ಜಮೀರ್ ಬ್ಲ್ಯಾಕ್ಮೇಲ್ ವ್ಯಕ್ತಿ, ಕೊಚ್ಚೆ ಇದ್ದಂಗೆ: ಮಾಜಿ ಸಿಎಂ ಎಚ್ಡಿಕೆ
ವಿಜಯಪುರ, ಅಕ್ಟೋಬರ್ 26: "ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ಮೇಲ್ ವ್ಯಕ್ತಿ, ಕೊಚ್ಚೆ ಇದ್ದಂಗೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ವಿಜಯಪುರ ನಗರದ ಹೋಟೆಲೊಂದರಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, "20- 20 ಸರ್ಕಾರದ ಆಡಿಯೋ ವಿಚಾರಕ್ಕೆ ಟಾಂಗ್ ನೀಡಿದ್ದು, ತಾಕತ್ತು ಇದ್ದರೆ ಆಡಿಯೋ ಬಿಡುಗಡೆ ಮಾಡಲಿ ಎಂದು ಶಾಸಕ ಜಮೀರ್ಗೆ ಸವಾಲ್ ಹಾಕಿದ್ದಾರೆ. ಜಮೀರ್ ಬ್ಲ್ಯಾಕ್ಮೇಲ್ ಜೀವನ ಮಾಡುತ್ತಾರೆ. ಮಾರ್ಯಾದೆ ಇಲ್ಲದವರ ಜೊತೆಗೆ ಚರ್ಚೆ ಮಾಡಲ್ಲ," ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿಗೆ ಬೆಂಗಳೂರಿನಲ್ಲಿ ಇರಲು ಜಾಗ ಇರಲಿಲ್ಲ ಎಂಬ ಜಮೀರ್ ಹೇಳಿಕೆಗೆ ಉತ್ತರಿಸಿದ ಮಾಜಿ ಸಿಎಂ ಎಚ್ಡಿಕೆ, ಬೆಂಗಳೂರು ಬಹಳ ದೊಡ್ಡದು. ಬೆಂಗಳೂರಿನಲ್ಲಿ ನನಗೆ ಜಾಗವೇ ಇಲ್ಲವಾ. ಪಾಪ ಜಮೀರ್ ನನಗೆ ಜಾಗ ಕೊಡಬೇಕಾ? ಕೊಚ್ಚೆ ಮೇಲೆ ಕಲ್ಲು ಎಸೆದರೆ ನಮ್ಮ ಮೇಲೆ ಬೀಳುತ್ತದೆ ಎಂದರು.

"ನನ್ನ ಕಾಲು ಹಿಡಿದು ಕೋಟ್ಯಂತರ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಜಮೀರ್ ಅಹ್ಮದ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈಗ ಆ ವಿಚಾರಗಳು ಯಾವುದೂ ಬೇಡ. ಮಾತನಾಡುವುದಕ್ಕೆ ನನ್ನ ಬಳಿಯೂ ಹಲವು ವಿಚಾರಗಳಿವೆ. ನಾನು ಸತ್ಯ ಮಾತನಾಡಿದರೆ, ಅದಕ್ಕೆ ಅರ್ಥ ಇರುವುದಿಲ್ಲ. ಮರ್ಯಾದೆ ಇರುವ ವ್ಯಕ್ತಿಗಳ ಜೊತೆ ಮಾತನಾಡಬೇಕು. ಮರ್ಯಾದೆ ಇಲ್ಲದ ವ್ಯಕ್ತಿಗಳ ಜತೆ ಮಾತು ಏಕೆ. ಇವರಿಗೆ ದೇವೇಗೌಡರನ್ನು ಸಿಎಂ ಮಾಡುವ ಶಕ್ತಿ ಇದ್ದಿದ್ದರೆ, ದೇವೇಗೌಡರು ದೆಹಲಿಗೆ ಹೋದಾಗ ಅವರ ಹೆಸರು ಹೇಳಬೇಕಿತ್ತು. ಸಿಎಂ ಸ್ಥಾನಕ್ಕೆ ಅವರ ಹೆಸರು ಹೇಳಬೇಕಿತ್ತಲ್ವಾ," ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಕಸ ಹೊಡೆದಿದ್ದು ನಿಜ
"ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಕಸ ಹೊಡೆದಿದ್ದು ನಿಜ. ಟೆಂಡರ್ ಪಡೆದಿದ್ದರ ಕುರಿತು ಸಹ ವಿವಾದವಾಯಿತು. ಆಗ ದೇವೇಗೌಡರು ಕರೆದು ಹೇಳಿದರು. ನಾನು ಅಧಿಕಾರದಲ್ಲಿ ಇರುವಾಗ ಸರ್ಕಾರಿ ಟೆಂಡರ್ ಪಡೆಯಬೇಡ ಎಂದರು. ಆಗ ಸರ್ಕಾರಿ ಟೆಂಡರ್ ಪಡೆಯೋದನ್ನು ಬಿಟ್ಟೆ," ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು
"2008ರಿಂದ 2013ರಲ್ಲಿ ಉಪ ಚುನಾವಣೆಗಳು ನಡೆದವು. ಆಗ ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು. ಯಡಿಯೂರಪ್ಪ ಜತೆ ಸೇರಿಕೊಂಡು ಒಳಸಂಚು ಮಾಡಿದರು," ಎಂದು ಸಿದ್ದರಾಮಯ್ಯ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
"ನಾನು ಸೂಟ್ಕೇಸ್ ಪಡೆದಿದ್ದೇನೆಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಯಾರೋ ಒಬ್ಬರನ್ನು ಮುಂದೆ ಬಿಟ್ಟು ಹೇಳಿಸುತ್ತಿದ್ದಾರೆ. ಇವರು ಒಳಸಂಚು ಮಾಡಿಕೊಂಡು ಎಷ್ಟು ಸೂಟ್ಕೇಸ್ ಪಡೆದಿದ್ದಾರೆ," ಅಂತ ಪ್ರಶ್ನಿಸಿದರು.
"ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇದ್ಯಾವ ಜಾತ್ಯತೀತತೆ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜಾರ್ಜ್, ಭೈರತಿ ಬಸವರಾಜ್ ಮಧ್ಯೆ ಗಲಾಟೆಯಾಗಿತ್ತು. ಯಾವುದೋ ಒಂದು ಖಾತೆ ವಿಚಾರವಾಗಿ ಗಲಾಟೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರಿಕೊಂಡರು. ಆಗ ರಮೇಶ್ ಜಾರಕಿಹೊಳಿ ಇವರ ವಿರುದ್ಧ ಸಿಡಿದೆದ್ದಿದ್ದರು. ಯಾಕೆ ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಿಲ್ಲ,?" ಎಂದು ಸಿಂದಗಿಯಲ್ಲಿ ಪ್ರಶ್ನಿಸಿದರು.
ಅವತ್ತೇ ಕಣ್ಣೀರು ಹಾಕಿದ್ದೆ
"ಮೈತ್ರಿ ಸರ್ಕಾರದ ವೇಳೆ ನಾನು ಅಮೆರಿಕಕ್ಕೆ ಹೋಗಿದ್ದೆ. ಆಗ ನನಗೆ ಯಾರೂ ಕೂಡ ಕರೆ ಮಾಡಿರಲಿಲ್ಲ. ಡಿಸಿಎಂ ಆಗಿದ್ದ ಜಿ. ಪರಮೇಶ್ವರ್ಗೆ ನಾನೇ ಸ್ವತಃ ಕರೆ ಮಾಡಿದ್ದೆ. ಆಗ ಯಾವುದೇ ಸಮಸ್ಯೆ ಇಲ್ಲ," ಎಂದು ಅವರು ಹೇಳಿದ್ದರು ಎಂದರು.
"2023ರ ಚುನಾವಣೆಯಲ್ಲಿ ಅವರನ್ನು ಯಾರೂ ಗುರುತಿಸಲ್ಲ. ಅವರು ದುರಹಂಕಾರದಿಂದಲೇ ಅವರು ಹೋಗುತ್ತಾರೆ. ಸಿದ್ದರಾಮಯ್ಯರನ್ನು ಯಾರೂ ಲೆಕ್ಕಕ್ಕೇ ಇಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸೋಲುತ್ತಿದ್ದರು," ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
"ಲಂಬಾಣಿ ಸಮುದಾಯದವರು ಗುಳೆ ಹೋಗುತ್ತಿದ್ದಾರೆ. ಲಂಬಾಣಿ ಸಮುದಾಯಕ್ಕೆ ಪ್ರಾಧಿಕಾರ ಕೊಟ್ಟಿದ್ದೀನಿ ಅಂತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 19 ಜನ ಮೃತಪಟ್ಟಿದ್ದರು. ಮೃತಪಟ್ಟ 19 ಜನರ ಕುಟುಂಬಕ್ಕೆ ಏನಾದರೂ ಕೊಟ್ಟಿದ್ದರಾ? ಎಂದು ಪ್ರಶ್ನಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಜಾತ್ಯತೀತ ನಾಯಕರಲ್ವಾ? ಮತ್ತೇಕೆ ಅವರು ಎಲ್ಲ ಸಮುದಾಯದವರ ಸಭೆ ಮಾಡುತ್ತಿದ್ದಾರೆ? ಪ್ರತ್ಯೇಕ ಸಭೆ ಮಾಡುವ ಅವಶ್ಯಕತೆ ಏನಿತ್ತು," ಎಂದು ಕೇಳಿದ್ದಾರೆ.
"ವರುಣಾ ಕ್ಷೇತ್ರದಲ್ಲಿ ಬೇರೆ ಯಾವ ನಾಯಕರೂ ಇರಲಿಲ್ಲವಾ? ವರುಣಾದಲ್ಲಿ ತಮ್ಮ ಪುತ್ರನನ್ನು ಏಕೆ ಸ್ಪರ್ಧೆಗೆ ಇಳಿಸಿದರು? ಇದು ಕುಟುಂಬ ರಾಜಕಾರಣವಲ್ಲವೇ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.












Click it and Unblock the Notifications