ಬಡವರಿಗೆ ಗುಡಿಸಲು, ಉಳ್ಳವರಿಗೆ ಆಶ್ರಯ ಮನೆಗಳು!
Recommended Video

ಯಾದಗಿರಿ, ಅಕ್ಟೋಬರ್ 26 : ಆ ಊರು ಜಿಲ್ಲಾ ಕೇಂದ್ರದಿಂದ ಕೂಗಳತೆಯ ದೂರದಲ್ಲಿದೆ. ಆ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ವಸತಿ ರಹಿತರಿಗೆ ಸಿಗಬೇಕಾದ ಮನೆಗಳು ಅವರಿಗೆ ತಲುಪುತ್ತಿಲ್ಲ. ಕಳೆದ 30 ವರ್ಷಗಳಿಂದ ಹಲವು ಕುಟುಂಬಗಳು ಗುಡಿಸಲಿನಲ್ಲಿಯೇ ವಾಸ ಮಾಡುತ್ತಿವೆ.
ಬಡವರಿಗೆ ಆಶ್ರಯ ನೀಡಬೇಕಿದ್ದ ಆಶ್ರಯ ಯೋಜನೆ ಮನೆಗಳು ಉಳ್ಳವರ ಪಾಲಾಗುತ್ತಿವೆ. ಪ್ರತಿ ವರ್ಷ ಆಶ್ರಯ ಮನೆ ಪಡೆಯಲು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಮನೆ ಮಾತ್ರ ಸಿಕ್ಕಿಲ್ಲ. ಇದು ಯಾದಗಿರಿ ಜಿಲ್ಲೆಯ ಲಿಂಗೇರಿ ಸ್ಟೇಷನ್ ಗ್ರಾಮದ ನಿವಾಸಿಗಳ ಕಥೆ.

ವೃದ್ಧೆ ಮಾದೇವಮ್ಮ ಕಳೆದ ಮೂರು ದಶಕಗಳಿಂದ ಗುಡಿಸಲಿನಲ್ಲಿಯೇ ಜೀವನ ನಡೆಸುತ್ತಿದ್ದಾಳೆ. ಕೂಲಿ ಮಾಡಿಕೊಂಡು ಇವರು ಜೀವನ ನಡೆಸುವುದೇ ಕಷ್ಟ. ಇನ್ನು ಸ್ವಂತ ಸೂರು ಮಾಡಿಕೊಳ್ಳುವುದು ಕನಸಿನ ಮಾತು. ದುರಂತವೆಂದರೆ ಮಾದೇವಮ್ಮ ಹೆಸರಿಗೆ ನಾಲ್ಕು ಬಾರಿ ಮನೆಗಳು ಮಂಜೂರಾಗಿತ್ತು. ಆದರೆ, ಅಧಿಕಾರಿಗಳ ಕೈ ಚಳಕದಿಂದಾಗಿ ಅದು ಬೇರೆಯವರಿಗೆ ಮಂಜೂರಾಗಿದೆ.

ಲಿಂಗೇರಿ ಸ್ಟೇಷನ್ ಗ್ರಾಮದ ಹಲವು ಕುಟುಂಬಗಳದ್ದು ಇದೇ ಪರಿಸ್ಥಿತಿ. ಯಾರಿಗೂ ಆಶ್ರಯ ಮನೆಗಳು ಸಿಕ್ಕಿಲ್ಲ. ಇನ್ನೂ ಗುಡಿಸಿಲಿನಲ್ಲಿಯೇ ವಾಸ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ತಮಗೆ ಬೇಕಾದವರಿಗೆ ವಸತಿ ಯೋಜನೆಯ ಮನೆಗಳನ್ನು ಹಂಚಿಕೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಲಿಂಗೇರಿ ಸ್ಟೇಷನ್ ಗ್ರಾಮದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳಿವೆ. ಊರಿನ ನಡುವೆಯೇ ರೇಲ್ವೆ ಮಾರ್ಗ ಹಾದುಹೋಗಿದೆ. ಗ್ರಾಮ ಇಬ್ಭಾಗವಾಗಿದ್ದು ಅರ್ಧ ನಿವಾಸಿಗಳಿಗೆ ವಿದ್ಯುತ್ ಇಲ್ಲ. ಇನ್ನೂ ಅರ್ಧ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸುವುದಕ್ಕೂ ಸ್ಥಳೀಯ ಆಡಳಿತ ಮನಸ್ಸು ಮಾಡುತ್ತಿಲ್ಲ.












Click it and Unblock the Notifications