ರಾಜ್ಯದಲ್ಲಿರುವ ಜಿಲ್ಲೆಗಳೆಷ್ಟು?: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಪ್ರಕಾರ 34!
ಯಾದಗಿರಿ, ಅಕ್ಟೋಬರ್ 17: ರಾಜ್ಯದಲ್ಲಿ 34 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಗೆಪಾಟಲಿಗೀಡಾಗಿದ್ದಾರೆ. ಎರಡೆರಡು ಬಾರಿ ಜಿಲ್ಲಾ ಪ್ರವಾಸದ ಕುರಿತು ಮಾತನಾಡಿದ ಅವರು, ಎರಡೂ ಬಾರಿ ತಪ್ಪಾಗಿ ಜಿಲ್ಲೆಗಳ ಸಂಖ್ಯೆಯನ್ನು ಹೇಳಿರುವುದು ಅವರ ಜ್ಞಾನಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ ಎಂಬ ಟೀಕೆ ವ್ಯಕ್ತವಾಗಿದೆ.
ರಾಜ್ಯ ಪ್ರವಾಸದ ನಡುವೆ ಯಾದಗಿರಿ ಜಿಲ್ಲೆಗೆ ಗುರುವಾರ ಆಗಮಿಸಿದ ಅವರು, ಸರ್ಕೀಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಈಗ 32ನೇ ಜಿಲ್ಲೆಗೆ ಆಗಮಿಸಿದ್ದೇನೆ ಎಂದು ಹೇಳಿದರು. ಬಳಿಕ ಬಿಜೆಪಿ ಜಿಲ್ಲಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ 34ನೇ ಜಿಲ್ಲೆಗೆ ಭೇಟಿ ನೀಡಿರುವುದಾಗಿ ಹೇಳಿದರು.
ರಾಜ್ಯದಲ್ಲಿರುವುದು ಒಟ್ಟು 30 ಜಿಲ್ಲೆಗಳು. ಆದರೆ ಬಿಜೆಪಿ ರಾಜ್ಯಾಧ್ಯಕ್ಷರು ಮೊದಲು 32 ಜಿಲ್ಲೆಗಳು ಎಂದು ಹೇಳಿ, ಬಳಿಕ 34 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿರುವುದು ನಗೆಪಾಟಲಿಗೆ ಒಳಗಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬ ಸಾಮಾನ್ಯ ತಿಳಿವಳಿಕೆಯೇ ಇಲ್ಲ. ಇನ್ನು ಪಕ್ಷ ಸಂಘಟನೆ ಹೇಗೆ ಮಾಡುತ್ತಾರೆ ಎಂದು ಅನೇಕರು ಟೀಕಿಸಿದ್ದಾರೆ.

32ನೇ ಜಿಲ್ಲೆಯಾದ ಯಾದಗಿರಿ
'ನನಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಬಳಿಕ ಇಡೀ ರಾಜ್ಯದ ಪ್ರವಾಸ ಮಾಡುತ್ತಿದ್ದೇನೆ. ಪ್ರತಿ ಜಿಲ್ಲೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟನಾ ಪರ್ವ ನಡೆಸುತ್ತಿದ್ದೇವೆ. ಮತಗಟ್ಟೆ ಸಮಿತಿ ರಚಿಸುವುದು, ಸದಸ್ಯತ್ವ ಅಭಿಯಾನ ಚುರುಕುಗೊಳಿಸುವುದು ಮುಂತಾದ ಕೆಲಸಗಳನ್ನು ನಡೆಸಲಾಗುತ್ತಿದೆ. ಈಗಾಗಲೇ 31 ಜಿಲ್ಲೆಗಳ ಪ್ರವಾಸ ಮಾಡಿದ್ದು, ರಾಯಚೂರಿನ ನಂತರ 32ನೇ ಜಿಲ್ಲೆಯಾದ ಯಾದಗಿರಿಗೆ ಬಂದಿದ್ದೇನೆ' ಎಂದರು.

34ನೇ ಜಿಲ್ಲೆಗೆ ಬಂದಿದ್ದೇನೆ
ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರಾದ್ಯಂತ ಪಾದಯಾತ್ರೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಕೂಡ ಪ್ರತಿ ಜಿಲ್ಲೆಗಳಲ್ಲಿ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ವೇಗ ನೀಡಲು ಯಾದಗಿರಿಗೆ ಆಗಮಿಸಿದ್ದೇನೆ ಎಂದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು, 33 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, 34ನೇ ಜಿಲ್ಲೆಗೆ ಆಗಮಿಸಿದ್ದೇನೆ ಎಂದು ಹೇಳಿದರು.

ಶಾಲಾ ಪುಸ್ತಕವನ್ನು ಓದಿ
ನಳಿನ್ ಕುಮಾರ್ ಕಟೀಲ್ ಅವರೇ, ರಾಜ್ಯದಲ್ಲಿ 32 ಜಿಲ್ಲೆಗಳಾ? ರಾಜ್ಯದಲ್ಲೆಷ್ಟು ಜಿಲ್ಲೆಗಳಿವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ನೀವು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವಿರಿ ಮತ್ತು ಬಿಜೆಪಿ ಕರ್ನಾಟಕದ ಅಧ್ಯಕ್ಷರಾಗಿರುವಿರಿ. ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕವನ್ನು ಒಮ್ಮೆ ಕೊಂಡು ಓದಿ, ಕನಿಷ್ಠವಾದರೂ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಿರಿ ಎಂದು ಕರ್ನಾಟಕ ಕಾಂಗ್ರೆಸ್ ಕಟೀಲ್ ಅವರನ್ನು ಟೀಕಿಸಿದೆ.

ಸಿದ್ದರಾಮಯ್ಯ ಹೇಳಿದ್ದು ಸತ್ಯವಾಯಿತು
'ಭಲೇ ...ಭೇಷ್ ....ಮತ್ತೊಮ್ಮೆ ಮಾನ್ಯ ಸಿದ್ದರಾಮಯ್ಯರವರ ಮಾತು ಸತ್ಯವಾಯಿತು. BJP ಗೆ ಒಬ್ಬ ಕಾಮಿಡಿ ಪೀಸ್ ಅಗತ್ಯ ಇತ್ತು ಅದಕ್ಕೆ ನಳೀನ್ ಕುಮಾರ್ ಕಟೀಲ್ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದು ಮಾನ್ಯ ಸಿದ್ದರಾಮಯ್ಯನವರು ನುಡಿದಿದ್ದರು' ಎಂದು ಟ್ವಿಟ್ಟರ್ನಲ್ಲಿ ಒಬ್ಬರು ಕಟೀಲ್ ಕಾಲೆಲೆದಿದ್ದಾರೆ. 'ನಿಮ್ಮನ್ನು ಯಾರು ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು? ನೀವು ಮೊದಲು ಡಾಲರ್ಅನ್ನು ರೂಪಾಯಿ ಮೌಲ್ಯಕಿಂತ ಕಡಿಮೆ ಮಾಡುವ ಕೆಲಸ ಮಾಡಿ ನಂತರ ರಾಜ್ಯ ಜಿಲ್ಲೆಗಳಿಗೆ ಹೋಗುವಿರಂತೆ' ಎಂಬುದಾಗಿ ಮತ್ತೊಬ್ಬರು ಟ್ರೋಲ್ ಮಾಡಿದ್ದಾರೆ.












Click it and Unblock the Notifications