ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಗ್ರಾಮದಲ್ಲಿ ಅತೀ ಹೆಚ್ಚು ದಡಾರ ಪ್ರಕರಣಗಳು ಪತ್ತೆಯಾಗಿದ್ದು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ವಿಜಯಪುರ ಜನವರಿ 27: ರಾಜ್ಯದಲ್ಲಿ ಮೊದಲ ಬಾರಿಗೆ ಒಂದೇ ಗ್ರಾಮದಲ್ಲಿ ಅತೀ ಹೆಚ್ಚು ದಡಾರ ಪ್ರಕರಣಗಳು ಪತ್ತೆಯಾಗಿದ್ದು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ವಿಜಯಪುರದ ಆಲಮೇಲ ತಾಲೂಕಿನ ನೂರಾರು ಮಕ್ಕಳಿಗೆ ದಡಾರ ದೃಢಪಟ್ಟಿದ್ದು ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕ ಕೇಂದ್ರಲ್ಲಿ ಎರಡುನೂರಕ್ಕೂ ಹೆಚ್ಚಿನ ಮಕ್ಕಳಲ್ಲಿ ದಡಾರ ಮತ್ತು ರುಬೆಲ ಸಾಂಕ್ರಾಮಿಕ ಕಾಯಿಲೆ ದೃಡಪಟ್ಟಿದೆ. ದಡಾರ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳು ಪೋಷಕರಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಮಕ್ಕಳು ದಡಾರದಿಂದ ಬಳಲುತ್ತಿರುವುದು ಕಂಡುಬಂದಿದೆ.
ಹೆಚ್ಚಿನ ರೋಗಲಕ್ಷಣದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ದಡಾರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದರು. ಸಾಂಕ್ರಾಮಿಕ ರೂಪದಲ್ಲಿ ಕಾಣಿಸಿಕೊಂಡಿರುವ ದಡಾರ ಗ್ರಾಮದಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡಿದ್ದು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರಿಂದಾಗಿ ಇಂಡಿ ಕಂದಾಯ ಉಪ ವಿಭಾಗ ಅಧಿಕಾರಿ ನೇತೃತ್ವದಲ್ಲಿ ಗುರುವಾರ ಸಂಜೆ ಆರೋಗ್ಯ ಇಲಾಖೆ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ.
ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ದಡಾರ ದೃಢ
ಜಿಲ್ಲೆಯಲ್ಲಿ ರೋಗ ಹರಡದಂತೆ ವಿವಿಧ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ರೋಗದ ಮತ್ತಷ್ಟು ಹರಡುವಿಕೆಯನ್ನು ತಡೆಗಟ್ಟಲು ವಿವಿಧ ಸರ್ಕಾರಿ ಇಲಾಖೆಗಳ ಪ್ರಯತ್ನಗಳನ್ನು ಈಗಾಗಲೇ ಹೆಚ್ಚಿಸಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಬಗ್ಗೆ ಸಭೆ ಚರ್ಚೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ.ವಿವಿ ದಾನಮ್ಮನವರ ಸೂಚನೆ ಮೇರೆಗೆ ಸಭೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಮುಕುಂದ ಗಲಗಲಿ ಹೇಳಿದರು.
ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮಾಹಿತಿ ನೀಡಲಾಗಿದ್ದು ರಾಜ್ಯ ಸರ್ಕಾರದ ಆದೇಶದ ಮೇರೆಗೆ ತುರ್ತು ಚಿಕಿತ್ಸಾ ಅಭಿಯಾನ ಹಮ್ಮಿಕೊಂಡಿದೆ. ಶುಕ್ರವಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಶನಿವಾರದಿಂದ ಲಸಿಕಾ ಅಭಿಯಾನ ಹಮ್ಮಿಕೊಳ್ಳುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಡಾರ ಕಾಯಿಲೆಯ ಲಕ್ಷಣಗಳು ಯಾವವು?
ದಡಾರ ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ ಸೋಂಕಾಗಿದ್ದು ಇದು ತಗುಲಿದ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತಗುಲಿದ ಮಕ್ಕಳಲ್ಲಿ 104 ಡಿಗ್ರಿ ವರೆಗೆ ಅಧಿಕ ಜ್ವರ, ಕೆಮ್ಮು, ಸೋರುವ ಮೂಗು, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳ ಸಮಸ್ಯೆ ಉಂಟಾಗಬಹುದು ಎಂದು ಸಿಡಿಸಿ ಹೇಳುತ್ತದೆ. ಈ ಸೋಂಕು ಹರಿಡಿದ 2 ರಿಂದ 3 ದಿನಗಳ ನಂತರ ಮಕ್ಕಳ ಬಾಯಲ್ಲಿ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. 3 ರಿಂದ 5 ದಿನಗಳಲ್ಲಿ ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗ ಹೀಗೆ ಕೆಂಪು ರಾಶಸ್ ದೇಹದ ಮೇಲು ಕಾಣಿಸಿಕೊಳ್ಳಬಹುದು.
ದಡಾರ ತಡೆಗಟ್ಟುವ ಕ್ರಮಗಳು
ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹೀಗಾಗಿ ದಡಾರವನ್ನು ತಡೆಗಟ್ಟಲು ಮಕ್ಕಳಿಗೆ ಲಸಿಕೆ ನೀಡುವುದು ಉತ್ತಮ. 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಇದರಿಂದ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ದಡಾರ ಲಕ್ಷಣಗಳು ಕಾಣಿಸಿಕೊಂಡರೆ ಪೋಷಕರು ತಡ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯನ್ನು ಪಡೆಯಬೇಕು.
ರೋಗ ಲಕ್ಷಣಗಳು ಕಂಡು ಬಂದ ಮಕ್ಕಳ ಕಾಳಜಿ
ದಡಾರ ಮಕ್ಕಳನ್ನು ಹೆಚ್ಚಾಗಿ ಬಾದಿಸುತ್ತದೆ. ಎನ್ ಎಚ್ ಎಸ್ ಪ್ರಕಾರ, ಮಗುವಿಗೆ ದಡಾರ ರೋಗ ನಿರ್ಣಯವಾದ ನಂತರ ವಿಶ್ರಾಂತಿ ನೀಡಬೇಕು. ಮಗುವನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸುವುದು, ಆಗಾಗ ನೀರು ಮತ್ತು ಜ್ಯೂಸ್ ಕುಡಿಸುವುದು ಉತ್ತಮ. ಒದ್ದೆ ಹತ್ತಿಯಿಂದ ಮಗುವಿನ ದೇಹ ಸ್ವಚ್ಛಗೊಳಿಸುವುದು. ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧ ನೀಡುವುದು, ಶುಚಿತ್ವ ಕಾಪಾಡುವುದು. ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು ಅವಶ್ಯಕವಾಗಿದೆ. ದಡಾರ ವೇಗವಾಗಿ ಹರಡುವ ಸೋಂಕು. ಇದು ಪ್ಯಾರಾಮಿಕ್ಸೊವೈರಸ್ ಕುಟುಂಬದ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್ ಮೊದಲು ಉಸಿರಾಟದ ಪ್ರದೇಶಕ್ಕೆ ಧಕ್ಕೆ ಮಾಡುತ್ತದೆ. ನಂತರ ಕೆಮ್ಮು ಅಥವಾ ಶೀತ ಅಥವಾ ನೇರ ಸ್ಪರ್ಶದಿಂದ ಆರೋಗ್ಯವಂತ ಜನರಿಗೆ ಸೋಂಕು ತಗುಲುತ್ತದೆ.