ಯತ್ನಾಳ್ ಅಭಿಮಾನಿಗಳಿಂದ ಯಡಿಯೂರಪ್ಪ ವಿರುದ್ಧ ಪ್ರತಿಭಟನೆ
ವಿಜಯಪುರ, ನವೆಂಬರ್ 30 : ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಸೇರಿಕೊಳ್ಳಬೇಕು ಎಂದು ಒತ್ತಾಯಿಸಿ ಯತ್ನಾಳ್ ಅಭಿಮಾನಿಗಳು ಯಡಿಯೂರಪ್ಪ ಮುಂದೆಯೇ ಪ್ರತಿಭಟನೆ ಮಾಡಿದರು.
ವಿಜಯಪುರದ ಮುದ್ದೆಬಿಹಾಳದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು ಯಾತ್ನಾಳ್ ಅಭಿಮಾನಿಗಳ ಪ್ರತಿಭಟನೆ ಎದುರಿಸಬೇಕಾಯಿತು.
ವೇದಿಕೆ ಮುಂಭಾಗವೇ ಬಾರಿ ಸಂಖ್ಯೆಯಲ್ಲಿ ಯತ್ನಾಳ್ ಅಭಿಮಾನಿಗಳು, ಯತ್ನಾಳ್ ಭಾವ ಚಿತ್ರ ಮತ್ತು ಹುಲಿಯ ಚಿತ್ರಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡಿದರು.

ಪ್ರತಿಭಟನಾಕಾರರನ್ನು ಸುಮ್ಮನಾಗಿಸಲು ಹೋದಾಗ ಯತ್ನಾಳ ಅಭಿಮಾನಿಗಳ ಜೊತೆಗೆ ಬಿಜೆಪಿಯ ಅರವಿಂದ ಲಿಂಬಾವಳಿ ನಡುವೆ ಮಾತಿನ ಚಕಮಕಿ ನಡೆಯಿತು, ಜೋರು ಘೋಷಣೆಗಳನ್ನು ಕೂಗುತ್ತಿದ್ದ ಯತ್ನಾಳ ಅಭಿಮಾನಿಗಳನ್ನು ನಿಯಂತ್ರಿಸುವಲು ಪೊಲೀಸರೂ ಹರ ಸಾಹಸ ಪಟ್ಟರು.
ಈ ಮುಂಚೆ ವಿಜಯಪುರದಲ್ಲಿಯೇ ಯಡಿಯೂರಪ್ಪ ಹಾಗೂ ಬಸವನಗೌಡ ಪಾಟೀಲ ಯತ್ನಾಳ್ ಮಾತುಕತೆ ನಡೆಸಿದ್ದರು. ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲೆಂದೇ ಈ ಮಾತುಕತೆ ನಡೆಸಲಾಗಿದೆ ಎಂದೇ ಎಲ್ಲರು ಭಾವಿಸಿದ್ದರು.
ಆದರೆ ಈಗ ಯತ್ನಾಳ್ ಅಭಿಮಾನಿಗಳು ಪ್ರತಿಭಟಿಸುತ್ತಿರುವುದು ನೋಡಿದರೆ ಮಾತುಕತೆ ವಿಫಲವಾದಂತೆ ಕಾಣುತ್ತಿದೆ. ಹಾಗಾಗಿಯೇ ಯತ್ನಾಳ್ ಅವರು ಒತ್ತಡ ಹೇರುವ ತಂತ್ರದ ಮೊರೆ ಹೋಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ.












Click it and Unblock the Notifications