ಸಾಧಕರಿಗೆ ಸನ್ಮಾನ : ಕನ್ನಡ ಕೂಟದ ಹೊಸ ಯೋಜನೆ
ಈ ವರ್ಷದಿಂದ ಕನ್ನಡ ಕೂಟವು ಇಲ್ಲಿನ ಪ್ರಮುಖ ಕನ್ನಡಿಗರನ್ನು ಸನ್ಮಾನಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ. ‘ಅಮೆರಿಕಾ ಅಮೇರಿಕಾ’ ಮತ್ತು ‘ನನ್ನ ಪ್ರೀತಿಯ ಹುಡುಗಿ’ ಕನ್ನಡ ಚಲನಚಿತ್ರಗಳಿಗೆ ಲವಲವಿಕೆಯ ಸಂಗೀತ ನೀಡಿ ಕರ್ನಾಟಕದ ಚಿತ್ರರಸಿಕರ ಮನಸೂರೆಗೊಂಡ ಖ್ಯಾತಿ ಮನೋಮೂರ್ತಿ ಅವರಿಗೆ ಸಲ್ಲುತ್ತದೆ. ಮೂರ್ತಿ ಕೇವಲ ಸಂಗೀತಗಾರರಲ್ಲ, ಕಂಪ್ಯೂಟರ್ನ ತಜ್ಞ ಉದ್ಯಮಿಗಳಲ್ಲಿ ಒಬ್ಬರು ಕೂಡ. ಸ್ಥಳೀಯ ಕನ್ನಡಿಗರು ಮೂರ್ತಿ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.
ಪಂಡಿತ ಶ್ರೀಗಜಾನನ ಜೋಷಿಗಳು ಧರ್ಮಶಾಸ್ತ್ರ ವೇದಾತಂಗಳಲ್ಲಿ ಪಾರಂಗತರು. ಕನ್ನಡ, ಸಂಸ್ಕೃತ, ಕೊಂಕಣಿ, ಮರಾಠಿ ಮುಂತಾದ ಭಾಷೆಗಳಲ್ಲಿ ಪರಿಣತರು. ವಿದ್ಯಾರ್ಥಿಗಳಿಗೂ, ಸಹಾಯವನ್ನು ಅಪೇಕ್ಷಿಸಿದವರಿಗೂ ಹಲವು ಬಗೆಯಲ್ಲಿ ಇಲ್ಲೂ, ಭಾರತದಲ್ಲೂ ನೆರವನ್ನಿತ್ತ ದಾನಿಗಳು. ಇಲ್ಲಿನ ಸನಿವೇಲ್ ದೇವಾಲಯದ ಪ್ರಮುಖ ಅರ್ಚಕರು. ಈ ಪ್ರದೇಶದಲ್ಲಿ ನಡೆವ ಕನ್ನಡ ಕಾರ್ಯಕ್ರಮಗಳಿಗೆ ದೇವಾಲಯದ ಸಭಾಂಗಣವನ್ನು ದೊರಕಿಸಿಕೊಡುವಲ್ಲಿ ಸಹಾಯಕರು. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಬಳಗದ ಸ್ಥಾಪಕರು. ಕನ್ನಡ-ಕನ್ನಡಿಗರ ಬಗ್ಗೆ ಇವರಿಗೆ ಇರುವ ಕಳಕಳಿ ಅಪಾರ. ಇವರನ್ನೂ ಕೂಡ ದೀಪಾವಳಿಯ ಶುಭಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಿಸುವ ಮುನ್ನ, ಕನ್ನಡಕೂಟದ ಅಧ್ಯಕ್ಷರಾದ ರಾಮಪ್ರಸಾದ್ ಅವರು ಸನ್ಮಾನಿತರ ಬಗ್ಗೆ ಮಾತನಾಡಿದರು.
