ವಿದ್ಯಾರಣ್ಯ ಕೂಟದ ಬೊಂಬಾಟ್ ಪಿಕ್ನಿಕ್!
- ವಿಜಯ ಭಟ್, ಉಪಾಧ್ಯಕ್ಷರು, ವಿದ್ಯಾರಣ್ಯ ಕನ್ನಡಕೂಟ
- ನರೇಂದ್ರ ಲಿಂಗೇಗೌಡ, ಕಾರ್ಯದರ್ಶಿ, ವಿದ್ಯಾರಣ್ಯ ಕನ್ನಡ ಕೂಟ
ಅದೊಂದು ಸ್ಮರಣೀಯ ದಿನ !
ಹೌದು. ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರು ಜುಲೈ 18ರ ಭಾನುವಾರವನ್ನು ಹೇಗೆ ತಾನೆ ಮರೆತಾರು ? ಅಂದು ಕನ್ನಡ ಕೂಟದ ಸದಸ್ಯರು ಒಟ್ಟಾಗಿ ಸೇರಿ, ಆಡಿ ಉಂಡು ನಲಿದ ದಿನ. ಜಂಜಡದ ದೈನಿಕದಿಂದ ಮುದುಡಿದ ಮನಸ್ಸನ್ನು ಚೈತನ್ಯಗೊಳಿಸುವ ಸ್ನೇಹಮಿಲನದ ದಿನವದು.
ವರ್ಷದಿಂದ ವರ್ಷಕ್ಕೆ ವಿದ್ಯಾರಣ್ಯ ಕನ್ನಡ ಕೂಟದ ಪಿಕ್ನಿಕ್ಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಾರಿಯಂತೂ ಸುಮಾರು 500ಕ್ಕೂ ಹೆಚ್ಚು ಮಂದಿ ಪಿಕ್ನಿಕ್ನಲ್ಲಿ ಭಾಗವಹಿಸಿದ್ದರು. ಒಂದು ಮಿನಿ ಕನ್ನಡ ಸಮಾವೇಶ ಅಂದರೂ ಸರಿ. ಸ್ವಂಯಸೇವಕರೂ ಈ ಗುಂಪಿನಲ್ಲಿ ದ್ದರು. ಎಲ್ಲರಲ್ಲೂ ಉತ್ಸಾಹ, ಹುಮ್ಮಸ್ಸು . ಈ ಹುಮ್ಮಸ್ಸಿನಿಂದಾಗಿಯೇ ಪಿಕ್ನಿಕ್ ಸ್ಮರಣೀಯವಾಯಿತು, ರಸಮಯವಾಯಿತು. ಅಂದಹಾಗೆ, ವಿದ್ಯಾರಣ್ಯ ಕನ್ನಡ ಕೂಟದ ಗೆಳೆಯರು ಪಿಕ್ನಿಕ್ಗೆ ಹೋಗಿದ್ದು - ಎಲ್ಕ್ ಗ್ರೋವ್ ವಿಲೇಜ್(Elk Grove Village)ನ ಬುಸ್ಸೀವುಡ್ಸ್ ಸಂರಕ್ಷಿತಾರಣ್ಯ (Busse Woods Forest Preserve) ಪ್ರದೇಶಕ್ಕೆ. ಅಲ್ಲಿ ಹಸಿರು, ಉಸಿರ ಸಮೃದ್ಧ .
ಪಿಕ್ನಿಕ್ ಶುರುವಾದದ್ದು ಬೆಳಗ್ಗೆ 11ಕ್ಕೆ. ಮಕ್ಕಳು, ಮಹಿಳೆಯರು, ತವರು ಭಾರತದಿಂದ ಬಂದಿದ್ದ ಹಿರೀಕರು- ಎಲ್ಲರೂ ಸೇರಿ ಪಿಕ್ನಿಕ್ಗೆ ಹೊರಡುವ ಸ್ಥಳ ಕಿಕ್ಕಿರಿದಿತ್ತು . ಹೊರಸಂಚಾರಕ್ಕೆ ಬಂದಿದ್ದವರೆಲ್ಲರೂ ಪಿಕ್ನಿಕ್ ಬ್ಲಾಂಕೆಟ್ ಹಾಗೂ ಆಟಿಕೆಗಳೊಂದಿಗೆ ಪಿಕ್ನಿಕ್ ಸವಿಯುಣಲಿಕ್ಕೆ ಸಜ್ಜಾಗಿದ್ದರು. ವಾಲಿಬಾಲ್, ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಳನ್ನು ಕನ್ನಡ ಕೂಟದ ಕಾರ್ಯಕಾರಿ ಸಮಿತಿ ಏರ್ಪಡಿಸಿತ್ತು . ಯಾರು ಯಾವ ಆಟದಲ್ಲಿ ಬೇಕಿದ್ದರೂ ಪಾಲ್ಗೊಳ್ಳಬಹುದಿತ್ತು ; ಆಟ ಅವರಿಷ್ಟ !
ಪಿಕ್ನಿಕ್ನಲ್ಲಿ ಗೆಳೆಯರು ತಮಗೆ ತಾವೇ ವಿಧಿಸಿಕೊಂಡ ಷರತ್ತು - ಇಂಗ್ಲಿಷ್ ಕಡಿಮೆ ಮಾತನಾಡಿ! ಕನ್ನಡಿಗರು ಒಂದಾಗಿ ಕಲೆತ ಸಂದರ್ಭದಲ್ಲಿ ಆದಷ್ಟೂ ಕಡಿಮೆ ಇಂಗ್ಲಿಷ್ ಮಾತನಾಡುವುದು, ಕನ್ನಡವನ್ನೇ ಎಲ್ಲಕ್ಕೂ ಬಳಸುವುದು ; ಇದರಿಂದಾಗಿ ಪಿಕ್ನಿಕ್ ನಡೆದದ್ದು ಅಮೆರಿಕೆ ನೆಲದಲ್ಲಾದರೂ ಅಲ್ಲಿದ್ದುದು ಕನ್ನಡದ ಪರಿಸರ.
ಆಟ ಹಾಗೂ ಮಾತಷ್ಟೇ ಅಲ್ಲ . ಪಿಕ್ನಿಕ್ನ ಊಟವೂ ಬೊಂಬಾಟ್. ಅಲ್ಲಿ ಏನೆಲ್ಲಾ ಇತ್ತು - ಇಡ್ಲಿ, ಸಾಂಬಾರ್, ಮೊಸರನ್ನ , ನಿಂಬೆಅನ್ನ , ಪುಳಿಯೋಗರೆ, ಫ್ರೂಟ್ಸಲಾಡ್, ಕಲ್ಲಂಗಡಿ... ಇವು ಸ್ಯಾಂಪಲ್ ಮಾತ್ರ. ಸಂಜೆಯ ತಿನಿಸಿಗೆ ಭೇಲ್ ಪುರಿ! ಕನ್ನಡ ಕೂಟದ ಅಧ್ಯಕ್ಷೆ ವಾಸಂತಿ ಗೌಡ ಅವರೇ ಸ್ನ್ಯಾಕ್ಸ್ ಸರಬರಾಜಿಗೆ ನಿಂತಿದ್ದು , ಭೇಲ್ಪುರಿ ಕಲಸಲು ಕೈಹಾಕಿದ್ದು ವಿಶೇಷ. ಸ್ಫೂರ್ತಿಯುತ ದಂಪತಿಗಳು ಕಾಫಿ-ಟೀ ಸರಬರಾಜಿಗೆ ನಿಂತದ್ದನ್ನೂ ಇಲ್ಲಿ ಹೇಳಬೇಕು.
ಮತ್ತೆ ಆಟದ ವಿಷಯಕ್ಕೆ ಬರೋಣ. ಅಲ್ಲಿ ವಾಲಿಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್ನೊಂದಿಗೆ- ಬೊಜೊ ಬಕೆಟ್ಸ್, ಸ್ಪೂನ್/ಲೆಮನ್ ರೇಸ್, ಟಗ್ ಆಫ್ ವಾರ್, ಮೂರು ಕಾಲಿನ ಆಟ, ಸಂಗೀತ ಕುರ್ಚಿಗಳಿದ್ದವು. ಅಂತ್ಯಾಕ್ಷರಿಯೂ ಇತ್ತು ಕಣ್ರೀ. ಆಟ ಆಡಲಿಕ್ಕೆ ಒಲ್ಲದವರು, ಆಡಿ ದಣಿದವರು ಮಾತಿಗೆ ಕೂತರು. ಮಾತಿಗೆ ಮಾತು ಪೋಣಿಸುತ್ತಾ ಮಾತಿನ ಮಂಟಪ ಕಟ್ಟುವುದೂ ಒಂದು ಚಂದ. ಮಾತಲ್ಲಿದೆ ಆನಂದ.
ಪಿಕ್ನಿಕ್ನಿಂದ ಮುಖ್ಯವಾಗಿ ದೊರೆತದ್ದು ಮನರಂಜನೆ. ಆದರೆ ಸ್ನೇಹ ಚಿಗುರಿದ್ದು , ಕಳಚಿದ ಕೊಂಡಿ ಬೆಸೆದದ್ದು , ಸಮುದಾಯದ ಚಟುವಟಿಕೆಗಳಿಗೆ ಹೊಸ ಐಡಿಯಾಗಳು ಹೊಳೆದದ್ದು , ಇವೆಲ್ಲ ಕಡಿಮೆ ಲಾಭಗಳಾ? ಕನ್ನಡ ಕೂಟದ ಗೆಳೆಯರು ಮಾತ್ರವಲ್ಲದೆ ಇತರ ಗೆಳೆಯರೂ ಪಿಕ್ನಿಕ್ನಲ್ಲಿ ಭಾಗವಹಿಸಿದ್ದರು. ಪಿಕ್ನಿಕ್ ಉಸ್ತುವಾರಿಯಲ್ಲೂ ಕೈಜೋಡಿಸಿದವರ ಸಂಖ್ಯೆ ಸಾಕಷ್ಟು. ಅದರಲ್ಲೂ ಯವಕರು ಮುಂದು. ಅವರಿಗೆಲ್ಲ ಶರಣು.
ತಮಿಳುನಾಡಿನ ಕುಂಭಕೋಣಂನ ಶಾಲೆಯಲ್ಲಿ ಬೆಂಕಿಗಾಹುತಿಯಾದ ಶಾಲಾಮಕ್ಕಳನ್ನು ನೆನೆದು ಪಿಕ್ನಿಕ್ನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಮೂಲಕ ಸಂತೋಷಕೂಟಕ್ಕೆ ಮಾನವೀಯತೆಯ ಸ್ಪರ್ಶವೂ ದೊರೆತಂತಾಯಿತು. ಕನ್ನಡಕೂಟದ ಅಧ್ಯಕ್ಷೆ ವಾಸಂತಿಗೌಡರ ಸೂಚನೆಯ ಮೇರೆಗೆ ನತದೃಷ್ಟ ಮಕ್ಕಳಿಗಾಗಿ ಒಂದು ನಿಮಿಷದ ಮೌನ ಆಚರಿಸಲಾಯಿತು.
ಸೂರ್ಯ ಇಷ್ಟಿಷ್ಟೇ ಕರಗುತ್ತಿದ್ದಂತೆ ಕನ್ನಡ ಕೂಟದ ಗೆಳೆಯರ ನಡುವೆ ತಾತ್ಕಾಲಿಕ ವಿದಾಯದ ಮಾತುಕತೆ. ಕೆಲವರಿಗೆ ಸೋಮವಾರದ ಕೆಲಸದ ಯೋಚನೆ. ಪ್ಯಾಕಿಂಗ್ ಮುಗಿಸಿ ಕಾರಿನಲ್ಲಿ ಕೂತಾಗ, ಮರುದಿನ ಕಚೇರಿಯಲ್ಲಿ ಕೂತರೂ, ಮರಳಿ ಮನೆಗೆ ಬಂದರೂ ಪಿಕ್ನಿಕ್ ಗುಂಗು.
ಒಟ್ಟಿನಲ್ಲಿ ವಿದ್ಯಾರಣ್ಯ ಕನ್ನಡ ಕೂಟದ ಈ ಸಲದ ಪಿಕ್ನಿಕ್ ಅತ್ಯಂತ ಯಶಸ್ವಿ ಕಾರ್ಯಕ್ರಮ. ಈ ಯಶಸ್ಸಿನ ಹಿಂದೆ ಕಾರ್ಯಕಾರಿ ಸಮಿತಿ ಸದಸ್ಯರ ಶ್ರಮ, ಅಧ್ಯಕ್ಷರ ನಾಯಕತ್ವ, ಸದಸ್ಯರ ಹುಮ್ಮಸ್ಸು , ಗೆಳೆಯರ ಬೆಂಬಲ, ಸ್ವಯಂಸೇವಕರ ನೆರವು- ಒಟ್ಟಿನಲ್ಲಿ ತಂಡಸ್ಫೂರ್ತಿ ಇತ್ತೆನ್ನಿ.
ಇನ್ನೊಂದು ಪಿಕ್ನಿಕ್ವರೆಗೂ ಜುಲೈ 18ರ ಪಿಕ್ನಿಕ್ ಜೀವಂತವಾಗಿರುತ್ತದೆ ; ಇದಕೆ ಸಂಶಯವಿಲ್ಲ .












Click it and Unblock the Notifications