ದೇವರು ಶೃಂಗಾರ ಕ್ರಿಯೆಯನ್ನು ಸೃಷ್ಟಿಸಿದ್ದೇಕೆ?
ಈ ಜಿಜ್ಞಾಸೆಯಲ್ಲಿ ನಾವು ಎರಡು ವಿಷಯಗಳನ್ನು ಗಮನಿಸಬೇಕು. ಒಂದು- ದೇವರು ತಪ್ಪು ಮಾಡುವುದಿಲ್ಲ ಮತ್ತು ಅವನು ಏನು ಮಾಡುತ್ತಿದ್ದಾನೆಂದು ಅವನಿಗೆ ಗೊತ್ತಿತ್ತು. ಎರಡು- ಅವನಿಗೆ ತನ್ನದೇ ಆದ ಕೆಲವು ಕಾರಣಗಳಿದ್ದವು. ಆ ಕಾರಣಗಳನ್ನು ಹುಡುಕಬೇಕಾದರೆ ನಾವು ಈ ಸುರತಕ್ರಿಯೆಯನ್ನು ಇನ್ನೂ ಹತ್ತಿರದಿಂದ ನೋಡಬೇಕಾಗುತ್ತದೆ.
ಎಲ್ಲರಿಗೂ ಗೊತ್ತಿರುವಂತೆ ಈ ಕ್ರಿಯೆ ಅಂಥ ಸುಲಭದ್ದೇನಲ್ಲ. ನಾವು ಎಷ್ಟೇ ಸ್ವತಂತ್ರವೆಂದು ಹೇಳಿಕೊಂಡರೂ ಇದು ಎಲ್ಲರ ಕೈಗೆ ಎಟಕುವ ವಸ್ತುವಲ್ಲ. ಈ ಕ್ರಿಯೆಗೆ ಕೆಲವು ಅಡೆತಡೆಗಳಿವೆ, ಕೆಲವು ನೀತಿ ನಿಯಮಗಳಿವೆ.
ಸುರತ ಕ್ರಿಯೆ ನಡೆಯಬೇಕಾದರೆ ಗಂಡು ಹೆಣ್ಣು ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರಬೇಕು. ಇಬ್ಬರ ನಡುವೆ ಪ್ರೀತಿಯಿರಬೇಕು, ನಂಬಿಕೆಯಿರಬೇಕು. ಇದೂ ಎಲ್ಲರೂ ಒಪ್ಪುವ ವಿಷಯ. ಆದ್ದರಿಂದ ಇದು ಪ್ರೀತಿ, ನಂಬಿಕೆ ಮತ್ತು ಒಳ್ಳೆಯತನವನ್ನು ಕಲಿಸುತ್ತದೆ.
ಒಬ್ಬರಿಗೊಬ್ಬರು ಹತ್ತಿರವಾಗಬೇಕಾದರೆ ಇಬ್ಬರೂ ತಮ್ಮ ‘ನಾನು’ ಎನ್ನುವ ಅಭಿಮಾನವನ್ನು ಬಿಡಬೇಕಾಗುತ್ತದೆ. ಸುಖಕ್ಕಾಗಿ ಕಷ್ಟಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಇನ್ನೊಬ್ಬರಿಗಾಗಿ ತನ್ನ ಆಸೆ ಅಕಾಂಕ್ಷೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಇಬ್ಬರೂ ಒಂದೇ ತರಹವಾಗಿ ಯೋಚಿಸಬೇಕಾಗುತ್ತದೆ. ಒಬ್ಬರನ್ನೊಬ್ಬರು ಕ್ಷಮಿಸಬೇಕಾಗುತ್ತದೆ. ಒಬ್ಬರಿಗೊಬ್ಬರು ಹೊಂದಿಕೊಂಡಿರಬೇಕಾಗುತ್ತದೆ. ಇತ್ಯಾದಿ . ಆದ್ದರಿಂದ ಈ ಕ್ರಿಯೆ ಮಾನವತೆಯನ್ನು, ಸಹಬಾಳ್ವೆಯನ್ನು ಕಲಿಸುತ್ತದೆ. ದೇವರು ಜಾಣ !
ದೇವರು ಒಂದೇ ಒಂದು ಕ್ರಿಯೆಯನ್ನು ಸೃಷ್ಟಿಸಿ ತನ್ನೆಲ್ಲ ಗುರಿಗಳನ್ನು ಪೂರೈಸಿಕೊಂಡ. ಮನುಜ ಸಂಕುಲವನ್ನು ಮುಂದುವರೆಸಲು ದೇವರೇನಾದರೂ ಬೇರೆ ಯಾವದಾದರೂ ಸುಲಭದ ಕ್ರಿಯೆಯನ್ನು ರೂಪಿಸಿದ್ದರೆ- ಪ್ರಸ್ತುತ ಇರುವ ನಮ್ಮ ಸಾಮಾಜಿಕ ಪರಿಕಲ್ಪನೆಯೇ ಇರುತ್ತಿರಲಿಲ್ಲ . ಜನರು ಸಣ್ಣ ಸಣ್ಣ ವಿಷಯಗಳಿಗೆ ಕಚ್ಚಾಡಿಕೊಂಡು ಸಾಯುತ್ತಿದ್ದರು. ಆಡಂ ಮತ್ತು ಈವ್ ಅವರ ಜೊತೆ ಮಾನವ ಸಂಕುಲವೂ ಮುಗಿದು ಹೋಗುವ ಸಾಧ್ಯತೆಯಿತ್ತು.
ಸಂತತಿ, ಸಾಂಗತ್ಯ, ಸಹಬಾಳ್ವೆ..... ಅದೇನೇ ಹೆಸರಿರಲಿ, ಒಟ್ಟಿನಲ್ಲಿ ಶೃಂಗಾರ ಕ್ರಿಯೆಗೆ ಮಾನವನ ಜೀವನದಲ್ಲಿ ಮಹತ್ವದ ಪಾತ್ರವಿದೆ ಅನ್ನುವುದಂತೂ ಸತ್ಯ. ಅಲ್ಲವೇ ?
(ಸ್ಫೂರ್ತಿ : ಒಂದು ಇ-ಪತ್ರ)