ಋತುವಿಲಾಸವೆನೆ ಇದೇನ ಹಾ !ಕರ್ನಾಟಕದಲ್ಲಿ ಬೆಳದಿಂಗಳೂ ಬೆಂಕಿಯಾಗಿರುವ ಹೊತ್ತು - ವಾಷಿಂಗ್ಟನ್‌ನಲ್ಲಿ ಹಿಮದ ಆರ್ಭಟ,ಉತ್ತರಭಾರತದಲ್ಲಿ ಚಳಿಯ ಆಟಾಟೋಪ. ಋತುವಿಲಾಸವೆಂದರೆ ಇದೇ ಅಲ್ಲವೆ ?

ಮುಖಪುಟ -->ಸಾಹಿತ್ಯ ಸೊಗಡು -->ಎನ್‌ಆರ್‌ಐ ಕನ್ನಡ ಕಲರವ -->ಸಮಾಚಾರ

ಫೆಬ್ರವರಿ 17, 2003

ಋತುವಿಲಾಸವೆನೆ ಇದೇನ ಹಾ !
ಕರ್ನಾಟಕದಲ್ಲಿ ಬೆಳದಿಂಗಳೂ ಬೆಂಕಿಯಾಗಿರುವ ಹೊತ್ತು - ವಾಷಿಂಗ್ಟನ್‌ನಲ್ಲಿ ಹಿಮದ ಆರ್ಭಟ,ಉತ್ತರಭಾರತದಲ್ಲಿ ಚಳಿಯ ಆಟಾಟೋಪ. ಋತುವಿಲಾಸವೆಂದರೆ ಇದೇ ಅಲ್ಲವೆ ?

*ಚ.ಹ. ರಘುನಾಥ

White House or Snow White !‘ಭೂಮಿನ್‌ ತಬ್ಬಿದ್‌ ಮೋಡ್‌ ಇದ್ದಂಗೆ
ಬೆಳ್ಳಿ ಬಳ್ದಿದ್‌ ರೋಡ್‌ ಇದ್ದಂಗೆ
ಸಾಫಾಗಳ್ಳ ತಿಟ್ಟಿಲ್ದಂಗೆ
ಮಡಿಕೇರೀಲಿ ಮಂಜು’

ನೆಲ ಮುಗಿಲುಗಳ ಬೆಸೆಯುವಂತೆ ಹರಡಿದ್ದ ಮಂಜಿನ ತೆರೆಯ ಕಂಡು ‘ರತ್ನನ ಪದಗಳು’ ಕವಿ ಜಿ.ಪಿ.ರಾಜರತ್ನಂ ಅವರಿಗೆ ಅನ್ನಿಸಿದ್ದು ಹೀಗೆ. ಅದು ಮಂಜಿನ ಹಾಸಿಗೆ ; ಮಲ್ಲಿಗೆ ಬಣ್ಣದ ಹಾಸಿಗೆ ! ರಾಜರತ್ನಂ ಅವರ ಈ ಕವಿತೆಯನ್ನು ಮೈಸೂರು ಅನಂತಸ್ವಾಮಿ ತಮ್ಮ ಏರಿಳಿತದ ಸ್ವರದಲ್ಲಿ ಹಾಡುತ್ತಿದ್ದರೆ ಮನಸ್ಸು ಮಡಿಕೇರಿಯ ರಸ್ತೆಗಳಲ್ಲಿ ಓಡುತ್ತದೆ.

ತಾಯಿ ಮಗುವನ್ನು ಎತ್ತಿಕೊಂಡಂತೆ, ಬೆಳ್ಳಿ ಬಳಿದ ರಸ್ತೆ ಇದ್ದಂತೆ, ಮಡಿಕೇರಿಯ ಮೇಲೆ ಮಂಜು ಕವಿದುಕೊಂಡಿತ್ತು ಎನ್ನುತ್ತಾರೆ ರಾಜರತ್ನಂ. ಇಂಥದ್ದೇ ಮಂಜಿನ ಅವತರಣ ಈಗ ವಾಷಿಂಗ್ಟನ್‌ನಲ್ಲಿ . ಮಡಿಕೇರಿ ಮಂಜಿನದು ರಮ್ಯ ವಿಲಾಸವಾದರೆ ; ವಾಷಿಂಗ್ಟನ್‌ನಲ್ಲಿ ಮಂಜಿನ ರುದ್ರ ನರ್ತನ.

