ವಿಜಯಪುರದಲ್ಲೊಂದು ಮರ್ಯಾದಾ ಹತ್ಯೆ, ಮಗಳನ್ನು ಕೊಂದ ತಾಯಿ!
ವಿಜಯಪುರ, ನವೆಂಬರ್ 09 : ವಿಜಯಪುರದಲ್ಲಿ ನಡೆದ ಗರ್ಭಿಣಿ ಮಹಿಳೆ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಹಿಳೆಯ ತಾಯಿಯೇ ಹತ್ಯೆ ಮಾಡಿರುವುದು ಸಾಬೀತಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಪ್ರಕರಣವಾಗಿದೆ.
ವಿಜಯಪುರ ಜಿಲ್ಲೆಯ ಯಗಲೂರು ಗ್ರಾಮದಲ್ಲಿ 4 ತಿಂಗಳ ಗರ್ಭಿಣಿ ರೇಣುಕಾ ಅವರನ್ನು ನವೆಂಬರ್ 6ರಂದು ಹತ್ಯೆ ಮಾಡಲಾಗಿತ್ತು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೇಣುಕಾ ತಾಯಿ ಶಿವಲಿಂಗಮ್ಮ ಅವರನ್ನು ಬಂಧಿಸಿದ್ದಾರೆ.
ನಿಡಗುಂದಿ ಪೊಲೀಸರ ತನಿಖೆ ವೇಳೆ ಇದೊಂದು ಮರ್ಯಾದಾ ಹತ್ಯೆ ಎಂಬುದು ದೃಢಪಟ್ಟಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮದ ರೇಣುಕಾ ಅವರು ಸಿರವಾರ ಗ್ರಾಮದ ಶಂಕರ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಪತಿಯ ಜೊತೆ ಯಗಲೂರು ಗ್ರಾಮದಲ್ಲಿ 2 ವರ್ಷಗಳಿಂದ ವಾಸವಾಗಿದ್ದರು.
ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಗ್ರಾಮವನ್ನು ತೊರೆದು ಬಂದಿದ್ದ ರೇಣುಕಾ ಅವರ ಮೇಲೆ ಕುಟುಂಬದವರಿಗೆ ಸಿಟ್ಟಿತ್ತು. ಮಗಳು ನಮ್ಮ ಮರ್ಯಾದೆ ಹಾಳು ಮಾಡಿದ್ದಾಳೆ ಎಂದು ಅವರು ದ್ವೇಷ ಸಾಧಿಸುತ್ತಿದ್ದರು.
ನವೆಂಬರ್ 6ರಂದು ಶಿವಲಿಂಗಮ್ಮ ಅವರು ಕ್ಯಾದಿಗೇರಾ ಗ್ರಾಮದಿಂದ ಯಗಲೂರು ಗ್ರಾಮಕ್ಕೆ ಆಗಮಿಸಿದ್ದಾರೆ. ರೇಣುಕಾ ಪತಿ ಮನೆಯಿಂದ ಹೊರಹೋಗಿದ್ದ ಸಂದರ್ಭದಲ್ಲಿ ಚಾಕುವಿನಿಂದ ರೇಣುಕಾ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಈ ಕೊಲೆಗೆ ಶಿವಲಿಂಗಮ್ಮ ಮತ್ತೊಬ್ಬ ಅಳಿಯ, ಮಗ ಸಹ ಸಹಾಕರ ನೀಡಿದ್ದು, ಪೊಲೀಸರು ಮೂವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications