ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಎಸ್‌.ಎಸ್‌. ಅವರೊಡನೆ ಸಾಹಿತ್ಯ ಸಲ್ಲಾಪ

By Staff
|
Google Oneindia Kannada News

*ಎಂ.ಆರ್‌.ದತ್ತಾತ್ರಿ, ಸನಿವೇಲ್‌, ಕ್ಯಾಲಿಫೋರ್ನಿಯಾ

ಕನ್ನಡದ ಪ್ರಖ್ಯಾತ ಸಾಹಿತಿಗಳಾದ ಹಾಗೂ ‘ಸಮನ್ವಯ ಕವಿ’ ಎಂದು ಜನಪ್ರಿಯರಾದ ಡಾ.ಜಿ.ಎಸ್‌.ಶಿವರುದ್ರಪ್ಪನವರಿಗೆ ಅಮೆರಿಕಾ ಹೊಸದಲ್ಲ . ಈ ದೇಶಕ್ಕೆ ಇದು ಅವರ ಮೂರನೆಯ ಭೇಟಿ. ಈ ಬಾರಿ ಇಲ್ಲಿಗೆ ಬಂದಿದ್ದಾಗ, ವಾಷಿಂಗ್ಟನ್‌, ಷಿಕಾಗೋ, ನ್ಯೂಜೆರ್ಸಿ ಮುಂತಾದ ನಗರಗಳಲ್ಲಿ ‘ಸೃಜನಶೀಲತೆ ಮತ್ತು ಕವಿ’, ‘ಶ್ರೀ ರಾಮಾಯಣ ದರ್ಶನಂ ಒಂದು ವಿಚಾರ’, ‘ಇಪ್ಪತ್ತನೇ ಶತಮಾನದ ಕನ್ನಡ ಕಾವ್ಯದ ದಿಕ್ಕು’ - ಮುಂತಾದ ನಿರ್ದಿಷ್ಟ ವಿಚಾರಗಳ ಬಗ್ಗೆ ಮಾತನಾಡಿದ್ದ ಇವರು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆಸಲು ಬಯಸಿದ್ದು ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು- ಸಾಹಿತಿಯಾಡನೆ ಸಭಿಕರ, ಕೇಳುಗರೊಡನೆ ಅತಿಥಿಗಳ ‘ಸಾಹಿತ್ಯ ಸಂವಾದ’ವನ್ನು . ಅದಕ್ಕೆ ತಕ್ಕನಾಗಿ ಸ್ಪಂದಿಸಿದ್ದೆಂದರೆ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ ಮತ್ತು ಬಳಗ.

ಆಗಸ್ಟ್‌ 5 ನೇ ತಾರೀಖು ಭಾನುವಾರ ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಸನಿವೇಲ್‌ ಹಿಂದೂ ಮಂದಿರ ಮತ್ತು ಸಮುದಾಯ ಕೇಂದ್ರದಲ್ಲಿ , ಲಲಿತಾ ರಾಘವೇಂದ್ರರ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟದ ಅಧ್ಯಕ್ಷ ರಾಮ್‌ಪ್ರಸಾದ್‌ ಅವರು ಅತಿಥಿಗಳನ್ನು ಮತ್ತು ನೆರೆದ ಪ್ರೇಕ್ಷಕರನ್ನು ಸ್ವಾಗತಿಸಿದರು. ಅಲಮೇಲು ಅಯ್ಯಂಗಾರ್‌ ಅವರು ಜಿ.ಎಸ್‌.ಶಿವರುದ್ರಪ್ಪನವರನ್ನು ಪರಿಚಯಿಸಿದರು. ಕನ್ನಡ ಕೂಟದ ಅಧ್ಯಕ್ಷ , ರಾಮ್‌ಪ್ರಸಾದ್‌ ಅವರು ಕನ್ನಡ ಕೂಟದ ಪರವಾಗಿ ಜಿ.ಎಸ್‌.ಎಸ್‌. ಅವರನ್ನು ಸನ್ಮಾನಿಸಿ, ಗೌರವ ಪ್ರಶಸ್ತಿ ಫಲಕವನ್ನು ನೀಡಿದರು; ಹಾಗೂ ಕನ್ನಡ ಬಳಗದ ಅಧ್ಯಕ್ಷರಾದ ಗಜಾನನ ಜೋಷಿಯವರು ಕನ್ನಡ ಬಳಗದ ಪರವಾಗಿ ಜಿ.ಎಸ್‌.ಎಸ್‌. ಅವರನ್ನು ಶಾಲು ಹೊದಿಸಿ, ಫಲಪುಷ್ಪಗಳಿಂದ ಗೌರವಿಸಿದರು. ಮನೋರಮಾ, ಕೃಷ್ಣ ಪ್ರಸಾದ್‌, ಸಂಧ್ಯಾ ರವಿ ಮತ್ತು ರವೀಂದ್ರನಾಥ್‌ ಹಾಗೂ ರೂಪಶ್ರೀ ದತ್ತಾತ್ರಿ ಇವರುಗಳು ಸಂಗೀತಕ್ಕೆ ಅಳವಡಿಸಿದ ಶಿವರುದ್ರಪ್ಪನವರ ಕೆಲವು ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಇತ್ತೀಚೆಗೆ ನಡೆದ ಹ್ಯೂಸ್ಟನ್‌ನ ವಿಶ್ವಕನ್ನಡ ಸಮ್ಮೇಳನದ ಮುಕುಟಗೀತೆಯಾಗಿ ಶಿವರುದ್ರಪ್ಪ ಅವರು ‘ಕನ್ನಡಿಗರ ಸ್ವಗತಗೀತೆ’ ಎಂಬುದನ್ನ ಬರೆದಿದ್ದರಲ್ಲ , ಅದಕ್ಕೆ ರವಿ ರವೀಂದ್ರನಾಥರು ರಾಗ ಸಂಯೋಜಿಸಿ, ಸಂಗೀತ ನಿರ್ದೇಶನ ಮಾಡಿ ಅದನ್ನು ಗಣಕ ಧ್ವನಿಸಂಪುಟ(ಸಿ.ಡಿ)ವೊಂದರಲ್ಲಿ ಹೊರ ತಂದಿದ್ದಾರೆ. ಆ ಮುಕುಟಗೀತೆಯನ್ನು ಸಂಧ್ಯಾ ಮತ್ತು ರವಿ ಅವರು ಈ ಕಾರ್ಯಕ್ರಮದಲ್ಲಿ ಮತ್ತೆ ಹಾಡಿ ಮನರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ , ತಾವು ಹೊರತಂದ ಗಣಕ ಧ್ವನಿ ಸಂಪುಟಗಳನ್ನು ರವಿ ಅವರು ಜಿ.ಎಸ್‌.ಎಸ್‌. ಅವರಿಗೆ ಅರ್ಪಿಸಿದರು. ಆಶಾ ಬಾಲಕೃಷ್ಣ ಭಟ್‌ ತಮ್ಮ ಒಂದು ಕವಿತೆಯನ್ನು ಓದಿದರು. ಹರಿಹರೇಶ್ವರರು ಶಿವರುದ್ರಪ್ಪನವರ ‘ಹಾರೈಕೆ’ ಕವನವನ್ನು ಅರ್ಥಪೂರ್ಣವಾಗಿ ವಾಚಿಸಿದರು. ನಂತರ ಮುಂದಿನ ಕಾರ್ಯಕ್ರಮವಾಗಿ ಸಾಹಿತ್ಯ ಸಂವಾದ ಪ್ರಾರಂಭವಾಯಿತು.

ಆಸಕ್ತರ ಪ್ರಶ್ನೆಗಳಿಗೆ ಡಾ.ಜಿ.ಎಸ್‌.ಎಸ್‌. ಉತ್ತರಿಸತೊಡಗಿದರು :

‘ಪಾಶ್ಚಾತ್ಯ ಪ್ರಪಂಚದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮತ್ತು ಚಳವಳಿಗಳು ನಮ್ಮ ಕನ್ನಡ ಸಾಹಿತ್ಯದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತಿವೆ ಹಾಗೂ ವಿಶೇಷವಾಗಿ ಪ್ರಭಾವ ಏನು?’ ಎನ್ನುವ ಎಂ.ಆರ್‌.ದತ್ತಾತ್ರಿ ಅವರ ಪ್ರಶ್ನೆಗೆ ಶಿವರುದ್ರಪ್ಪನವರು ಸುದೀರ್ಘ ಉತ್ತರ ನೀಡಿದರು.

