಗೊಳ್ಳಲಾಗಿದ್ದು ಹೊಸ ಸಂಸ್ಥೆಯ ರೂಪುರೇಷೆಗಳು ಸದ್ಯದಲ್ಲೇ ಹೊರಬೀಳಲಿದೆ. ಅಕ್ಕ ಪರಿವಾರದ ಭಿನ್ನಮತೀಯ ನಾಯಕರಲ್ಲಿ ಇಬ್ಬರಾಗಿರುವ ಎಂ. ಕೃಷ್ಣಮೂರ್ತಿ ಮತ್ತು ಸುರೇಶ್ ರಾಮಚಂದ್ರನ್ ಅವರು ಈ ಬಗ್ಗೆ ಒಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅದರ ಸಾರಾಂಶ ಕೆಳಕಂಡಂತಿವೆ.
* ಉತ್ತರ ಅಮೆರಿಕದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದ ಹೊಸ ಸಂಸ್ಥೆ ಸದ್ಯದಲ್ಲೇ ಉದಯವಾಗಲಿದೆ.
* ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಾವೆಲ್ಲ ಅಕ್ಕ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಈಡೇರಿಸುವ ಸಲುವಾಗಿ ಅಹರ್ನಿಶಿ ದುಡಿದ್ದೇವೆ. *ಅಮೆರಿಕಾ ನೆಲದಲ್ಲಿ ಒಟ್ಟು ಐದು ವಿಶ್ವ ಕನ್ನಡಿಗರ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲು ಕಾಯಾವಾಚಾಮನಸಾ ಶ್ರಮಿಸಿದ್ದೇವೆ.
* ಆದರೆ, ಅಕ್ಕ ಈಗ ಅಕ್ಕ ಆಗಿ ಉಳಿದಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಗೆ ಸಿಲುಕಿ ನಲಗುತ್ತಿದೆ.
* ಕೆಲ ನಾಯಕರ ವೈಯಕ್ತಿಕ ತೆವಲುಗಳು ಮತ್ತು ಖಾಸಗಿ ಉದ್ದೇಶಗಳ ಈಡೇರಿಕೆಗೆ ಸಂಸ್ಥೆಯು ವೇದಿಕೆಯಾಗಿ ಮಾರ್ಪಟ್ಟಿದೆ.
* ಕೆಲ ನಾಯಕರು ಅಧಿಕಾರದ ಲಾಲಸೆಯಿಂದ ಅಕ್ಕ ಪದಾಧಿಕಾರಿಗಳ ಚುನಾವಣೆಯಲ್ಲಿ ಆಕ್ರಮಗಳನ್ನು ನಡೆಸಿದ್ದಾರೆ.
* ಅಧಿಕಾರ ಹಿಡಿಯಬೇಕು ಎಂಬ ಏಕಮೇವ ಉದ್ದೇಶದಿಂದ ಮತ ಬ್ಯಾಂಕುಗಳನ್ನು ನಿರ್ಮಿಸಿಕೊಂಡು ತನ್ಮೂಲಕ ಆಯ್ಕೆಯಾಗಿದ್ದಾರೆ.
* ಈ ಎಲ್ಲ ಅಹಿತಕರ ಬೆಳವಣಿಗೆಗಳ ಪರಿಣಾಮವಾಗಿ ಅಕ್ಕ ಸಂಸ್ಥೆಗೆ ನಿಷ್ಠರಾಗಿದ್ದ ನಮ್ಮಂಥ ಅನೇಕ ಕಾರ್ಯಕರ್ತರಿಗೆ ತೀವ್ರ ನಿರಾಸೆಯಾಗಿದೆ. ಹೇಗಾದರೂ ಮಾಡಿ ಅಕ್ಕದ ತಪ್ಪುಗಳನ್ನು ಸರಿಪಡಿಸಿ ಸಂಸ್ಥೆಯನ್ನು ಸರಿದಾರಿಗೆ ತರಬೇಕೆಂಬ ನಮ್ಮ ಅವಿರತ ಪ್ರಯತ್ನಗಳು ವಿಫಲವಾಗಿವೆ.
* ಇಂಥ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾವು ಅಕ್ಕದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲದಂಥ ಸನ್ನಿವೇಶ ನಿರ್ಮಾಣವಾಗಿದೆ.
