ಯಡಿಯೂರಪ್ಪ ಒಂದು ತಿಂಗಳೊಳಗೆ ಸಿಎಂ ಆಗ್ತಾರೆ:ಸುಕುಮಾರ್ ಶೆಟ್ಟಿ
ಉಡುಪಿ, ಜನವರಿ 20:ಬಿ.ಎಸ್.ಯಡಿಯೂರಪ್ಪ ಒಂದು ತಿಂಗಳೊಳಗೆ ಸಿಎಂ ಆಗ್ತಾರೆ. ಚಮತ್ಕಾರದ ರೀತಿಯಲ್ಲಿ ಮುಖ್ಯಮಂತ್ರಿ ಆಗ್ತಾರೆ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುಗಾಂವ್ ರೆಸಾರ್ಟ್ ನಿಂದ ವಾರದ ನಂತರ ತವರಿಗೆ ಆಗಮಿಸಿದ ಸುಕುಮಾರ್ ಶೆಟ್ಟಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಡಿಯೂರಪ್ಪ ಮ್ಯಾಜಿಕ್ ಮಾಡಿ ಹೇಗೆ ಸಿಎಂ ಆಗ್ತಾರೆ ಅಂತ ನಾನು ಈಗ ಹೇಳಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?
ಹರಿಯಾಣದಲ್ಲಿ ನಾನು ಮೋಜು ಮಸ್ತಿ ಮಾಡಿಲ್ಲ. ಬಿಜೆಪಿ ಸಭೆ ಮುಗಿಸಿ ಹರಿದ್ವಾರಕ್ಕೆ ಹೋಗಿದ್ದೆ. ನಡುಗುವ ಚಳಿಯಲ್ಲಿ ಗಂಗಾಸ್ನಾನ ಮಾಡಿದ್ದೇನೆ. ನನ್ನ ಕ್ಷೇತ್ರ ಮರೆಯುವ ಪ್ರಶ್ನೆಯೇ ಇಲ್ಲ. ನನ್ನನ್ನು ಕೂಡಿ ಹಾಕಲು ನಾನು ಮಗು ಅಲ್ಲ ಎಂದರು.
ಲೋಕಸಭೆ ಚುನಾವಣೆಗೆ ಮುನ್ನವೇ ಬಿಎಸ್ ವೈಗೆ ಬಿಜೆಪಿ ಬೈ ಬೈ?
ಬಿಜೆಪಿ ತೊರೆಯುವ ವಿಚಾರ ಕುರಿತು ಮಾತನಾಡಿದ ಅವರು ನಾನೊಬ್ಬ ಪ್ರಖರ ಹಿಂದುತ್ವವಾದಿ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಸನ್ಯಾಸಿ ಜೀವನ ನಡೆಸುವವನಿಗೆ ಹಣ, ಅಧಿಕಾರ ಆಮಿಷದ ಅಗತ್ಯವಿಲ್ಲ. ಆಸ್ಕರ್ ಫೆರ್ನಾಂಡಿಸ್ ಅವರನ್ನು ನೋಡಿ 18 ವರ್ಷ ಆಗಿದೆ. ತಿಂಗಳ ಹಿಂದೆ ಯು.ಟಿ ಖಾದರ್ ಪರಿಚಯ ಆಗಿದೆ. ನನ್ನನ್ನು ಕಾಂಗ್ರೆಸಿಗರು ಸಂಪರ್ಕ ಮಾಡಿಯೇ ಇಲ್ಲ. ನಾನು ಯಡಿಯೂರಪ್ಪನವರ ಅತೀ ಹತ್ತಿರದ ವ್ಯಕ್ತಿ ಎಂದು ಸ್ಪಷ್ಟಪಡಿಸಿದರು.