‘ಸಿಲಿಕಾನ್ ವ್ಯಾಲಿ ಸಾಹಿತ್ಯಾಸಕ್ತರ ತಂಡ’ದಲ್ಲಿ ಮೇ5 ರಂದು ಸಾಹಿತ್ಯದ ತಂಗಾಳಿ
ಸಿಲಿಕಾನ್ ವ್ಯಾಲಿಯಲ್ಲಿ ನಿತ್ಯವೂ ನೋಡಿ ನೋಡಿ ಬೇಜಾರಾಗಿರುವ ಕಂಪ್ಯೂಟರ್, ಆಫೀಸು ಕೆಲಸ, ಪ್ರಾಜೆಕ್ಟ್ ಮತ್ತು ಸಾಫ್ಟ್ವೇರ್ ಸುದ್ದಿಗಳ ನಡುವೆ ಕನ್ನಡ ಸಾಹಿತ್ಯದ ತಂಗಾಳಿ. ಸಾಹಿತ್ಯಾಸಕ್ತರ ಮನಸ್ಸಿಗೆ ತಂಪೆರೆಯಬಲ್ಲ ಸಾಹಿತ್ಯ ಗೋಷ್ಠಿಯ ಸುದ್ದಿ ಒಬ್ಬರ ಮೇಯ್ಲ್ ಬಾಕ್ಸಿನಿಂದ ಇನ್ನೊಬ್ಬರ ಮೇಯ್ಲ್ ಬಾಕ್ಸಿಗೆ ರವಾನೆಯಾಗುತ್ತಿದೆ.
ಸಿಲಿಕಾನ್ ವ್ಯಾಲಿಯ ಕನ್ನಡಿಗರು ನಿಯಮಿತವಾಗಿ ಆಯೋಜಿಸುತ್ತಿರುವ ಈ ಸಾಹಿತ್ಯ ಗೋಷ್ಠಿ ಕಾರ್ಯಕ್ರಮ ಮೇ 5ರಂದು ನಡೆಯಲಿದೆ. ಇದು ಜ್ಞಾನ ರಸಗಂಗೆಗಾಗಿ ನಡೆಸುವ ಸಾಹಿತ್ಯ ಮಂಥನ. ಕನ್ನಡ ಸಾಹಿತ್ಯ ದಿಗ್ಗಜರ ಬರಹಗಳ ಮೇಲೆ ಕಣ್ಣಾಡಿಸಿ ಪರಸ್ಪರರಿಗೆ ಅನಿಸಿದ್ದನ್ನು ಹಂಚಿಕೊಂಡು ಖುಷಿಪಡಲು ಒಂದು ಚಾವಡಿ. ಇಲ್ಲಿ ಔಪಚಾರಿಕತೆಯ ಉಸಾಬರಿ ಇಲ್ಲ. ಸಾಹಿತ್ಯ ಕೃತಿ, ಲೇಖಕ ಮತ್ತು ಭಾಷೆಯ ಬಗ್ಗೆ ನಡೆಯುವ ಚರ್ಚೆ ಅರಳಿ ಕಟ್ಟೆಯ ಮೇಲಿನ ಪಟ್ಟಾಂಗವೆಂದರೂ ಸರಿಯೇ.
ಇದು ‘ಸಿಲಿಕಾನ್ ವ್ಯಾಲಿಯ ಸಾಹಿತ್ಯಾಸಕ್ತರ ತಂಡ’ ಆಯೋಜಿಸಿರುವ ಆರನೆಯ ಸಾಹಿತ್ಯ ಗೋಷ್ಠಿ. ಮೇ 5ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಆರಂಭವಾಗುವ ಗೋಷ್ಠಿಯಲ್ಲಿ ಚರ್ಚೆಯ ದಿಕ್ಕನ್ನು ಹಿಡಿದಿಡಲು ಎರಡು ವಿಷಯಗಳನ್ನು ಆಯ್ಕೆ ಮಾಡಲಾಗಿದೆ.
‘ಸಾಹಿತ್ಯದಲ್ಲಿ ಭಾಷೆಯ ಮಹತ್ವ ಮತ್ತು ಪ್ರಯೋಗ’ ವಿಷಯದ ಬಗ್ಗೆ ಮಹಾಬಲ ಶಾಸ್ತ್ರಿಯವರು ಉಪನ್ಯಾಸ ನೀಡುತ್ತಾರೆ. ವಿಶ್ವನಾಥ್ ಹುಲಿಕಲ್ ಅವರು ‘ಅನಂತ ಮೂರ್ತಿಯವರ ಕೆಲವು ಶ್ರೇಷ್ಠ ಸಣ್ಣ ಕಥೆಗಳು’ ಕುರಿತು ಚರ್ಚಿಸುತ್ತಾರೆ. ಇಬ್ಬರು ವಿಷಯ ಪ್ರಸ್ತಾಪ ಮಾಡಿದ ನಂತರ ಚರ್ಚಾ ಕಾರ್ಯಕ್ರಮ ಮುಂದುವರೆಯುತ್ತದೆ.
ಕಾರ್ಯಕ್ರಮ ನಡೆಯುವುದು ಕುಪರ್ಟಿನೋ ಲೈಬ್ರರಿಯ ಕಮ್ಯೂನಿಟಿ ರೂಂ(10400 Torre Avenue Cupertino CA 95021) ನಲ್ಲಿ. ಹೆಚ್ಚಿನ ಮಾಹಿತಿಗಳು ಬೇಕಿದ್ದಲ್ಲಿ ವಿಶ್ವನಾಥ್ ಹುಲಿಕಲ್ ಅವರಿಗೆ ಮೇಯ್ಲ್ ಮಾಡಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications