ಎಂ.ಬಿ.ಪಾಟೀಲ್ಗೆ ಸವಾಲು ಹಾಕಿದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್
ವಿಜಯಪುರ, ಫೆಬ್ರವರಿ 09: ಸೀರೆ, ಪಾತ್ರೆ ಹಂಚುವುದು ಬಿಟ್ಟು ತಾಕತ್ತಿದ್ದರೆ ಸಚಿವ ಎಂ.ಬಿ.ಪಾಟೀಲ್ ನ್ಯಾಯುತವಾಗಿ ಚುನಾವಣೆ ಎದುರಿಸಿ ನನ್ನ ವಿರುದ್ಧ ಜಯಗಳಿಸಲಿ ಎಂದು ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರನ್ನು ಸೆಳೆಯಲು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸೀರೆ, ಪಾತ್ರೆಗಳನ್ನು ಹಂಚುತಿದ್ದಾರೆ, ತಾಕತ್ತಿದ್ದರೆ ಮನೆಯಲ್ಲಿ ಕೂತು ಚುನಾವಣೆ ಎದುರಿಸಲಿ, ನಾನೂ ಕೂಡ ಮನೆಯಲ್ಲೇ ಕೂತು ಎದುರಿಸುತ್ತೇನೆ ಯಾರು ಗೆಲ್ಲುತ್ತಾರೊ ನೋಡೋಣ ಎಂದು ಗುಡುಗಿದರು.
ಸಚಿವರು ಜನರಿಗೆ ಹಂಚುತ್ತಿರುವ ಪಾತ್ರೆ ಪಗಡೆ, ಸೀರೆಯ ಹಣದ ಮೂಲ ಯಾವುದು ಎಂಬ ಅರಿವು ಎಲ್ಲರಿಗೂ ಇದೆ. ಎಂ.ಬಿ.ಪಾಟೀಲ ಫೌಂಡೇಶನ್ ಹೆಸರಲ್ಲಿ ಬ್ಯಾಗ್, ಬ್ಯಾಟ್ ಸ್ಟಂಪ್ ಕೊಟ್ಟು ಯುವಕರಿಗೂ ಲಂಚದ ರುಚಿ ತೋರಿಸುತ್ತಿರುವ ಕೀಳು ಮಟ್ಟದ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು ಸಚಿವರ ಮಾನಸಿಕ ಸ್ಥಿತಿ ಸರಿಯಿಲ್ಲ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಅವಶ್ಯವಿದೆ ಎಂದರು.
ಬಬಲೇಶ್ವರ ಬಿಜೆಪಿ ಕಾರ್ಯಕರ್ತರಿಗೆ ಜೀವ ಬೆದರಿಕೆ ಇದೆ, ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಬಿಜೆಪಿ ಪರ ಪ್ರಚಾರ ಮಾಡಿದರೆ ಕೇಸ್ ದಾಖಲಿಸುವುದು, ಠಾಣೆಗೆ ಕರೆದು ಗದರಿಸುವ ಕಾರ್ಯ ಎಂ.ಬಿ. ಪಾಟೀಲ ಅವರು ಮಾಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎಂ.ಬಿ.ಪಾಟೀಲ್ ಅವರು ತಮ್ಮನ್ನು ತಾವು ನೀರಾವರಿ ಭಗೀರಥ ಎಂದು ಕರೆದುಕೊಳ್ಳುತ್ತಿದ್ದಾರೆ ಆದರೆ ಅವರು ಪಾತ್ರೆ, ಸೀರೆ ನೀಡುವ ಭಗೀರಥ, ಸಚಿವರಿಗೆ ಈ ಬಾರಿ ಸೋಲುವ ಭಯ ಕಾಡುತ್ತಿದೆ ಹಾಗಾಗಿ ಕ್ಷೇತ್ರದಾದ್ಯಂತ ಜನರಿಗೆ ಗಿಫ್ಟ್ಗಳನ್ನು ನೀಡಿ ಚುನಾವಣೆ ಗೆಲ್ಲಲು ನೋಡುತ್ತಿದ್ದಾರೆ ಎಂದರು.