ಸಾಹಿತ್ಯ ಎಲ್ಲೆಂಲ್ಲಿಂದ ಪ್ರಭಾವವನ್ನು ಪಡೆಯುತ್ತದೆ, ಪ್ರಭಾವವನ್ನು ಬೀರುವ ಮೂಲಗಳ ಗುಣಧರ್ಮ, ಸಮಾಜದ ಮೌಲ್ಯಗಳು ಬದಲಾಗುವ ಅಂಶಗಳೇನು, ಸಮಾಜದ ಯಾವ ಪಲ್ಲಟಗಳು ಸಾಹಿತ್ಯ ಬದಲಾವಣೆಗಳಿಗೆ ಪೂರಕವಾಗುತ್ತವೆ ಎನ್ನುವುದನ್ನು ಕವಿಗಳು ಸರಳ ಉದಾಹರಣೆಗಳೊಂದಿಗೆ ಸ್ಪಷ್ಟವಾಗುವಂತೆ ವಿವರಿಸಿದರು. 20 ನೇ ಶತಮಾನದ ಪ್ರಾರಂಭದ ತನಕವೂ ಕನ್ನಡ ಭಾಷೆ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳೊಂದಿಗೆ ಮಾತ್ರ ಸಾಹಿತ್ಯಿಕವಾಗಿ ಸಂಬಂಧವನ್ನು ಹೊಂದಿತ್ತು . ಕನ್ನಡ ಕವಿ ತನ್ನ ಭಾರತೀಯ ಪರಿಸರದಲ್ಲಿ ಮಾತ್ರ ತನ್ನ ಸಂವಾದವನ್ನು ಏರ್ಪಡಿಸಿಕೊಂಡಿದ್ದ . ಆದರೆ 20 ನೇ ಶತಮಾನದ ಬ್ರಿಟಿಷ್‌ ವಸಾಹತುಶಾಹಿ ಆಡಳಿತ, ಅಸಾಮಾನ್ಯಗತಿಯ ವೈಜ್ಞಾನಿಕ ಬೆಳವಣಿಗೆಗಳು, ಸಾಮಾಜಿಕ ಬದಲಾವಣೆಗಳು ನಮಗೆ ಪಶ್ಚಿಮವನ್ನು ತೆರೆದವು. ಶೇಕ್ಸ್‌ಪಿಯರ್‌, ವರ್ಡ್ಸ್‌ವರ್ತ್‌, ಮಿಲ್ಟನ್‌ ಮುಂತಾದ ಕವಿಗಳು ನಮಗೆ ನಮ್ಮ ಕಾಳಿದಾಸ, ಕುಮಾರವ್ಯಾಸರಷ್ಟೇ ಪರಿಚಿತರಾದರು. ಇದು ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಪುನಃಚೇತನದ ಪುನರುಜ್ಜೀವನ- ಎಂದು ಅವರು ವಿವರಿಸಿದರು.

ಮುಂದಿನ ಪ್ರಶ್ನೆ ‘ವರ್ತಮಾನದಲ್ಲಿ ಪಂಪ, ಕುಮಾರವ್ಯಾಸರಂತಹ ಹಳೆಗನ್ನಡ ಕವಿಗಳನ್ನು ಓದುವ ಸಮಂಜಸತೆ’ಯನ್ನು ಕುರಿತಾದ್ದು . ಇದಕ್ಕೆ ಉತ್ತರಿಸುತ್ತಾ , ಅಲ್ಲಮಪ್ರಭುವಿನ ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ಮುಂದಣ ಹೆಜ್ಜೆಯನರಿಯಲಾರದು’ ಎಂಬ ಉಲ್ಲೇಖವನ್ನು ನೀಡಿ, ಬೆಳೆದು ಹೆಮ್ಮರವಾದ ಕನ್ನಡ ಸಾಹಿತ್ಯದ ಅಂದಂದಿನ ದೇಣಿಗೆಗಳನ್ನು ಅಭ್ಯಸಿಸುವುದರ ಮೂಲಕ ಸಮಾಜದ ಬೇರುಗಳನ್ನು ಹೇಗೆ ಅರಿತುಕೊಳ್ಳಬಹುದು ಎನ್ನುವುದನ್ನು ತಿಳಿಸಿದರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X