ಸರಳ ಪ್ರಶ್ನೆ, ಸುಲಭ ಉತ್ತರ ಇದೆಯೆ?
-
ಕುಂಭಾಸಿ
ಶ್ರೀನಿವಾಸ
ಭಟ್,
ಟ್ರಾಯ್,
ಮಿಶಿಗನ್
[email protected]
ಹಲವಾರು ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಚಿನ್ನದ ಶಿಖರಗಳು, ವಜ್ರದ ಕವಚಗಳು, ನವರತ್ನಖಚಿತ ಕಿರೀಟಗಳು ಇತ್ಯಾದಿ ಸಿರಿ ಸಂಪದಗಳನ್ನು ನೋಡಿದ ಬಳಿಕ ನನ್ನ ಮಗಳು ಒಂದು ಬಹಳ ಸರಳವಾದ ಪ್ರಶ್ನೆಯನ್ನು ಕೇಳಿದಳು, ‘ದೇವಸ್ಥಾನಕ್ಕೆ ಇಷ್ಟೊಂದು ದಾನಧರ್ಮಗಳನ್ನು ಮಾಡಿದರೂ ದೇವಾಲಯದ ಹೊರಭಾಗದಲ್ಲಿರುವ ನೂರಾರು ಭಿಕ್ಷುಕರನ್ನು, ಅಂಗವಿಕಲರನ್ನು ಜನರು ಅಥವಾ ಸರಕಾರ ಯಾಕೆ ನೋಡಿಕೊಳ್ಳುವುದಿಲ್ಲ ?’. ಬಹಳ ಒಳ್ಳೆಯ ಪ್ರಶ್ನೆ. ಆದರೆ ನಾನೇನು ಉತ್ತರ ಹೇಳಲಿ? ಈ ಜನರು ಸೋಮಾರಿಗಳು, ಕೆಲಸಗಳ್ಳರು ಎನ್ನಲೇ, ಹಿಂದೂ ಧರ್ಮದ ಪ್ರಕಾರ ಇವರ ಕರ್ಮವನ್ನು ಇವರೆಲ್ಲ ಅನುಭವಿಸುತ್ತಿದ್ದಾರೆ ಎನ್ನಲೇ, ಅಥವಾ ನಮ್ಮ ಜನಗಳಲ್ಲಿ ಮಾನವೀಯತೆ ಮತ್ತು ಪರೋಪಕಾರದ ಅಭ್ಯಾಸ ಇಲ್ಲ ಎನ್ನಲೇ? ಯೋಚಿಸಿ ಈ ಪ್ರಶ್ನೆಗೆ ಉತ್ತರ ಬಯಸಿ ಹಲವಾರು ಮಿತ್ರರನ್ನು, ಸಂಬಂಧಿಕರನ್ನು, ಸ್ವಾಮಿಗಳನ್ನು ಪ್ರಶ್ನಿಸಿದೆ. ಇವರಿಂದ ಬಂದ ಉತ್ತರಗಳು ಹಲವಾರು, ‘ಇದು ಸರಕಾರದ ಜವಾಬ್ದಾರಿ, ಇವರು ಕೆಲಸಗಳ್ಳರು, ಸೋಮಾರಿಗಳು, ಇದು ಇವರ ಪ್ರಾಚೀನ ಕರ್ಮ, ಅವರವರ ಕರ್ಮಗಳನ್ನು ಅವರು ಅನುಭವಿಸಿ ಮುಗಿಸಬೇಕು; ಇದರಿಂದ ಮುಂದಿನ ಜನ್ಮದಲ್ಲಿ ಇವರಿಗೆ ಉತ್ತಮ ಗತಿ ಸಿಗುತ್ತದೆ, ಇದರಲ್ಲಿ ಬಂದ ಆದಾಯ ಕಷ್ಟ ಪಟ್ಟು ಕೆಲಸ ಮಾಡುವುದರಿಂದ ಬರುವುದಿಲ್ಲ ’.
ಈ ಯಾವುದೇ ಉತ್ತರದಿಂದ ನನ್ನ ಮಗಳಿಗೆ ತೃಪ್ತಿ ಆಗಲಿಲ್ಲ. ಈ ಸಮಸ್ಯೆ ಬಹಳ ಜಟಿಲವಾದುದೇ. ಭಾರತದ ಸಂಪತ್ತೆಲ್ಲವನ್ನೂ (ಹೊರಗೆ ತೋರುವ, ಒಳಗೆ ಅಡಗಿಸಿರುವ, ಕಳ್ಳ ಹಣದ, ದೇವಾಲಯಗಳ, ಮಠಗಳ, ರಾಜಕೀಯ ಪುಡಾರಿಗಳ, ತೆರಿಗೆ ಕಳ್ಳರ) ದಾನಮಾಡದಿದ್ದರೂ ಸರಿಯಾದ ಯೋಜನೆಗಳಲ್ಲಿ ತೊಡಗಿಸಿದರೆ ಈ ಜನರೆಲ್ಲರೂ ಉದ್ಯೋಗ ದಂಧೆಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ನನ್ನ ಸ್ವಂತ ಅಭಿಪ್ರಾಯ. ನಮ್ಮ ಜನಗಳ ಸ್ವಾರ್ಥ ಮನೋಭಾವವೇ ಇದಕ್ಕೆಲ್ಲ ಕಾರಣ ಎಂಬ ಅಭಿಪ್ರಾಯವನ್ನು ಅವಳಿಗೆ ಹೇಳಿದೆ.
ಸ್ವಾರ್ಥ ಜನಗಳು ಎಲ್ಲಾ ಕಡೆ ಇದ್ದಾರೆ. ಅಮೇರಿಕದಲ್ಲೂ ತುಂಬಾ ಸ್ವಾರ್ಥಿಗಳಿದ್ದಾರೆ, ಆದರೆ ಅಲ್ಲಿ ಯಾಕೆ ಇಲ್ಲಿನ ತರಹ ಭಿಕ್ಷುಕರಿಲ್ಲವಲ್ಲ ಎಂದು ಮಗಳು ಪ್ರಶ್ನಿಸಿದಳು. ಇದು ಬಹಳ ಜಟಿಲವಾದ ಸಮಸ್ಯೆಯೇ. ನಿಮ್ಮ ಅನಿಸಿಕೆ ಏನು? ಇದಕ್ಕೆ ಸುಲಭ ಪರಿಹಾರ ಇದೆಯೆ? ನೀವೇ ಹೇಳಿ.