ಎಲ್ಲಿದ್ದರೂ ಕನ್ನಡಿಗರೇ: ‘ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ’ ಎಂಬ ಉಕ್ತಿಯಂತೆ, ಆಬಾಲವೃದ್ಧರೆಲ್ಲರ ಮನಸ್ಸುಗಳನ್ನೂ ಸೆಳೆಯುವುದು ಸಂಗೀತ. ಜೊತೆಗೆ, ನಮ್ಮೆಲ್ಲರಿಗೆ ಅನ್ವಯಿಸುವ ವಿಷಯಗಳ ಬಗ್ಗೆ ರಚಿಸಿರುವ ಸಂಗೀತವಾದರೆ ಕೇಳಬೇಕೆ? ಕಡಲಾಚೆ ನೆಲೆಸಿರುವ ಕನ್ನಡಿಗರನ್ನು ಕುರಿತು ಈ ಗೀತಮಾಲೆಯ ಅನ್ವರ್ಥನಾಮ ‘ವಿಶ್ವಕನ್ನಡ’. ‘ಗಣನಾಥನೆ ಗಜಮುಖನೆ’ ಎಂಬ ಮೊದಲ ಹಾಡು ವಿಘ್ನವಿನಾಶಕ ಗಣೇಶನನ್ನು ಪ್ರಾರ್ಥಿಸಿದರೆ, ಎರಡನೆ ಗೀತೆಯಾದ ‘ಅಂದ ಚೆಂದದ ಮಾತೃ ಭೂಮಿಯೇ’ ಸಭಿಕರಲ್ಲಿನ ಕನ್ನಡ ನಾಡಿನ ಬಗೆಗಿನ ಒಲವನ್ನು ಪ್ರತಿಬಿಂಬಿಸಿತು. ಕುವೆಂಪುರವರ ‘ಎಲ್ಲಾದರು ಇರು ಎಂತಾದರು ಇರು’ ಎಂಬ ಕರೆಗೆ ಕನ್ನಡಿಗರು ಓಗೊಟ್ಟು ಉತ್ತರಿಸಿದಂತಿರುವ ‘ಎಲ್ಲಿದ್ದರೂ ಎಂತಿದ್ದರೂ ಕನ್ನಡಿಗರು ನಾವು’ ಎಂಬ ಹಾಡು ಮೂರನೆಯದು. ಇದು ಜಿ.ಎಸ್.ಶಿವರುದ್ರಪ್ಪನವರು ಕಳೆದ ವರ್ಷ ಹ್ಯೂಸ್ಟನ್ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನಕ್ಕಾಗಿ ವಿಶೇಷವಾಗಿ ರಚಿಸಿದ ಮುಕುಟಗೀತೆ. ಜೊತೆಗೆ ಹೊರನಾಡ ಕನ್ನಡಿಗರ ಒಂದು ರೀತಿಯ ನಾಡಗೀತೆ (ಅ್ಯಂಥೆಮ್) ಕೂಡ. ಕಡೆಯ ಹಾಡಾದ ಸಂಧ್ಯಾ ರವೀಂದ್ರನಾಥ್ ಅವರ ‘ಕನ್ನಡಜನ, ಕನ್ನಡತನ, ಕನ್ನಡ ತನುಮನ’ ನೆರೆದಿದ್ದ ಕನ್ನಡಿಗರಲ್ಲಿ ‘ನಾವು ವಿಶ್ವಕನ್ನಡಿಗರು’ ಎಂಬ ಅಭಿಮಾನವನ್ನೂ ಜಾಗೃತಿಯನ್ನೂ ಮೂಡಿಸುವ ಹಾಗಿದ್ದಿತು. ಸಂಧ್ಯಾ ಮತ್ತು ರವಿ ರವೀಂದ್ರನಾಥ್ ಅವರು ವಾಗ್ಗೇಯಕಾರ ದಂಪತಿಗಳು. ಸಂಧ್ಯಾ ಅವರು ಬರೆದು ರವಿ ರವೀಂದ್ರನಾಥ್ ಅವರು ಸಂಗೀತ ಸಂಯೋಜಿಸಿದ, ವಿಶಿಷ್ಟವಾದ ಸಾಮೂಹಿಕ ಗೀತೆಗಳ ಈ ‘ವಿಶ್ವಕನ್ನಡ’ ವೃಂದಗಾನ ಕಾರ್ಯಕ್ರಮವು ಅಪಾರ ಮೆಚ್ಚುಗೆ ಗಳಿಸಿತು. ಹತ್ತಕ್ಕೂ ಹೆಚ್ಚು ಹಾಡುಗಾರ-ಹಾಡುಗಾರ್ತಿಯರಿಂದ ಸುಂದರ ಕ್ರಮದಲ್ಲಿ ಹಾಡಿಸಿ, ನಿರ್ವಹಿಸಿದ ಕೀರ್ತಿಯೂ ಇವರಿಗೇ ಸೇರುತ್ತದೆ.
