ಭಾರತದಲ್ಲಿ ಮುಸ್ಲಿಂರ ವಿರುದ್ಧ ಹುನ್ನಾರ: ಇದು ಅಮೆರಿಕನ್ನರ ಮಾತು
ವಾಶಿಂಗ್ ಟನ್ ಡಿಸಿ, ಡಿಸೆಂಬರ್.12: ಪೌರತ್ವ ತಿದ್ದುಪಡಿ ಮಸೂದೆಗೆ ಈಶಾನ್ಯ ರಾಜ್ಯಗಳಷ್ಟೇ ಅಲ್ಲ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲೂ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ತೀರ್ಮಾನವನ್ನು ಅಮೆರಿಕನ್ ಕಾಂಗ್ರೆಸ್ ಸದಸ್ಯ ಕೂಡಾ ಟೀಕಿಸಿದ್ದಾರೆ.
ಭಾರತದಲ್ಲಿ ಇತ್ತೀಚಿಗೆ ಮುಸ್ಲಿಂ ವಿರೋಧಿ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗ ಜಾರಿಗೊಳಿಸಲು ಹೊರಟಿರುವ ಪೌರತ್ವ ತಿದ್ದುಪಡಿ ಮಸೂದೆಯು ಮುಸ್ಲಿಂರನ್ನು ದ್ವಿತೀಯ ದರ್ಜೆಗೆ ತಳ್ಳುವ ಹುನ್ನಾರ ಎಂದು ಅಮೆರಿಕನ್ ಕಾಂಗ್ರೆಸ್ ಸದಸ್ಯ ಆಂಡ್ರೆ ಕಾರ್ಸನ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್ ನ ಉಭಯ ಸದನಗಳಲ್ಲಿ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಡಿಸೆಂಬರ್.09ರ ಸೋಮವಾರ ಲೋಕಸಭೆಯಲ್ಲಿ ಹಾಗೂ ಡಿಸೆಂಬರ್.11ರ ಬುಧವಾರ ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿ ಒಪ್ಪಿಗೆ ಪಡೆದಿದ್ದಾರೆ.

"ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆಗೆ ತಳ್ಳುವ ಹುನ್ನಾರ"
ನೆರೆಯ ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ದಲ್ಲಿ ಶೋಷಣೆಗೆ ಒಳಗಾದ ಮುಸ್ಲಿಮೇತರ ಜನರು ಭಾರತಕ್ಕೆ ವಲಸೆ ಬಂದಿದ್ದರೆ ಅಂಥವರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಇದರಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ. ಈ ಮೂಲಕ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂರನ್ನು ದ್ವಿತೀಯ ದರ್ಜೆಗೆ ತಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಅಮೆರಿಕ ಕಾಂಗ್ರೆಸ್ ಸದಸ್ಯ ಆಂಡ್ರೆ ಕಾರ್ಸನ್ ಆತಂಕ ವ್ಯಕ್ತ ಪಡಿಸಿದ್ದಾರೆ.

ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ಕಸಿದಾಗಲೂ ಆಕ್ಷೇಪ
ಕೇವಲ ಪೌರತ್ವ ತಿದ್ದುಪಡಿ ಮಸೂದೆ ವಿಚಾರವಷ್ಟೇ ಅಲ್ಲ. ಈ ಹಿಂದೆ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿದ್ದಕ್ಕೂ ಆಂಡ್ರೆ ಕಾರ್ಸನ್ ವಿರೋಧಿಸಿದ್ದರು. ಸಂವಿಧಾನವೇ ನೀಡಿದ್ದ ವಿಶೇಷ ಹಕ್ಕುನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಕಾಶ್ಮೀರಗಳ ಭವಿಷ್ಯದ ಬಗ್ಗೆ ತಮಗೆ ಆತಂಕವಾಗುತ್ತಿದೆ ಎಂದು ಹೇಳಿದ್ದರು.

ಭಾರತದ ಶ್ರೀಮಂತ ಪ್ರಜಾಪ್ರಭುತ್ವಕ್ಕೆ ಧಕ್ಕೆ
ಭಾರತದಲ್ಲಿನ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದ ಸಂಪ್ರದಾಯದ ವಿರೋಧಿ ನಡೆಗಳನ್ನು ಅನುಸರಿಸುತ್ತಿದೆ. ಅಷ್ಟೇ ಅಲ್ಲದೇ, ಪ್ರಪಂಚದಲ್ಲೇ ಶ್ರೀಮಂತ ಸಂವಿಧಾನವನ್ನು ಹೊಂದಿರುವ ದೇಶದಲ್ಲಿ ಈ ರೀತಿಯ ಬೆಳವಣಿಗೆಗಳು ಆಂತಕವನ್ನು ಹುಟ್ಟು ಹಾಕುತ್ತಿದೆ ಎಂದು ಕಾರ್ಸನ್ ಹೇಳಿದ್ದರು.

370 ವಿಧಿ ಅಡಿ ವಿಶೇಷ ಸ್ಥಾನಮಾನ ಎಂದರೇನು?
ಸಂವಿಧಾನದ 370 ವಿಧಿ ಅನ್ವಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಇದರನ್ವಯ ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವಿದ್ದು ಕಳೆದ 1956 ನವೆಂಬರ್.17ರಂದು ರಾಜ್ಯದ ವಿಧಾನಸಭೆಯಲ್ಲಿ ಅದನ್ನು ಅಂಗೀಕರಿಸಲಾಗಿತ್ತು. ಅಂದೇ 1 ರಿಂದ 8 ಹಾಗೂ 158ನೇ ವಿಧಿಯನ್ನು ಜಾರಿಗೊಳಿಸಲಾಗಿತ್ತು. ನಂತರದಲ್ಲಿ ಅಂದರೆ 1957 ಜನವರಿ 26ರಂದು ಉಳಿದೆಲ್ಲ ವಿಧಿಗಳು ಜಾರಿಗೆ ಬಂದವು. 370ನೇ ವಿಧಿ ಅನ್ವಯ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಕ್ಷೇತ್ರಗಳು ಮಾತ್ರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತಿದ್ದವು. ಉಳಿದಂತೆ ಎಲ್ಲ ಅಧಿಕಾರಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದವು.
ಇಷ್ಟಲ್ಲದೇ, ಪ್ರಜೆಗಳಿಗೂ ರಾಜ್ಯ ಸರ್ಕಾರ ಕೆಲವು ನಿಬಂಧನೆಗಳನ್ನು ವಿಧಿಸಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಭಾರತದ ಯಾವುದೇ ಪ್ರಜೆಗಳು ಆಸ್ತಿ ಖರೀದಿಸುವಂತಿಲ್ಲ. ಕಾಶ್ಮೀರದ ಯುವತಿಯರನ್ನು ವಿವಾಹವಾಗುವಂತಿರಲಿಲ್ಲ. ಈ ಎಲ್ಲ ನಿಬಂಧನೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ಆಗಸ್ಟ್.05ರಂದು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು.












Click it and Unblock the Notifications