ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳನ್ನು ಹಿಂಪಡೆದಿಲ್ಲ : ರೆಡ್ಡಿ
ಯಾದಗಿರಿ, ಅಕ್ಟೋಬರ್ 22: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)ದ ಯಾವ ಅಧಿಕಾರಿಗಳನ್ನೂ ಹಿಂದಕ್ಕೆ ಪಡೆದಿಲ್ಲ. ಇದು ಕೇವಲ ಮಾಧ್ಯಮಗಳ ಉಹಾಪೋಹ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ನೂತನ ಪೋಲಿಸ್ ಕಛೇರಿ ಉದ್ಘಾಟನೆ ನಂತರ ಮಾಧ್ಯಮಗಳ ಜತೆ ಮಾಡನಾಡಿದ ಅವರು, "ಎಡಪಂಥ - ಬಲಪಂಥ ಇವು ಯಾವುದನ್ನೂ ಪರಿಗಣಿಸದೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ," ಎಂದು ಹೇಳಿದರು.

ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಆದರೆ ಇದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಖಚಿತವಾದ ಸಾಕ್ಷಿ, ಆಧಾರಗಳು ಸಿಕ್ಕ ನಂತರ ಬಹಿರಂಗ ಪಡಿಸುವುದಾಗಿ ಮತ್ತೆ ತಮ್ಮ ಹಳೇ ಡೈಲಾಗ್ ಬಿಟ್ಟರು.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಶೀಘ್ರದಲ್ಲೇ ಅಧಿಕಾರಿಗಳು ಭೇದಿಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬಿಜೆಪಿಯಲ್ಲೇ ಗೊಂದಲ
ಟಿಪ್ಪು ಜಯಂತಿ ಆಚರಿಸುವ ವಿಚಾರವಾಗಿ ಬಿಜೆಪಿಯವರ ಮಧ್ಯೆಯೇ ಗೊಂದಲಗಳಿವೆ. ಕೆಜೆಪಿ ಯಲ್ಲಿದ್ದಾಗ ಯಡಿಯೂರಪ್ಪ ಟಿಪ್ಪುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ರೆಡ್ಡಿ ದೂರಿದರು.
ಮೊದಲು ಬಿಜೆಪಿಯವರು ತಮ್ಮಲ್ಲಿದ್ದ ಗೊಂದಲಗಳನ್ನು ಸರಿಪಡಿಸಿಕೊಂಡು ನಂತರ ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಮಾತನಾಡಲಿ ಎಂದು ಅವರು ಸಲಹೆ ನೀಡಿದರು.
ಕಲ್ಲಿದ್ದಲು ಕಂಪನಿಗಳ ಪರ ಸರ್ಕಾರದ ದಂಡ ಪಾವತಿ ವಿಚಾರದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, "ಬಿಜೆಪಿಯವರಿಗೆ ಸರ್ಕಾರದ ಬಗ್ಗೆ ಆರೋಪ ಮಾಡುವುದು ಬಿಟ್ಟು ಬೇರೆ ಕೇಲಸವಿಲ್ಲ," ಎಂದು ಜರೆದರು.












Click it and Unblock the Notifications