'ಯಡಿಯೂರಪ್ಪ ಬಟ್ಟೆ ಹಾವು ಬಿಡುವ ಕೆಲಸ ಮಾಡಿದ್ದಾರೆ'
ವಿಜಯಪುರ, ಡಿಸೆಂಬರ್ 03 : 'ದಾಖಲೆ ಬಿಡುಗಡೆ ಮಾಡುವೆ ಎಂದು ಬಿ.ಎಸ್.ಯಡಿಯೂರಪ್ಪ ಸುಮ್ಮನೆ ಐದು ದಿನ ಅರಬಿ (ಬಟ್ಟೆ) ಹಾವು ಬಿಡುವ ಕೆಲಸ ಮಾಡಿದ್ದಾರೆ' ಎಂದು ಎಂ.ಬಿ.ಪಾಟೀಲ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, 'ನನ್ನ ಕ್ಷೇತ್ರದಲ್ಲಿಯೇ ನೀರಾವರಿ ಇಲಾಖೆಯ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಬಿಎಸ್ವೈ ಐದು ದಿನಗಳ ಡಂಗುರ ಸಾರಿದ್ದರು' ಎಂದರು.

'ದಾಖಲೆ ಬಿಡುಗಡೆ ಅಂತ ಸುಮ್ಮನೆ ಐದು ದಿನಗಳ ಕಾಲ ಬಟ್ಟೆ ಹಾವು ಬಿಡುವ ಕೆಲಸ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಯಡಿಯೂರಪ್ಪ ಬಳಿ ಯಾವುದೇ ದಾಖಲೆಯೂ ಇಲ್ಲ' ಎಂದರು.
'ನಾನು ಯಾವುದೇ ಹಗರಣ ಮಾಡಿಲ್ಲ. ನನಗೆ ಕಮೀಷನ್ ಏಜೆಂಟ್ ಎಂದಿದ್ದಕ್ಕೆ ಕಾನೂನು ಹೋರಾಟ ನಡೆಸುತ್ತೇನೆ, ನೋಟಿಸ್ ಕೊಡಿಸುತ್ತೇನೆ. ಮುಂದೆ ಯಡಿಯೂರಪ್ಪ ಅವರು ನನಗೆ ಕ್ಷಮೆ ಕೇಳುವ ಸಮಯ ಬರಲಿದೆ' ಎಂದು ತಿಳಿಸಿದರು.
ಜೈಲಿಗೆ ಕಳಿಸುತ್ತೇನೆ : ಡಿಸೆಂಬರ್ 2ರಂದು ವಿಜಯಪುರದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶ ನಡೆಯಿತು. ಯಾತ್ರೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಎಂ.ಬಿ.ಪಾಟೀಲರನ್ನು ಏಕವಚನದಲ್ಲಿ ಸಂಭೋದಿಸಿದರು. 'ನಿನ್ನನ್ನು ಜೈಲಿಗೆ ಕಳಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ' ಎಂದು ಸವಾಲು ಹಾಕಿದರು.
'ನೀರಾವರಿ ಹಗರಣಗಳನ್ನು ಬಯಲಿಗೆಳೆದು ಎಂ.ಬಿ.ಪಾಟೀಲರನ್ನು ಜೈಲಿಗೆ ಕಳಿಸಿಯೇ ತೀರುವುದಾಗಿ ಯಡಿಯೂರಪ್ಪ ಅವರು ವೇದಿಕೆ ಮೇಲೆ ಅಬ್ಬರಿಸಿದರು'.












Click it and Unblock the Notifications