ಕರ್ನಾಟಕದ ಶಾಲಾ ಪಠ್ಯಯಲ್ಲಿ ಭಗವದ್ಗೀತೆ ಸೇರಿಸುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ
ಯಾದಗಿರಿ, ಮಾರ್ಚ್ 19: ಕರ್ನಾಟಕದಲ್ಲಿ ಹಿಜಾಬ್ ಬೆನ್ನಲ್ಲೇ ಇದೀಗ ಭಗವದ್ಗೀತೆ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಸಿಎಂ, ಮಕ್ಕಳಲ್ಲಿ ನೈತಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ನೀಡುವುದೇ ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.
ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಸಚಿವರು ಪ್ರಸ್ತಾಪ ಇಟ್ಟಿದ್ದಾರೆ. ಗುಜರಾತಿನಲ್ಲಿ ಈಗಾಗಲೇ ಈ ಕುರಿತು ಚರ್ಚೆಯಾಗಿದ್ದು, ಭಗವದ್ಗೀತೆಯನ್ನು ಸೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದಾರೆ. ಅದೇ ರೀತಿ ನಮ್ಮಲ್ಲಿಯೂ ಚರ್ಚೆ ನಡೆಸಲಾಗುತ್ತಿದೆ. ತದನಂತರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನೈತಿಕತೆ ಯಾವುದರಿಂದ ಬರುತ್ತಪ್ಪಾ:
ರಾಜ್ಯದಲ್ಲಿ ಈಗಾಗಲೇ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದಕ್ಕೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಯಾದಗಿರಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಎಂ ಕೊಂಚ ಗರಂ ಆಗಿದ್ದರು. ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಿದರೆ ಮಕ್ಕಳಲ್ಲಿ ನೈತಿಕತೆ ಹೆಚ್ಚಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಡಿಮಿಡಿಗೊಂಡರು. ಮತ್ತೆ ನೈತಿಕತೆ ಇನ್ಯಾವುದರಿಂದ ಹೆಚ್ಚಾಗುತ್ತದೆ ಹೇಳಪ್ಪಾ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಗಿ ಅಲ್ಲಿಂದ ಹೊರಟರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3000 ಕೋಟಿ:
ಭಗವದ್ಗೀತೆ ಕುರಿತು ಹೇಳಿಕೆ ನೀಡುವುದಕ್ಕೂ ಮೊದಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 3000 ಕೋಟಿ ರೂ. ಅನುದಾನ ನೀಡಿರುವ ಬಗ್ಗೆ ತಿಳಿಸಿದರು. ವಲಯವಾರು ಶಿಕ್ಷಣ, ಆರೋಗ್ಯ, ಅಪೌಷ್ಠಿಕತೆಗೆ ಪ್ರತ್ಯೇಕವಾಗಿ ಅನುದಾನ ನೀಡಿದೆ. ಅದರ ಜೊತೆಗೆ ಎಸ್.ಡಿ.ಪಿ ಅಡಿ ನಂಜುಂಡಪ್ಪ ವರದಿ ಪ್ರಕಾರ ನೀಡಬೇಕಾಗುತ್ತದೆ. ಸಂಪುಟ ಉಪಸಮಿತಿ ರಚಿಸಿದ್ದು, ಅದರ ಶಿಫಾರಸ್ಸಿನಂತೆ ಅನುದಾನ ನೀಡಲಾಗುವುದು ಎಂದರು.
ಯಾದಗಿರಿ ಜಿಲ್ಲೆಯಲ್ಲಿ 1000 ಕೋಟಿ ರೂ.ಗಳಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ಹಾಗೂ ಸಿಲಿಂಡರ್ ಸ್ಪೋಟದಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲಾಗುವುದು. ಅಭಿವೃದ್ಧಿ ಪ್ರಾರಂಭಿಸುವ ದೃಷ್ಟಿಯಿಂದ ಇಂದು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.












Click it and Unblock the Notifications