ಋತುವಿಲಾಸವೆನೆ ಇದೇನ ಹಾ !ಕರ್ನಾಟಕದಲ್ಲಿ ಬೆಳದಿಂಗಳೂ ಬೆಂಕಿಯಾಗಿರುವ ಹೊತ್ತು - ವಾಷಿಂಗ್ಟನ್ನಲ್ಲಿ ಹಿಮದ ಆರ್ಭಟ,ಉತ್ತರಭಾರತದಲ್ಲಿ ಚಳಿಯ ಆಟಾಟೋಪ. ಋತುವಿಲಾಸವೆಂದರೆ ಇದೇ ಅಲ್ಲವೆ ?
ಮುಖಪುಟ -->ಸಾಹಿತ್ಯ ಸೊಗಡು -->ಎನ್ಆರ್ಐ ಕನ್ನಡ ಕಲರವ -->ಸಮಾಚಾರ
ಋತುವಿಲಾಸವೆನೆ ಇದೇನ ಹಾ !
ಕರ್ನಾಟಕದಲ್ಲಿ ಬೆಳದಿಂಗಳೂ ಬೆಂಕಿಯಾಗಿರುವ ಹೊತ್ತು - ವಾಷಿಂಗ್ಟನ್ನಲ್ಲಿ ಹಿಮದ ಆರ್ಭಟ,ಉತ್ತರಭಾರತದಲ್ಲಿ ಚಳಿಯ ಆಟಾಟೋಪ. ಋತುವಿಲಾಸವೆಂದರೆ ಇದೇ ಅಲ್ಲವೆ ?
‘ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳ್ದಿದ್ ರೋಡ್ ಇದ್ದಂಗೆ
ಸಾಫಾಗಳ್ಳ ತಿಟ್ಟಿಲ್ದಂಗೆ
ಮಡಿಕೇರೀಲಿ ಮಂಜು’
ನೆಲ ಮುಗಿಲುಗಳ ಬೆಸೆಯುವಂತೆ ಹರಡಿದ್ದ ಮಂಜಿನ ತೆರೆಯ ಕಂಡು ‘ರತ್ನನ ಪದಗಳು’ ಕವಿ ಜಿ.ಪಿ.ರಾಜರತ್ನಂ ಅವರಿಗೆ ಅನ್ನಿಸಿದ್ದು ಹೀಗೆ. ಅದು ಮಂಜಿನ ಹಾಸಿಗೆ ; ಮಲ್ಲಿಗೆ ಬಣ್ಣದ ಹಾಸಿಗೆ ! ರಾಜರತ್ನಂ ಅವರ ಈ ಕವಿತೆಯನ್ನು ಮೈಸೂರು ಅನಂತಸ್ವಾಮಿ ತಮ್ಮ ಏರಿಳಿತದ ಸ್ವರದಲ್ಲಿ ಹಾಡುತ್ತಿದ್ದರೆ ಮನಸ್ಸು ಮಡಿಕೇರಿಯ ರಸ್ತೆಗಳಲ್ಲಿ ಓಡುತ್ತದೆ.
ತಾಯಿ ಮಗುವನ್ನು ಎತ್ತಿಕೊಂಡಂತೆ, ಬೆಳ್ಳಿ ಬಳಿದ ರಸ್ತೆ ಇದ್ದಂತೆ, ಮಡಿಕೇರಿಯ ಮೇಲೆ ಮಂಜು ಕವಿದುಕೊಂಡಿತ್ತು ಎನ್ನುತ್ತಾರೆ ರಾಜರತ್ನಂ. ಇಂಥದ್ದೇ ಮಂಜಿನ ಅವತರಣ ಈಗ ವಾಷಿಂಗ್ಟನ್ನಲ್ಲಿ . ಮಡಿಕೇರಿ ಮಂಜಿನದು ರಮ್ಯ ವಿಲಾಸವಾದರೆ ; ವಾಷಿಂಗ್ಟನ್ನಲ್ಲಿ ಮಂಜಿನ ರುದ್ರ ನರ್ತನ.
