ಹಾಂಗ್ಕಾಂಗ್ ಕನ್ನಡಿಗರ ಬೆಸೆದ ಯುಗಾದಿ ಬೇವು-ಬೆಲ್ಲ!
ಸರ್ವಜಿತು
ಸಂವತ್ಸರವನ್ನು
ಸಂಭ್ರಮದಿಂದ
ಸ್ವಾಗತಿಸಿದ
ಇಲ್ಲಿನ
ಕನ್ನಡಿಗರು,
ಅಂದು
ತವರಿನಲ್ಲಿದ್ದಂತೆಯೇ
ಸಂಭ್ರಮಿಸಿದರು.
- ಗುರುಮೂರ್ತಿ ಹೆಗಡೆ, ಹಾಂಗ್ಕಾಂಗ್
‘‘ಯುಗ ಯುಗಾದಿ ಕಳೆದರೂ ಯುಗದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’’ ಎಂಬ ಕವಿವಾಣಿ ಹಾಂಗ್ ಕಾಂಗ್ ಕನ್ನಡಿಗರಿಗರಲ್ಲಿ ಹೊಸ ಉತ್ಸಾಹ ಚಿಮ್ಮಿಸುತ್ತಿತ್ತು.
ವಿಘ್ನನಿವಾರಕ ವಿಘ್ನೕಶ್ವರನ ಪೂಜೆಯಿಂದ ಆರಂಭಗೊಂಡ ಕಾರ್ಯಕ್ರಮ ರಾಷ್ಟ್ರಗೀತೆಯಾಂದಿಗೆ ಮುಕ್ತಾಯಗೊಂಡಿತು. ಪೂಜೆ ನಂತರ ಎಲ್ಲರಿಗೂ ಬೇವು ಬೆಲ್ಲ ವಿತರಿಸಲಾಯಿತು. ಮೊದಲಿಗೆ ಪ್ರಸಕ್ತ ಸಾಲಿನ ಕನ್ನಡ ಸಂಘದ ಅಧ್ಯಕ್ಷ ರಾಜೇಶ ಕುಲಕರ್ಣಿ ಅವರು ಸಭಿಕರನ್ನು ಸ್ವಾಗತಿಸುತ್ತಾ ಮಾತನಾಡಿ, ಕಳೆದ ಸಾಲಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಈ ಸಾಲಿನ ಕಾರ್ಯಕ್ರಮಗಳ ಮೇಲೆ ಪಕ್ಷಿನೋಟ ಬೀರಿದರು.
ಈ ವರ್ಷದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ರಾಜೇಶ ಕುಲಕರ್ಣಿ, ರವಿಪ್ರಕಾಶ ಹಾಗೂ ಡಾ. ಗುರುಮೂರ್ತಿ ಹೆಗಡೆ ಅವರ ಕಿರು ಪರಿಚಯ ಮಾಡಿ ಕೊಟ್ಟರು. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಬರವಿಲ್ಲ ಎಂಬುದು ಹಾಂಗ್ ಕಾಂಗ್ನಲ್ಲೂ ದೃಢಪಟ್ಟಿತು. ಪುಟ್ಟ ಪುಟ್ಟ ಮಕ್ಕಳ ಪ್ರತಿಭಾ ಪ್ರದರ್ಶನ ನೋಡುಗರ ಮನ ಸೂರೆಗೊಂಡಿತು. ಬಗೆಬಗೆಯ ನೃತ್ಯ, ಬಗೆ ಬಗೆಯ ಹಾಡುಗಳು, ನಾಟಕ, ರಸಪ್ರಶ್ನೆ, ಕಣ್ಣಿಗೆ ಕಟ್ಟುವಂತಿದ್ದವು.
ಹಳೆ ಬೇರು ಹೊಸ ಚಿಗುರು, ಕೂಡಿದರೆ ಮರ ಸೊಗಸು ಎಂಬಂತೆ ಮಕ್ಕಳೊಂದಿಗೆ ದೊಡ್ಡವರೂ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದು , ಈ ದೇಶದಲ್ಲಿ ಕನ್ನಡ ಬಾಳುತ್ತದೆ ಎಂಬ ಆಶಾಕಿರಣ ಮೂಡಿಸಿತು. ಹಿರಿಯರು, ಕಿರಿಯರ ಸಮ್ಮಿಲನದ ಮನರಂಜನಾ ಕಾರ್ಯಕ್ರಮ ಕರ್ನಾಟಕವನ್ನೇ ನೆನಪಿಗೆ ತರಿಸುವಂತಿತ್ತು. ಮಕ್ಕಳ ಸೃಜನಶೀಲತೆಯನ್ನು ಬೆಳಕಿಗೆ ತರುವ ಹಾಂಗ್ ಕಾಂಗ್ ಕನ್ನಡ ಸಂಘದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ ಎಲ್ಲರ ಮನವ ಗೆದ್ದಿತ್ತು .
ಗುರುಮೂರ್ತಿ ಹೆಗಡೆ ಅವರ ವಂದನಾರ್ಪಣೆ, ನಾಡಗೀತೆ, ರಾಷ್ಟ್ರಗೀತೆ ಮತ್ತು ಸಿಹಿ ತಿಂಡಿ ವಿತರಣೆಯಾಂದಿಗೆ ಸಂಭ್ರಮದ ಸರ್ವಜಿತು ಸಂವತ್ಸರವನ್ನು ಬರ ಮಾಡಿಕೊಳ್ಳಲಾಯಿತು. ಬರಲಿರುವ ದಿನಗಳಲ್ಲಿ ಕನ್ನಡ ಸಂಘದ ವತಿಯಿಂದ ಕನ್ನಡ -ಕರ್ನಾಟಕ ಸಂಬಂಧಿಸಿದ ಅನೇಕಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳಿವೆ. ಈ ದೇಶದಲ್ಲಿರುವ ಕನ್ನಡಿಗರೆಲ್ಲ ಭಾಗವಹಿಸಬೇಕು, ಆ ಮೂಲಕ ಕನ್ನಡದ ಮನಸ್ಸುಗಳು ಒಂದಾಗಬೇಕು ಎಂದು ಸಂಘ ಅಪೇಕ್ಷಿಸುತ್ತದೆ.