ಯಾದಗಿರಿಯಲ್ಲಿ ಮರೀಚಿಕೆಯಾದ ಉದ್ಯೋಗ ಸೃಷ್ಟಿ
ಯಾದಗಿರಿ, ಅಕ್ಟೋಬರ್ 17 : ಬಡತನ, ಬರಗಾಲದಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಲಾಗಿದೆ. ಅದು ಕಾರ್ಯರೂಪಕ್ಕೆ ಬಂದಿದ್ದರೆ ಸುಮಾರು 10 ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಆದರೆ, ಅದು ನಡೆದಿಲ್ಲ. ಉದ್ಯೋಗದ ನಿರೀಕ್ಷೆ ಮಾತ್ರ ಹಾಗೆಯೇ ಉಳಿದಿದೆ.
ಕೈಗಾರಿಕೆ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಉದ್ದೇಶದಿಂದ ಕೆಐಎಡಿಬಿಯು ಯಾದಗಿರಿ ತಾಲೂಕಿನ ಕಡೇಚೂರು ಹಾಗೂ ಬಾಡಿಹಾಳ ಗ್ರಾಮಗಳ ಬಳಿ 3,300 ಎಕರೆ ಜಮೀನು ವಶಪಡಿಸಿಕೊಂಡು ಹಲವು ವರ್ಷಗಳು ಕಳೆದಿವೆ. ಇಲ್ಲಿಯವರೆಗೂ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ.

ಕಡೇಚೂರು, ಬಾಡಿಹಾಳ ಬಳಿಯ ಕೆಐಎಡಿಬಿ ಪ್ರದೇಶದಲ್ಲಿ ಕಂಪನಿಗಳು ಸ್ಥಾಪನೆಯಾಗುತ್ತಿಲ್ಲ. ಇದರಿಂದ ಉದ್ಯೋಗದ ನೀರಿಕ್ಷೆಯಲ್ಲಿದ್ದ ಜಮೀನು ಕಳೆದುಕೊಂಡ ಫಲಾನುಭವಿಗಳು ಹಾಗೂ ಈ ಭಾಗದ ಯುವಕರಿಗೆ ನಿರಾಸೆ ಉಂಟಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಐದು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಆದರೆ, ಅನುಷ್ಠಾನಕ್ಕೆ ಬಂದಿಲ್ಲ.
ಕೆಐಎಡಿಬಿ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸೇರಿದಂತೆ ಹಲವು ಬೃಹತ್ ಕಂಪನಿಗಳು ಸ್ಥಾಪನೆ ಯಾಗಬೇಕಿತ್ತು. ಸದ್ಯಕ್ಕೆ ರೇಲ್ವೆ ಕೋಚ್ ಫ್ಯಾಕ್ಟರಿ ಮಾತ್ರ ಸ್ಥಾಪನೆಯಾಗಿದೆ. ಇನ್ನು ಕೆಲವು ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದರು ಕಾಮಗಾರಿ ಆರಂಭಿಸಿಲ್ಲ.

ರಸ್ತೆ ಅಭಿವೃದ್ಧಿ ಬಿಟ್ಟು ಯಾವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸವಂತಹ ಕೆಲಸಗಳು ನಡೆದಿಲ್ಲ. ವಿದ್ಯುತ್, ನೀರಿನ ವ್ಯವಸ್ಥೆಯು ಕೈಗಾರಿಕೆ ಪ್ರದೇಶದಲ್ಲಿ ಇಲ್ಲದಿರುವುದರಿಂದ ಕೆಲಸ ಆರಂಭಿಸಲು ಕಂಪನಿಗಳು ಮುಂದೆ ಬರುತ್ತಿಲ್ಲ ಎನ್ನವುದು ಸ್ಥಳೀಯರ ಆರೋಪ.
ಈ ಭಾಗದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಯುವಕರು ಆಶಾಭಾವ ಹೊಂದಿದ್ದರು. ಜಮೀನು ಕಳೆದುಕೊಂಡ ಸಣ್ಣ ಮತ್ತು ಬಡ ರೈತರು, ಭೂಮಿಯೂ ಇಲ್ಲ, ಕೆಲಸವೂ ಇಲ್ಲದೇ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಜನರ ಅನುಕೂಲಕ್ಕಾಗಿ ಯೋಜನೆ ರೂಪಿಸಿದರೂ ಅನುಷ್ಠಾನಕ್ಕೆ ತರುವ ಅಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ.












Click it and Unblock the Notifications