ಉಡುಪಿ; ಕೊರೊನಾ ನಿಯಮ ಉಲ್ಲಂಘನೆ, ಜಿಲ್ಲಾಧಿಕಾರಿ ಮೌನ!
ಉಡುಪಿ, ಆಗಸ್ಟ್ 22; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಹೀಗಾಗಿಯೇ ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ಸೋಂಕಿನ ನಿಯಂತ್ರಣ ಮಾಡುವಂತೆ ಖಡಕ್ ಸೂಚನೆ ನೀಡಿದ್ದರು.
ಆದರೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತ್ರ ಕೊರೊನಾ ಕಾನೂನು ಬಡವರಿಗೆ ಮಾತ್ರ ಹೇರಿದ್ದಾರೆ ಅನ್ನುವ ಆರೋಪಗಳು ವ್ಯಕ್ತವಾಗಿದೆ. ಯಾಕೆಂದರೆ ಉಡುಪಿ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಧಿಕಾರಿ ಜಗದೀಶ್ ಮಾತ್ರ ಈ ಹಿಂದಿನಂತೆ ನಿಯಮ ಉಲ್ಲಂಘಿಸಿದವರ ವಿರುದ್ಧ ಸಮರ ಸಾರುತ್ತಿಲ್ಲ. ಸಿರಿವಂತರು ನಿಯಮ ಮೀರುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ.
ಉಡುಪಿಯ ಲಯನ್ಸ್ ಕ್ಲಬ್ ಕೊರೊನಾ ನಿಯಮವನ್ನು ಮುರಿದಿದೆ. ಸರ್ಕಾರದ ಆದೇಶಕ್ಕೂ ಕ್ಯಾರೇ ಅನ್ನದೇ ಉಡುಪಿಯ ಅಮೃತ್ ಗಾರ್ಡನ್ನಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಭರ್ಜರಿಯಾಗಿ ಪದಗ್ರಹಣ ಮಾಡಿದ್ದಾರೆ. ಮಾಸ್ಕ್ ಹಾಕದೇ, ಸಾಮಾಜಿಕ ಅಂತರವನ್ನೂ ಕಾಪಾಡದೆ ಲಯನ್ಸ್ ಕ್ಲಬ್ ಅತಿಥಿಗಳು ಅದ್ಧೂರಿ ಕಾರ್ಯಕ್ರಮ ಮಾಡಿದ್ದಾರೆ.

ಸುಕ್ಷಿತರ ಮತ್ತು ಸ್ಥಿತಿವಂತರ ಕೂಟವೇ ಆಗಿರುವ ಲಯನ್ಸ್ ಕ್ಲಬ್ ರಾಜಾರೋಷವಾಗಿ ಕಾನೂನು ಉಲ್ಲಂಘನೆ ಮಾಡಿದರೂ ಜಿಲ್ಲಾಡಳಿತ ಮಾತ್ರ ತುಟಿಕ್-ಪಿಟಿಕ್ ಅಂದಿಲ್ಲ. ಜಿಲ್ಲಾಧಿಕಾರಿಗಳು ಗತ್ತಿನಲ್ಲಿ ಬಂದು ಕಾರ್ಯಕ್ರಮ ನಿಲ್ಲಿಸಿಲ್ಲ. ಬಡವರ ಮುಂದೆ ಮಾತ್ರ ಜಿಲ್ಲಾಧಿಕಾರಿಗಳ ಉತ್ತರ ಕುಮಾರನ ಪೌರುಷ ಅಂತಾ ಜನ ಪ್ರಶ್ನೆ ಮಾಡಿದ್ದಾರೆ.
ಅಷ್ಟಕ್ಕೂ ಉಡುಪಿ ಜಿಲ್ಲೆಯ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮ ಮಾಡದಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಹೀಗಿದ್ದರೂ ಲಯನ್ಸ್ ಕ್ಲಬ್ಗೆ ಕಾರ್ಯಕ್ರಮ ಮಾಡೋಕೆ ಅವಕಾಶ ಹೇಗೆ ಸಿಕ್ಕಿತ್ತು?. ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲು ಅವಕಾಶ ಇದೆಯೇ? ಜಿಲ್ಲಾಡಳಿತ ಲಯನ್ಸ್ ಕ್ಲಬ್ ಕಾರ್ಯಕ್ರಮಕ್ಕಾಗಿಯೇ ವಿಶೇಷ ಕಾನೂನು ತಂದಿದ್ಯಾ? ಅನ್ನೋದು ಕುತೂಹಲ ಕೆರಳಿಸಿದೆ.
ಸಾಮಾಜಿಕ ಸೇವಾ ಸಂಸ್ಥೆಗಳೇ ಕೊರೊನಾ ಕಾನೂನು ಉಲ್ಲಂಘನೆ ಮಾಡುತ್ತಿದ್ದು, ಸರ್ಕಾರ ಮಾಡುತ್ತಿರುವ ನಿಯಮಗಳು ಕೇವಲ ಜನಸಾಮಾನ್ಯಿಗೆ ಮಾತ್ರ ಅನ್ವಯವಾ? ಅಂತಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓಣಂ ಹಬ್ಬ ಆಚರಣೆ; ಇನ್ನು ಲಯನ್ಸ್ ಕ್ಲಬ್ನವರಿಗೆ ಮಾತ್ರ ಅವಕಾಶವೇ, ನಮಗೇನು ಸಂಭ್ರಮವಿಲ್ವಾ ಅಂತಾ ಕಾಲೇಜು ವಿದ್ಯಾರ್ಥಿಗಳೂ ಭರ್ಜರಿಯಾಗಿ ಓಣಂ ಹಬ್ಬ ಆಚರಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟಾ ಸಮೀಪದ ಇಸಿಆರ್ ಕಾಲೇಜಿನ ವಿದ್ಯಾರ್ಥಿಗಳು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕೊರೊನಾ ಕಾರಣದಿಂದ ಜಿಲ್ಲಾಡಳಿತ ಪದವಿ ಪರೀಕ್ಷೆಗಳನ್ನು ಮಾಡೋದಾ, ಬೇಡ್ವಾ? ಅಂತಾ ಗೊಂದಲದಲ್ಲಿದ್ದರೆ, ಇತ್ತ ವಿದ್ಯಾರ್ಥಿಗಳು ಮಾತ್ರ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಓಣಂ ಹಬ್ಬ ಆಚರಿಸಿದ್ದಾರೆ.
ಬಹುತೇಕ ಕೇರಳದ ವಿದ್ಯಾರ್ಥಿಗಳೇ ಇರುವ ಈ ಕಾಲೇಜಿನ ಆಡಳಿತ ಮಂಡಳಿ ಕೂಡಾ ಕಾಲೇಜು ಹುಡುಗರ ಮಸ್ತಿಗೆ ಬೆಂಬಲ ನೀಡಿದೆ. ಕೇರಳ ಮೂಲದ ವಿದ್ಯಾರ್ಥಿಗಳಿಗೆ ಕ್ವಾರೆಂಟೈನ್ ಕಡ್ಡಾಯವಾಗಿದ್ದು, ಇಸಿಆರ್ ಕಾಲೇಜಿನಲ್ಲಿ ಮಾತ್ರ ಕೇರಳ ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡಿದ್ದಾರೆ.
ಕಾಲೇಜಿನಲ್ಲೇ ಸಖತ್ತಾಗಿ ಡ್ಯಾನ್ಸ್ ಮಾಡುತ್ತಾ, ಕುಣಿದು ಕುಪ್ಪಳಿಸುತ್ತಾ, ಹಬ್ಬವನ್ನು ಆಚರಿಸಿದ್ದಾರೆ. ಸದ್ಯ ಕಾಲೇಜಿನ ವಿದ್ಯಾರ್ಥಿಗಳ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜಿಲ್ಲಾಧಿಕಾರಿ ಕೆ. ಜಿ. ಜಗದೀಶ್ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.

ರಾಜ್ಯದೆಲ್ಲೆಡೆ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಉಡುಪಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಪಾಸಿಟಿವಿಟಿ ರೇಟ್ 2.7%ರಷ್ಟಿದ್ದು, ಹೊಸ ಕೊರೊನಾ ಪ್ರಕರಣಗಳೂ ಏರುತ್ತಿದೆ. ಇದರ ನಡುವೆಯೂ ಜಿಲ್ಲೆಯಲ್ಲಿ ಅಲ್ಲಲ್ಲಿ ಕೊರೊನಾ ನಿಯನ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಡಳಿತ ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತಿದೆ.
ಜನ ಸಾಮಾನ್ಯನ ವಿರುದ್ಧ ಕೊರೊನಾ ನಿಯಮ ಉಲ್ಲಂಘನೆ ವಿಚಾರವಾಗಿ ಕೇಸ್ಗಳ ಮೇಲೆ ಕೇಸ್ ಹಾಕಿದ ಜಿಲ್ಲಾಧಿಕಾರಿ ಕೆ. ಜಿ. ಜಗದೀಶ್ ಈಗ ಸ್ಥಿತಿವಂತರು ಕೊರೊನಾ ನಿಯಮ ಮುರಿಯುತ್ತಿದ್ದರೂ ಸುಮ್ಮನಿರೋದು ಜಿಲ್ಲೆಯ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಸರ್ಕಾರದ ನಿಯಮಗಳು ಎಲ್ಲರಿಗೂ ಸಮಾನಾಗಿದ್ದರೂ, ಉಡುಪಿ ಜಿಲ್ಲೆಯಲ್ಲಿ ಮಾತ್ರ ನಿಯಮಗಳೆಲ್ಲಾ ಜನಸಾಮಾನ್ಯರಿಗೆ ಮಾತ್ರ ಅನ್ವಯ ವಾಗಿರೋದು ದುರಂತವಾಗಿದೆ.












Click it and Unblock the Notifications