ಈಚಿನ ದಿನಗಳಲ್ಲಂತೂ ವಾಷಿಂಗ್ಟನ್‌ ನಗರಿ ಮಂಜಿನ ಪರದೆಯನ್ನು ಸಿಂಗರಿಸಿಕೊಳ್ಳುವುದು ದಿನಚರಿಯಂತಾಗಿಟ್ಟಿದೆ. ಫೆಬ್ರವರಿ 16 ರಂದಂತೂ ಹಿಮವೃಷ್ಟಿ , ಅತಿವೃಷ್ಟಿ . ಹಿಮಾಚ್ಛಾದಿತ ವಾಷಿಂಗ್ಟನ್‌ನ ವಿವಿಧ ಭಾಗಗಳಲ್ಲಿ ಅಂದು ಸುರಿದ ಮಂಜಿನ ಪ್ರಮಾಣ 18 ರಿಂದ 24 ಇಂಚುಗಳಷ್ಟಿತ್ತು . (ನಮ್ಮ ಕನ್ನಡ ಬಂಧುಗಳು ನಡುಗಿಹೋಗಿರಬೇಕು!).

ವಾಷಿಂಗ್ಟನ್‌ ಡಿ.ಸಿ. ಪ್ರದೇಶದ ಇತಿಹಾಸದಲ್ಲೇ ಇದೊಂದು ಅತಿಕೆಟ್ಟ ಹಿಮಪಾತ. ಸಾವುನೋವು ಸಂಭವಿಸಿರುವ ಸಾಧ್ಯತೆಯೂ ಇಲ್ಲದಿಲ್ಲ . ಜನ ರಸ್ತೆಗಳಿಯುವಂತಿಲ್ಲ ; ಕಾರಿಗೆ ಸ್ಕೇಟಿಂಗ್‌ ಬರುವುದಿಲ್ಲವಾದ್ದರಿಂದ ಕಚೇರಿಗೆ ಹೋಗುವುದಂತೂ ದೂರದ ಮಾತು.

ಅಂದಹಾಗೆ, ಇಂಥ ಸುರಿವ ಹಿಮದ ಕೊರೆವ ಚಳಿಯ ದಿನಗಳಲ್ಲಿ ವಾಷಿಂಗ್ಟನ್‌ ಹಾಗೂ ಆಸುಪಾಸಿನ ಕನ್ನಡಬಂಧುಗಳು ಏನು ಮಾಡುತ್ತಿರುವರೋ.. ? ಮಾನಸಿಕ ಸಾಂಗತ್ಯಕ್ಕಿದ್ದೇ ಇದೆ ದಟ್ಸ್‌ಕನ್ನಡದೊಂದಿಗಿನ ನಿತ್ಯ ಸಂವಾದ ; ಉಳಿದುದು ಹೊಟ್ಟೆಯ ಪಾಡು.

ಚಳಿಯ ದಿನಗಳಲ್ಲಿ ಕುರುಕಲು ಚೆನ್ನಾಗಿರುತ್ತದೆ. ಚಕ್ಕುಲಿ, ಕೋಡುಬಳೆ, ಶಂಕರಪೋಳೆ, ಕಾಂಗ್ರೆಸ್‌ ಕಡಲೆಬೀಜದ ಖಾರಾ ಮಸಾಲಾ, ಆಲೂಗೆಡ್ಡೆ ಟಿಕ್ಕಾ, ಬಿಸಿಬಿಸಿ ಸಾರು ಅನ್ನ...ನಿಮ್ಮದಾಗಲಿ ! Winter is the best season if you have the best protection . ಬೆಚ್ಚಗಿರಿ. ಮಕ್ಕಳನ್ನು ಬೆಚ್ಚಗಿಡಿ.

ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಚಳಿ ಈ ಪಾಟಿ ಕೊರೆಯುತ್ತಿದ್ದರೆ ಕರ್ನಾಟಕದಲ್ಲೋ ಬೆಂಕಿ ಬಿಸಿಲು. ಬಯಲುಸೀಮೆ, ಮಲೆನಾಡು, ಕರಾವಳಿಯಾದಿಯಾಗಿ ತಾರತಮ್ಯವಿಲ್ಲದೆ ಬೆಂಕಿಮಳೆ ಸುರಿಯತ್ತಿರುವ ಈಹೊತ್ತು - ಮುಂದಿನ ಬೇಸಗೆಯ ತೀವ್ರತೆ ನೆನೆದು ಕನ್ನಡ ಜನತೆ ನಿಟ್ಟುಸಿರಿಡುತ್ತಿದೆ. ಬಿಸಿಲ ಮಾತಿರಲಿ- ಕುಡಿಯುವ ನೀರಿಗೇ ಸಂಚಕಾರ ಒದಗಿದರೂ ಒದಗೀತು. ತಮಿಳುನಾಡಿನ ಬಕಾಸುರ ಬಯಕೆಗೆ ಮಂಡ್ಯ ಸೀಮೆಯ ರೈತರ ಕನಸುಗಳು ಬಲಿಯಾಗಿ- ಕನ್ನಂಬಾಡಿಯ ತಳ ಕಾಣುತ್ತಿದ್ದರೂ ಮುಖ್ಯಮಂತ್ರಿ ಕೃಷ್ಣ ಮಾತ್ರ ರೈತರಿಗೆ-ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ ಎಂದು ಅಭಯಹಸ್ತ ನೀಡುತ್ತಿದ್ದಾರೆ. ಅದ್ಯಾವ ಅಕ್ಷಯಪಾತ್ರೆ ಕೃಷ್ಣ ಅವರ ಬಳಿಯಿದೆಯಾ ?

ಬೆಂಗಳೂರಿನಿಂದ ದೆಹಲಿಯತ್ತ ಕಣ್ಣು ಹರಿಸೋಣ. ಉತ್ತರ ಭಾರತದಲ್ಲಿ ಚಳಿಯ ಕಾಟವೋ ಕಾಟ. ಈ ಬಾರಿಯ ಚಳಿಗಾಲದಲ್ಲಿ ಉತ್ತರಭಾರತದಲ್ಲಿ ಸತ್ತವರ ಸಂಖ್ಯೆ 700. ಈ ಸಾವು ನ್ಯಾಯವೇ ಎಂದು ಸುಪ್ರಿಂಕೋರ್ಟ್‌ ಫೆ.17ರ ಸೋಮವಾರ ಕೇಂದ್ರ ಸರ್ಕಾರ ಹಾಗೂ 13 ರಾಜ್ಯ ಸರ್ಕಾರಗಳಿಗೆ ನೋಟೀಸು ನೀಡುವ ಮೂಲಕ ಕಿವಿಹಿಂಡಿದೆ. ನಿರ್ವಸಿತರಿಗೆ ಸೂರು ಒದಗಿಸುವ ಸರ್ಕಾರದ ಘೋಷಣೆ ಕಾಗದದ ಮೇಲೆ ಉಳಿದುದರಿಂದಲೇ ಇದೆಲ್ಲಾ ಅನಾಹುತ ; ಆಡಳಿತ ಯಂತ್ರಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎನ್ನುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯ ಈ ನೋಟೀಸು ಜಾರಿ ಮಾಡಿದೆ.

ಒಂದೆಡೆ ಬೆಂಕಿ ಮಳೆ ಸುರಿಯುತ್ತಿದ್ದರೂ, ಇನ್ನೊಂದೆಡೆ ಹಿಮಪಾತವಾಗುತ್ತಿದ್ದರೂ- ವಿಶ್ವಕಪ್‌ ಕ್ರಿಕೆಟ್ಟಿನ ಹುಚ್ಚು ದೇಶದ ನಾಗರಿಕರ ನರನಾಡಿಗಳಲ್ಲೂ ತುಂಬಿಕೊಂಡಂತೆ ಕಾಣುತ್ತಿದೆ. ಬಿಸಿಲಾದರೇನು ಚಳಿಯಾದರೇನು ಎಲ್ಲವನ್ನೂ ಮರೆಸುವ ಈ ಕ್ರಿಕೆಟ್ಟಿನ ಪರಿಗೆ ಏನನ್ನೋಣ ?


Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+