Karnataka Rain: ಪುನರ್ವಸು ಮಳೆ ಅಬ್ಬರಕ್ಕೆ ನಲುಗಿದ ಉಡುಪಿ..ಹೆಚ್ಚಿದ ಕಡಲ್ಕೊರೆತ
ಉಡುಪಿ, ಜುಲೈ 18: ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಪುನರ್ವಸು ಮಳೆ ಅಬ್ಬರಿಸುತ್ತಿದೆ. ಗಾಳಿಮಳೆ ಆರ್ಭಟಕ್ಕೆ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದೆ. ಕಾಪು ತಾಲೂಕಿನ ನಡಿಪಟ್ಟ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಮಹೇಶ್ವರಿ ಡಿಸ್ಕೊ ಫಂಡ್ನ ಮೀನುಗಾರಿಕಾ ಶೆಡ್ ಅಪಾಯದ ಭೀತಿ ಎದುರಿಸುತ್ತಿದೆ.
ಶೆಡ್ನ ಕೆಲವೇ ಅಡಿಗಳಷ್ಟು ದೂರದಲ್ಲಿ ಕಡಲು ಅಬ್ಬರಿಸುತ್ತಿದೆ. ಕಡಲ್ಕೊರೆತ ತಡೆಗೆ ಹಾಕಿದ್ದ ಕಲ್ಲುಗಳು ಬೃಹದಾಕಾರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ಒಡಲು ಸೇರುತ್ತಿವೆ. 60ಕ್ಕೂ ಹೆಚ್ಚು ಕುಟುಂಬಗಳು ಈ ಶೆಡ್ ಅವಲಂಬಿಸಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಶೆಡ್ನಲ್ಲಿ ಶೇಖರಿಸಿಟ್ಟಿದ್ದ 25 ಸಾವಿರ ಲೀಟರ್ನಷ್ಟು ಸೀಮೆಎಣ್ಣೆ ಸೇರಿದಂತೆ ₹50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮೀನುಗಾರಿಕಾ ಪರಿಕರಗಳನ್ನು ಮೀನುಗಾರರು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ.

ಕಡಲ್ಕೊರೆತ ಇನ್ನಷ್ಟು ತೀವ್ರಗೊಂಡಲ್ಲಿ 'ಬ್ಲೂ ಫ್ಲ್ಯಾಗ್' ಬೀಚ್ ಸಂಪರ್ಕಿಸುವ ರಸ್ತೆ ಕೂಡ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೀನುಗಾರರು ನಡಿಪಟ್ಟದ ಭಾಗದ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಕಡಲ್ಕೊರೆತ ತಡೆಗೆ ತುರ್ತಾಗಿ ಕಲ್ಲುಗಳನ್ನು ಹಾಕುವಂತೆ ಅವರು ಸೂಚಿಸಿದರು.
ಕಳೆದ ಭಾರಿ ಈ ಭಾಗದಲ್ಲಿ ಶಾಶ್ವತ ತಡೆಗೋಡೆಗೆ ಅನುದಾನ ಬಿಡುಗಡೆಯಾಗಿತ್ತು. ಇಲ್ಲಿನ ಕಾಮಗಾರಿಯ ಅನುದಾನವನ್ನು ಇನ್ನೊಂದು ಕಡೆ ತಡೆಗೋಡೆ ನಿರ್ಮಾಣಕ್ಕೆ ಬಳಸಲಾಗಿದೆ. ನಡಿಪಟ್ಟದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಒಂದು ಕಡೆ ಸಮುದ್ರ ಇನ್ನೊಂದು ಕಡೆಯಲ್ಲಿ ನದಿ 50 ಮೀಟರ್ ಅಂತರದಲ್ಲಿದೆ. ಸಮುದ್ರ ಕೊರೆತ ತೀವ್ರಗೊಂಡಲ್ಲಿ ಇಡೀ ಊರೇ ಜಲಾವೃತಗೊಳ್ಳಲಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಲಭಿಸಿಲ್ಲ. ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಮೀನುಗಾರ ನೂತನ್ ಪುತ್ರನ್ ಒತ್ತಾಯಿಸಿದರು.
ಕುಂದಾಪುರ: ದಂಪತಿ ಜಗಳ ಠಾಣೆಯಲ್ಲಿ ಇತ್ಯರ್ಥ..ವಾಪಾಸ್ ಬರುವಾಗ ಹೊಳೆಗೆ ಹಾರಿದ ಪತಿ
ಉಡುಪಿ: ಕುಂದಾಪುರ ತಾಲೂಕಿನ ಕಂಡೂರಿನಲ್ಲಿ ಗಂಡ ಹೆಂಡತಿ ಪರಸ್ಪರ ಜಗಳ ಮಾಡಿಕೊಂಡ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ಪತಿ ಹೊಳೆಗೆ ಹಾರಿ ಆತ್ಮಹತ್ಯೆ ಯತ್ನಿಸಿ ನಾಪತ್ತೆಯಲ್ಲಿ ಅಂತ್ಯಗೊಂಡಿದೆ. ಹೊಳೆಗೆ ಹಾರಿದ ವ್ಯಕ್ತಿಯನ್ನು ಕಾಳಾವರ ಗ್ರಾಮದ ಅಂಗನವಾಡಿ ಸಮೀಪ ನಿವಾಸಿ ಹರೀಶ್ ಭೋವಿ (40) ಎಂದು ಗುರುತಿಸಲಾಗಿದೆ.

ಹರೀಶ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರು. ಆಗಾಗ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಜಗಳ ತಾರಕಕ್ಕೇರಿ ಮಕ್ಕಳನ್ನು ಬಾವಿಗೆ ದೂಡಲೆತ್ನಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಪತ್ನಿ ಕಂಡೂರು ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಗಂಡ ಹೆಂಡತಿಯನ್ನು ಠಾಣೆಗೆ ಕರೆಯಿಸಿ ಪಂಚಾಯಿತಿ ಮಾಡಿ ಆಟೋದಲ್ಲಿ ಕಳುಹಿಸಿದ್ದರು. ಠಾಣೆಯಿಂದ ಬರುತ್ತಿದ್ದ ವೇಳೆ ಕಂಡೂರು ಸೇತುವೆ ಸಮೀಪ ಆಟೋ ಚಾಲಕನಿಗೆ ರಿಕ್ಷಾ ನಿಧಾನಿಸುವಂತೆ ತಿಳಿಸಿದ ಹರೀಶ್ ವಾರಾಹಿ ಹೊಳೆಗೆ ಸೇತುವೆಯಿಂದ ಹಾರಿದ್ದಾರೆ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೊಲೀಸರು, ಅಗ್ನಿಶಾಮಕದಳ, ಮುಳುಗು ತಜ್ಞರು ಹರೀಶ್ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದರು. ಆದರೆ ವಿಪರೀತ ಮಳೆ, ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲಿ ಪತ್ತೆ ಕಾರ್ಯ ಸಫಲವಾಗಿಲ್ಲ. ಕಂಡೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.












Click it and Unblock the Notifications