ಬಿ. ಜಯಶ್ರೀಗೆ ಧ್ವನಿ ಪ್ರತಿಷ್ಠಾನದ ‘ಶ್ರೀರಂಗ ರಂಗ ಪ್ರಶಸ್ತಿ’
ಶ್ರೀರಂಗರಿಗೆ ನಮನ. ಬಿ. ಜಯಶ್ರೀಗೆ ಸನ್ಮಾನ... ಕಲಾ ರಸಿಕರಿಗೆ ‘ನಾಗಮಂಡಲ’! -ಈ ಮೂರು ವಿಶೇಷಗಳ ಸಮ್ಮಿಳನ. ಇದು ದುಬೈ ಕನ್ನಡಿಗರ ರಂಗ ಸಂಭ್ರಮ.
ಶಾರ್ಜಾ : ಇಲ್ಲಿನ ಧ್ವನಿ ಪ್ರತಿಷ್ಠಾನವು ಸುವರ್ಣ ಕರ್ನಾಟಕ ಆಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಶ್ರೀರಂಗ ರಂಗ ಪ್ರಶಸ್ತಿಯನ್ನು ಖ್ಯಾತ ರಂಗ ಕಲಾವಿದೆ ಬಿ.ಜಯಶ್ರೀ ಅವರಿಗೆ ನೀಡಿ, ಗೌರವಿಸಲಾಯಿತು.
ಇಂಡಿಯನ್ ಕಾನ್ಸುಲೇಟ್ ಸಭಾಗೃಹದಲ್ಲಿ ಸಮಾರಂಭ ನಡೆಯಿತು. ಪ್ರಶಸ್ತಿ ಸ್ವೀಕರಿಸಿದ ಬಿ. ಜಯಶ್ರೀ, ತಮ್ಮ ರಂಗಭೂಮಿ ಅನುಭವಗಳನ್ನು ಹಂಚಿಕೊಂಡರು. ತಾಯ್ನಡಿನಿಂದ ದೂರದ ದುಬೈಗೆ ಆಹ್ವಾನಿಸಿ ಪ್ರಶಸ್ತಿ ನೀಡಿ ಗೌರವಿಸಿದಕ್ಕಾಗಿ ಧ್ವನಿ ಬಳಗಕ್ಕೆ ಅಬಾರಿಯಾಗಿದ್ದೇನೆಂದು ಎಂದು ಹೇಳಿದರು.
ಕನ್ನಡ ಅಧುನಿಕ ರಂಗಭೂಮಿಗೆ ಶ್ರೀರಂಗ (ಆದ್ಯ ರಂಗಾಚಾರ್ಯ)ರು ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಧ್ವನಿ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಸ್ವಾಗತಿಸಿ, ಪ್ರಸ್ತಾವಿಕ ಭಾಷಣ ಮಾಡಿದರು. ಗಣೇಶ್ ರೈ ಪ್ರಶಸ್ತಿ ಪತ್ರದ ವಾಚನ ಗೈದರು. ಮಂಗಳಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಮನೋಹರ್ ತೋನ್ಸೆ ಕಾರ್ಯಕ್ರಮವನ್ನು ನಿರೂಪಿಸಿ, ಅರ್ಥರ್ ಪಿರೇರಾ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಕಾಶ್ ರಾವ್ ಪಯ್ಯಾರ್ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡರ ‘ನಾಗಮಂಡಲ’ ನಾಟಕ ಪ್ರದರ್ಶನಗೊಂಡಿತು. ಸ್ಥಳೀಯ ಕಲಾವಿದರು ನಾಟಕಕ್ಕೆ ಜೀವ ತುಂಬಿದರು.
ಪ್ರಸ್ತುತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ , ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು.ಎ.ಇ. ಕನ್ನಡಿಗ ಉದ್ಯಮಿ ಝಪ್ರುಲ್ಲ ಖಾನ್, ರಂಗನಾಥ ಕುಲಕರ್ಣಿ, ಶೇಖರ್ ಶೆಟ್ಟಿ ಕಳತ್ತೂರ್, ಸತೀಶ್ ಮಯ್ಯ, ಜೇಮ್ಸ್ ಮೆಂಡೊನ್ಸ್, ಯಸ್.ಯಸ್.ರಾವ್, ಶಾರ್ಜಾ ಕರ್ನಾಟಕ ಸಂಘದ ಗಣೇಶ್ ರೈ ಅತಿಥಿಗಳಾಗಿ ಪಾಲ್ಗೊಂಡಿದ್ದರು.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications