ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಗೆ ವಿಜಯಪುರ ಬಂಡಾಯ ಬೆಂಕಿ
ವಿಜಯಪುರ, ಜನವರಿ 11: ಜಿಲ್ಲಾ ಕಾಂಗ್ರೆಸ್ ನ ಮುಸ್ಲಿಂ ಮುಖಂಡರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರ ಎದುರಿಗೇ ಅಸಮಾಧಾನ ತೋರಿಸಿದ್ದು, ವಿಜಯಪುರ ನಗರ ಶಾಸಕ ಮಕಬೂಲ್ ಬಾಗವಾನ್ ಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಆಗ್ರಹ ಮಾಡಿದ್ದಾರೆ. ಬಾಗವಾನ್ ಬದಲಿಗೆ ಬೇರೆಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೋಮುವಾದ ವರ್ಸಸ್ ಜಾತ್ಯತೀತವಾದ : ಸಿದ್ದರಾಮಯ್ಯ ಸಂದರ್ಶನ
ಕೈ ಪಕ್ಷದ ಹಿರಿಯ ಮುಖಂಡರೇ ಬಾಗವಾನ್ ವಿರುದ್ಧ ಧ್ವನಿ ಎತ್ತಿರುವುದರಿಂದ ಈ ಪ್ರಹಸನ ಎಲ್ಲಿಗೆ ಹೋಗಿ ಮುಟ್ಟಬಹುದು ಎಂಬ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ನ ಹಿರಿಯ ಮುಖಂಡರಾದ ವಕೀಲ ಸುತಾರ್, ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲಾಲ್, ಟಪಾಲ್ ಅವರೂ ಸೇರಿದಂತೆ ಅನೇಕ ಮುಖಂಡರು ಮಕಬೂಲ್ ಬಾಗವಾನ್ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರ ಕ್ಷೇತ್ರದಿಂದ ತಮಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಂತೆ ಮಾತನಾಡಿದರು ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲಾಲ್. ನಲವತ್ತು ವರ್ಷದಿಂದ ಕಾಂಗ್ರೆಸ್ ಗಾಗಿ ದುಡಿಯುತ್ತಿದ್ದೇವೆ. ಇಂದಿರಾಗಾಂಧಿ ಅವರ ಕಾಲದಿಂದ ಪಕ್ಷದಲ್ಲಿ ಇದ್ದೇವೆ. ನಮಗೆ ಮರ್ಯಾದೆಯೇ ಇಲ್ಲದಂತಾಗಿದೆ ಎಂದು ಮುಖಂಡರು ಅಸಮಾಧಾನ ಹೊರಹಾಕಿದರು.