ಬರೀ ಮಾತಾಡಿ, ಮಾತಾಡಿಯೇ ಸಿಎಂ ಹುದ್ದೆಯನ್ನು ಕಳ್ಕೊಂಡು ಬಿಟ್ರಲ್ಲಾ ಮಿ. ಯತ್ನಾಳ್
ಕಳೆದ ಒಂದು ವರ್ಷದಲ್ಲಿ ಯಡಿಯೂರಪ್ಪನವರು ಪದತ್ಯಾಗ ಮಾಡಲಿದ್ದಾರೆ ಎಂದು ಕನಿಷ್ಠ ಹತ್ತು ದಿನಾಂಕವನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರಬಹುದು. ಕೊನೆಗೂ, ಬಿಎಸ್ವೈ ಸಿಎಂ ಹುದ್ದೆಯಿಂದ ಕೆಳಗಿಳಿದರು.
ಯತ್ನಾಳ್ ಅವರಿಗೆ ಇಂದಲ್ಲಾ, ನಾಳೆ ಯಡಿಯೂರಪ್ಪನವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಖಚಿತ ಮಾಹಿತಿ ಇದ್ದಿರಬಹುದು. ಹೈಕಮಾಂಡ್ ನಿಂದಲೂ ಸಂದೇಶ ಬಂದಿರಬಹುದು. ಆದರೆ, ಬಹಿರಂಗವಾಗಿ ಮಾತನಾಡಿ ಮಾತನಾಡಿ ಕೆಟ್ಟರು.
ವಿರೋಧ ಪಕ್ಷಗಳು ನಾಚಿಸುವಂತೆ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಈಗ ಸಿಎಂ ಬಸವರಾಜ ಬೊಮ್ಮಾಯಿಯವರ ಹಿಂದೆ ಬಿದ್ದಿರುವ ಯತ್ನಾಳ್ ಅವರ, ಉದ್ದೇಶವಾದರೂ ಏನು ಎನ್ನುವುದು ಬಿಜೆಪಿಗರಿಗೇ ಅರ್ಥವಾಗುತ್ತಿಲ್ಲ.
ಬಿಜೆಪಿಯ ಹಿರಿಯ ಮುಖಂಡರ ಪ್ರಕಾರ ಯತ್ನಾಳ್ ಮಾತಿಗೆ ಹೆಚ್ಚಿನ ಬೆಲೆ/ಮಹತ್ವ ಕೊಡಬೇಕಾಗಿಲ್ಲ. ಆದರೂ, ಅವರಾಡುವ ಮಾತು ಸಂಚಲನ ಮೂಡಿಸುವುದರಿಂದ, ಬಿಜೆಪಿಗೆ ಮುಜುಗರ ತಂದೊಡ್ಡುವ ಪರಿಸ್ಥಿತಿಯನ್ನು ಪ್ರತೀದಿನ ಯತ್ನಾಳ್ ನಿರ್ಮಿಸುತ್ತಿದ್ದಾರೆ. ಮಾತಾಡಿ ಸಿಎಂ ಹುದ್ದೆಯನ್ನು ಕಳ್ಕೊಂಡು ಬಿಟ್ಟ ಯತ್ನಾಳ್.

ಯಡಿಯೂರಪ್ಪ ರಾಜೀನಾಮೆ ನೀಡುವುದು, ಬಿಜೆಪಿ ವರಿಷ್ಠರು ಮುಂಚೆನೇ ಮಾಡಿದ್ದರು
ಯಡಿಯೂರಪ್ಪ ರಾಜೀನಾಮೆ ನೀಡುವುದು, ಅವರ ಜಾಗಕ್ಕೆ ಇನ್ನೊಬ್ಬರನ್ನು ಕೂರಿಸುವ ಯೋಜನೆಯನ್ನು ಬಿಜೆಪಿ ವರಿಷ್ಠರು ಮುಂಚೆನೇ ಮಾಡಿದ್ದರು. ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರಕ್ಕೆ ಬಂದಾಗ, ಹೈಕಮಾಂಡ್ ಬಳಿ ಇದ್ದದ್ದು ಎರಡೇ ಹೆಸರು ಎಂದು ಹೇಳಲಾಗುತ್ತಿದೆ. ಆ ಹೆಸರಿನಲ್ಲಿ ಈಗಿನ ಸಿಎಂ ಬೊಮ್ಮಾಯಿಯವರ ಹೆಸರು ಇಲ್ಲ ಎನ್ನುವುದು ಅತ್ಯಂತ ಸ್ಪಷ್ಟ.
ಈಗಾಗಲೇ ಹಲವು ಬಾರಿ ಎಲ್ಲಾ ಕಡೆ ವರದಿಯಾದಂತೆ, ಕೊನೆಯ ಕ್ಷಣದಲ್ಲಿ ಬಸವರಾಜ ಬೊಮ್ಮಾಯಿಯವರ ಹೆಸರು ಅಂತಿಮವಾಗಿತ್ತು. ಇದನ್ನು ಬಿಟ್ಟು ಬೇರೆ ಹೆಸರನ್ನು ಆಯ್ಕೆ ಮಾಡಲು ಯಡಿಯೂರಪ್ಪ ಒಪ್ಪಲಿಲ್ಲ ಎನ್ನುವ ಮಾತು ಬಲವಾಗಿ ಕೇಳಿ ಬಂದಿತ್ತು.

ಬಿಜೆಪಿ ವರಿಷ್ಠರ ಬಳಿ ಇದ್ದ ಎರಡು ಹೆಸರು ಒಂದು ಅರವಿಂದ್ ಬೆಲ್ಲದ್
ಬಿಜೆಪಿ ವರಿಷ್ಠರ ಬಳಿ ಇದ್ದ ಎರಡು ಹೆಸರು ಒಂದು ಅರವಿಂದ್ ಬೆಲ್ಲದ್, ಅದಕ್ಕೂ ಮುನ್ನ ಇದ್ದ ಹೆಸರು ಬಸನಗೌಡ ಪಾಟೀಲ್ ಯತ್ನಾಳ್. ಕಳೆದ ವರ್ಷದ ಅಂತ್ಯದಲ್ಲಿ ಬಹುತೇಕ ಯತ್ನಾಳ್ ಹೆಸರನ್ನೇ ಫೈನಲ್ ಮಾಡುವ ಸಾಧ್ಯತೆಯಿತ್ತು. ಯಾಕೆಂದರೆ ಯಡಿಯೂರಪ್ಪನವರಿಗೆ ರಾಜೀನಾಮೆ ನೀಡಬೇಕೆನ್ನುವ ಒತ್ತಡ ಸುಮಾರು ಒಂದು ವರ್ಷದಿಂದ ಇತ್ತು. ಮುಂದೊಂದು ದಿನ ನಾನೂ ಸಿಎಂ ಆಗಬಹುದು ಎನ್ನುವ ಮಾತನ್ನು ಯತ್ನಾಳ್ ಕೂಡಾ ಆಡಿದ್ದರು. ಆದರೆ..

ಪ್ರತೀದಿನ ತಮ್ಮದೇ ಪಕ್ಷದ ನಾಯಕ ಮತ್ತು ಲಿಂಗಾಯತ ಸಮುದಾಯದ ವರ್ಚಸ್ವೀ ಮುಖಂಡ
ಆದರೆ, ಬರಬರುತ್ತಾ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಸಿಎಂ ರೇಸಿನ ಪಟ್ಟಿಯಿಂದ ಜಾರುತ್ತಾ ಬಂತು. ಬಿಜೆಪಿ ಮೂಲಗಳ ಪ್ರಕಾರ, ಸಿಎಂ ಹುದ್ದೆಯಿಂದ ವಂಚಿತರಾಗಲು ಯತ್ನಾಳ್ ಅವರ ವಿವಾದಕಾರಿ ಹೇಳಿಕೆಗಳೇ ಕಾರಣ. ಪ್ರತೀದಿನ ತಮ್ಮದೇ ಪಕ್ಷದ ನಾಯಕ ಮತ್ತು ಲಿಂಗಾಯತ ಸಮುದಾಯದ ವರ್ಚಸ್ವೀ ಮುಖಂಡನನ್ನು ಜರಿಯುತ್ತಾ, ಯತ್ನಾಳ್ ಅವರು ಪಕ್ಷಕ್ಕೂ ಹಲವು ಬಾರಿ ಮುಜುಗರವನ್ನು ತಂದೊಡ್ಡಿದ್ದರು ಎನ್ನುವ ಭಾವನೆ ಬಿಜೆಪಿ ವರಿಷ್ಠರಲ್ಲಿ ಬೇರೂರಲು ಆರಂಭವಾಯಿತು.
Recommended Video

ಮಾತಾಡಿ, ಮಾತಾಡಿ ಸಿಎಂ ಹುದ್ದೆಯನ್ನು ಕಳ್ಕೊಂಡು ಬಿಟ್ರಲ್ಲಾ ಮಿ. ಯತ್ನಾಳ್
ಹಲವು ಬಾರಿ ಬಿಜೆಪಿ ವರಿಷ್ಠರು ಬಹಿರಂಗವಾಗಿ ಮಾತನಾಡದಂತೆ ತಾಕೀತು ಮಾಡಿದ್ದರು. ಜೊತೆಗೆ, ನೋಟೀಸ್ ಕೂಡಾ ನೀಡಲಾಗಿತ್ತು. ಉಸ್ತುವಾರಿ ಅರುಣ್ ಸಿಂಗ್ ಕೂಡಾ ಎಚ್ಚರಿಕೆಯನ್ನು ನೀಡಿದ್ದರು. ಆದರೆ, ಇದ್ಯಾವುದಕ್ಕೂ ಜಗ್ಗದ ಯತ್ನಾಳ್, ತಮ್ಮ ವಾಕ್ ಪ್ರಹಾರವನ್ನು ಮುಂದುವರಿಸಿದರು. ಪಕ್ಷದ ಶಿಸ್ತಿಗೆ ಯತ್ನಾಳ್ ಬೆಲೆ ಕೊಡುವುದಿಲ್ಲ ಎಂದು ವರಿಷ್ಠರೂ ದೂರವಿಟ್ಟರು. ಅಲ್ಲಿಗೆ, ಉತ್ತಮ ಚಾನ್ಸ್ ಒಂದನ್ನು ಯತ್ನಾಳ್ ಕಳೆದುಕೊಂಡರು.












Click it and Unblock the Notifications