ಈಚಿನ ದಿನಗಳಲ್ಲಂತೂ ವಾಷಿಂಗ್ಟನ್ ನಗರಿ ಮಂಜಿನ ಪರದೆಯನ್ನು ಸಿಂಗರಿಸಿಕೊಳ್ಳುವುದು ದಿನಚರಿಯಂತಾಗಿಟ್ಟಿದೆ. ಫೆಬ್ರವರಿ 16 ರಂದಂತೂ ಹಿಮವೃಷ್ಟಿ , ಅತಿವೃಷ್ಟಿ . ಹಿಮಾಚ್ಛಾದಿತ ವಾಷಿಂಗ್ಟನ್ನ ವಿವಿಧ ಭಾಗಗಳಲ್ಲಿ ಅಂದು ಸುರಿದ ಮಂಜಿನ ಪ್ರಮಾಣ 18 ರಿಂದ 24 ಇಂಚುಗಳಷ್ಟಿತ್ತು . (ನಮ್ಮ ಕನ್ನಡ ಬಂಧುಗಳು ನಡುಗಿಹೋಗಿರಬೇಕು!).
ವಾಷಿಂಗ್ಟನ್ ಡಿ.ಸಿ. ಪ್ರದೇಶದ ಇತಿಹಾಸದಲ್ಲೇ ಇದೊಂದು ಅತಿಕೆಟ್ಟ ಹಿಮಪಾತ. ಸಾವುನೋವು ಸಂಭವಿಸಿರುವ ಸಾಧ್ಯತೆಯೂ ಇಲ್ಲದಿಲ್ಲ . ಜನ ರಸ್ತೆಗಳಿಯುವಂತಿಲ್ಲ ; ಕಾರಿಗೆ ಸ್ಕೇಟಿಂಗ್ ಬರುವುದಿಲ್ಲವಾದ್ದರಿಂದ ಕಚೇರಿಗೆ ಹೋಗುವುದಂತೂ ದೂರದ ಮಾತು.
ಅಂದಹಾಗೆ, ಇಂಥ ಸುರಿವ ಹಿಮದ ಕೊರೆವ ಚಳಿಯ ದಿನಗಳಲ್ಲಿ ವಾಷಿಂಗ್ಟನ್ ಹಾಗೂ ಆಸುಪಾಸಿನ ಕನ್ನಡಬಂಧುಗಳು ಏನು ಮಾಡುತ್ತಿರುವರೋ.. ? ಮಾನಸಿಕ ಸಾಂಗತ್ಯಕ್ಕಿದ್ದೇ ಇದೆ ದಟ್ಸ್ಕನ್ನಡದೊಂದಿಗಿನ ನಿತ್ಯ ಸಂವಾದ ; ಉಳಿದುದು ಹೊಟ್ಟೆಯ ಪಾಡು.
ಚಳಿಯ ದಿನಗಳಲ್ಲಿ ಕುರುಕಲು ಚೆನ್ನಾಗಿರುತ್ತದೆ. ಚಕ್ಕುಲಿ, ಕೋಡುಬಳೆ, ಶಂಕರಪೋಳೆ, ಕಾಂಗ್ರೆಸ್ ಕಡಲೆಬೀಜದ ಖಾರಾ ಮಸಾಲಾ, ಆಲೂಗೆಡ್ಡೆ ಟಿಕ್ಕಾ, ಬಿಸಿಬಿಸಿ ಸಾರು ಅನ್ನ...ನಿಮ್ಮದಾಗಲಿ ! Winter is the best season if you have the best protection . ಬೆಚ್ಚಗಿರಿ. ಮಕ್ಕಳನ್ನು ಬೆಚ್ಚಗಿಡಿ.
