ಶಬರಿಮಲೆಗೆ ಮಹಿಳೆಯರ ಪ್ರವೇಶ: ಪಲಿಮಾರು ಶ್ರೀಗಳು ಹೇಳಿದ್ದೇನು?
ಉಡುಪಿ, ಜನವರಿ 02: ಶಬರಿಮಲೆ ದೇವಸ್ಥಾನಕ್ಕೆ ಇಂದು ಮಹಿಳೆಯರು ಪ್ರವೇಶಿಸಿರುವ ಕುರಿತು ಉಡುಪಿ ಶ್ರೀ ಕೃಷ್ಣಮಠದ ಪರ್ಯಾಯ ಪಲಿಮಾರು ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀವಿದ್ಯಾಧೀಶ ಸ್ವಾಮೀಜಿ, ಚರ್ಚೆ- ಜಗಳಕ್ಕಿಂತ ಧಾರ್ಮಿಕ ಪ್ರೊಟೋಕಾಲ್ ಅನುಸರಿಸಿ. ಒಂದೊಂದು ಕ್ಷೇತ್ರಕ್ಕೂ ಒಂದೊಂದು ಪ್ರೊಟೋಕಾಲ್ ಇದೆ. ಅದನ್ನು ಅನುಸರಿಸಲೇಬೇಕು.
ಪ್ರೊಟೋಕಾಲ್ ಎಲ್ಲಾ ಕಡೆ ಇದೆ. ರಾಷ್ಟ್ರಪತಿ, ಪ್ರಧಾನಿಗೂ ಪ್ರೊಟೋಕಾಲ್ ಇರುತ್ತದೆ. ಶಬರಿಮಲೆಗೆ ಒಂದು ಪ್ರೊಟೋಕಾಲ್ ಜಾರಿಯಲ್ಲಿದೆ. ಧಾರ್ಮಿಕ ಸಂವಿಧಾನವನ್ನು ನಾವು ಏಕೆ ಆಕ್ಷೇಪ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಶಬರಿಮಲೆಯಲ್ಲಿ ಇಷ್ಟು ವರ್ಷ ಎಲ್ಲವನ್ನೂ ಒಪ್ಪಲಾಗಿದೆ. ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗಿದೆ. ಹೊರಗಿನವರು ಬಂದು ಸಂಪ್ರದಾಯ ಆಕ್ಷೇಪಿಸೋದ್ಯಾಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಶಬರಿಮಲೆಯಲ್ಲಿ ಹೆಣ್ಮಕ್ಕಳಿಗೆ ಬಹಿಷ್ಕಾರ ಹಾಕಿಲ್ಲ. ಮಹಿಳೆಯರಿಗೆ ನಿಗದಿತ ಅವಧಿ ನಿರ್ಧರಿಸಲಾಗಿದೆ. ಶಬರಿಮಲೆಗೆ ಭಕ್ತಿಯಿಂದ ಹೋದರೆ ಅಡ್ಡಿಯಿಲ್ಲ. ಸಂಪ್ರದಾಯ ಧಿಕ್ಕರಿಸಿ ಹೋಗುವುದು ನಮಗೆ ಇಷ್ಟವಾಗುತ್ತಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಆಕ್ಷೇಪಿಸಲ್ಲ. ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಮತ್ತೊಮ್ಮೆ ಪರಾಮರ್ಶೆ ಮಾಡಲಿ. ಭಕ್ತರಿಗೆ ಸಮಸ್ಯೆ ಆಗದಂತೆ ಕೋರ್ಟ್ ತೀರ್ಮಾನಿಸಲಿ. ಕ್ಷೇತ್ರದ ಸಂಪ್ರದಾಯ ನಿಯಮಾವಳಿಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.












Click it and Unblock the Notifications