* ಅಕ್ಕ ತೊರೆದು ನಾವೆಲ್ಲ ಹೊಸ ಸಂಸ್ಥೆ ಕಟ್ಟಲು ಕಂಕಣ ಬದ್ಧರಾಗಿದ್ದೇವೆ. ಅಮೆರಿಕನ್ನಡಿಗರ ಆಶೋತ್ತರಗಳೇ ನಮ್ಮ ಆಶೋತ್ತರ.
* ಸಮಾನಮನಸ್ಕರಾದ ಈ ಕೆಳಗೆ ನಮೂದಿಸಿರುವ ನಾವೆಲ್ಲರೂ ಒಗ್ಗಟ್ಟಿನಿಂದ ವಿಶ್ವಕನ್ನಡಿಗರನ್ನು ಸಂಘಟಿಸಲು ಶ್ರಮಿಸುತ್ತೇವೆ.
* ನಾವು ಕಟ್ಟಲಿರುವ ಹೊಸ ಸಂಸ್ಥೆ ಸದ್ಯದಲ್ಲೇ ವಿದ್ಯುಕ್ತವಾಗಿ ಆರಂಭವಾಗುತ್ತದೆ. ಅದರ ಕಾರ್ಯಚಟುವಟಿಕೆಗಳನ್ನು ನಿಮಗೆ ತಿಳಿಯಪಡಿಸಲಾಗುತ್ತದೆ.
ನಿಮ್ಮ ವಿಶ್ವಾಸಿಗಳು,
ಶರಣಬಸವ ರಾಜುರ್, ಬೋಸ್ಟನ್, ಮೆಸಾಚುಸೆಟ್ಸ್: ಅಕ್ಕ ಮಾಜಿ ಉಪಾಧ್ಯಕ್ಷ.
ಡಾ. ರೇಣುಕಾ ರಾಮಪ್ಪ, ಟಾಂಪಾ, ಫ್ಲಾರಿಡಾ: ಅಕ್ಕ ಮಾಜಿ ಉಪಾಧ್ಯಕ್ಷೆ, ಆರ್ಲಾಂಡೋ ಸಮ್ಮೇಳನ(2004)ದ ಅಧ್ಯಕ್ಷೆ.
ಸುರೇಶ್ ರಾಮಚಂದ್ರನ್, ಮೇರಿಲ್ಯಾಂಡ್: ಬಾಲ್ಟಿಮೋರ್ ಸಮ್ಮೇಳನ(2006)ದ ಸಂಯೋಜಕ, ಅಕ್ಕ ಉಪಾಧ್ಯಕ್ಷ.
ಡಾ. ಕೇಶವ ಬಾಬು, ಟಾಂಪಾ, ಫ್ಲಾರಿಡಾ: ಅಕ್ಕ ಮಾಜಿ ನಿರ್ದೇಶಕ ಮತ್ತು ಬೈ ಲಾ ಕಮಿಟಿ ಅಧ್ಯಕ್ಷ.
ಡಾ. ರಾಮಕೃಷ್ಣ, ಅಕ್ಕ ನಿರ್ದೇಶಕ: ಫೀನಿಕ್ಸ್ ಅಕ್ಕ ಸಮ್ಮೇಳನ(1998)ದ ಅಧ್ಯಕ್ಷ.
ಎಮ್. ಕೃಷ್ಣಮೂರ್ತಿ, ಬೆಂಗಳೂರು, ಅಕ್ಕ ನಿರ್ದೇಶಕ: ಅಕ್ಕ ಮಾಜಿ ಖಜಾಂಚಿ.
ವಲ್ಲೀಶ ಶಾಸ್ತ್ರಿ, ಲಾಸ್ ಏಂಜಲೀಸ್ :ರಂಗಕರ್ಮಿ, ಅಕ್ಕದ ಸಕ್ರಿಯ ಕಾರ್ಯಕರ್ತ.
ಶ್ರೀಮತಿ ಉಮಾ ಜಯಸ್ವಾಮಿ, ಶಿಕಾಗೋ, ಇಲಿನಾಯ್.
ವೀರ ಮಾರೇ ಗೌಡ, ಬೆಂಗಳೂರು : ಅಕ್ಕದ ಮಾಜಿ ಕರ್ನಾಟಕ ರಾಯಭಾರಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications