ಉಡುಪಿಯಲ್ಲಿ ವಾರಾಂತ್ಯದ ಕರ್ಫ್ಯೂ; ಮಾರ್ಗಸೂಚಿ
ಉಡುಪಿ, ಸೆಪ್ಟೆಂಬರ್ 03; ಕೋವಿಡ್ ಸೋಂಕು ಹರಡುವಿಕೆ ತಡೆಯಲು ಉಡುಪಿ ಜಿಲ್ಲಾಡಳಿತ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿದೆ. ಸೆಪ್ಟೆಂಬರ್ 3ರ ಶುಕ್ರವಾರ ರಾತ್ರಿ 9 ಗಂಟೆಯಿಂದ ವಾರಾಂತ್ಯದ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 3 ರಿಂದ 13ರ ತನಕ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯ ತನಕ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಆದೇಶದಲ್ಲಿ ಹೇಳಿದ್ದಾರೆ.
ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 111 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಉಡುಪಿ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ಒಟ್ಟು ಎರಡು ವಾರಗಳ ಕಾಲ ಉಡುಪಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ.
ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ ಕೋವಡ್ ಮಾರ್ಗಸೂಚಿಗಳ ಅನ್ವಯ ಮದುವೆ/ ಸಮಾರಂಭಗಳನ್ನು ನಡೆಸಲು ಅನುಮತಿ ಇದೆ. ಸಭಾಂಗಣದ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಜನರು ಸೇರಲು ಅವಕಾಶವಿದೆ. ಆಯೋಜನೆಯ ಆಮಂತ್ರಣ ಪತ್ರವನ್ನು ತಹಶೀಲ್ದಾರ್ಗೆ ನೀಡಬೇಕು. 400 ಪಾಸುಗಳನ್ನು ಅವರು ನೀಡಲಿದ್ದಾರೆ. ಪಾಸು ಇದ್ದವರು ಮಾತ್ರ ಹಾಜರಾಗಲು ಅವಕಾಶವಿದೆ.

ಸರ್ಕಾರಿ ಕಚೇರಿಗಳು ಓಪನ್
ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಇತ್ಯಾದಿ ತುರ್ತು ಅಗತ್ಯ ಸೇವೆಗಳು ಮತ್ತು ಕೋವಿಡ್ ಕಂಟೈನ್ಮೆಂಟ್ ಕರ್ತವ್ಯಗಳು ನಿರ್ವಹಣೆ, ಸೇವೆ ಇಂತಹ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಧಿಕಾರಿ/ ಸಿಬ್ಬಂದಿಗಳಿಗೆ ಸಂಚಾರಕ್ಕೆ ಮುಕ್ತ ಅವಕಾಶ ಇರುತ್ತದೆ. ದೂರವಾಣಿ ಮತ್ತು ಅಂತರ್ಜಾಲ ಸೇವೆಯ ನೌಕರರು ಮತ್ತು ವಾಹನ ಸಂಚಾರ ನಡೆಸಬಹುದಾಗಿದೆ.

ತುರ್ತು ಸೇವೆಗಳಿಗೆ ಅವಕಾಶ
24*7 ಕಾರ್ಯಾಚರಿಸುವ ತುರ್ತು ಮತ್ತು ಅಗತ್ಯ ಸೇವೆಗಳನ್ನು ಪೂರೈಸುವ ಕೈಗಾರಿಕೆಗಳು/ ಸಂಸ್ಥೆಗಳು ಕಾರ್ಯ ನಿರ್ವಹಣೆ ಮಾಡಬಹುದು. ನೌಕರರು ಗುರುತಿನ ಚೀಟಿಯೊಂದಿಗೆ ಸಂಚಾರ ನಡೆಸಬಹುದು ಎಂದು ಜಿಲ್ಲಾಡಳಿತ ಹೇಳಿದೆ. ಸಂಚಾರದ ಸಂದರ್ಭದಲ್ಲಿ ಗುರುತಿನ ಚೀಟಿ/ ದಾಖಲೆಗಳನ್ನು ತೋರಿಸಬೇಕು. ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆ/ ಕಂಪನಿಗಳು ಅವಶ್ಯಕ ಸಿಬ್ಬಂದಿಗಳನ್ನು ಹಾಗೂ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಕಾರ್ಯ ನಿರ್ವಹಣೆ ಮಾಡಬೇಕು.

ಹೋಂ ಡೆಲಿವರಿಗೆ ಮಾತ್ರ ಅವಕಾಶ
ರೋಗಿಗಳು/ ಅವರನ್ನು ನೋಡಿಕೊಳ್ಳುವವರು, ಲಸಿಕೆ ಪಡೆಯುವವರು ದಾಖಲೆಗಳ ಜೊತೆ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಡೈರಿ, ಹಾಲಿನ ಬೂತ್ ಮುಂಜಾನೆ 5 ರಿಂದ ರಾತ್ರಿ 8ರ ತನಕ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ. ರೆಸ್ಟೋರೆಂಟ್ ತಿನಿಸು ಕೇಂದ್ರಗಳಿಂದ ಆಹಾರವನ್ನು ತೆಗೆದುಕೊಂಡು ಹೋಗಲು ಮತ್ತು ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆ ತನಕ
ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ, ಬೀದಿ ಬದಿ ವ್ಯಾಪಾರಿಗಳು ಮತ್ತು ಅಂಗಡಿಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯ ತನಕ ಕಾರ್ಯ ನಿರ್ವಹಣೆ ಮಾಡಬೇಕು. ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಇದೇ ಅವಧಿಯಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ. ಬಸ್, ರೈಲು, ವಿಮಾನ ಪ್ರಯಾಣಕ್ಕಾಗಿ ಜನರು ಸಂಚಾರ ನಡೆಸಬಹುದು. ಸಂಚಾರದ ಅವಧಿಯಲ್ಲಿ ಟಿಕೆಟ್ಗಳನ್ನು ತೋರಿಸುವುದು ಕಡ್ಡಾಯ. ಶವ ಸಂಸ್ಕಾರದಲ್ಲಿ ಗರಿಷ್ಠ 20 ಜನರು ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ಸಂಚಾರ ನಡೆಸಬಹುದು. ಹಾಲ್ ಟಿಕೆಟ್ ತೋರಿಸಬೇಕು.












Click it and Unblock the Notifications