ಯಾದಗಿರಿ: ಅಡ್ಡ ಮತದಾನ, 7 ಕಾಂಗ್ರೆಸ್ ನಗರಸಭೆ ಸದಸ್ಯರು ಅನರ್ಹ
ಯಾದಗಿರಿ, ಡಿಸೆಂಬರ್ 20: ಯಾದಗಿರಿ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದ 7 ಜನ ಕಾಂಗ್ರೆಸ್ ಸದಸ್ಯರು ಅನರ್ಹಗೊಂಡಿದ್ದಾರೆ.
ಮಹ್ಮದ್ ಕಲಿಂ (26ನೇ ವಾರ್ಡ್), ಶರಣಮ್ಮ (23ನೆ ವಾರ್ಡ್), ಶಿವಕುಮಾರ್ (25ನೇ ವಾರ್ಡ್), ಶಶಿದರರಡ್ಡಿ (30ನೆ ವಾರ್ಡ್), ಬಸವರಾಜ ಜೈನ್ (31ನೇ ವಾರ್ಡ್), ಅಕ್ಕಾ ಮಹಾದೇವಿ (3ನೇ ವಾರ್ಡ್), ಮಹಮ್ಮದ್ ಇಬ್ರಾಹಿಂ (13ನೇ ವಾರ್ಡ್) ಅನರ್ಹ ಗೊಂಡ ಸದಸ್ಯರು.
ಕಳೆದ ಮೇ 3ರಂದು ನಡೆದ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿ ವಿಪ್ ಉಲ್ಲಂಘನೆ ಮಾಡಿದ ಆರೋಪ ಹಿನ್ನಲೆ ಇವರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಮಂಜುನಾಥ್ ಜೆ ಬುಧವಾರ ಆದೇಶ ಹೊಡಿಸಿದ್ದಾರೆ.

ಒಟ್ಟು 31 ನಗರಸಭೆ ಸದಸ್ಯರ ಪೈಕಿ, ಕಾಂಗ್ರೆಸ್ 11, ಬಿಜೆಪಿ 7, ಜೆಡಿಎಸ್ 8, ಬಿಎಸ್ ಆರ್ ಕಾಂಗ್ರೆಸ್ 4, ಪಕ್ಷೇತರ 4 ಸದಸ್ಯರಿದ್ದಾರೆ. ಆದರೆ ಬಿಎಸ್ ಆರ್ ಕಾಂಗ್ರೆಸ್ ಸದಸ್ಯೆ ಲಲಿತಾ ಅನಪೂರ ಅವರು ಇತರೆ ಪಕ್ಷದ 24 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಲಲಿತಾ ಅನಪೂರ ವಿರುದ್ಧ ಕಣಕ್ಕಿಳಿದಿದ್ದ ಕಾಂಗ್ರೆಸ್ ನ ಸದಸ್ಯ ಶಂಕರ ರಾಠೋಡ್ ಅವರಿಗೆ ತಮ್ಮ ಪಕ್ಷದ ಸದಸ್ಯರೇ ಕೈಕೊಟ್ಟಿದ್ದರಿಂದ ಕೇವಲ 4 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದರು.
ಇದರಿಂದ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ 7 ಜನ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ನಗರಸಭೆ ಸದಸ್ಯ ಶಂಕರ್ ರಾಠೋಡ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ಪಕ್ಷದ ನಿಯಮಗಳನ್ನು ಉಲ್ಲಂಘಿಸಿರುವು ದೃಢ ಪಟ್ಟಿರುವುದರಿಂದ ಏಳು ಕಾಂಗ್ರೆಸ್ ಸದ್ಯಸರನ್ನು ಅನರ್ಹಗೊಳಿಸಿದ್ದಾರೆ. ಇದರಿಂದ ಇದೀಗ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹಾಲಿ ಅಧ್ಯಕ್ಷೆ ಲಲಿತಾ ಅನಪೂರ ಅವರು ಹರಸಾಹಸ ಪಡುತ್ತಿದ್ದಾರೆ.












Click it and Unblock the Notifications