ವಾಷಿಂಗ್ಟನ್ ಡಿ.ಸಿ.ಯಲ್ಲಿ ಚಳಿ ಈ ಪಾಟಿ ಕೊರೆಯುತ್ತಿದ್ದರೆ ಕರ್ನಾಟಕದಲ್ಲೋ ಬೆಂಕಿ ಬಿಸಿಲು. ಬಯಲುಸೀಮೆ, ಮಲೆನಾಡು, ಕರಾವಳಿಯಾದಿಯಾಗಿ ತಾರತಮ್ಯವಿಲ್ಲದೆ ಬೆಂಕಿಮಳೆ ಸುರಿಯತ್ತಿರುವ ಈಹೊತ್ತು - ಮುಂದಿನ ಬೇಸಗೆಯ ತೀವ್ರತೆ ನೆನೆದು ಕನ್ನಡ ಜನತೆ ನಿಟ್ಟುಸಿರಿಡುತ್ತಿದೆ. ಬಿಸಿಲ ಮಾತಿರಲಿ- ಕುಡಿಯುವ ನೀರಿಗೇ ಸಂಚಕಾರ ಒದಗಿದರೂ ಒದಗೀತು. ತಮಿಳುನಾಡಿನ ಬಕಾಸುರ ಬಯಕೆಗೆ ಮಂಡ್ಯ ಸೀಮೆಯ ರೈತರ ಕನಸುಗಳು ಬಲಿಯಾಗಿ- ಕನ್ನಂಬಾಡಿಯ ತಳ ಕಾಣುತ್ತಿದ್ದರೂ ಮುಖ್ಯಮಂತ್ರಿ ಕೃಷ್ಣ ಮಾತ್ರ ರೈತರಿಗೆ-ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ ಎಂದು ಅಭಯಹಸ್ತ ನೀಡುತ್ತಿದ್ದಾರೆ. ಅದ್ಯಾವ ಅಕ್ಷಯಪಾತ್ರೆ ಕೃಷ್ಣ ಅವರ ಬಳಿಯಿದೆಯಾ ?
ಬೆಂಗಳೂರಿನಿಂದ ದೆಹಲಿಯತ್ತ ಕಣ್ಣು ಹರಿಸೋಣ. ಉತ್ತರ ಭಾರತದಲ್ಲಿ ಚಳಿಯ ಕಾಟವೋ ಕಾಟ. ಈ ಬಾರಿಯ ಚಳಿಗಾಲದಲ್ಲಿ ಉತ್ತರಭಾರತದಲ್ಲಿ ಸತ್ತವರ ಸಂಖ್ಯೆ 700. ಈ ಸಾವು ನ್ಯಾಯವೇ ಎಂದು ಸುಪ್ರಿಂಕೋರ್ಟ್ ಫೆ.17ರ ಸೋಮವಾರ ಕೇಂದ್ರ ಸರ್ಕಾರ ಹಾಗೂ 13 ರಾಜ್ಯ ಸರ್ಕಾರಗಳಿಗೆ ನೋಟೀಸು ನೀಡುವ ಮೂಲಕ ಕಿವಿಹಿಂಡಿದೆ. ನಿರ್ವಸಿತರಿಗೆ ಸೂರು ಒದಗಿಸುವ ಸರ್ಕಾರದ ಘೋಷಣೆ ಕಾಗದದ ಮೇಲೆ ಉಳಿದುದರಿಂದಲೇ ಇದೆಲ್ಲಾ ಅನಾಹುತ ; ಆಡಳಿತ ಯಂತ್ರಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎನ್ನುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯ ಈ ನೋಟೀಸು ಜಾರಿ ಮಾಡಿದೆ.
ಒಂದೆಡೆ ಬೆಂಕಿ ಮಳೆ ಸುರಿಯುತ್ತಿದ್ದರೂ, ಇನ್ನೊಂದೆಡೆ ಹಿಮಪಾತವಾಗುತ್ತಿದ್ದರೂ- ವಿಶ್ವಕಪ್ ಕ್ರಿಕೆಟ್ಟಿನ ಹುಚ್ಚು ದೇಶದ ನಾಗರಿಕರ ನರನಾಡಿಗಳಲ್ಲೂ ತುಂಬಿಕೊಂಡಂತೆ ಕಾಣುತ್ತಿದೆ. ಬಿಸಿಲಾದರೇನು ಚಳಿಯಾದರೇನು ಎಲ್ಲವನ್ನೂ ಮರೆಸುವ ಈ ಕ್ರಿಕೆಟ್ಟಿನ ಪರಿಗೆ ಏನನ್ನೋಣ ?
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications