'ಅನಕ್ಷರಸ್ಥರ ಸೈನ್ಯದಿಂದ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದದು': ಅಮಿತ್ ಶಾ
ನವದೆಹಲಿ, ಅಕ್ಟೋಬರ್ 27: "ಅನಕ್ಷರಸ್ಥರ ಸೈನ್ಯದಿಂದ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಡೆಲೆವರಿ ಡೆಮಾಕ್ರಸಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಪರಾಮರ್ಶೆ ಎಂಬ ಬಗ್ಗೆ ನಡೆದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ "ನನ್ನನ್ನು ಟ್ರೋಲ್ ಮಾಡಲಾಗಿದೆ. ಆದರೆ ಕೂಡಾ ನಾನು ಪುನರುಚ್ಛರಿಸಲು ಬಯಸುತ್ತೇನೆ. ಅನಕ್ಷರಸ್ಥರ ಸೈನ್ಯದಿಂದ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅವರಿಗೆ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ," ಎಂದು ತಿಳಿಸಿದರು.
"ಯಾರಿಗೆ ತಮ್ಮ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾಹಿತಿನ ಇರುವುದಿಲ್ಲವೋ ಆತ ದೇಶಕ್ಕೆ ಕೊಡುಗೆ ನೀಡಲು ಸಾಧ್ಯವಿಲ್ಲ," ಎಂದು ಕೂಡಾ ಅಮಿತ್ ಶಾ ಹೇಳಿದರು. "ಪ್ರಧಾನ ಮಂತ್ರಿನ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಶೇಕಡ 67 ರಷ್ಟು ಮಂದಿ ಶಿಕ್ಷಣ ಪಡೆಯುತ್ತಿದ್ದರು. ಆದರೆ ಶೇಕಡ 37 ರಷ್ಟು ಶಿಕ್ಷಣವನ್ನು ಅರ್ಧಕ್ಕೆ ಬಿಡುತ್ತಿದ್ದರು. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ 'ಬೇಟಿ ಬಚಾವೋ, ಬೇಟಿ ಪಡಾವೋ' ಕಾರ್ಯಕ್ರಮವನ್ನು ಆರಂಭ ಮಾಡಿದೆ," ಎಂದು ಈ ಕಾರ್ಯಕ್ರಮದಲ್ಲೇ ಅಮಿತ್ ಶಾ ಉಲ್ಲೇಖಿಸಿದರು.

ಪ್ರಧಾನಿ ಮೋದಿಯ ಬೇಟಿ ಬಚಾವೋ, ಬೇಟಿ ಪಡಾವೋ ಉಲ್ಲೇಖ
"ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆರಂಭ ಮಾಡಿದ ಈ 'ಬೇಟಿ ಬಚಾವೋ, ಬೇಟಿ ಪಡಾವೋ' ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ ಶೇಕಡ 100 ರಷ್ಟು ದಾಖಲಾತಿ ಆರಂಭವಾಯಿತು. ಶಾಲೆಯನ್ನು ಅರ್ಧಕ್ಕೆ ಬಿಡುವ ವಿದ್ಯಾರ್ಥಿನಿಯರ ಸಂಖ್ಯೆಯು ಶೂನ್ಯಕ್ಕೆ ಬರುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು," ಎಂದು ವಿವರಿಸಿದರು.

ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ಅಮಿತ್ ಶಾ
"ನರೇಂದ್ರ ಮೋದಿ ಅನ್ನು ಗುಜರಾತ್ನ ಮುಖ್ಯಮಂತ್ರಿ ಆಗಿ ಮಾಡುವ ಬಿಜೆಪಿಯ ನಿರ್ಧಾರ ಬಹಳ ಅಪರೂಪದ ನಿರ್ಧಾರ. ಯಾಕೆಂದರೆ ನರೇಂದ್ರ ಮೋದಿಗೆ 2001 ರಲ್ಲಿ ರಾಜ್ಯವನ್ನು ಆಳ್ವಿಕೆ ಮಾಡುವ ಯಾವುದೇ ಅನುಭವಗಳು ಇರಲಿಲ್ಲ. 1960 ರ ದಶಕದ ನಂತರ ಮತ್ತು 2014 ರ ಹೊತ್ತಿಗೆ ಬಹು-ಪಕ್ಷದ ಪ್ರಜಾಪ್ರಭುತ್ವ ವ್ಯವಸ್ಥೆಯು ಯಶಸ್ವಿಯಾಗಬಹುದೇ ಎಂದು ಜನರು ಅನುಮಾನಿಸಿದರು. ಈ ವ್ಯವಸ್ಥೆಯು ವಿಫಲವಾದರೆ ಎಂಬ ಭಾವನೆಯನ್ನು ಜನರು ಹೊಂದಿದ್ದರು. ಆದರೆ ಬಹು ತಾಳ್ಮೆಯಿಂದ ಜನರು ನೋಡಿ 2014 ರಲ್ಲಿ ನರೇಂದ್ರ ಮೋದಿಯನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದಾರೆ," ಎಂದರು.

ಮನ್ಮೋಹನ್-ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ಇನ್ನು ಈ ಸಂದರ್ಭದಲ್ಲೇ ಕಾಂಗ್ರೆಸ್ ವಿರುದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. "ಯುಪಿಎ ಸರ್ಕಾರಕ್ಕೆ ಯಾವುದೇ ನೀತಿ ಎಂಬುವುದು ಇರಲಿಲ್ಲ. ಹಾಗೆಯೇ ದೇಶದ ಮುಂದಿನ ಸ್ಥಿತಿಯ ಬಗ್ಗೆ ಯಾವುದೇ ಕಣ್ಣೋಟವು ಇರಲಿಲ್ಲ. ಪ್ರತಿ ದಿನವು ಹೊಸ ಹೊಸ ಭ್ರಷ್ಟಾಚಾರ ಹೊರ ಬರುತ್ತಿದ್ದವು," ಎಂದು ಆರೋಪ ಮಾಡಿದರು. "2014 ರ ಚುನಾವಣೆಗೂ ಮುನ್ನ ಮನಮೋಹನ್ ಸಿಂಗ್ ಜಿ ಸರ್ಕಾರವು ಹತ್ತು ವರ್ಷಗಳ ಕಾಲ ಸರ್ಕಾರವನ್ನು ನಡೆಸಿತು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಂಪುಟ ಸಚಿವರುಗಳು ತಮ್ಮನ್ನು ತಾವೇ ಪ್ರಧಾನಿ ಎಂದು ಅಂದುಕೊಂಡಿದ್ದರು. ದೇಶಕ್ಕಾಗಿ ಯಾವುದೇ ಒಂದು ಯೋಜನೆಗಳು ಇರಲಿಲ್ಲ. ದೇಶದ ರಕ್ಷಣೆಗಾಗಿ ಯಾವುದೇ ಒಂದು ಮಾತುಕತೆ ನಡೆಯುತ್ತಿರಲಿಲ್ಲ. ಪ್ರತಿ ದಿನವು ಒಂದು ಹೊಸ ಭ್ರಷ್ಟಾಚಾರ ಪ್ರಕರಣವು ಬೆಳಕಿಗೆ ಬರುತ್ತಿದ್ದವು," ಎಂದು ದೂರಿದರು.

ದೇವರ ಸಂದೇಶವಾಹಕರಂತೆ ಪ್ರಧಾನಿ ಮೋದಿ ಎಂದ ಶಾ
ಇನ್ನು ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಮತ್ತೆ ಹಾಡಿ ಹೊಗಳಿದ ಅಮಿತ್ ಶಾ, "ಯೋಗ ಮತ್ತು ಆಯುರ್ವೇದವನ್ನು ಜಗತ್ತಿಗೆ ಕೊಂಡೊಯ್ಯುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವರ ಸಂದೇಶವಾಹಕರಂತೆ ವರ್ತಿಸಿದರು. ವಿಶ್ವದಲ್ಲಿ ಪ್ರಧಾನಿ ಮೋದಿ ದೇವರ ಸಂದೇಶವಾಹಕರಂತೆ ಬಂದರು. ಯೋಗ ಹಾಗೂ ಆಯುರ್ವೇದವನ್ನು ವಿಶ್ವದ 177 ದೇಶಗಳಿಗೆ ಪ್ರಧಾನಿ ಮೋದಿ ತಲುಪಿಸಿದ್ದಾರೆ," ಎಂದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications