ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್
"ಪಾಕಿಸ್ತಾನದ ಇಂದಿನ ಸ್ಥಿತಿಗೆ ಅಮೆರಿಕವೇ ಕಾರಣ" ಎಂಬ ಮಾತೊಂದನ್ನು ಬಿಟ್ಟು, ಎಲ್ಲವನ್ನೂ ಹೇಳಿ ಮುಗಿಸಿದ್ದಾರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. 9/11ರ ಅಮೆರಿಕ ಮೇಲಿನ ಭಯೋತ್ಪಾದನೆ ದಾಳಿ ನಂತರ ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧದ ಅಮೆರಿಕದ ಯುದ್ಧದಲ್ಲಿ ಪಾಲ್ಗೊಂಡಿದ್ದು "ಅತಿ ದೊಡ್ಡ ಪ್ರಮಾದವಾಯಿತು" ಎಂದು ಹೇಳಿದ್ದಾರೆ.
" 9/11ರ ಭಯೋತ್ಪಾದಕರ ದಾಳಿ ನಂತರ ಯು.ಎಸ್. ಜತೆಗೆ ಪಾಕಿಸ್ತಾನ ಜತೆಗೂಡಿದ್ದು ಅತಿ ದೊಡ್ಡ ಪ್ರಮಾದಗಳಲ್ಲಿ ಒಂದು. ಇದರಿಂದ 70,000 ಪಾಕಿಸ್ತಾನಿಗಳು ಮೃತಪಟ್ಟರು. ಕೆಲವು ಆರ್ಥಿಕ ತಜ್ಞರು 150 ಬಿಲಿಯನ್ ಡಾಲರ್ ಹಾಗೂ ಇನ್ನೂ ಕೆಲವು ತಜ್ಞರು 200 ಬಿಲಿಯನ್ ಡಾಲರ್ ಆರ್ಥಿಕ ನಷ್ಟ ನಮ್ಮ ದೇಶಕ್ಕೆ ಆಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದರ ಮೇಲೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಯುದ್ಧ ಗೆಲ್ಲದಿದ್ದಕ್ಕೆ ನಮ್ಮನ್ನೇ ನಿಂದಿಸಿದರು" ಎಂದು ಇಮ್ರಾನ್ ಹೇಳಿದ್ದಾರೆ.
ಕೌನ್ಸಿಲ್ ಆನ್ ಫಾರಿನ್ ರಿಲೇಷನ್ (ಸಿಎಫ್ ಆರ್) ಚಿಂತಕರ ಚಾವಡಿಯ ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ಸೋಮವಾರ ಆಯೋಜನೆ ಆಗಿತ್ತು. ಈ ವೇಳೆ ಅವರು ಮಾತನಾಡಿ, ಅಪ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ವಿರುದ್ಧ ಹೋರಾಡಲು 1980ರ ದಶಕದಲ್ಲಿ ತರಬೇತಿ ನೀಡಿದ ಗುಂಪುಗಳನ್ನೇ ಅಮೆರಿಕವು ನಂತರ ಉಗ್ರಗಾಮಿಗಳು ಎಂಬಂತೆ ಕಂಡಿತು ಎಂದು ಇಮ್ರಾನ್ ತಿಳಿಸಿದ್ದಾರೆ.

ಐಎಸ್ ಐಗೆ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ
ವಿದೇಶಿ ನೆಲದಲ್ಲಿ ಹೋರಾಡುವುದು 'ಜಿಹಾದ್' ಎಂದು ಅವರಲ್ಲಿ ತುಂಬಲಾಗಿತ್ತು. ಆದರೆ ಈಗ ಅಮೆರಿಕವು ಅಪ್ಘಾನಿಸ್ತಾನಕ್ಕೆ ಬಂದು, ಇದು ಭಯೋತ್ಪಾದನೆ ಎನ್ನುತ್ತಿದೆ. ಪಾಕಿಸ್ತಾನಿ ಸೇನೆ ಹಾಗೂ ಬೇಹುಗಾರಿಕೆ ಸಂಸ್ಥೆ ಐಎಸ್ ಐನಿಂದ ಅಲ್ ಕೈದಾ ಮತ್ತು ಇತರ ಉಗ್ರ ಸಂಘಟನೆಗಳನ್ನು ತರಬೇತಿಗೊಳಿಸಿತು. ಅಫ್ಘಾನಿಸ್ತಾನದಲ್ಲಿ ಹೋರಾಡುವ ಸಲುವಾಗಿಯೇ ಸಿದ್ಧಗೊಳಿಸಲಾಯಿತು. ಆದ್ದರಿಂದಲೇ ಪಾಕ್ ಸೇನೆ ಹಾಗೂ ಐಎಸ್ ಐಗೆ ಆ ಗುಂಪುಗಳ ಜತೆಗೆ ಸದಾ ಸಂಪರ್ಕ ಇರುತ್ತದೆ. ಏಕೆಂದರೆ ಉಗ್ರರಿಗೆ ತರಬೇತಿ ನೀಡಿದವರೇ ಇವರು ಎಂದು, ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಒಸಾಮಾ ಬಿನ್ ಲಾಡೆನ್ ಇದ್ದದ್ದು ಹೇಗೆ ಎಂಬ ಬಗ್ಗೆ ಪಾಕ್ ನಿಂದ ತನಿಖೆ ನಡೆಯಿತೇ ಎಂಬ ಪ್ರಶ್ನೆಗೆ ಉತ್ತರ ನೀಡಿದರು.

ಉಗ್ರರ ವಿರುದ್ಧ ದಾಳಿಗೆ ಪಾಕ್ ಸೇನೆ ಸಿದ್ಧವಿರಲಿಲ್ಲ
ನಾವು 180 ಡಿಗ್ರಿ ತಿರುಗಿದ ನಂತರ ಹಾಗೂ ಅದೇ ಗುಂಪುಗಳ ಮೇಲೆ ದಾಳಿ ನಡೆಸಲು ಮುಂದಾದಾಗ ಎಲ್ಲರೂ ನಮ್ಮ ನಿಲವಿಗೆ ಒಪ್ಪಿಕೊಳ್ಳಲಿಲ್ಲ. ಪಾಕಿಸ್ತಾನದ ಸೇನೆಯ ಒಳಗೇ ಹಲವರು ನಮ್ಮನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ್. ಆ ಕಾರಣದಿಂದಲೇ ಪಾಕಿಸ್ತಾನದೊಳಗೇ ದಾಳಿಗಳು ಆರಂಭವಾದವು ಎಂದ ಇಮ್ರಾನ್ ಖಾನ್, ಕಾಶ್ಮೀರದ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಇದು ಮಾನವೀಯತೆಗೆ ಸಂಬಂಧಿಸಿದ ಸಂಗತಿ. ಒಂದು ವೇಳೆ ಅವರನ್ನು (ಮೋದಿ) ಈಗ ಭೇಟಿಯಾದರೆ, ಕನಿಷ್ಠ ಪಕ್ಷ ಕಾಶ್ಮೀರದಲ್ಲಿ ಹಾಕಿರುವ ನಿರ್ಬಂಧವನ್ನು ತೆಗೆಯಲು ಕೇಳ್ತೀನಿ. ಪ್ರಾಮಾಣಿಕವಾಗಿ ನನಗೆ ಅನಿಸುತ್ತಿದೆ: ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಇನ್ನಷ್ಟು ಹದಗೆಡಬಹುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಟ
ಕಾಶ್ಮೀರ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಾತುಕತೆ ನೇತೃತ್ವ ವಹಿಸಲು ಸಿದ್ಧ ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹ್ಯೂಸ್ಟನ್ ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಭಾಗವಹಿಸಿದ್ದ ಟ್ರಂಪ್, ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವುದು ವಾಷಿಂಗ್ಟನ್ ಮತ್ತು ನವದೆಹಲಿ ಮಧ್ಯದ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದು ಎಂದಿದ್ದರು. ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ನಾನು ಸಿದ್ಧ ಹಾಗೂ ಸಮರ್ಥನಿದ್ದೇನೆ. ಇದೊಂದು ಸಂಕೀರ್ಣ ಬಿಕ್ಕಟ್ಟು ಮತ್ತು ಬಹಳ ಕಾಲದಿಂದ ಹಾಗೇ ಉಳಿದುಕೊಂಡು ಬಂದಿದೆ. ಎರಡೂ ದೇಶಗಳು ಒಪ್ಪುವುದಾದರೆ ನಾನು ಸಮಸ್ಯೆ ಬಗೆಹರಿಸಲು ಸಿದ್ಧ ಎಂದು ಟ್ರಂಪ್ ಹೇಳಿದ್ದಾರೆ.

ಮಧ್ಯಸ್ಥಿಕೆ, ಮಧ್ಯಪ್ರವೇಶ ಎಂಬ ಮಾತನ್ನು ಬಳಸಿಲ್ಲ
ಈ ತಿಂಗಳ ಆರಂಭದಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತನಾಡಿ, ಆ ಎರಡೂ ದೇಶಗಳು ಬಯಸುವುದಾದರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇರುವ ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ ಎಂದಿದ್ದರು. ಈ ವೇಳೆ ಮಧ್ಯಸ್ಥಿಕೆ ಅಥವಾ ಮಧ್ಯಪ್ರವೇಶ ಇಂಥ ಯಾವ ಮಾತನ್ನೂ ಟ್ರಂಪ್ ಬಳಸಿರಲಿಲ್ಲ. ಬದಲಿಗೆ, "ನಾನು ಅವರಿಗೆ ನೆರವು ನೀಡಲು ಸಿದ್ಧನಿದ್ದೇನೆ" ಎಂದಷ್ಟೇ ಮಾಧ್ಯಮದವರು ಹೇಳಿದ್ದರು. ವಾಷಿಂಗ್ಟನ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎರಡೂ ದೇಶಗಳ ಜತೆಗೆ ನಾನು ಚೆನ್ನಾಗಿದ್ದೀನಿ. ಅವರು ಬಯಸುವುದಾದರೆ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications