ಕುವೆಂಪು, ನಾಡಗೀತೆಯನ್ನು ಟೀಕಿಸಿದ ಸಾಹಿತಿ ಪಾಟೀಲ ಪುಟ್ಟಪ್ಪ
ಯಾದಗಿರಿ, ನವೆಂಬರ್ 20 : ಸಾಹಿತಿ ಪಾಟೀಲ ಪುಟ್ಟಪ್ಪ ಅವರು ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಹಾಗೂ ಅವರು ರಚಿಸಿದ ನಾಡಗೀತೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ "ಕನ್ನಡ ನುಡಿ ಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು "ಕುವೆಂಪು ಅವರು ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿದ್ದರೂ ಅವರೆಂದೂ ಕರ್ನಾಟಕವನ್ನು ಸುತ್ತಿ ನೋಡಲೇ ಇಲ್ಲ' ಎಂದು ಕುವೆಂಪು ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

ನಾಡಗೀತೆಯ ಬಗ್ಗೆಯೂ ಬೇಸರ ವ್ಯಕ್ತಡಿಸಿದ ಅವರು, ಮೈಸೂರು ಸಂಸ್ಥಾನ ಸ್ಥಾಪನೆಯಾಗಿ 23 ವರ್ಷಗಳ ಕಾಲ ಹುಯಿಲಗೋಳ ನಾರಾಯಣರಾಯರ "ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ಹಾಡೇ ನಾಡ ಗೀತೆಯಾಗಿತ್ತು ಅದನ್ನೇ ನಾಡಗೀತೆಯಾಗಿ ಮುಂದುವರೆಸಬಹುದಿತ್ತು' ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿಯೂ ಅವರು ವಂದೆ ಮಾತರಂ ಗೀತೆ ಹಾಡಿದರೆ ಮಾತ್ರ ಕಾರ್ಯಕ್ರಮ ಉದ್ಘಾಟನೆ ಮಾಡುವುದಾಗಿ ಪಟ್ಟು ಹಿಡಿದರು. ಆಗ ಅಲ್ಲಿಯೇ ಇದ್ದ ಕಲಾವಿದರೊಬ್ಬರು ವಂದೇ ಮಾತರಂ ಗೀತೆಯನ್ನು ಕೊಳಲಿನಲ್ಲಿ ನುಡಿಸಿದ ನಂತರವಷ್ಟೆ ಪಾಟೀಲ ಪುಟ್ಟಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಆಯೋಜಕರು ಪಾಪು ಅವರಿಗೆ ಮೈಸೂರು ಪೇಟ ತೊಡಿಸಲು ಮುಂದಾದಾಗ ಆಯೋಜಕರ ಮೇಲೆ ಕೋಪಗೊಂಡ ಅವರು, 'ನಾನು ಸದಾ ಮೈಸೂರು ಅರಸರ ವಿರೋಧಿ ನನಗೆ ಮೈಸೂರು ಪೇಟ ತೊಡಿಸಬೇಡಿ' ಎಂದರು.
'ಮೈಸೂರು ಅರಸರ ಪ್ರಾಂತ್ಯವಾರು ಆಡಳಿತಾವಧಿಯಲ್ಲಿ ಉತ್ತರ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನಾನೆಂದೂ ಮೈಸೂರಿನ ಅರಸರ ಆಳ್ವಿಕೆ ಒಪ್ಪುವುದಿಲ್ಲ' ಎಂದು ಆವೇಷಭರಿತವಾಗಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದ ಪಾಪು ಅವರು 'ದೇಶ ಸ್ವತಂತ್ರಗೊಂಡಾಗ ಕನ್ನಡ ರಾಜ್ಯಕ್ಕೆ 'ಮೈಸೂರು ರಾಜ್ಯ' ಎಂದು ನಾಮಕರಣ ಮಾಡಲಾಯಿತು. ಬೆಂಗಳೂರು ರಾಜಧಾನಿ ಮಾಡುತ್ತೇವೆ ಎಂದಾಗ ಅದಕ್ಕೂ ಒಪ್ಪಿದೆವು. ಮೈಸೂರು ಸಂಸ್ಥಾನದ ಗವರ್ನರ್ ಅವರನ್ನು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿಸಿದಾಗಲೂ ಒಪ್ಪಿದೆವು. ಎಲ್ಲವನ್ನೂ ಒಪ್ಪಿಕೊಂಡು ಬಂದಿರುವ ನಮಗೆ, ಏನು ಆದ್ಯತೆ ಸಿಕ್ಕಿದೆ? ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ಉದಯವಾಗಿ 61ವರ್ಷ ಗತಿಸಿದರೂ ಈಗಲೂ ಈ ಪ್ರದೇಶಗಳು ಕನಿಷ್ಠ ಸೌಲಭ್ಯಕ್ಕಾಗಿ ಹಾತೊರೆಯುತ್ತಿವೆ. ಹೈದರಾಬಾದ್, ಉತ್ತರ ಕರ್ನಾಟಕ ಅಭಿವೃದ್ಧಿಗೆ ಮೈಸೂರು ಅರಸರ ಮಾದರಿಯಲ್ಲಿಯೇ ಸರ್ಕಾರ ಆಳುವವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ' ಎಂದು ಆರೋಪಿಸಿದರು.












Click it and Unblock the Notifications