‘ಸರ್ವಸರ್ವಾತ್ಮಿಕೇ ಸರ್ವಗೇ ಸರ್ವರೂಪೇ’: ತಾಯಿ ಜಗನ್ಮಾತೆಯ ರೂಪವೈವಿಧ್ಯಗಳು ಅಪಾರ. ಆಕೆಯೇ ಸಂಪತ್ತನ್ನು ಕೊಡುವ ಲಕ್ಷ್ಮೀಯಾಗಿ, ಜ್ಞಾನವನ್ನು ಕೊಡುವ ವಾಣಿಯಾಗಿ, ಜಗತ್ತನ್ನೇ ಸಂರಕ್ಷಿಸುವ ತಾಯಿಯಾಗಿ ಮೈದೋರುತ್ತಾಳೆ. ತಾಯಿಯ ಈ ಅನೇಕ ರೂಪಗಳನ್ನು ಸ್ತುತಿಸುವ ‘ಅಖಿಲಾಂಡೇಶ್ವರಿ ಚಾಮುಂಡೇಶ್ವರಿ’ ಎಂಬ ಹಾಡಿಗೆ ನೃತ್ಯವನ್ನು ಅಳವಡಿಸಿದವರು ಕಲಾವಿದೆ ರೀಮಾ ಕಶ್ಯಪ್. ಅತ್ಯಂತ ಸುಂದರವಾಗಿ ಮೂಡಿಬಂದ ನಾಟ್ಯ ನೋಡುಗರ ಮನಗಳಲ್ಲಿ ಭಕ್ತಿಯ ಅಲೆಗಳನ್ನು ಎಬ್ಬಿಸಿತು. ಸಂಗೀತ-ನೃತ್ಯಗಳು ಇರುವುದು ಅದಕ್ಕೇ ಅಲ್ಲವೇ!
ಮೂವರೂ ಕಿವುಡರೇ: ಪ್ರಮೀಳಾ ಶಿವಶಂಕರ್ ಅವರ ನಿರ್ದೇಶನದಲ್ಲಿ, ಎಸ್. ಗುಂಡೂರಾವ್ ಬರೆದ, ಮೂರು ಪುರುಷಪಾತ್ರಗಳಿರುವ ‘ಮೂವರು ಕಿವುಡರೇ!’ ನಗೆ ನಾಟಕವನ್ನು ಶರ್ಮಿಳಾ ವಿದ್ಯಾಧರ್, ವೀಣಾ ರಮೇಶಗೌಡ ಮತ್ತು ಸುಧಾ ಪ್ರಭುದೇವ್ ಚೆನ್ನಾಗಿ ಅಭಿನಯಿಸಿದರು.
ಮುಕ್ತಾಯ : ಸುಮಾರು ನಾನೂರು ಐವತ್ತು ಜನ ಕನ್ನಡಿಗರನ್ನು ಆಕರ್ಷಿಸಿದ ಈ ವಿಷುದೀಪೋತ್ಸವವು ಭಾರತ ಮತ್ತು ಅಮೇರಿಕಾ ದೇಶಗಳ ರಾಷ್ಟ್ರಗೀತೆಗಳೊಂದಿಗೆ ಮುಕ್ತಾಯವಾಯಿತು. ಒಂದು ಒಳ್ಳೆಯ ಸಂಜೆಯನ್ನು ಕಳೆದೆವು ಎಂಬ ಅನುಭವ ಪ್ರತಿಯೋರ್ವ ಸಭಿಕನಲ್ಲಿಯೂ ಅಂದು ಮೂಡಿತ್ತೆಂದರೆ ಅತಿಶಯವೇನಲ್ಲ.!
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications